October 15, 2018

ಅಮೆ-ಸೂತಕದ ಸಂದರ್ಭದಲ್ಲಿ ಕೆಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ ಇದೆ. ಇದು ಸರಿಯೆ?


ಮೈಲಿಗೆ ಅಂತ ಬಂದಾಗ ಒಂದೊಂದಾಗಿ ನಿರ್ಬಂಧಗಳು ಹೊಸ ಹೊಸ ರೀತಿಯಲ್ಲಿ ಹುಟ್ಟಿಕೊಂಡವು. ನಾವು ಒಂದು ಸ್ಪಷ್ಟತೆಯನ್ನು ಮಾಡಿಕೊಳ್ಳಬೇಕು. ವ್ಯಾವಹಾರಿಕ ಜೀವನವು ಒಂದು ಭಾಗ. ಸಾಮಾಜಿಕ ಜೀವನವು ಇನ್ನೊಂದು ಭಾಗ. ಸಾಮಾಜಿಕ ಜೀವನದಲ್ಲಿ ಒಂದು ದೇವಾಲಯ ಎಂದರೆ ಅದಕ್ಕೆ ಅದರದ್ದೇ ಆದ ನಿರ್ಬಂಧಗಳೇನಾದರೂ ಇದ್ದರೆ ಆ ನಿರ್ಬಂಧವನ್ನು ನಮ್ಮ ದೋಷದಿಂದ ಹಾಳಾಗದಂತೆ ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ. ಏಕೆಂದರೆ ಅದು ಸಮಾಜದ್ದು, ನಮ್ಮದ್ದಲ್ಲ. ನಮಗೂ ಅಲ್ಲಿ ಭಾಗವಿದೆ, ಅಷ್ಟು ಬಿಟ್ಟರೆ ನಮ್ಮಿಂದಾಗಿ ದೇವಸ್ಥಾನ ಅಶುದ್ಧಿಯಾಗಬಾರದು ಎನ್ನುವುದು ನಿಯಮ. ಈ ಪ್ರದೇಶದಲ್ಲಿ ದೇವಸ್ಥಾನದ ಗರ್ಭಗುಡಿಗೆ ಅರ್ಚಕನಿಗೆ ಮಾತ್ರ ಪ್ರವೇಶ ಎಂದು ಚಾಲ್ತಿಯಲ್ಲಿದೆ. ಎಲ್ಲರೂ ಗರ್ಭಗುಡಿಗೆ ಹೋಗುವ ಹಾಗಿಲ್ಲ. ಅಲ್ಲಿನ ಶೌಚ, ಶುದ್ಧತೆ ಕಾಪಾಡಿಕೊಳ್ಳಲಿಕ್ಕೆ ಇದು ಬಲು ಮುಖ್ಯ. ಏಕೆಂದರೆ ಇಲ್ಲಿ ಅತಿ ಹೆಚ್ಚು ಸೆಖೆ ಇರುತ್ತದೆ. ಎಲ್ಲರೂ ಒಳಗೆ ನುಗ್ಗಿದರೆ ಅಲ್ಲಿ ಮನುಷ್ಯರು ಇರಲಿಕ್ಕೆ ಖಂಡಿತ ಸಾಧ್ಯ ಇಲ್ಲ. ಒಂದು ಹನಿ ಬೆವರು ಕೂಡಾ ಗರ್ಭಗುಡಿಯಲ್ಲಿ ಬಿದ್ದರೂ ಶುದ್ಧಿ ಮಾಡಿಕೊಳ್ಳಬೇಕು ಎಂದು ಆಗಮ ಶಾಸ್ತ್ರ ಹೇಳುತ್ತದೆ. ಇದೆಲ್ಲ ಸಮಸ್ಯೆಗಳಿರುವುದರಿಂದ ಈ ನಿಯಮ ಮಾಡಲಾಗಿದೆ. ಅಶುದ್ಧಿ ಆಗಬಾರದು ಎನ್ನುವ ಕಾರಣದಿಂದ ಈ ರೀತಿಯ ಹಲವಾರು ಆಚರಣೆಗಳಿವೆ. ನೀವು ಅಶುದ್ಧಿ ಎಂದು ಇದರ ಅರ್ಥ ಅಲ್ಲ. ಅಶುದ್ಧಿ ಆಗಬಾರದು ಎನ್ನುವುದು ಆಗಮದ ನಿಯಮ. ಒಳಗಿನ ನಡೆ ಅಥವಾ ಶುಕನಾಸಿ ಹೀಗೆ ಬೇರೆ ಬೇರೆ ಪ್ರದೇಶಗಳನ್ನು ಹೇಳುತ್ತದೆ. ಆಯಾಯ ಪ್ರದೇಶಗಳಲ್ಲಿ ಎಷ್ಟೆಷ್ಟು ಶುದ್ಧಿ ಇರಬೇಕು ಎನ್ನುವುದು ಕೂಡ ಹೇಳುತ್ತದೆ. ಆ ಶುದ್ಧಿಯನ್ನು ಹೇಳುವಾಗ ಶುದ್ಧತೆಯ ಪ್ರಧಾನತೆಯನ್ನು ಕೊಟ್ಟು ಹೇಳುತ್ತದೆ ಬಿಟ್ಟರೆ ಒಬ್ಬ ಸೂತಕನು ಬಂದರೆ ಅಶುದ್ಧಿಯಾಗುತ್ತದೆ ಎಂದೇನೂ ಹೇಳಿಲ್ಲ. ಆದರೆ ಸಮಾಜದಲ್ಲಿ ಸೂತಕನು ಅಶುದ್ಧಿ ಎಂದಿರುವ ಕಾರಣ ನೀನು ಬರಬೇಡ ಎನ್ನುವ ವಾಕ್ಯ ಬಂದಿರುತ್ತದೆ. ಆದರೆ ಆಗಮದಲ್ಲಿ ಎಷ್ಟೆಷ್ಟು ಶುದ್ಧತೆಯಿಂದ ಪ್ರಕಾರವನ್ನು ಉಳಿಸಿಕೊಳ್ಳಬೇಕೆಂದು ಮಾತ್ರ ಹೇಳಿದೆ. ಯಾವುದೇ ವ್ಯಕ್ತಿಯನ್ನಾಗಲೀ, ಯಾರ ಮನೆಯಲ್ಲಿ ಸಾವಾಗಿದೆಯೋ ಅವನು ಬಂದಾಗ ಅಶುದ್ಧಿಯಾಗುತ್ತದೆ ಎಂದಾಗಲೀ ಹೇಳಿಲ್ಲ. ನಿಮ್ಮ ಮನೆಯಲ್ಲಿ ಸಾವಾದಾಗ ಅಶುದ್ಧಿ ಎಂದು ಸಮಾಜವು ನಿಮ್ಮನ್ನು ನಿರ್ಭಂಧಿಸಿದ ಮೇಲೆ ನೀವು ಇಲ್ಲಿ ಬಂದಾಗ ಅಶುದ್ಧಿ ಆಗುವುದಿಲ್ಲವೇ, ಅದಕ್ಕೆ ಬರಬೇಡ ಎಂದರು. ಇದು ಬಂದದ್ದು ಹೀಗೆ, ಆಗಮದಲ್ಲಿ ಇದನ್ನು ಹೇಳಿಲ್ಲ. ನಂತರ ಸಾಮಾಜಿಕ ವ್ಯವಸ್ಥೆಯಲ್ಲಿ ಬಂದಾಗ ನೀನು ಅಶುದ್ಧಿಯಲ್ಲ ಇವತ್ತು ದೇವಸ್ಥಾನಕ್ಕೆ ಬರಬೇಡ ಎಂದು ಹೇಳಿದ್ದಕ್ಕೆ ಆಗಮವು ಜವಾಬ್ದಾರವಲ್ಲ.

ಆಗಮ ಮಾತ್ರ ಸ್ಪಷ್ಟ ಪಡಿಸುತ್ತದೆ. ದೇವಾಲಯಕ್ಕೆ ಬರುವ ಭಕ್ತನ ಮನಸ್ಸು ಶುದ್ಧವಾಗಿರಬೇಕು. ಅವನು ಸದಾಚಾರವನ್ನು ರೂಢಿಸಿಕೊಂಡಿರಬೇಕು. ಸದಾಚಾರಗಳೆಂದರೆ ಬೆಳಿಗ್ಗೆ ಬೇಗನೆ ಏಳುವುದು, ಎದ್ದ ತಕ್ಷಣ ಸ್ನಾನ ಇತ್ಯಾದಿ ಸಹಜ ಶೌಚಾದಿಗಳನ್ನು ಮಾಡಿಕೊಳ್ಳುವುದು. ಸಾಧ್ಯವಾದಷ್ಟು ದೇವಭಕ್ತನಾಗಿರಬೇಕು. ಅವನದ್ದೇ ಆದ ದೇವಪೂಜೆ ಇತ್ಯಾದಿಗಳನ್ನು ಮಾಡಿಕೊಳ್ಳಬೇಕು. ನಂತರ ಅವನು ದೇವಾಲಯಕ್ಕೆ ಬಂದರೆ ಯಾವುದೇ ಪ್ರವೇಶ ನಿರ್ಬಂಧ ಇಲ್ಲ. ಸದಾಚಾರಗಳನ್ನು ಹೊಂದಿದವನಾಗಿರಬೇಕು, ಇದನ್ನು ಗೌರವಿಸುವವನಾಗಿರಬೇಕು. ಅವನಿಗೆ ದೇವಾಲಯದ ಪ್ರವೇಶವಿದೆ ಎಂದು ಆಗಮ ಹೇಳಿದೆ. ಸಾಮಾನ್ಯ ಎಲ್ಲ ಶಾಸ್ತ್ರಗಳಲ್ಲೂ ಕೂಡ ಈ ಹಿನ್ನಲೆಯಲ್ಲಿ ಕೆಲವೊಂದಿಷ್ಟು ನಿರ್ಬಂಧಗಳನ್ನು ಹೇಳುತ್ತದೆ. ಉದಾಹರಣೆಗೆ ಜ್ಯೋತಿಷ್ಯದ ಆರಂಭ ಶ್ಲೋಕವೇ ಹೀಗೆ ಹೇಳುತ್ತದೆ. ಜ್ಯೋತಿಷ್ಯವನ್ನು ಗೌರವಿಸುವವನಾಗಿರಬೇಕು, ಇಲ್ಲದಿದ್ದರೆ ಅವನಿಗೆ ಪ್ರಶ್ನೆ ಹೇಳಲೇ ಬೇಡ ಎಂದು ಹೇಳುತ್ತದೆ. ಕುಹಕನೋ, ಚಿಂತಕನೋ, ಈ ರೀತಿಯಲ್ಲಿ ಬಂದು ಪ್ರಶ್ನೆಯನ್ನು ಕೇಳಿದರೆ ಹೇಳಲೇಬೇಡ ಎಂದು ಶ್ಲೋಕವು ಸ್ಪಷ್ಟಪಡಿಸಿದೆ. ಜ್ಯೋತಿಷ್ಯದ ಮೇಲೆ ನಂಬಿಕೆ ಇದ್ದರೆ ಮಾತ್ರ ಅವನಿಗೆ ಜ್ಯೋತಿಷ್ಯ ಹೇಳು ಎನ್ನಲಾಗಿದೆ. ಪರೀಕ್ಷೆ ಮಾಡಲು ಬರುವವರಿಗೆ ಅವಕಾಶವೇ ಇಲ್ಲ. ಹಾಗೆಯೇ ಯಾವ ಶಾಸ್ತ್ರದಲ್ಲಾದರೂ ತನ್ನ ಒಂದು ಬದ್ಧತೆ, ಅದರ ರಕ್ಷಣೆಯ ದೃಷ್ಟಿಯಿಂದ ಮೊದಲೇ ನಿರ್ಬಂಧ ಮಾಡಿಕೊಂಡಿರುತ್ತದೆ. ಹಾಗೆಯೇ ಇಲ್ಲೂ ಆಗಮ ಹೇಳಿದ್ದಷ್ಟೇ, ಇಂತಿಷ್ಟು ಪ್ರಾಕಾರಗಳಲ್ಲಿ ಈ ರೀತಿಯ ನಿಯಮಗಳಿವೆ, ನಿಯಮಗಳಿಗೆ ಅಶುದ್ಧಿಯಗದಂತೆ ಕಾದುಕೊಂಡು ಬರಬೇಕಾದ್ದು ಆಗಮದ ನಿಯಮ. ಆದರೆ ಅದನ್ನು ನಿರ್ವಹಿಸುವಾಗ, ಅಶುದ್ಧಿಯೆಂದರೆ ಏನೆಂದು ಕಲ್ಪನೆ ಸ್ಪಷ್ಟವಾಗದೆ ಇದ್ದಾಗ, ನಿಮ್ಮನ್ನು ಅಶುದ್ಧಿಯೆಂದು ಸಮಾಜ ತಿರಸ್ಕರಿಸಿರುವಾಗ, ನೀನು ಅಶುದ್ಧಿಯಾದ್ದರಿಂದ ಒಳಗೆ ಬರಬೇಡ, 10 ದಿವಸ ಕಳೆದು ಬಾ ಎಂದು ಆದೇಶ ಕೊಡಲಾಗುತ್ತದೆ. ಇದರಲ್ಲಿ ಆಡಳಿತ ಮಂಡಳಿಯ ತಪ್ಪೂ ಇಲ್ಲ ಅಥವಾ ಆಗಮದ ತಪ್ಪೂ ಅಲ್ಲ. ಇದು ಸಮಾಜ ಮಾಡಿರುವ ವ್ಯವಸ್ಥೆ. ಸಮಾಜವನ್ನೇ ನೀವು ಸರಿಪಡಿಸಿ. ಆಗ ಈ ಸಮಸ್ಯೆ ಇರುವುದಿಲ್ಲ. ಇಂತಹ ಪರಿವರ್ತನೆಗಳಿಗೆ ಕ್ರಾಂತಿ ಆಗಲೇ ಬೇಕು.

ಈಗ ಪರಿಸ್ಥಿತಿ ಹೇಗಿದೆ ಎಂದರೆ ಅಕಸ್ಮಾತ್ ಅಶೌಚದಲ್ಲಿ ಯಾರಾದರೂ ದೇವಾಲಯಕ್ಕೆ ಹೋದರೆ ದೇವಾಲಯ ಅಶುದ್ಧಿಯಾಗಿದೆ ಎಂದು ಕೇರಳದಿಂದ ಅಷ್ಟಮಂಗಲ ಪ್ರಶ್ನೆ ಹೇಳಲು ಬರುವವರು ಹೇಳಬೇಕು! ಇಲ್ಲದಿದ್ದರೆ ಗೊತ್ತೇ ಆಗುವುದಿಲ್ಲ. ಆದರೆ ಜನರಿಗೆ ಭಯ ಹುಟ್ಟುವುದಿದೆ. ನಾನು ಅಶುದ್ಧಿಯಾಗಿ ದೇವಸ್ಥಾನಕ್ಕೆ ಹೋಗಿಬಿಟ್ಟರೆ ನನಗೆ ಸಾವಾಗಿಬಿಡುತ್ತದೆ ಎನ್ನುವಷ್ಟು ಜೀವಭಯ ಹುಟ್ಟಿಬಿಟ್ಟಿದೆ, ಅದನ್ನು ಹೋಗಲಾಡಿಸಬೇಕಿದ್ದರೆ ಒಂದಿಷ್ಟು ಕ್ರಾಂತಿ ಆಗಲೇ ಬೇಕು. ಏನೂ ಆಗುವುದಿಲ್ಲ ಎಂದು ಜನರಿಗೆ ತೋರಿಸಬೇಕು. ಕ್ರಾಂತಿ ಮಾಡಿದರೆ ತಪ್ಪಲ್ಲ. ಆದರೆ ಆ ಕ್ರಾಂತಿ ಮಾಡುವ ಉದ್ದೇಶದಿಂದ ಯಾವುದೇ ವಿಪ್ಲವ, ವಿವಾದಕ್ಕೆ ಹೋಗುವ ಕ್ರಾಂತಿ ಮಾಡಬೇಡಿ. ಪರಸ್ಪರ ಸಹಕಾರದಿಂದ ಕ್ರಾಂತಿ ಮಾಡಿ, ಕ್ರಾಂತಿಯೂ ಒಳ್ಳೆಯದೇ. ಪರಿವರ್ತನೆ ಮಾಡಿ ತೋರಿಸಿ. ಖಂಡಿತ ದೋಷ ಇಲ್ಲ. ಆಗಮ ನಿಷೇಧಿಸಿಲ್ಲ.

-ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

April 20, 2018

ದೇವಾಲಯದಿಂದ ರಾಷ್ಟ್ರದುದ್ಧಾರ


ದೇವಾಲಯಗಳ ನಿರ್ಮಾಣವೇ ಸ್ವಸ್ಥ ಸಮಾಜದ ಸಾಕಾರಕ್ಕೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಒಂದು ದೇವಾಲಯದಿಂದ ಒಂದು ರಾಷ್ಟ್ರದ ಉದ್ಧಾರವೂ ಕೂಡ ಸಾಧ್ಯವೆಂದು ನನಗೆ ಇತ್ತೀಚೆಗಷ್ಟೇ ತಿಳಿದ ವಿಚಾರ. ಇತ್ತೀಚೆಗಷ್ಟೇ ಬ್ರಹ್ಮ ಕಲಶದಿಂದ ಅಭಿಷಿಕ್ತನಾದ ಜ್ಞಾನ ಶಕ್ತಿ ಸುಬ್ರಹ್ಮಣ್ಯನ ದೇವಾಲಯದ ಬಗ್ಗೆ, ನನಗೆ ತಿಳಿದಿರುವ ಅಲ್ಪ ಜ್ಞಾನದಿಂದ ತಿಳಿದಷ್ಟು ಬರೆಯುತ್ತಿದ್ದೇನೆ. ತಪ್ಪಿಯಿದ್ದರೆ ತಿದ್ದಿ ಹೇಳಿರೆಂದು ಪ್ರಾರ್ಥನೆ.


ಪಾವಂಜೆಯು ಇರುವುದು ದಕ್ಷಿಣ ಕರಾವಳಿಯ ಮೂಲೆಯಲ್ಲಿ. ಇಲ್ಲಿ ಸ್ಥಾಪಿತ ಪುಟ್ಟ ದೇಗುಲವೊಂದು ಸಂಪೂರ್ಣ ಭಾರತ ವರ್ಷದಲ್ಲಿ ಪರಿಣಾಮ ಬೀರುತ್ತದೆ ಎನ್ನುವುದು ನಂಬಲು ಸ್ವಲ್ಪ ಕಷ್ಟ. ಆದರೆ ತಂತ್ರಕ್ಕೆ ಅಸಾಧ್ಯವೆಂಬುವುದೇ ಇಲ್ಲ. ವಿಶ್ವ ಜಿಗೀಷದ್ ಯಾಗದ ಸಂದರ್ಭಲ್ಲಿ, ಯಾಗದ ಎರಡನೆಯ ದಿನವೇ ಇಲ್ಲಿಂದ ಹೊರಟ ಕಿರಣ, ಶಬ್ದ ತರಂಗಗಳು ಯುರೋಪ್, ಆಫ್ರಿಕಾ ಖಂಡಗಳನ್ನು ತಲುಪಿ ಪರಿಣಾಮಗಳನ್ನು ಬೀರಿದ್ದನ್ನು ಕೇಳಿದ ನನಗೆ ಪಾವಂಜೆಯ ತಂತ್ರೋಕ್ತ ಪೂಜೆಗಳಾದ ರಂಗ ಪೂಜೆ, ಕಾರ್ತಿಕ ದೀಪೋತ್ಸವ, ಸೋಣೆ ಆರತಿ ಹಾಗೂ ಅಗೇಲು ಸೇವೆಗಳ ಪರಿಣಾಮ ನಮ್ಮ ದೇಶದ ಮೇಲೆ ಆಗುತ್ತಿದೆ ಅನ್ನುವುದನ್ನು ದೊಡ್ಡ ವಿಷಯ ಅನ್ನಿಸದೆ ಇರದು! ಅವು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಹೇಗೆ ಪರಿಣಾಯಾಮ ಬೀರುತ್ತಿವೆ ಎನ್ನುವುದನ್ನು ನನಗೆ ತೋಚಿದಷ್ಟು ವಿಶದವಾಗಿ ಹೇಳಲು ಬಯಸುತ್ತೇನೆ. ಆಧುನಿಕ ತಂತ್ರಜ್ಞಾನದಲ್ಲಿ ನಾನು ಪಡೆದ ಪಿಎಚ್. ಡಿ ಯು ಈ ವಿಷಯದ ಅಧ್ಯಯನದಲ್ಲಿ ಯಾವುದೇ ಸಹಾಯ ಮಾಡಿರುವುದಿಲ್ಲ. ಅಲ್ಲದೆ ಆಧುನಿಕ ತಂತ್ರಜ್ಞಾನದ ಹಾಗೂ ವಿಜ್ಞಾನದ ಯಾವುದೇ ಸಲಕರಣೆಗಳು ಈ ತರಂಗಗಳ ಸಾಮರ್ಥ್ಯವನ್ನು ಪರಿಶೀಲಿಸಲು ಅಸಮರ್ಥವಾಗಿವೆ ಎಂಬುದು ಕಟುವಾದರೂ ಸತ್ಯ. ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಎನ್ನವ ಭ್ರಮೆಯಲ್ಲಿ ಇಲ್ಲದ, ಕಣ್ಣಿನ ದೃಷ್ಟಿಯ ಸಾಮರ್ಥ್ಯದ ಮಿತಿಯನ್ನು ಅರಿತಿರುವ ಯಾರೂ ಕೂಡ ಈ ಸತ್ಯವನ್ನು ತಮಗಿರುವ ಕುತೂಹಲದ ಮೂಲಕ ಅರಿಯಬಹುದು.

ಮೇಲೆ ತಿಳಿಸಿದ ಹಲವಾರು ತಂತ್ರೋಕ್ತ ಪೂಜೆಗಳು ದೇವರ ಕಲಾಭಿವೃದ್ಧಿಗಾಗಿ ಮಾಡುವಂತಹ ಸೇವೆಗಳು. ಬ್ರಹ್ಮಕಲಶವೂ ಕೂಡ. ದೇವರ ಕಲಾಭಿವೃದ್ಧಿಯು ಒಂದು ರೀತಿ ದೇವರಲ್ಲಿ ಶಕ್ತಿಯನ್ನು ತುಂಬುವಂತಹುದು. ಇಲ್ಲಿನ ಸಂದರ್ಭದಲ್ಲಿ ಜ್ಞಾನ ಶಕ್ತಿಯ ಸಂಗ್ರಹಣೆ. ಬುದ್ಧಿಯ ಅಧಿದೇವತೆ ಸರಸ್ವತಿ, ಜ್ಞಾನಕ್ಕೆ ಅಧಿದೇವತೆ ಸುಬ್ರಹ್ಮಣ್ಯ. ಬುದ್ಧಿ ಎಲ್ಲರಿಗೂ ಇರುತ್ತದೆ (ಮನುಷ್ಯನಲ್ಲಿ ಇರಬೇಕಾದದ್ದು) ಆದರೆ ಜ್ಞಾನವನ್ನು ಶ್ರಮಪಟ್ಟು ಗಳಿಸಬೇಕು. ಪಾವಂಜೆಯ ಸುಬ್ರಹ್ಮಣ್ಯ ಜ್ಞಾನಶಕ್ತಿಯನ್ನು ನೀಡುವಂತಹವನು. ನೀಡುತ್ತಾ ನೀಡುತ್ತಾ ಖಾಲಿಯಾಗುವುದಿಲ್ಲವೇ? ಅದಕ್ಕೆ "ಕಲಾಭಿವೃದ್ಧಿ". ಹಿಂದೆ ನವರಾತ್ರಿಯ ಪ್ರಶ್ನೋತ್ತರ ಸಂದರ್ಭದಲ್ಲಿ ಗುರುಗಳು ಹೇಳಿದ ಮಾತು ನೆನಪಿಗೆ ಬರುತ್ತದೆ. "ದೇವಸ್ಥಾನಕ್ಕೆ ಯಾರೂ, ಅದು ಕೊಡು, ಇದು ಕೊಡು ಎಂದು ಬೇಡಲಿಕ್ಕೆ ಹೋಗಬಾರದು. ಹಾಗೆ ಬೇಡಿದರೆ ದೇವರ ಶಕ್ತಿ ಕಡಿಮೆಯಾಗುತ್ತದೆ. ದೇವರನ್ನು ಯಾಕೆ ಬೇಡುತ್ತೀರಿ, ನಿಮ್ಮ ಪ್ರಾಪ್ತಿ ಎಷ್ಟು ಉಂಟೋ ಅಷ್ಟು ಸಿಕ್ಕಿಯೇ ಸಿಗುತ್ತದೆ." ಎಂದಿದ್ದರು. ನನಗೆ ಸಿಕ್ಖ್ ಪಂಥದವರು ಗುರುದ್ವಾರದಲ್ಲಿ ನಡೆಸುವ ಸೇವೆಯ ನೆನಪಾಗುತ್ತದೆ. ಅಲ್ಲಿ ಸೇವೆ ಎನ್ನುವುದರ ಅರ್ಥ ಗುರುದ್ವಾರವನ್ನು ಗುಡಿಸಿ ಸ್ವಚ್ಛ ಮಾಡುವುದು, ಹೂವುಗಳಿಂದ ಸಿಂಗರಿಸುವುದು, ಅನ್ನಪ್ರಸಾದ ಇತ್ಯಾದಿ ಬಡಿಸುವುದು, ಚಪ್ಪಲಿ ಕಾಯುವುದು, ಇತ್ಯಾದಿ. ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು, ಆಗರ್ಭ ಶ್ರೀಮಂತರು ಈ ರೀತಿಯ ಸೇವೆ ಮಾಡುವುದನ್ನು ನೋಡಿದ್ದೇನೆ. ಆದರೆ ನಮ್ಮ ಊರಿನ ದೇವಸ್ಥಾನ ಒಂದರಲ್ಲಿ ೨ ರೂಪಾಯಿ ಕೊಟ್ಟು ಕರ್ಪೂರದ ಆರತಿ "ಸೇವೆ" ನಡೆಸಿ, ತಮ್ಮ ಸಕಲ ಪರಿವಾರದ ಶ್ರೇಯೋಭಿವೃದ್ಧಿಯನ್ನು ದೇವರಲ್ಲಿ ಬೇಡುವುದು ವಿಪರ್ಯಾಸ ಅಲ್ಲವೇ?


ಜ್ಞಾನ ಶಕ್ತಿಯನ್ನು ನೀಡುವ ಸುಬ್ರಹ್ಮಣ್ಯ, ಜನರಲ್ಲಿ ರಾಷ್ಟ್ರೀಯತೆಯ ಜ್ಞಾನವನ್ನು ಪಸರಿಸುತ್ತಿರುವ ವಿಚಾರ ನಿಮ್ಮ ಕಣ್ಣ ಮುಂದೆಯೇ ಇದೆ. ಸಾಮಾಜಿಕ ಜಾಲ ತಾಣಗಳನ್ನೇ ಗಮನಿಸಿ. ಎಲ್ಲೆಲ್ಲೂ ರಾಷ್ಟ್ರೀಯತೆಯನ್ನು ಪಸರಿಸುವ ಪೋಸ್ಟ್ ಗಳೇ ತುಂಬಿ ಹೋಗಿವೆ. ಎಲ್ಲೆಲ್ಲೂ ಸ್ವಾಮಿ ವಿವೇಕಾನಂದರ, ರಾಮಕೃಷ್ಣ ಪರಮಹಂಸರ, ದೇಶದ ಸ್ವಾತಂತ್ರ್ಯ ಹೋರಾಟಗಾರರ ಉಕ್ತಿಗಳು, ಕಥೆಗಳು ಒಮ್ಮೆಲೇ ಹರಿದಾಡಲಾರಂಭಿಸಿವೆ. ಇವೆಲ್ಲ ರಾಷ್ಟ್ರೀಯತೆಯ ಪುನರುತ್ಥಾನಕ್ಕೆ ಕೆಲವು ಉದಾಹರಣೆಗಳು. ದೇಶದ ಶೇ. ೮೦ ರಿಂದ ೯೦ ಭಾಗವನ್ನು ರಾಷ್ಟ್ರವನ್ನು ಪ್ರೀತಿಸುವವರ ದಂಡೇ ರಾಜ್ಯಗಳನ್ನು ಆಳುತ್ತಿವೆ. ರಾಷ್ಟ್ರದ ಬಗ್ಗೆ ಗೌರವ ತಾಳುವುದು, ರಾಷ್ಟ್ರ ಪ್ರೇಮ, ಉತ್ತಮ ನಾಗರೀಕರಾಗಿ ಬಾಳುವುದು, ಸಮಾಜಮುಖೀ ಚಿಂತನೆ ನಡೆಸುವುದು ಎಲ್ಲವೂ ಸೇರಿದಂತೆ ಭಾರತದಲ್ಲಿ ಉತ್ತಮ ವಾತಾವರಣದ ಅಲೆಯನ್ನು ಕಾಣಬಹುದು.

ಇತ್ತೀಚಿಗೆ ನನ್ನನ್ನು ಒಬ್ಬರು ಕೇಳಿದರು. ಪಾವಂಜೆಯ ಸುಬ್ಬಪ್ಪ ವಯಕ್ತಿಕ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದಿಲ್ಲವೇ ಎಂದು? ಯಾಕೆ ಈಡೇರಿಸವುದಿಲ್ಲ ಸ್ವಾಮಿ. ಖಂಡಿತ ಈಡೇರಿಸುತ್ತಾನೆ. ಆದರೆ ಅದು ಕೂಡ ಸಮಾಜದ, ರಾಷ್ಟ್ರದ ಚಿಂತನೆಯ ಉದ್ದೇಶವನ್ನೇ ಹೊಂದಿರುತ್ತದೆ. ನಿಮಗೆ ಬರುವ ಸಂಪತ್ತು ಸಮಾಜ ಸೇವೆಗೆ ವಿನಿಯೋಗವಾಗುತ್ತದೆ. ನೀವು ಬಯಸುವ ಉತ್ತಮ ವೈವಾಹಿಕ ಜೀವನ, ಸೌಹಾರ್ದಯುತ ಸಮಾಜಕ್ಕೆ ಕಾರಣವಾಗುತ್ತದೆ. ನೀವು ಬಯಸುವ ಸಂತಾನ ದೇಶಪ್ರೇಮಿ ಆಗುತ್ತದೆ. ದೇಶಕ್ಕೆ ಒಬ್ಬ ಉತ್ತಮ ನಾಗರೀಕ ದೊರೆಯುತ್ತಾನೆ, ನಿಮ್ಮ ವಿದ್ಯೆ ದೇಶಸೇವೆಗೆ ಬಳಸಲ್ಪಡುತ್ತದೆ. ನಿಮಗೆ ಸಿಗುವ ಉತ್ತಮ ಉದ್ಯೋಗ ಭಷ್ಟಾಚಾರ ರಹಿತ ವ್ಯವಸ್ಥೆಗೆ ಕಾರಣವಾಗುತ್ತದೆ. ನೀವು ಉದ್ಧಾರ ಆದರೆ ಸಮಾಜ ಉದ್ದಾರ ಆದ ಹಾಗೆ. ಸಮಾಜ ಉದ್ದಾರ ಆದರೆ ದೇಶ ಉದ್ಧಾರ ಆದ ಹಾಗೆ ಅಲ್ಲವೇ?

ಆಗಮೋಕ್ತವಾಗಿ ಸ್ಥಾಪಿಸಲ್ಪಟ್ಟ ಈ ದೇವಾಲಯ ಹಲವು ಕೌತುಕಗಳ ಆಗರ. ಶ್ರೀ ಅಣ್ಣಪ್ಪಸ್ವಾಮಿಯವರ ಸಾನ್ನಿಧ್ಯ ಇದಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡಿದೆ. ಇಂತಹ ಸೇವೆಯನ್ನು ಮಾಡಿದರೆ ಇಂತಹ ಫಲಗಳನ್ನು ಪಡೆಯಬಹುದು ಎಂದು ಫಲಕದಲ್ಲಿ ಬರೆದು ತೂಗು ಹಾಕಿರುವ ಪ್ರಥಮ ದೇವಾಲಯವಿದು. ಪಂಚಾಮೃತ ಅಭಿಷೇಕವೆಂದರೆ ನಿಜವಾಗಿಯೂ ಪಂಚಾಮೃತ ಅಭಿಷೇಕ ನಡೆಸುವ, ರುದ್ರಾಭಿಷೇಕವೆಂದರೆ ರುದ್ರ ಪಾರಾಯಣ ಮಾಡಿಯೇ ಅಭಿಷೇಕ ನಡೆಸುವ, ತೈಲಾಭಿಷೇಕ ಎಂದರೆ ಶುದ್ಧವಾದ ತೆಂಗಿನ ಎಣ್ಣೆಯಿಂದಲೇ ಅಭಿಷೇಕ ಮಾಡಿ ಪ್ರಸಾದ ನೀಡುವ ವಿಶಿಷ್ಟ ದೇವಾಲಯವಿದು. ಬೆರಳೆಣಿಕೆಯ ಯುವಕರ ದಂಡು ಮಾಡುವ ಕಾರ್ಯಗಳು ನಿಜಕ್ಕೂ ನಮ್ಮನ್ನು ಆಶ್ಚರ್ಯಚಕಿತಗೊಳಿಸದೆ ಇರದು. ನೂರಾರು ಜನರು ಬೇಕಾದ ಕೆಲಸಗಳಿಗೆ ಏನೇನೂ ಕಡಿಮೆ ಇಲ್ಲದಂತೆ ಪೂರೈಸುವ ಇವರ ಚಾಕಚಕ್ಯತೆ ಒಮ್ಮೆ ನೋಡಿಯೇ ತಿಳಿಯಬೇಕು. ದಿನ ನಿತ್ಯ ಅಗ್ನಿ ಉಪಾಸನೆಯ ಮೂಲಕ ಜ್ಞಾನ ವೃದ್ಧಿಯಾಗುತ್ತದೆ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯ.

ಶ್ರೀ ಅಣ್ಣಪ್ಪಸ್ವಾಮಿಯವರು ಪ್ರತಿಪಾದಿಸಿದ ಭಾಗವತ ಸಂಪ್ರದಾಯವಾದಿಗಳಾದ ಸ್ಥಾನಿಕರು ಪೂಜಿಸಿಕೊಂಡು ಬರುವ ವಿಶಿಷ್ಟ ಕ್ಷೇತ್ರವಿದು. ಭಾಗವತ ಎಂದರೇನೆ "ಎಲ್ಲರನ್ನೂ ಸಮಾನವಾಗಿ ಕಾಣುವ ವಿಶಾಲ ಮನೋಭಾವ ಉಳ್ಳವರು" ಎಂದರ್ಥ (ಈ ಬಗ್ಗೆ “ಶ್ರೀ ಅಣ್ಣಪ್ಪಸ್ವಾಮಿ" ಸ್ವಾನಿಕರ ಮೂಲ ಪುರುಷ - ಸಂಶೋಧನಾ ಪ್ರಬಂಧ" ಎನ್ನುವ ಲೇಖನದಲ್ಲಿ ಈ ಹಿಂದೆ ವಿವರವಾಗಿ ಬರೆದಿರುತ್ತೇನೆ). ಎಲ್ಲರಲ್ಲೂ ಭಗವಂತನನ್ನು ಕಾಣುವವರು. ಭಾಗವತರಿಂದ ಮಾತ್ರ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗಲು ಸಾಧ್ಯ. ಶಾಂತಿ-ಸಾಮರಸ್ಯದ ಬದುಕು ನೆನಸಾಗಲು ಸಾಧ್ಯ. ಆದ್ದರಿಂದ ಭಾಗವತರಿಂದಲೇ ಸ್ವಾಮಿಯ ಮಂತ್ರ-ತಂತ್ರಾದಿಯಾಗಿ ಪೂಜೆ-ಪುನಸ್ಕಾರಗಳು ಸಾಂಗವಾಗಿ ನಡೆದುಕೊಂಡು ಬರುತ್ತಿವೆ ಎಂದು ನನ್ನ ಅನ್ನಿಸಿಕೆ.

ಒಟ್ಟಿನಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇಗುಲವು ಸದೃಢ ರಾಷ್ಟ್ರವನ್ನು ಕಟ್ಟುವಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣೀಭೂತವಾಗಿದೆ. ಪ್ರತ್ಯಕ್ಷ ವ್ಯವಹಾರವನ್ನು ಈ ಲೇಖನದ ಮೂಲಕ ವಿವರವಾಗಿ ಹೇಳಿದ್ದೇನೆ. ಪರೋಕ್ಷ ವ್ಯವಹಾರವನ್ನು ವಿವರಿಸಲು ನಾನು ಸಮರ್ಥನಲ್ಲ. ಅಷ್ಟು ವಿದ್ಯೆಯನ್ನು ಇನ್ನೂ ಸಾಧಿಸದಿರುವುದೇ ಇದಕ್ಕೆ ಕಾರಣ. ಇನ್ನೊಮ್ಮೆ ಯಾವುದಾದರೂ ದೇವಳಕ್ಕೆ ಹೋದಾಗ ತಮ್ಮಿಂದ ಆದಷ್ಟು ಸೇವೆ (ತಾನು, ಮನ, ಧನ ದಿಂದ) ಮಾಡಿ. ಏನನ್ನೂ ಬೇಡಲು ಹೋಗಬೇಡಿ. ಇದೂ ಒಂದು ರೀತಿಯ ಸಮಾಜ ಸೇವೆಯೇ. ನಿಮಗೆ ಸಮಾಜದ ಕೆಳ ವರ್ಗಗಳ ಸೇವೆ ಮಾಡಲು ಮನಸ್ಸಿದ್ದು ಕಾರ್ಯ ಬಾಹುಳ್ಯದಿಂದ ಸಾಧ್ಯವಾಗದೆ ಇದ್ದರೆ, ಬಹು ಸುಲಭವಾದ ಅನ್ನ ದಾನ ಸೇವೆ ಮಾಡಿಸಿ. ಅನ್ನದ ಮೂಲಕ ದೇಹವನ್ನು ಸೇರುವ ಸ್ವಾಮಿಯ ಪ್ರಸಾದವು ಅವರ ಜ್ಞಾನವನ್ನು ಪ್ರಚೋದಿಸಿ ಉತ್ತಮ ನಾಗರೀಕರನ್ನಾಗಿ ಮಾಡುತ್ತದೆ. ಇದರಿಂದ ಉತ್ತಮ ಸಮಾಜ ತನ್ಮೂಲಕ ಉತ್ತಮ ದೇಶ ಕಟ್ಟಬಹುದು. ಈಗ ತಿಳಿಯಿತೇ, ಯಾಗಗಳ ಮುಖಾಂತರ ಲಕ್ಷಾಂತರ ಜನರ ಅನ್ನದಾನ, ತನ್ಮೂಲಕ ಬೌದ್ಧಿಕ ಪರಿಷ್ಕರಣೆ ಹೇಗೆ ಸಾಧಿಸಬಹುದು ಎಂದು. ನಮ್ಮ ಸುಬ್ಬಪ್ಪನಿಗೆ ಯಾವುದೇ ಸೇವೆ ಸಲ್ಲಿಸಿ, ನೀವು ಸಮಾಜಸೇವೆಯ ಸುಖ ಅನುಭವಿಸಬಹುದು.

ಓಂ ಶರವಣಭವಾಯ ನಮಃ

April 7, 2018

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು 3&4


ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೩

ಶ್ಯುನಶ್ಯೇಫ

ಶ್ವೇತಾಘಮರ್ಷಣ ಋಷಿಯು ಕ್ರೌನ್ಚಾರಾಣ್ಯ ಪ್ರದೇಶದಲ್ಲಿ೫ ಮಕ್ಕಳೊಂದಿಗೆ ವಾಸವಾಗಿದ್ದರು. ಅವರ ೪ನೇ ಮಗನೇ ಶ್ಯುನಶ್ಯೇಫ. ಆ ಪ್ರದೇಶವು ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು ಸಹಜವಾಗಿ ಆಹಾರದ ಕೊರತೆ ಇತ್ತು, ಶ್ಯುನಶ್ಯೇಫರು ಹದಿನಾರನೇ ವಯಸ್ಸಿಗೆ ಸಕಲ ವೇದಪಾರಂಗತರಾಗಿ, ಮಹಾಜ್ಞಾನಿಯಾಗಿ ಈ ಲೋಕದ ಅನ್ನಾದಿ ಋಣಗ್ರಾಹ್ಯವನ್ನು ಬಿಟ್ಟು ಅನ್ನಾದಿಗಳಲ್ಲಿ ದೊರೆಯುವ "ವಾಜ" ವೆಂಬ ಸಾರಗ್ರಹಿಸುವ ಶಕ್ತಿಯನ್ನು ಹೊಂದಿದ್ದರು. ಇದನ್ನರಿತ ದೇವತೆಗಳು ತಮ್ಮ ಅಮರತ್ವಕ್ಕೆ ಕುಂದಾದೀತೆಂದು ಚಿಂತಿಸಿ ಒಂದು ನಾಟಕ ರೂಪಿಸುತ್ತಾರೆ. ರಾಜಾ ಹರಿಶ್ಚಂದ್ರನೆಂಬ ರಾಜನಿಗೆ ಜಲೋದರ ಎಂಬ ರೋಗ ಬರುತ್ತದೆ. ಪುರೋಹಿತನಾದ ಯತಿಯು ದೇವತೆಗಳ ಆದೇಶದಂತೆ ವರುಣ ಯಾಗವನ್ನೂ, ಬಲಿಪಶುವಾಗಿ ೧೬ ವರ್ಷದ ವೇದ ವೇದಾಂಗ ಪರಿಣತ ಬ್ರಾಹ್ಮಣ ವಟುವನ್ನು ಯೂಪ ಪಶು ಮಾಡಿದಲ್ಲಿ ರೋಗ ಪರಿಹಾರವಾಗುತ್ತದೆ ಎಂದನು. ರಾಜನ ಆದೇಶದಂತೆ ಮಂತ್ರಿಯು ಹುಡುಕುತ್ತಾ ಕ್ರೌನ್ಚಾರಾಣ್ಯಕ್ಕೆ ಬಂದಾಗ ಶ್ವೇತಾಘಮರ್ಷಣನು ಮಂತ್ರಿಗೆ "ಅರಸನಿಗೆ ನಾವೆಲ್ಲ ಮಕ್ಕಳಂತೆ. ಅವನ ಅನಿವಾರ್ಯತೆಗೆ ಬೇಕಿದ್ದಲ್ಲಿ ನನ್ನ ಮಗನನ್ನೇ ಕೊಡುತ್ತೇನೆ. ವೇದ ಪಾರಂಗತನಾದ ಅವನಿಗೂ ಇದೊಂದು ಪರೀಕ್ಷೆ" ಎಂದನು. ಮಗನನ್ನು ಕರೆದು ಯೂಪವನ್ನು ಜಯಿಸಿ ರಾಜನನ್ನು ಗುಣಮುಖನಾಗಿ ಮಾಡು ಎಂದನು. ಯಾಗ ವಿಧಿಯಂತೆ ಯೂಪ ಪಶುವಿಗೆ ವರಣೆಯಿತ್ತು, ಅಭ್ಯಾವರ್ತಿನೀ ಹೋಮಪೂರ್ವಕ ಯೂಪರೋಪ ಮಾಡಿ ಬಂಧಿಸಲಾಯಿತು. ವರುಣನು ಯೂಪವನ್ನು ಆಕ್ರಮಿಸಿದ. ಆದರೆ ಶ್ಯುನಶ್ಯೇಫನು ಅಘಮರ್ಷಣ ಜಪ ಮಾಡುತ್ತಾ ವರುಣನನ್ನೇ ಜಯಿಸಿದ. ಆಗ ವರುಣನು ರಾಜನ ಖಾಯಿಲೆಯೆಯನ್ನು ಹಿಂಪಡೆದು ಶ್ಯುನಶ್ಯೇಫನನ್ನು ಹರಸಿದನು. ಶ್ಯುನಶ್ಯೇಫರು ಅನ್ನದಲ್ಲಿರುವ ವಾಜವನ್ನು ಬೇರ್ಪಡಿಸುವ ವಿಧ್ಯೆಯನ್ನು ಸಾಧಿಸಿದ ಕಾರಣ ದೇವತೆಗಳಿಗಿಂತ ಹೆಚ್ಚಿನವರಾದರು. ಇಂದ್ರನ ಸಖ್ಯವನ್ನು ಹೊಂದಿ ಅಮರನಾದನು. ಮಂತ್ರ ದೃಷ್ಟಾರನಾದನು. ಹಾಗಾಗಿ ಈ ಮಂತ್ರದ ಗಾನಕ್ಕೆ ಅಂತಹ ವಿಶಿಷ್ಟ ಶಕ್ತಿ ಇದೆ.

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೪

ನೃಮೇಧ

ಪ್ರಸಕ್ತ ಕಾಲದಲ್ಲಿ ಯಾಗ-ಯಜ್ಞಗಳಲ್ಲಿ ಕೆಲ ಅಜ್ಞಾನಿಗಳು ಪ್ರಾಣಿ ಬಲಿಯನ್ನು ಹೊಂದಿಸಿ, ಇದೊಂದು ವೇದೋಕ್ತ ಪ್ರಕ್ರಿಯೆ ಎಂಬಂತೆ ಬಿಂಬಿಸಿ ವೇದ ನಿಂದನೆ ಮಾಡುತ್ತಿದ್ದಾರೆ. ಆದರೆ ಅಲ್ಲಿ ಅವರ ಅಜ್ಞಾನದ ಪರಮಾವಧಿ ಕಂಡು ಬರುತ್ತದೆಯೇ ವಿನಃ ಸತ್ಯವಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಶಬ್ದ ಮೂಲವನ್ನು. ಉದಾಹರಣೆಗೆ "ನೃಮೇಧ", "ನೃಸಿಂಹ" ಇದು ಮೂಲ ಶಬ್ದ. ಇಲ್ಲಿ ನರಮೇಧವಾಗಲೀ, ನರಸಿಂಹವಾಗಲೀ ಇಲ್ಲ. ಋ ಕಾರ ಬಳಕೆಯಾಗಿದೆ, ರ ಕಾರವಲ್ಲ. ನೃಸಿಂಹ ಭೀಕರವೂ ಅಲ್ಲ, ನೃಮೇಧ ನರಮೇಧವೂ ಅಲ್ಲ. ಮೇಧ ಶಬ್ದವು ಯಜ್ಞ ಯಾಗಾದಿಗಳ ಪರ್ಯಾಯ ಶಬ್ದ, ಒಂದು ಪೂರ್ಣ ತ್ಯಾಗರೂಪದ ಅಧ್ಯಯನಶೀಲಯುಕ್ತವಾದ ತಪಸ್ಸು ಎಂದರ್ಥ. ಯಜ್ಞ ಯಾಗಾದಿಗಳಂತೆ ಇಲ್ಲಿ ಅಗ್ನಿ ಸಂಚಯನ ಇರುವುದಿಲ್ಲ. ಆದರೆ ತಪಸ್ಸು, ತ್ಯಾಗ, ಜಪ, ಜೀವನವೂ ಕೂಡಾ ಯಜ್ಞ ಸಮಾನವಾದ್ದರಿಂದ ಈ ಶಬ್ದ ಬಳಕೆಯಲ್ಲಿ ಬಂದಿದೆ. ಇಲ್ಲಿ ನೃಮೇಧ ಎಂದರೆ ನರಮೇಧ ಮಾಡಿದವನು ಎಂದರ್ಥವಲ್ಲ. ಆತ ಆಂಗೀರಸ ಪರಂಪರೆಯಲ್ಲಿ ಹುಟ್ಟಿದ ಮಹಾತಪಸ್ವಿ. ಅವನ ಇನ್ನೊಂದು ಹೆಸರು ಪುರುಹನ್ಮ. ಹಾಗಾಗಿ ಕೆಲವು ಕಡೆ "ನೃಮೇಧ ಪುರುಹನ್ಮಾಂಗೀರಸಃ" ಎಂದೇ ಸಂಬೋಧಿಸಲ್ಪಡುತ್ತದೆ. ಹಾಗೆಂದು ಪುರುವನ್ನು ಕೊಂದವನೆಂದು ಅರ್ಥವಲ್ಲ. ಇವೆರಡಕ್ಕೂ ಭಿನ್ನವಾದ ವಿಶೇಷ ಇತಿಹಾಸವಿದೆ. ಅದನ್ನು ತಿಳಿಯಲು ಈ ಕಥೆ ಓದಿ.

ಒಂದಾನೊಂದು ಕಾಲದಲ್ಲಿ ಹೈಹಯ ವಂಶದ ಅರಸುಗಳು ಚಕ್ರವರ್ತಿಗಳಾಗಿ ಸಪತದ್ವೀಪಗಳನ್ನು ಆಳುತ್ತಿದ್ದರು. ಅವರು ದುಷ್ಟರೂ, ಅಧರ್ಮಿಗಳೂ, ಪ್ರಜಾಪೀಡಕರೂ ಆಗಿದ್ದರು. ಹಾಗೇ ಈ ಕಾಲದಲ್ಲಿ ಬ್ರಾಹ್ಮಣರೂ ಎರಡು ಪಂಗಡಗಳಾಗಿ (ಭಾರ್ಗವರು + ಆಂಗೀರಸರು) ಮಂತ್ರಾಸ್ತ್ರಗಳ ಮುಖೇನ ಹೋರಾಡುತ್ತಿದ್ದರು. ಆಗ ಆಂಗೀರಸ ಪರಂಪರೆಯಲ್ಲಿ ಹುಟ್ಟಿದ ನೃಮೇಧ (ಮೂಲ ಹೆಸರು 'ಬಂಧು') ನು ತಾಯಿಯ ಅಪ್ಪಣೆ ಪಡೆದು ದೀರ್ಘ ಕಾಲ ಅಧ್ಯಯನ, ತಪಸ್ಸು ನಡೆಸಿ, ಪೂರ್ಣಜ್ಞಾನ ಪಡೆದು ತನ್ನೂರಿಗೆ ಬರುವಾಗ ತನ್ನ ಊರು ನಾಶವಾಗಿರುವುದನ್ನು ನೋಡುತ್ತಾನೆ. ಈ ಸಮಾಜ ವ್ಯವಸ್ಥೆಯನ್ನು ಸರಿಪಡಿಸಲು ಅವನು ಸಪ್ತರ್ಷಿಗಳ ಕುರಿತು ಪ್ರಾರ್ಥಿಸಿದಾಗ ಅವರು " ನೃಮೇಧ ಎಂಬ ಯಾಗ ಮುಖೇನ ಕ್ಷತ್ರಿಯಲ್ಲಿರತಕ್ಕ ಆನೃಶಂಸ ಗುಣವನ್ನು ತಿದ್ದಿ ನೃಶಂಸರನ್ನಾಗಿ ಮಾಡು" ಎಂದರು. ಹೀಗೆ ಯಾಗ ಮಾಡುತ್ತಿರಲು ಭಾರ್ಗವರು "ಪುರು" ಎಂಬುವನ ನೇತೃತ್ವದಲ್ಲಿ ಅಡ್ಡಿ ಮಾಡಲು ಆತನನ್ನು, ಮತ್ತವರ ಕಡೆಯವರನ್ನು ಶೀಲಾ ಪ್ರತಿಮೆ ಮಾಡಿ ಯಾಗ ಮುಗಿಸುತ್ತಾನೆ. ಬಳಿಕ ಹೈಹಯರು ಕ್ಷಾತ್ರ ಧರ್ಮದಂತೆ ಪ್ರಜಾರಂಜಕರಾಗಿ ಬದುಕುತ್ತೇವೆ ಎಂದು ವಾಗ್ದಾನ ಮಾಡಿ ತೆರಳುತ್ತಾರೆ. ಆದರೆ 'ಪುರು' ವಿನ ಪ್ರತಿಮೆ ಮಾತ್ರ ಹಾಗೇ ಉಳಿಯುತ್ತದೆ. ಅದನ್ನು ಮುಕ್ತಗಳಿಸಲು ಹೋದಾಗ "ಹೇ ವಿಪ್ರಬಂಧೋ! ಪುರುಹನ್ ಮಾ" ಎಂದು ಅಶರೀರ ವಾಣಿ ಕೇಳಿಸುತ್ತದೆ. ಅವನ ಆಯುಸ್ಸು ತೀರಿ ವರ್ಷವಾಗಿದೆ. ಈಗ ಮನುಷ್ಯರೂಪ ಕೊಟ್ಟರೆ ಸಾಯುತ್ತಾನೆ. ಆಗ ಸಪ್ತರ್ಷಿಗಳನ್ನು ಪ್ರಾರ್ಥಿಸಿದಾಗೆ "ಈ ಪುರುವು ಪ್ರತಿಮಾರೂಪದಲ್ಲಿ ದಕ್ಷಿಣಕ್ಕೆ ಮುಖಮಾಡಿರುವುದರಿಂದ ದಕ್ಷಿಣಾಮೂರ್ತಿ ಎನಿಸಿಕೊಳ್ಳುತ್ತಾನೆ. ತ್ರಿಮೂರ್ತಿಗಳು ಏಕೀಭವಿಸಿ ದತ್ತಾತ್ರೇಯನಾಗಿ ಹುಟ್ಟುವಾಗ ಋಣಕಾರಣ ದೇಹಿಯಾಗಿ ಇವನಿರುತ್ತಾನೆ. ಮುಂದಿನ ಕ್ಷತ್ರಿಯ ನಿಗ್ರಹಕ್ಕೆ ಇವನ ಪಾತ್ರ ಈಗಲೇ ಆರಂಭವಾಗಿದೆ. ನೀನು ಮುಂದೆ "ನೃಮೇಧ", "ಪುರುಹನ್ಮಾ" ನೆಂದೂ ಖ್ಯಾತನಾಗುತ್ತೀಯ ಎಂದರು.

"ನೃಮೇಧ" ಕ್ಕೂ, ನರಮೇಧಕ್ಕೂ, "ಪುರುಹನ್ಮಾ", ಪುರುವಿನ ಹತ್ಯೆಗೂ ಅರ್ಥಯಿಸುವುದು ಬಾಲಿಶ ಅಲ್ಲವೇ? ಬಂಧುಗಳೇ, ಮೊದಲು ವೇದಾಧ್ಯನ ನಡೆಸಿ, ಬಳಿಕ ವ್ಯಾಖ್ಯಾನ ಮಾಡಿ.

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು 1&2


ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೧

ಯತಿ ಮತ್ತು ಯಯಾತಿ

ಇವರಿಬ್ಬರು ಸಹೋದರರು. ಅಣ್ಣ ಯತಿಯು ವಿದ್ವಾಂಸನೂ, ಶೂರನೂ, ತ್ಯಾಗಿಯೂ ಆಗಿದ್ದು ವಿನಯಶೀಲನಾಗಿದ್ದನು. ತಮ್ಮ ಯಯಾತಿ ಶೂರ, ಧೀರನಾಗಿದ್ದರೂ ಮಹತ್ವಾಕಾಂಕ್ಷಿಯಾಗಿದ್ದನು. ಅವನು ಚಿಕ್ಕವನಾದರೂ ತಾನೇ ಅಧಿಕಾರಕ್ಕೆ ಬರಬೇಕೆಂದಾಗ ಅಣ್ಣನಾದ ಯತಿಯು ಸಂತೋಷದಿಂದ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟು ದೇಶವನ್ನೇ ಬಿಟ್ಟು ತೆರಳಿದನು. ಯತಿಯು ಅಲ್ಪತೃಪ್ತನಾಗಿ ಯೋಗಿಯಾಗಿ, ಭೋಗಜೀವನವನ್ನು ಬಿಟ್ಟು ಸದಾ ಶಿವಧ್ಯಾನಯಲ್ಲೇ ಇರುತ್ತಾ, ಸಾರೂಪ್ಯ ಮುಕ್ತಿಯನ್ನು ಪಡೆದ. ಶಿವನ ಒಂದು ರೂಪಕ್ಕೆ ಯತಿ ಎಂಬ ಹೆಸರಿದೆ.

ಆದರೆ ಯಯಾತಿಯು ರಾಜ್ಯವಾಳುತ್ತಾ ಭೋಗಪ್ರಿಯನಾಗಿ, ಬೇಕುಗಳ ಹಿಂದೆ ಓಡಿ ಓಡಿ ದಣಿದು, ಹಲವು ಮದುವೆಯಾಗಿ, ನಾನಾ ಮಕ್ಕಳನ್ನು ಪಡೆದು ಇನ್ನೂ ಸಾಕಾಗದೆ, ತನ್ನ ಮಗನ ಯೌವನವನ್ನೇ ಪಡೆದರೂ ತೃಪ್ತನಾಗದೇ, ನಾನಾ ಕಷ್ಟ ಕೋಟಲೆಗಳಿಗೆ ಸಿಲುಕಿ ತನ್ನ ಪ್ರಾಣ ಬಿಡುತ್ತಾನೆ. ಯತಿಯು ಶಾಶ್ವತನಾದ, ಯಯಾತಿಯು ಮೃತ್ಯುವಶನಾದ. ಇದು ಅತಿಲೋಭತನದ ಪರಿಣಾಮವಾಗಿದೆ. ಹಾಗೆಯೆ ನಿಯಮ ಬಾಹಿರ ಜೀವನ ಪಥವನ್ನು ಅನುಸರಿಸುವುದು ಅಪಕಾರಿ ಎಂಬುದಕ್ಕೆ ನಿದರ್ಶನವಾಗಿದೆ. ಆದ್ದರಿಂದ ಒಂದು ನಿಯಮ ಸೂತ್ರದ ಅಡಿಯಲ್ಲಿ ಜನಮಾನಸವಿರಬೇಕಾಗುತ್ತದೆ.

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೨

ಅಣಿಮಾಂಡವ್ಯ

ಒಂದಾನೊಂದು ಕಾಲದಲ್ಲಿ ಮಾಂಡವ್ಯನೆಂಬ ಮಹಾನ್ ತಪಸ್ವಿಯೂ, ತ್ಯಾಗಿಯೂ, ಉದಾರಿಯೂ ಆದ ಋಷಿಯೊಬ್ಬನಿದ್ದನು. ಅವನ ಕೊರತೆಯೆಂದರೆ ಅವನ ಆಸನ ಭಾಗದಲ್ಲಿ ಒಂದು ಉಕ್ಕಿನ ಶೂಲ ಅಂಟಿಕೊಂಡಿದ್ದು, ಅವನು ಯಾವಾಗಲೂ ನಿಂತುಕೊಂಡೇ ಇರಬೇಕಾಗಿತ್ತು. ಒಂದು ದಿನ ಕೆಲವು ಋಷಿಗಳು ಅವನಲ್ಲಿಗೆ ಬಂದರು. ಅವನು ಅವರನ್ನು ನಿಂತುಕೊಂಡೇ ಸತ್ಕರಿಸಿದನು. ಆಗ ಋಷಿಗಳು "ಅಯ್ಯಾ ಮಾಂಡವ್ಯನೇ ನಿನ್ನ ಸ್ಥಿತಿ ನಮಗೆ ಅರ್ಥವಾಗಿದೆ. ನಿನಗೆ ಅದರಿಂದ ಬಿಡುಗಡೆ ಕೊಡುವ ಉದ್ದೇಶದಿಂದ ನಾವು ಬಂದಿದ್ದೇವೆ. ನೀನು ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ಈ ಶಿಕ್ಷೆ ಕೊಡಲ್ಪಟ್ಟಿದೆ. ಅದನ್ನು ನೀನು ನಮಗೆ ಹೇಳಿದರೆ ನಿನಗೆ ಅದರಿಂದ ಮುಕ್ತಿ ಕೊಡುತ್ತೇವೆ" ಎಂದರು.

ಆಗ ಮಾಂಡವ್ಯನು ತನ್ನ ಬಾಲ್ಯದ ಕಥೆ ಹೇಳಲಾರಂಭಿಸಿದ. "ನಾನು ಚಿಕ್ಕಂದಿನಿಂದಲೂ ಹಿಂಸಾತ್ಮಕ ಪ್ರವೃತ್ತಿಯವನಾಗಿದ್ದೆ. ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ವಿಕೃತ ತರಂಗ ಸೃಷ್ಟಿಸಿ ಹಾರದಂತೆ ಮಾಡಿ, ಹಿಡಿದು, ಮುಳ್ಳು ಚುಚ್ಚಿ ಹಿಂಸೆ ಕೊಡುತ್ತಿದ್ದೆ. ಋಷಿ ಶ್ರೇಷ್ಠರು ಉಪದೇಶಿಸಿದ ಮಂತ್ರಗಳನ್ನೆಲ್ಲ ಬಾಲ್ಯ ಚೇಷ್ಟೆಗೆ ಬಳಸುತ್ತಿದ್ದೆ. ಇದನ್ನರಿತ ನನ್ನ ತಂದೆ "ನಿನಗೆ ಸಿದ್ಧಿಸಿದ ಮಂತ್ರಗಳೆಲ್ಲ ಸ್ಮರಣೆಯಿಂದ ಮಾಯವಾಗಲಿ" ಎಂದು ಶಪಿಸಿದರು. ತಂದೆಯ ಬಳಿ ಕ್ಷಮೆ ಕೇಳಿದಾಗ ಪ್ರಾಯಶ್ಚಿತ್ತಕ್ಕಾಗಿ ದೇಶಪರ್ಯಟನೆ ಮಾಡು ಎಂದರು. ಅಂದಿನಿಂದ ೮೦೦ ವರ್ಷ ದೇಶಪರ್ಯಟನೆ ಮಾಡಿದೆ. ಅಲ್ಲೆಲ್ಲ ಜನರು ಹಲವು ರೀತಿಯ ಹಿಂಸೆ ಕೊಟ್ಟರು. ಅದನ್ನೆಲ್ಲ ಸಹಿಸಿಕೊಂಡೆ. ಮುಂದೆ ಕೌಶಂಬಿ ನಗರಕ್ಕೆ ಬಂದಾಗ ಏನಕೇನ ಪ್ರಕಾರೇಣ ಕಳ್ಳತನದ ಆರೋಪ ಬಂತು. ರಾಜಭಟರು ಪ್ರಶ್ನೆ ಕೇಳಿದಾಗ ಮೌನಿಯಾಗಿದ್ದೆ. ರಾಜನಿಗೆ ಸಿಟ್ಟು ಬಂದು ಶೂಲಕ್ಕೆ ಏರಿಸಿದರು. ನೋವು ಅನುಭವಿಸಿದರೂ ಸಾಯಲಿಲ್ಲ. ಪ್ರಣವೋಪಾಸನೆ ಮಾಡುತ್ತ ಬದುಕಿದ್ದೆ. ೧೫ ನೇ ದಿನ ರಾಜನಿಗೆ ಯಮನು ಕನಸಿನಲ್ಲಿ ಬಂದು ಅವನು ಅಪರಾಧಿಯಲ್ಲ, ಅವನನ್ನು ನೀನು ಸಾಯಿಸಲಾರೆ, ಬಿಡಿಸು ಎಂದನು. ಆದರೆ ನಾನು ಶೂಲಕ್ಕೆ ಅಂಟಿಕೊಡದ್ದರಂದ ನನ್ನನ್ನು ಬಿಡಿಸಲು ಆಗಲಿಲ್ಲ. ಕೊನೆಗೆ ಶೂಲ ಸಮೇತ ನನ್ನನ್ನು ಇಳಿಸಿ ಶೂಲವನ್ನು ದೇಹದ ಅಂಚಿನವರೆಗೆ ಬಿಟ್ಟು ಕತ್ತರಿಸಿದರು. ಅದರ ಅಣಿ ಅಥವಾ ಮೊನೆ ದೇಹದಲ್ಲೇ ಇರುವುದರಿಂದ ಕುಳಿತುಕೊಳ್ಳಲಾರೆ, ಆ ನೋವಿನಲ್ಲೇ ಬದುಕುತ್ತಿದ್ದೇನೆ " ಎಂದನು. ಆಗ ಋಷಿಗಳು ಧರ್ಮ ವಿಧಿಸಿದ ಶಿಕ್ಷೆ ಇದು. ಇದರ ಅವಧಿ ಮುಗಿದಿದೆ ಎಂದು "ಸಮಗಾನ"ವನ್ನು ಹಾಡಿದಾಗ ಅಣಿಯು ಜಾರಿ ಕೆಳಗೆ ಬಿತ್ತು. ಹಾಗಾಗಿ ಒಂದು ಸಣ್ಣ ಕೀಟಕ್ಕೂ ಹಿಂಸೆ ಕೊಟ್ಟಲ್ಲಿ ಮುಂದೆ ಅದು ಕಾಡುತ್ತದೆ ಎಂದು ತಿಳಿಯಬಹುದು. ಅಲ್ಲದೆ ಸಾಮದ ಮಹತ್ವವನ್ನೂ ಅರಿಯಬಹುದು.

April 2, 2018

ಮೂರ್ಖರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಭಾಗ ೩ - ಫೇಸ್ಬುಕ್, ಗೂಗಲ್ ಗಳು ಉಚಿತವಲ್ಲ!


ಇತ್ತೀಚಿಗೆ ಎಲ್ಲರೂ ಫೇಸ್ಬುಕ್ ನಲ್ಲಿ ಗೆಳೆಯರನ್ನು ಮಾಡಿಕೊಳ್ಳುವುದು, ಗೂಗಲ್ ನಲ್ಲಿ ಹುಡುಕಾಡುವುದು ಹೆಚ್ಚಾಗಿದೆ. ಎಲ್ಲರೂ ಅದು ಉಚಿತವೆಂದೇ ತಿಳಿದಿದ್ದಾರೆ. ಆದರೆ ಅವು ಹೇಗೆ ಹಣ ಸಂಪಾದನೆ ಮಾಡುತ್ತವೆ ಎಂದು ಆಲೋಚಿಸಿದ್ದೀರಾ? ಒಮ್ಮೆ ಅಂತರ್ಜಾಲವೆಂಬ ಮಾಯಾಜಾಲದ ಒಳಗೆ ಹೊಕ್ಕು ನೋಡಿ. ಈ ಸೇವೆಗಳೆಲ್ಲ ನಿಜವಾಗಿಯೂ ಉಚಿತವಲ್ಲವೆಂಬ ಸತ್ಯದ ಅರಿವು ನಿಮಗಾಗಲಿದೆ. ನೀವು ನಿಮ್ಮ ಆಂತರಿಕ ಗುರುತು, ಸ್ವಂತ ವ್ಯಕ್ತಿತ್ವವನ್ನು ಅವರಿಗೆ ಪಾವತಿ ಮಾಡುತ್ತಿದ್ದೀರಿ! ನೀವು ಫೇಸ್ಬುಕ್ ಬಳಸುವಾಗ ಅವರು ನಿಮ್ಮ ಎಲ್ಲ ವ್ಯವಹಾರಗಳನ್ನು ದಾಖಲು ಮಾಡಿಕೊಳ್ಳುತ್ತಾರೆ. ನೀವು "ಲೈಕ್" ಮಾಡುವ ಪುಟಗಳು, ನೀವು ಸಂವಹನ ನಡೆಸುವ ವ್ಯಕ್ತಿಗಳು, ನೀವು ಸ್ಟೇಟಸ್ ನಲ್ಲಿ ಬಳಸಿರುವ ಶಬ್ಧಗಳು ಎಲ್ಲವೂ ಅವರ ಸಂಗ್ರಹದಲ್ಲಿ ದಾಖಲಾಗುತ್ತವೆ. ನಂತರ ಅವರು ಈ ಮಾಹಿತಿಯನ್ನು ವಿಶ್ಲೇಷಿಸಿ ನೀವು ಏನೆಂಬುವುದರ ಬಗ್ಗೆ ಒಂದು ವಿಸ್ತೃತ ದಾಖಲೆ ನಿರ್ಮಾಣ ಮಾಡುತ್ತಾರೆ. ಈ ಮೂಲಕ ಅವರು ನಿಮ್ಮ ಹವ್ಯಾಸವೇನು? ನಿಮ್ಮ ಆಯ್ಕೆಗಳೇನು? ನಿಮ್ಮ ಪ್ರಾಶಸ್ತ್ಯಗಳೇನು? ನಿಮ್ಮ ಅಪಾಯ ಸಹಿಷ್ಣುತೆ ಎಷ್ಟು? ಅಷ್ಟೇ ಅಲ್ಲ ನಿಮ್ಮ ಲೈಂಗಿಕ ದೃಷ್ಟಿಕೋನವೇನು ಎಂಬುದನ್ನೂ ಅರಿತಿರುತ್ತಾರೆ. ಇದನ್ನು ಅವರು ಜಾಹೀರಾತುದಾರರಿಗೆ ಬಹಳ ದೊಡ್ಡ ಮೊತ್ತಕ್ಕೆ ಮಾರುತ್ತಾರೆ. ಇತ್ತೀಚಿಗೆ ಚುನಾವಣಾ ಸಂಬಂಧಿಯಾಗಿ ಮತದಾರರನ್ನು ಪ್ರೇರೇಪಿಸಲು ಇಂತಹುದೇ ತಂತ್ರ ಬಳಸಿರುವುದು ನಿಮಗೆ ತಿಳಿದೇ ಇದೆ. ನೀವು ಮನದಲ್ಲೇ ಎಣಿಸಿದಂತಹ ಅಥವಾ ಮಿತ್ರರೊಂದಿಗೆ ಅನಿಸಿಕೆ ಹಂಚಿಕೊಂಡಂತಹ ವಸ್ತುವಿನ ಜಾಹೀರಾತು ಪದೇ ಪದೇ ಫೇಸ್ಬುಕ್ ನಲ್ಲಿ ಅಥವಾ ಗೂಗಲ್ ನಲ್ಲಿ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕಾಗಿ. ಫೇಸ್ಬುಕ್ ಇದಕ್ಕಿಂತಲೂ ಆಳದಲ್ಲಿ ಬೇರೂರಿದೆ. ನೀವೆಲ್ಲಾದರೂ ಇಂತಹ ಒಂದು ಜಾಹೀರಾತಿನ ಮೋಡಿಗೆ ಒಳಗಾದದ್ದು ಫೇಸ್ಬುಕ್ ಗೆ ಗೊತ್ತಾದರೆ, ಅಂತಹುದೇ ಮತ್ತು ಅಂತಹ ವಸ್ತುವಿಗೆ ಸಂಬಂಧಪಟ್ಟ ನೂರಾರು ಜಾಹೀರಾತುಗಳನ್ನು ನಿಮ್ಮ ಪುಟಕ್ಕೆ ಪಂಪ್ ಮಾಡುತ್ತದೆ. ಈ ಮೂಲಕ ಫೇಸ್ಬುಕ್ ತನ್ನಷ್ಟು ತೀವ್ರ ಪರಿಣಾಮಕಾರಿಯಾದ ಜಾಹೀರಾತುದಾರ ಇನ್ನೊಂದಿಲ್ಲ ಎಂದು ಸಾಬೀತುಪಡಿಸಿದೆ. ಅದು ತನ್ನ ಜಾಹೀರಾಹಿತಿಗೆ ಮನಸೋಲಬಲ್ಲ ವ್ಯಕ್ತಿಯನ್ನು ಬಹುಸುಲಭವಾಗಿ ಪತ್ತೆ ಹಚ್ಚಬಲ್ಲದು.

ಇಷ್ಟು ಆಘಾತಕಾರಿಯಾದ ಫೇಸ್ಬುಕ್ ನಿಂದ ನೀವೇನೋ ಸುಲಭವಾಗಿ ಹೊರಗೆ ಬರಬಹುದು, ಆದರೆ ಗೂಗಲ್ ನಿಂದ ಅಲ್ಲ. ನೀವು ಗೂಗಲ್ ನಲ್ಲೆ ಇರಲಿ ಅಥವಾ ಯಾವುದೇ ಇತರ ಅಂತರ್ಜಾಲ ತಾಣದಲ್ಲೇ ಇರಲಿ, ಗೂಗಲ್ ನಿಮ್ಮನ್ನು ಟ್ರ್ಯಾಕ್ ಮಾಡಬಲ್ಲದು. ಅದರ ಟ್ರಾಕಿಂಗ್ ತಂತ್ರಾಂಶ ಒಂದು ಕೋಟಿಗೂ ಅಧಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಇವು ವೈದ್ಯಕೀಯ ಜಾಲತಾಣಗಳನ್ನೂ ಒಳಗೊಂಡಿವೆ. ಆದ್ದರಿಂದ ಅರೋಗ್ಯ ಸಂಬಂಧೀ ಜಾಲತಾಣಗಳನ್ನು ನೀವು ಖಾಸಗಿ ಎಂದು ಭಾವಿಸಿ ನೋಡುತ್ತಿದ್ದರೆ ಗೂಗಲ್ ಅದನ್ನು ಟ್ರ್ಯಾಕ್ ಮಾಡಿ, ನಿಮ್ಮ ಅರೋಗ್ಯ ನ್ಯೂನತೆಗೆ ಪರಿಹಾರ ನೀಡುವ ಜಾಹೀರಾತುಗಳನ್ನು ಪ್ರದರ್ಶಿಸಲಾರಂಭಿಸುತ್ತದೆ. ಇದು ನಿಮ್ಮನ್ನು ಹಲವು ಬಾರಿ ಮುಜುಗರಕ್ಕೆ ಈಡುಮಾಡಬಹುದು. ಅಷ್ಟೇ ಅಲ್ಲ, ನೀವು ಪ್ರತಿಬಾರಿ ಗೂಗಲ್ ನ ಮಿಂಚಂಚೆ ಬರೆದಾಗ, ಯೂಟ್ಯೂಬ್ ನಲ್ಲಿ ವೀಡಿಯೊ ನೋಡಿದಾಗ, ಗೂಗಲ್ ಮ್ಯಾಪ್ ನೋಡಿದಾಗ, ಅದು ನಿಮ್ಮ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತದೆ. ನಮಗೆ ಇನ್ನೂ ಗೂಗಲ್ ಮತ್ತು ಫೇಸ್ಬುಕ್ ಕಲೆಹಾಕುತ್ತಿರುವ ಮಾಹಿತಿಗಳ ಪ್ರಮಾಣದ ಅರಿವಿಲ್ಲ. ಆದರೆ ಅವು ಈ ಮಾಹಿತಿಯನ್ನು ಬಳಸಿ ನೂರಾರು ಕೋಟಿ ಲಾಭ ಗಳಿಸುತ್ತಿರುವುದಂತೂ ಸತ್ಯ. ಇದು ಅವುಗಳ ನಿಜವಾದ ವ್ಯವಹಾರ ನೀತಿ. ಅವರು ನಮ್ಮ ಖಾಸಗಿ/ವಯಕ್ತಿಕ ವಿಷಯಗಳ ಮೂಲಕ ಹಣಗಳಿಸುತ್ತಿದ್ದಾರೆ. ನಾವು ಅವರ ಜಾಲತಾಣ ಬಳಸುವಾಗ ಅವರ ಗ್ರಾಹಕರಲ್ಲ, ನಾವು ಅವರ ಉತ್ಪನ್ನಗಳು.

MIT ಸೆಂಟರ್ ಫಾರ್ ಸಿವಿಕ್ ಮೀಡಿಯಾದ ನಿರ್ದೇಶಕರಾದ ಈಥೇನ್ ಝುಕರ್ಮ್ಯಾನ್ ಅವರ ಪ್ರಕಾರ, ಈ ಜಾಲತಾಣಗಳು ಉಚಿತವಾಗಿರುವುದೇ ದೊಡ್ಡ ಸಮಸ್ಯೆ. ಯಾವಾಗ ಅಂತರ್ಜಾಲದ ನಿರ್ಮಾಣವಾಯಿತೋ ಆಗ ನಾವು ಅದು ಉಚಿತವಾಗಿರಬೇಕೆಂದು ಬಯಸಿದೆವು. ಅದರ ಸೇವೆಗಳಿಗೆ ಹಣತೆರುವುದು ಸೂಕ್ತವಲ್ಲ ಎಂದೆಣಿಸಿದೆವು. ಈ ಕಾರಣವಾಗಿ ಜಾಲತಾಣಗಳು ಸಂಪನ್ಮೂಲಕ್ಕಾಗಿ ಜಾಹೀರಾತನ್ನು ಅವಲಂಬಿಸಬೇಕಾಯಿತು. ಈಗ ಅವು ನಮ್ಮ ಅಗತ್ಯತೆಗಳನ್ನು ಹಾಗೂ ನಮ್ಮ ನಡವಳಿಕೆಗಳನ್ನು ಅನುಸರಿಸಿ ಜಾಹೀರಾತುಗಳನ್ನು ತೂರಿ ಬಿಡುತ್ತಿವೆ. ಇದರ ಅರ್ಥ ನಾವು ಉಚಿತ ಅಂತರ್ಜಾಲ ಸೇವೆಗಳಿಗಾಗಿ ನಿರಂತರವಾಗಿ ಇತರರ ಕಣ್ಗಾವಲಿನಲ್ಲಿ ಇದ್ದೇವೆ ಎಂದು. ಇಂದು ಪ್ರಪಂಚದ ಪ್ರತಿ ಆರು ಜನರಲ್ಲಿ ಒಬ್ಬ ಫೇಸ್ಬುಕ್ ನಲ್ಲಿ ಇದ್ದಾನೆ. ಅವರು ಜಗತ್ತಿನಲ್ಲಿ ಎಲ್ಲರೂ ಬಳಸುವ ಅಂತರ್ಜಾಲ ಸಮಯದ ೨೦% ರಷ್ಟನ್ನು ಬಳಸುತ್ತಾರೆ. ಅಂದರೆ ಪ್ರತೀ ದಿನ ೧೬ ಕೋಟಿ ಜನರು ಯಾವುದಾದರೊಂದು ದೊಡ್ಡ ಜಾಲತಾಣದ ಕಣ್ಗಾವಲಿನಲ್ಲಿ ಬದುಕುತ್ತಿದ್ದಾರೆ ಎಂದರ್ಥ. ನಿಮಗೆ ಗೊತ್ತೇ, ಪ್ರತಿಯೊಬ್ಬ ಮನುಷ್ಯನ ಫೇಸ್ಬುಕ್ ನಲ್ಲಿ ಸಂಗ್ರಹಿತ ಮಾಹಿತಿಯ ಬೆಲೆ ಕೇವಲ ೮೦೦ ರೂಪಾಯಿಗಳಷ್ಟು! ನಿಮ್ಮ ಆಸಕ್ತಿಗಳು, ನಿಮ್ಮ ವ್ಯಕ್ತಿತ್ವ, ನಿಮ್ಮ ಸಂಬಂಧಗಳು, ನಿಮ್ಮ ಖಾಸಗಿತನ ನಿಜವಾಗಿಯೂ ಅಮೂಲ್ಯವಾದವು. ಅದಕ್ಕೆ ಕೇವಲ ೮೦೦ ರೂಪಾಯಿ ಬೆಲೆಕಟ್ಟಲಾಗುತ್ತದೆ. ಆದ್ದರಿಂದ ಅಂತರ್ಜಾಲದಿಂದ ಆದಷ್ಟು ದೂರವಿರುವುದೇ ಲೇಸು. ಸ್ವನಿಯಂತ್ರಣ ಅನಿವಾರ್ಯ!

ಇತ್ತೀಚಿನ ವಿದ್ಯಮಾನವೊಂದರಲ್ಲಿ, ಕಳ್ಳನೊಬ್ಬ ಓರ್ವರ ಫೇಸ್ಬುಕ್ ಸ್ಟೇಟಸ್ ಗಳನ್ನು ನೋಡಿ ಮನೆಗೆ ಕಣ್ಣ ಹಾಕಿದ್ದಾನೆ. ನಾವು ಇಂತಹದಿನ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಸ್ಟೇಟಸ್ ಹಾಕಿ, ಆಮೇಲೆ ಪ್ರವಾಸೀ ತಾಣದ ಸುಂದರ ಚಿತ್ರಗಳನ್ನು ಹಾಕಿದ್ದಾರೆ. ಕಳ್ಳನಿಗೆ ಮಾತ್ರವಲ್ಲ ಎಲ್ಲರಿಗೂ ಮನೆ ಖಾಲಿಯಾಗಿರುವುದು ಖಾತ್ರಿಯಾಗಿದೆ. ಬಳಿಕ ಕಳ್ಳ ಮನೆ ದೋಚಿದ್ದಾನೆ. ಹೇಗಿದೆ ನೋಡಿ ಫೇಸ್ಬುಕ್ ಮಹಿಮೆ.