February 6, 2020

Q&A in Videos (Please click on the link to watch the videos)


Widow marriage (ವಿಧವಾ ವಿವಾಹ ಕುರಿತು) ಮೀಮಾಂಸಕರ ನುಡಿ

ಕನ್ನಡವನ್ನು ಶಾಸ್ತ್ರೀಯವಾಗಿ ಕಲಿಯುವುದು ಹೇಗೆ?

ಪ್ರಶ್ನೋತ್ತರಗಳು - 6


ಪ್ರಶ್ನೆ: ಉತ್ತರ ಭಾರತದಲ್ಲಿ ತೀರ್ಥ ಯಾತ್ರೆಗೆ ಹೋದಾಗ ಉಜ್ಜಯಿನಿಯಲ್ಲಿ ಮದ್ಯವನ್ನೇ ತೀರ್ಥವನ್ನಾಗಿ ಕೊಡುತ್ತಿದ್ದರು. ಮದ್ಯವು ಒಂದು ನಿಷೇಧಿತ ವಸ್ತುವಾಗಿರುವಾಗ ಅದನ್ನು ತೀರ್ಥ ಎಂದು ಕೊಟ್ಟರೆ ತಪ್ಪಾಗುವುದಿಲ್ಲವೇ? ಸ್ವಾಮೀಜಿ: ಈ ರೀತಿಯ ವಿಕೃತಿಗಳು ನಮ್ಮ ದೇಶದಲ್ಲಿ ಬೇಕಾದಷ್ಟು ಇದ್ದವು. ಸರಿಯಾದ ಆರಾಧನೆ ಅಲ್ಲದೆ ವಿಕೃತ ಆರಾಧನೆಗಳು ಚಾಲ್ತಿಯಲ್ಲಿದ್ದವು. ಮದ್ಯವನ್ನು ಕೊಡುವುದು, ಮಾಂಸವನ್ನು ನೈವೇದ್ಯವನ್ನಾಗಿ ಕೊಡುವುದು ಎಲ್ಲವೂ ಇದೆ. ಪ್ರಾಣಿ ಬಲಿಯನ್ನು ಕೊಡುವುದು ಇನ್ನೂ ಇದೆ. ಆದರೆ ಅವು ಬಳಕೆಗೆ ಅರ್ಹವಾದದ್ದಲ್ಲ, ಮಾನವೀಯತೆ ಅಲ್ಲ ಎಂದು ಬಿಟ್ಟು ಬಿಡಬೇಕು. ಬಿಡುತ್ತಾ ಬಂದಾಗ ಅವು ಸಹಜವಾಗಿ ಕಡಿಮೆ ಆಗುತ್ತವೆ. ನಾವು ಕೂಡ ಉಜ್ಜಯಿನಿಗೆ ಹೋಗಿದ್ದೇವೆ. ಆದರೆ ತೀರ್ಥವನ್ನು ತೆಗೆದುಕೊಂಡಿಲ್ಲ. ಆ ರೀತಿಯಲ್ಲಿ ಅದನ್ನು ಬಿಡುತ್ತಾ ಬಂದರೆ, ಸಹಜವಾಗಿ ಅದು ನಿಂತು ಹೋಗುತ್ತದೆ. ಮದ್ಯವು ಖಂಡಿತವಾಗಿಯೂ ನಿಷೇಧಿಸಬೇಕಾದ ವಸ್ತುವೇ. ಆದರೆ ವಿಕೃತ ಆಚರಣೆ ಬಂದು ಹೋಗಿದೆ. ವಿಕೃತಿ ಬಂದು ಹೋಗಿದೆ ಎಂದು ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವುದೂ ಅಲ್ಲ, ಅಥವಾ ಇಂತಹ ದೇಶದಲ್ಲಿ ನಾನು ಹೇಗೆ ಬದುಕಲಿ ಎಂದು ವಿದೇಶಕ್ಕೆ ಹಾರುವುದೂ ಅಲ್ಲ. ವಿದೇಶದಲ್ಲೂ ಇಂತಹ ಆಚರಣೆಗಳು ಬೇಕಾದಷ್ಟಿವೆ. ಇಲ್ಲೇ ಇದ್ದು ಅದನ್ನು ನಿರಸನ ಮಾಡುವ ಹೋರಾಟ, ಪ್ರಯತ್ನಗಳನ್ನು ನಾವು ಮಾಡಬೇಕು. ಪ್ರಯತ್ನ ಪಟ್ಟರೆ ಹೆಂಗಳೆಯರಿಗೆ ಅದನ್ನು ಸಂಪೂರ್ಣವಾಗಿ ಸರಿಪಡಿಸುವ ಸಾಮರ್ಥ್ಯ ಇದೆ. ಅದು ಹೇಗೆ ಎಂದು ಅರ್ಥವಾಗಬೇಕಾದರೆ ಮೊದಲು ಪತಿವೃತಾ ಧರ್ಮ ಎಂದರೆ ಏನೆಂದು ನಿಮಗೆ ಅರ್ಥವಾಗಬೇಕು. ಇದಕ್ಕಾಗಿ ಒಂದು ಉತ್ತಮ ಗೋಷ್ಠಿಯನ್ನು ಆಯೋಜಿಸಿ. ಅಲ್ಲಿ ಸಂಪೂರ್ಣ ವಿವರಗಳನ್ನೂ, ಪ್ರಶ್ನೆಗಳಿಗೆ ಉತ್ತರವನ್ನೂ ನೀಡುತ್ತೇನೆ. ಇದರ ಮುಖೇನ ಒಂದು ಒಳ್ಳೆಯ ಸಮಾಜದ ನಿರ್ಮಾಣ ಸಾಧ್ಯವಿದೆ. ತೀರಾ ಕಲ್ಪನೆಯ, ಮೋಸದ, ತಮ್ಮ ಹಿತಾಸಕ್ತಿಗಾಗಿ ನಿರ್ಮಾಣಗೊಂಡ ಶಾಸ್ತ್ರಗಳು ಎಲ್ಲವೂ ಹೋಗಬೇಕಾದರೆ ಈ ರೀತಿಯ ಚಿಂತನೆ ಆಗಲೇ ಬೇಕು. ಅದಕ್ಕೆ ಒಳ್ಳೆಯ ದಾರಿ ಎಂದರೆ ಪತಿವೃತಾ ಧರ್ಮದ ಚಿಂತನೆ. ಉದಾಹರಣೆಗೆ ನೀವು ಹೇಳುತ್ತೀರಿ, ಐದು ಜನ ವಿಶಿಷ್ಟವಾದ ಪತಿವೃತೆಯರು. ಈಗಿನ ಸಾಮಾಜಿಕ ದೃಷ್ಟಿಯಲ್ಲಿ ಅವರೆಲ್ಲರೂ ಅಪವಿತ್ರರೇ, ಅಲ್ಲವೇ? ಐದು ಜನರೂ ಅಪವಿತ್ರರೆಂದು ಹೇಳುವ ನೀವು ಕೂಡ ಅವರನ್ನು ಹೇಳುವುದು ಕನ್ಯಾ ಎಂಬುದಾಗಿ. ಅಹಲ್ಯ, ದ್ರೌಪದಿ, ಸೀತಾ, ತಾರಾ, ಮಂಡೋದರಿ...ಪಂಚಕನ್ಯಾ ಸ್ಮರೇನ್ನಿತ್ಯಮ್ ...ಎಂದು ಹೇಳುತ್ತೀರಿ. ಕನ್ಯೆ ಅಪವಿತ್ರ ಹೇಗಾಗುತ್ತಾಳೆ? ಅದನ್ನು ಚಿಂತನೆ ಮಾಡುವುದಿಲ್ಲ. ಅದಕ್ಕೇ ಹೇಳಿದ್ದು, ನೀವು ಹೇಳುವ ಮಾತಿನಲ್ಲಿಯೇ ನಿಮ್ಮ ಕಲ್ಪನೆಯಲ್ಲಿರತಕ್ಕಂತಹ ದೋಷ ಏನಿದೆ ಎಂದು ತೋರಿಸಿಕೊಡಲಿಕ್ಕೆ ಸಾಧ್ಯವಾಗುತ್ತದೆ. ಅದನ್ನು ತೋರಿಸಿಕೊಡುತ್ತ ಅತೀ ಉತ್ಕೃಷ್ಟವಾದಂತಹ, ಅತೀ ಶ್ರೇಷ್ಠವಾದದಂತಹ, ಒಬ್ಬ ತಪಸ್ವಿ ೧೦೦೦ ವರ್ಷ ತಪಸ್ಸು ಮಾಡಿ ಪಡೆಯುವ ಯಾವ ತಪೋಬಲವಿದೆಯೋ ಅದನ್ನು ಕೇವಲ ಒಂದು ಕ್ಷಣದ ಪತಿಸೇವೆಯಿಂದ ಒಬ್ಬ ಗೃಹಿಣಿ ಪಡೆಯಲು ಸಾಧ್ಯ ಎನ್ನುವ ಸತ್ಯವನ್ನು ನಾನು ತೋರಿಸಿಕೊಡುತ್ತೇನೆ. ಅದಕ್ಕಾಗಿ ಗೋಷ್ಠಿಯೊಂದನ್ನು ಸಂಯೋಜನೆ ಮಾಡಿ.

ಪ್ರಶ್ನೆ: ಅತ್ರಿ ಋಷಿಗಳ ಪತ್ನಿ ಅನಸೂಯ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂವರನ್ನೂ ಮಗುವನ್ನಾಗಿ ಪಡೆಯುತ್ತಾಳೆ. ಇದು ಪತಿವೃತ್ಯದ ಶಕ್ತಿಯಿಂದ ಎಂದು ಹೇಳುತ್ತಾರೆ. ನೀವು ಈ ಮೊದಲು ಹೇಳಿದ ೫ ಜನರಲ್ಲಿ ಇವರನ್ನೇಕೆ ಸೇರಿಸಲಿಲ್ಲ? ಸ್ವಾಮೀಜಿ: ಅಲ್ಲಿ ಆ ಪತಿವೃತೆಯರನ್ನು ಹೇಳುವ ಉದ್ದೇಶವಾಗಿರಲಿಲ್ಲ. ಆದರೆ ಪತಿವೃತಾ ಧರ್ಮದ ರಹಸ್ಯ ಅಲ್ಲಿ ಅಡಗಿದೆ ಎಂದು ಹೇಳುವ ಉದ್ದೇಶವಾಗಿತ್ತು. ಇವರ್ಯಾರೂ ಹೆಚ್ಚು ಎಂದು ಹೇಳುವ ಉದ್ದೇಶ ಆ ಮಂತ್ರದಲ್ಲಿಲ್ಲ. ಅವರೆಲ್ಲ ಕನ್ಯೆಯರು, ಆದ್ದರಿಂದ ಪತಿವೃತೆಯರಲ್ಲ. ಅವರು ಗೃಹಸ್ಥರಲ್ಲ. ಗೃಹಿಣಿಯರಲ್ಲ ಎಂದು ಹೇಳಿದ್ದಾರೆ. ಇಂತಹ ರಹಸ್ಯಗಳನ್ನು ಹೇಳಲೆಂದೇ ಗೋಷ್ಠಿಯನ್ನು ಆಯೋಜಿಸಿ ಎಂದು ನಿಮಗೆ ಹೇಳಿದ್ದು.

ಪ್ರಶ್ನೆ: ವೇದಕಾಲದಲ್ಲಿ ಹೆಂಗಸರಿಗೂ ಉಪನಯನ ಮಾಡುತ್ತಿದ್ದರು. ಅವರು ಕೂಡ ಹೋಮ ಹವನ ಎಲ್ಲ ಮಾಡುತ್ತಿದ್ದರು. ಅಂತಹ ವ್ಯವಸ್ಥೆಯನ್ನು ನೀವು ಪುನಃ ತರುತ್ತಿದ್ದೀರಿ. ಆ ಕಾಲದ ಪುನರುತ್ಥಾನ ಈಗ ನಡೆಯುತ್ತಿದೆ ಎಂದು ಹೇಳಬಹುದೇ? ಸ್ವಾಮೀಜಿ: ವೇದಕಾಲದಲ್ಲಿ ಇತ್ತು, ನೀವು ಅಧಿಕಾರಗಳನ್ನು ಪಡೆಯುತ್ತಿದ್ದೀರಿ, ಹಾಗಾಗಿ ನಿಮಗೆ ಆ ಎಲ್ಲ ಸೌಲಭ್ಯಗಳು ಸಿಗುತ್ತಿತ್ತು. ನಂತರ ನಿಧಾನವಾಗಿ ನಿಮಗೆ ಓದಾಸೀನ್ಯ ಬೆಳೆಯಿತು. ಮನೆ ಕೆಲಸ ಮಾಡಿದರೆ ಸಾಕು ಎನ್ನುವ ಭಾವನೆ ಉಂಟಾಯಿತು. ಅರ್ಥವಾಗದ ಕಾರಣ ಇವೆಲ್ಲ ಹಾಳು-ಹರಟೆ ಎನ್ನಿಸಲಿಕ್ಕೆ ಪ್ರಾರಂಭವಾಯಿತು. ಸಮಯ ಹಾಳು ಎಂದು ಬಿಡುತ್ತಾ ಬಂದರು. ಹಾಗಾಗಿ ಸಂಸ್ಕಾರಗಳ ಕೊರತೆ ಆಗುತ್ತಾ ಬಂತು. ಈಗ ವೇದ ಕಾಲದವರನ್ನು ಬೈದರೆ ಏನೂ ಪ್ರಯೋಜನವಿಲ್ಲ. ಪ್ರತ್ಯಕ್ಷವಾಗಿ ಕಾಣತಕ್ಕ ದೇವರುಗಳು ತಂದೆ, ತಾಯಿ, ಅವರನ್ನು ಅಧಿಕಾರಯುತವಾಗಿ ಕೇಳಿ. ಆಗ ಕೊಡುತ್ತಾರೆ. ಆಗ ಅದನ್ನು ಸಾಧಿಸಿ ತೋರಿಸಿ. ಆಗ ಬಿಟ್ಟು ಹೋದ ನಷ್ಟವೇನೆಂದು ಗೊತ್ತಾಗುತ್ತದೆ. ಆಗ ಅದನ್ನು ಪುನಃ ಹಿಡಿಯಲಿಕ್ಕೆ ಆಗುತ್ತದೆ. ಹಿಡಿಯಲಿಕ್ಕೆ ಏನೂಕಾಲಮಿತಿ ಎಂಬುವುದಿಲ್ಲ. ಈಗ ಹಿಡಿಯಿವ ಪ್ರಯತ್ನ ಮಾಡುತ್ತಾ ಇದ್ದೀರಿ, ಅದನ್ನು ಹಿಡಿದು ಸಂಶೋಧನೆ ಮಾಡಿ ಸಾರ್ಥಕತೆಯನ್ನು ತೋರಿಸಿಕೊಡಿ, ಆಗ ಎಲ್ಲರೂ ಹಿಡಿಯುತ್ತಾರೆ. ಮಹಿಳೆಯರೆಲ್ಲ ಒಗ್ಗಟ್ಟಾಗಿ ವೇದ ಕಾಲದ ಸಂಸ್ಕೃತಿಯನ್ನು ಆಚರಿಸುತ್ತಾ ಬಂದರೆ ದೇಶಕ್ಕೆ ರಾಜ ಬೇಡ, ಸಂಪತ್ತಿನ ಅಗತ್ಯ ಇಲ್ಲ, ನಿರಂತರ ಸುಖ ಶಾಂತಿ ನೆಮ್ಮದಿ ನಿಮ್ಮ ಮನೆಯ ಬಾಗಿಲಿನಲ್ಲಿ ಬಿದ್ದಿರುತ್ತದೆ. ಯಾವ ಕೊರತೆಯೂ ಇರುವುದಿಲ್ಲ. ವೇದ ಕಾಲದ ಸಂಸ್ಕೃತಿ ಅಷ್ಟು ಚೆನ್ನಾಗಿತ್ತು. ಪ್ರಶ್ನೆ: ಸ್ವಾಮೀಜಿ, ಇದು ಶಾಂತಿ ಕರ್ಮಗಳಿಗೆ ಸಂಬಂಧಪಟ್ಟ ಪ್ರಶ್ನೆ. ೬೦ - ೭೦ ವರ್ಷಗಳಿಗೆ ಮಾಡುತ್ತಾರಲ್ಲ ಅದು ಪ್ರಾಯಶ್ಚಿತ್ತಕ್ಕಾಗಿ ಮಾಡುವ ಶಾಂತಿಯೇ? ಹೌದಾದರೆ ಈ ಮುಂಚೆಯೇ ಹಲವು ಸಂದರ್ಭಗಳಲ್ಲಿ ಅವರು ಶಾಂತಿಗಳನ್ನು ಮಾಡಿಸಿರುವುದರಿಂದ ಪುನಃ ಶಾಂತಿ ಮಾಡಿಸುವ ಅಗತ್ಯ ಇದೆಯೇ? ಸ್ವಾಮೀಜಿ: ನಮ್ಮಲ್ಲಿ ಸೂತ್ರಕಾರರು ಮನುಷ್ಯನು ಮನುಷ್ಯನಾಗಿ ಬದುಕುವುದನ್ನು ತೋರಿಸುವ ಮಾರ್ಗದಲ್ಲಿ ಷೋಡಶ ಸಂಸ್ಕಾರ (ವಿವಾಹದವರೆಗಿನ) ಗಳನ್ನು ಹೇಳುತ್ತಾರೆ. ಮನುಷ್ಯನು ಮನುಷ್ಯನಾಗಿ ಬದುಕುವುದಕ್ಕೆ ಅಷ್ಟು ಸಾಕು. ಆದರೆ ಕೇವಲ ಮನುಷ್ಯನಾಗಿ ಬದುಕಿರುವುದು ಅವನ ಗುರಿ ಅಲ್ಲ. ಅವನು ದೇವನಾಗುವುದಕ್ಕೆ ಪ್ರಯತ್ನ ಪಡಬೇಕು. ಹಾಗಾಗಿ ೬೦ ವರ್ಷ ಆದಮೇಲೆ ಈ ಸಾಂಸಾರಿಕ ಬಂಧನಗಳನ್ನು ಕಡಿಮೆ ಮಾಡಿಕೊಳ್ಳುವ ಒಂದು ವಿಧಾನ. ಉಗ್ರರಥ ಶಾಂತಿ ಎಂದು ಅದನ್ನು ಹೇಳುತ್ತಾರೆ. ಅಲ್ಲಿ ದೃಢ ನಿಶ್ಚಯ ಮಾಡಿ ತನಗಿರತಕ್ಕ ಬಂಧನಗಳಿಂದೆಲ್ಲ ಬಿಡುಗಡೆ ಹೊಂದಬೇಕು. ಈಗಿನ ರಾಜಕಾರಣಿಗಳಂತಲ್ಲ! ಆದರೆ ಗೃಹಸ್ಥನು ತನಗೆ ಈ ಸಂಸಾರದ ಸಮಸ್ಯೆಗಳೆಲ್ಲ, ಬಂಧನಗಳೆಲ್ಲ ಬೇಡ, ಸಂಸಾರವು ಬೇಕು ಆದರೆ ಸಂಸಾರ ಬಂಧನಗಳು ಬೇಡ ಎಂದು ತಿಳಿದು, ಯಾವುದೇ ಕೆಲಸ ನಿರ್ವಹಣೆ, ಜವಾಬ್ದಾರಿಗಳು ಇದ್ದರೆ ಮಗನಿಗೆ ವಹಿಸಿಕೊಟ್ಟು ತಾನು ಸ್ವತಂತ್ರವಾಗಿ ದೇವತಾ ಚಿಂತನೆಗಳನ್ನು ಮಾಡುತ್ತೇನೆ ಎನ್ನುವ ದೃಢ ನಿಶ್ಚಯ ಮಾಡುವುದರಿಂದ ಅದು ಉಗ್ರರಥ ಶಾಂತಿ ಎನ್ನಿಸಿಕೊಳ್ಳುತ್ತದೆ. ಆ ಚಿಂತನೆಯಿಂದ ಮುಂದುವರೆದಾಗ ಸಹಜವಾಗಿ ಮನಸ್ಸು ಪರಿಪಕ್ವವಾಗುತ್ತಾ ಬರುತ್ತದೆ. ತನ್ನ ಜೀವಿತಾವಧಿಯಲ್ಲಿ ಸಹಜವಾಗಿ ಹಲವು ನಾಟಕೀಯ ಜೀವನ, ಮನೆಯಲ್ಲಿ ಬೇಕಾದಷ್ಟು ಸಾಮಾನು ಇದ್ದರೂ ಎಲ್ಲವೂ ಖಾಲಿಯಾಯಿತು ಎಂದು ಹೇಳುತ್ತೇವೆ. ಗೃಹಸ್ಥ ಸುಳ್ಳು ಹೇಳಿದರೂ ಪಾಪ ಅಲ್ಲ ಎಂದು ಹೇಳುತ್ತದೆ. ಏಕೆಂದರೆ ಅವನ ಸಂಚಯನ ಅವನ ಕುಟುಂಬಕ್ಕಾಗಿ. ಹಾಗಾಗಿ ಅವರ ಬೇಡಿಕೆ ನಿಜ ಎಂದರೆ ಮಾತ್ರ ಹಂಚಬೇಕು ಎಂದು ಹೇಳುತ್ತದೆ. ಆದ್ದರಿಂದ ಗೃಹಸ್ಥರು ಅಪಾತ್ರದಾನ ಮಾಡಲೇಬಾರದು ಎಂದು ಹೇಳುತ್ತದೆ. ಹಾಗಾಗಿ ಈ ಜೀವನದಲ್ಲಿ ಇನ್ನೊಬ್ಬರಿಗೆ ತೊಂದರೆ ಆಗದ ಕೆಲವೊಂದು ಅಸತ್ಯಗಳನ್ನು ಹೇಳಬೇಕಾಗುತ್ತದೆ. ಇಂತಹ ಹಲವಾರು ಘಟನೆಗಳು ಆಗಿರುತ್ತವೆ. ಆ ಮೂಲಕವಾಗಿ 60 ವರ್ಷ ದಾಟಿದ ಮೇಲೆ ನಮ್ಮ ಅಂತರ್ ಮನದಲ್ಲಿ ಸ್ವಭಾವ ಸಹಜವಾದ ಪಾಪಪ್ರಜ್ಞೆ ಕಾಡಲಾರಂಭಿಸುತ್ತದೆ. ಅಂತಹ ಸುಳ್ಳುಗಳನ್ನು ಹೇಳಿದ್ದರಿಂದ, ತಪ್ಪುಗಳನ್ನು ಮಾಡಿದ್ದರಿಂದ ಅಪರಾಧಿ ಪ್ರಜ್ಞೆ ಕಾಡಲಾರಂಭಿಸುತ್ತದೆ. ಅದನ್ನು ನಿವಾರಿಸಿಕೊಳ್ಳಬೇಕಾದರೆ ದೃಢಭಕ್ತಿ ಬೇಕು. ಅದಕ್ಕೆ 70ನೇ ವಯಸ್ಸಿಗೆ ಭೀಮರಥ ಶಾಂತಿ ಎಂದು ಮಾಡುತ್ತಾರೆ. ಪುರಾಣದ ಹಲವಾರು ಪಾತ್ರಗಳಲ್ಲಿ ಭೀಮನಷ್ಟು ದೃಢನಿಶ್ಚಯ ಹೊಂದಿದವರು ಇನ್ನೊಬ್ಬರು ಸಿಗುವುದಿಲ್ಲ. ಹಾಗಾಗಿ ಅದಕ್ಕೆ ಭೀಮರಥ ಶಾಂತಿ ಎಂದರು. ಆಗ ಬುದ್ಧಿಯ ಪೂರ್ಣ ಸ್ಥಿಮಿತತೆ ಬರುತ್ತದೆ. ಅರವತ್ತಕ್ಕೆ ಅರಳುಮರಳು ಎನ್ನುವುದು ಇರುವುದಿಲ್ಲ. ಪ್ರತಿಯೊಂದು ಮಾತು ಸ್ಪಷ್ಟವಾಗಿರುತ್ತದೆ. ಪ್ರತಿಯೊಂದು ವಿಚಾರವೂ ಸತ್ಯವಾಗಿರುತ್ತದೆ. ಅವರ ಮನಸ್ಸಿಗೆ ಅನಿಸಿದ್ದರಲ್ಲಿ ಅನುಗ್ರಹ ಇರುತ್ತದೆ. ಆಶೀರ್ವಾದ ಇರುತ್ತದೆ. ಆ ರೀತಿಯಲ್ಲಿ ಅವರು ಮುಂದೆ ಬರಲು ಸಾಧ್ಯವಾಗುತ್ತದೆ. 70ನೇ ವಯಸ್ಸಿನಿಂದ ಭಕ್ತಿಯಿಂದ ಬೆಳೆಯುತ್ತಾ ಬಂದರೆ ೮೦ ನೇ ವಯಸ್ಸಿಗೆ ಅವರು ಪರಿಪೂರ್ಣ ರಾಗುತ್ತಾರೆ. ಭೂಲೋಕದ ನಡೆದಾಡುವ ದೇವರಾಗುತ್ತಾರೆ. ಹಾಗಾಗಿಯೇ ವಿಜಯರಥ ಶಾಂತಿ. ಪ್ರಕೃತಿಯ ಎಲ್ಲಾ ಋಣಗಳನ್ನು ಗೆದ್ದವರು, ದೇವರು ಎಂದರ್ಥ. ವಿಜಯರಥ ಶಾಂತಿಯನ್ನು ಮಾಡಿಕೊಂಡ ಎರಡೇ ವರ್ಷದಲ್ಲಿ ಅವರು ಸುದರ್ಶನ ರಾಗುತ್ತಾರೆ. ಎರಡು ವರ್ಷ ಮೂರು ತಿಂಗಳ ಬಳಿಕ ಸಹಸ್ರಚಂದ್ರದರ್ಶನ ಶಾಂತಿ ಮಾಡುತ್ತಾರೆ. ಆನಂತರ ಅವರನ್ನು ಒಮ್ಮೆ ನೋಡುವುದೇ ಪುಣ್ಯ. ಅವರು ಏನೂ ಮಾಡಬೇಕಾಗಿಲ್ಲ. ಮನೆಯಲ್ಲಿ ಕುಳಿತಿದ್ದರೆ ಸಾಕು. ಅವರನ್ನು ಒಮ್ಮೆ ನೋಡಿ ಅವರಿಗೆ ನಮಸ್ಕಾರ ಮಾಡಿ ಹೋದರೆ ಸಾಕು ಹೋದ ಕೆಲಸವೆಲ್ಲ ಆಗುತ್ತದೆ. ಅದಕ್ಕಾಗಿ ಅವರನ್ನು ಸುದರ್ಶನರು ಎಂದು ಹೇಳುತ್ತಾರೆ. ಅದಕ್ಕಾಗಿ ಮನೆಯಲ್ಲಿ ಹಿರಿಯರು ಬೇಕು. ಅವರು 82 ವರ್ಷ ನಂತರ ಮತ್ತೆ ಹತ್ತು ಇಪ್ಪತ್ತು ವರ್ಷ ಬದುಕಬೇಕು. ಆಗ ನಾವು ಯಶಸ್ಸು ಸಾಧಿಸಲಿಕ್ಕೆ ಸಾಧ್ಯವಾಗುತ್ತದೆ. ಎಲ್ಲಾ ಸಂಸ್ಕಾರಗಳು ಅವರು ದೇವತ್ವಕ್ಕೆ ಏರುವ ದಾರಿ. ನಮಗೆ ಮಾರ್ಗದರ್ಶನ. ಹಾಗಾಗಿ ಆ ಶಾಂತಿಗಳನ್ನು ಆಚರಿಸುವುದರಿಂದ ನಮಗೆ ಲಾಭ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ಪ್ರಶ್ನೋತ್ತರಗಳು - 5


ಪ್ರಶ್ನೆ: ಗುರುಗಳೇ, ತೆಂಗಿನ ಕಾಯಿಯ ವಿಶೇಷತೆ ನೀವು ಹೇಳಿದಿರಿ. ಹಾಗೆಯೇ ಅಡಿಕೆಯ ವಿಶೇಷತೆ ಹೇಳುವಿರಾ? ಸ್ವಾಮೀಜಿ: ಔಷಧಿಗಾಗಿ ತುಂಬಾ ಬಳಕೆ ಆಗುತ್ತದೆ. ಔಷಧಿಯ ಗುಣದ ಬಗ್ಗೆ ಈಗ ಹೇಳುವುದು ಕಷ್ಟಸಾಧ್ಯ. ಏಕೆಂದರೆ ಅದಕ್ಕೆ ಸುಮಾರು ೨-೩ ಗಂಟೆ ಬೇಕಾಗುತ್ತದೆ. ಆಧ್ಯಾತ್ಮಿಕವಾಗಿ ಒಂದಿಷ್ಟು ಭಾಗದಲ್ಲಿ ಅಡಿಕೆಗೆ ಮಹತ್ವ ಇದೆ. ಅದರ ಗಂಧ ಅಂದರೆ ಪರಿಮಳ. ಅಡಿಕೆಯಲ್ಲಿ ಏನು ಪರಿಮಳ ಇದೆ, ಅಡಿಕೆ ಹೂವಿಗೂ ಒಂದು ಪರಿಮಳ ಇದೆ. ಆ ಎರಡು ಪರಿಮಳಗಳೂ ಕೂಡ ಆಧ್ಯಾತ್ಮಿಕವಾಗಿ ಮನಸ್ಸನ್ನು ಲಾದವಾಗಿಸುತ್ತದೆ. ಪೂಗ ಪುಷ್ಪದ ಪರಿಮಳವನ್ನು ಲಾದಿನಿ ಗಂಧ ಎನ್ನುತ್ತಾರೆ. ಅದು ಮನಸ್ಸನ್ನು ಒಂದು ಹಿತಮಿತವಾದ ರೀತಿಯಲ್ಲಿ, ಸುಸಂಸ್ಕೃತವಾದ ರೀತಿಯಲ್ಲಿ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಹಾಗಾಗಿ ಒಬ್ಬರು ಶ್ರೇಷ್ಠರು, ಸುಸಂಸ್ಕೃತರನ್ನು ಕಂಡಾಗ ಅವರಿಗೆ ತಾಂಬೂಲವನ್ನು ಅರ್ಪಿಸುವುದು ಇದೇ ಕಾರಣಕ್ಕಾಗಿ. ಎಲೆ ಅಡಿಕೆ ತಿನ್ನುವವರು ಸುಸಂಸ್ಕೃತರು ಎನ್ನುವ ಭಾವನೆ ಹಿಂದೆ ನಮ್ಮಲ್ಲಿತ್ತು. ಅಡಿಕೆಯಿಂದ, ಪೂಗ ಪುಷ್ಪದಿಂದ ಅವನಲ್ಲಿ ಸುಸಂಸ್ಕೃತನೆಂಬ ಭಾವವನ್ನು ಹುಟ್ಟಿಸಲು ಸಾಧ್ಯ. ಲಾದ ಭಾವವನ್ನು ಅದು ಹುಟ್ಟಿಸುತ್ತದೆ. ಹಾಗೆ ಅಡಿಕೆಯ ಬಳಕೆ ಆಧ್ಯಾತ್ಮಿಕವಾಗಿಯೂ, ದೈಹಿಕವಾಗಿಯೂ ಅರೋಗ್ಯ ದೃಷ್ಟಿಯಿಂದ ಉತ್ತಮ. ಹಾಗೆಯೇ ಕರ್ಮ ವಿಭಾಗದಲ್ಲಿಯೂ, ಕರ್ತವ್ಯ ನಿರ್ವಹಣೆಯಲ್ಲೂ ಮತ್ತೊಂದು ವಿಶಿಷ್ಟತೆಯನ್ನು ಅಡಿಕೆಗೆ ಹೇಳಿದ್ದಾರೆ. ಈಗೆಲ್ಲ ಚಾಲ್ತಿಯಲ್ಲಿ ಇಡೀ ಅಡಿಕೆಯನ್ನು ಇಡುತ್ತಾರೆ. ನಿಜವಾಗಿಯೂ ಇಡೀ ಅಡಿಕೆಯಲ್ಲ. ಅಡಿಕೆಯನ್ನು ಒಡೆದು, ಅದರ ಹಿಂಬದಿಯ ಹೊದಿಕೆಯನ್ನೆಲ್ಲ ತೆಗೆದು ಸಣ್ಣ ಸಣ್ಣ ತುಂಡುಗಳಾಗಿ ವಿಭಜಿಸಬೇಕು. ಇಡೀ ಅಡಿಕೆಯನ್ನು ಇಡಬಾರದು ಎಂದೇ ಹೇಳಿದೆ. ಇಡೀ ಫಲವನ್ನು ಕೆಲವು ವಿಶಿಷ್ಟ ಸಂಪ್ರದಾಯಗಳಲ್ಲಿ ತಾಂಬೂಲ ಕೊಡುವಾಗ ಮಾತ್ರ ಬಳಸಬೇಕು. ಆದರೆ ಕರ್ಮ ಸಮುಚ್ಚಯದಲ್ಲಿ ಅಡಿಕೆಯನ್ನು ೨೦ ಅಥವಾ ಅದಕ್ಕಿಂತ ಹೆಚ್ಚು ಚೂರು ಮಾಡಬೇಕು ಎಂದು ಹೇಳಿದೆ. ೨೧ ವಿಭಾಗ ಮಾಡಿ ನಾವು ಮಾಡತಕ್ಕ ಯಾವುದೇ ಒಂದು ಕರ್ಮಾನ್ಗದಲ್ಲಿ ಬಳಸಲ್ಪಡಬೇಕು. ಇನ್ನೊಂದು ಅಡಿಕೆಯನ್ನು ಚೂರು ಮಾಡುವ ಅವಶ್ಯಕತೆ ಇರುವುದಿಲ್ಲ. ಅಷ್ಟರಲ್ಲೇ ಮುಕ್ತಾಯ ಆಗಬೇಕು. ಏಕೆಂದರೆ ಈ ಕರ್ಮ ಸಮುಚ್ಛಯಗಳ ಸಾಮಾನ್ಯ ಜೀವನ ವಿಧಾನವನ್ನು ಘೋಷಿಸುವ ಕಾಲ ಯಾವಾಗ ಎಂದರೆ ಬಹಳ ಹಿಂದೆ ಚಾಕ್ಷುಷ ಮನ್ವಂತರ ಇತ್ತು. ಆ ಕಾಲದಲ್ಲಿ ಮಾನವರಿಗೆ ಜೀವನ ವಿಧಾನಕ್ಕೆ ನಿರ್ದಿಷ್ಟ ರೀತಿ ಬೇಕು ಎನ್ನುವ ಕಲ್ಪನೆ ಸುರೋಧ ಎನ್ನುವ ರಾಜನಿಗೆ ಹುಟ್ಟಿತು. ಅವನು ಅದನ್ನು ಚಿಂತನೆ ಮಾಡುತ್ತಾನೆ, ಒಂದು ನಿರ್ದಿಷ್ಟ ಪ್ರಮಾಣದಲ್ಲಿಯೇ ಮನುಷ್ಯ ಬದುಕಬೇಕು ಎಂದು ಹೇಗೆ ಸೂಚಿಸುವುದು ಎಂದು. ಹಲವು ಋಷಿ ಮುನಿಗಳನ್ನು ಸಮಾಲೋಚಿಸುತ್ತಾನೆ. ಆ ಕಾಲದಲ್ಲಿ ಅದಕ್ಕೆ ಸಂಬಂಧಪಟ್ಟ ಕರ್ಮ ಸಿದ್ಧಾಂತಗಳಿಗೆಲ್ಲ ಒಬ್ಬೊಬ್ಬರಿಂದ ಒಂದೊಂದು ಚಿಂತನೆ ಬರುತ್ತದೆ. ಇಂತಿಂತಹ ಸಂಸ್ಕಾರಗಳನ್ನು ಕೊಡಬೇಕು, ಇಂತಿಂತಹ ವೃತಗಳನ್ನು ಆಚರಿಸಬೇಕು, ಇಂತಿಂತಹ ಪೂಜೆಗಳನ್ನು ಮಾಡಬೇಕು, ಮಳೆಗಾಗಿ ಯಾವ ರೀತಿಯ ಯಜ್ಞ-ಯಾಗಗಳನ್ನು ಮಾಡಬೇಕು, ಇವೆಲ್ಲ ಚಿಂತನೆ ಆಗುತ್ತದೆ. ಅಂತಹ ಚಿಂತನೆಗಳಲ್ಲೆಲ್ಲ ಪ್ರತಿಯಿಂದರಲ್ಲೂ ಫಲಾಕಾಂಕ್ಷೆ ಇದ್ದೇ ಇರುತ್ತದೆ. ಫಲಾಕಾಂಕ್ಷೆ ಹೇಗಿರಬೇಕು ಎನ್ನುವುದು, ಮಾಡುವ ಕರ್ಮವು ನಾರೀಕೇಳ - ಫಲವು ಪೂಗ ಫಲ ಎಂದು ಹೇಳುತ್ತದೆ. ಇದನ್ನು ಹೇಳಿದ್ದು ಜಮದಗ್ನಿ. ಅವನಿಗೆ ಅದು ಅನುಭವಕ್ಕೆ ಬಂದಿದೆ. ಮಾಡುವ ಕಾರ್ಯವು ನಾರೀಕೇಳವಾದರೆ ಫಲವು ಪೂಗ ಫಲದಷ್ಟು ಎಂದು ಹೇಳುತ್ತಾರೆ. ಹಾಗಾಗಿ ಮಾಡುವ ಕರ್ಮದಲ್ಲಿ ಒಂದೇ ಪೂಗ ಫಲವನ್ನು ಬಳಕೆ ಮಾಡುವುದನ್ನು ಸೂತ್ರಗಳು ಹೇಳಿಕೊಂಡು ಹೋಗುತ್ತವೆ. ಒಂದು ಪೂಜೆಯಲ್ಲಿ ನಿಮಗೆ ಎಷ್ಟು ಕಡೆ ತಾಂಬೂಲ ಬರಬಹುದು ಅಷ್ಟು ಹೂಳುಗಳನ್ನು ಒಂದು ಅಡಿಕೆಯಲ್ಲಿ ಮಾಡಿಟ್ಟುಕೊಂಡರೆ ಸಾಕಾಗುತ್ತದೆ. ಅಷ್ಟು ಮಿತ ವ್ಯಯವನ್ನು ಅದು ಹೇಳುತ್ತದೆ ಮತ್ತು ನಿಮಗೆ ಅಷ್ಟೇ ಕರ್ಮಾನ್ಗದಲ್ಲಿ ಸಿಕ್ಕುವುದು. ನೀವು ಯಾವುದೇ ಮಹಾ ಯಜ್ಞವನ್ನು ಬೇಕಾದರೆ ಮಾಡಿ, ಮಾಡಿದವನಿಗೆ ಸಿಗುವ ಫಲ ಎಷ್ಟು ಎಂದರೆ, ಇಷ್ಟೇ. ಉಳಿದದ್ದೆಲ್ಲ ಬೇರೆ ಬೇರೆ ಜಾಗಗಳಿಂದ ಸಿಗುವ ಸಂಬಾರ, ಪರಿಕರ, ದೇವರು, ದೇವತೆಗಳು, ರಾಜರು, ಎಲ್ಲರಿಗೂ ಹಂಚಿ ಹೋಗಿ ಅವನಿಗೆ ಸಿಗುವುದು ಒಂದು ಪೂಗ ಫಲದಷ್ಟು ಮಾತ್ರ. ಅಷ್ಟನ್ನು ಅವನು ಭುಂಜಿಸಬೇಕು, ಅನುಭವಿಸಬೇಕು ಎಂದರ್ಥ. ಇಲ್ಲಿಯೇ ನಡೆದ ಒಂದು ಯಾಗದಲ್ಲಿ ಎಲ್ಲರಿಗೂ ಒಂದೊಂದು ಪೂಗ ಫಲ ಕೊಟ್ಟು, ಅದನ್ನು ನಿಮ್ಮ ಮನೆಯಲ್ಲಿ ನೆಟ್ಟು ಬೆಳೆಸಿ ಎಂದಿದ್ದೆವು. ಅವರಿಗೆ ಫಲ ಅದು ಎಂದರ್ಥ. ಹಾಗಾಗಿ ಕೊಡಲ್ಪಟ್ಟಿತು.

ಪ್ರಶ್ನೆ: ಮನೆಯಲ್ಲಿ ಮತ್ತು ದೇವಾಲಯಗಳಲ್ಲಿ ತುಳಸಿಕಟ್ಟೆಯ ಅಗತ್ಯತೆ ಏನು? ಅವುಗಳ ಆಯಾಮ, ನಿಯಮಗಳೇನು? ಸ್ವಾಮೀಜಿ: ಸಂಪ್ರದಾಯದಲ್ಲಿ ವಿಶಿಷ್ಟವಾದ ಗುಣ ಎನ್ನುವ ಕಾರಣಕ್ಕೆ, ಔಷಧೀಯ ವಸ್ತು, ಅದರ ಗಾಳಿಯಿಂದ ವಾತಾವರಣ ಶುದ್ಧವಾಗುತ್ತದೆ ಎನ್ನುವ ಕಾರಣಕ್ಕೆ ಬೆಳೆಸುವ ಪದ್ಧತಿ ಬಂದಿತು. ಆದರೆ ತುಳಸಿ ಮಾತ್ರವಲ್ಲ. ಈ ಪ್ರದೇಶದಲ್ಲಿ ತುಳಸಿಗೆ ಮಹತ್ವ ಬಂದದ್ದು ಮಾಧ್ವ ಸಂಪ್ರದಾಯ ಪ್ರಸಿದ್ದಿಗೆ ಬಂದ ಮೇಲೆ. ಹಾಗಾಗಿ ಎಲ್ಲ ಮನೆಯಲ್ಲೂ ತುಳಸೀ ಕಟ್ಟೆ ಇರಲೇಬೇಕು ಎಂದು ಬಂದಿತು. ತುಳಸಿ ಕಟ್ಟೆ ಮಾತ್ರವಲ್ಲ, ನೀವು ಗಮನಿಸಿರಬಹುದು, ಎಷ್ಟೋ ಮನೆಗಳಲ್ಲಿ ಮನೆ ಎದುರು ಕಟ್ಟೆ ಇರುತ್ತದೆ ಆದರೆ ಅದರಲ್ಲಿ ನೀವು ಕೇಪಳ ಎಂದು ಹೇಳುತ್ತೀರಲ್ಲ ಆ ಗಿಡ ಇರುತ್ತದೆ. ಅದು ತುಳಸಿಯಷ್ಟೇ ಸಮರ್ಥವಾದ ಗಿಡ. ಅಷ್ಟೇ ಮನೆಗೆ ರಕ್ಷಣೆಯೂ ಹೌದು. ಕೆಲವು ಮನೆಗಳಲ್ಲಿ ನೆಲ್ಲಿ ಗಿಡ ಇರುತ್ತದೆ. ತುಳಸೀ ಪೂಜೆ ದಿನ ನೀವು ನೆಲ್ಲಿಗಿಡವನ್ನು ಇಟ್ಟೇ ಪೂಜೆ ಮಾಡುತ್ತೀರಿ. ಇದು ಕೆಲವು ಸಂಪ್ರದಾಯಗಳಲ್ಲಿ ಇಲ್ಲ, ಕೆಲವು ಸಂಪ್ರದಾಯಗಳಲ್ಲಿ ಇದೆ. ಇನ್ನು ಕೆಲವು ಕಡೆ ಬಿಲ್ವ ಪತ್ರೆ ಇರುತ್ತದೆ. ಹೀಗೆ ಬೇರೆ ಬೇರೆ ಸುಮಾರು ಹೆಚ್ಚು ಕಡಿಮೆ ಹದಿಮೂರು ರೀತಿಯ ಬೇರೆ ಬೇರೆ ಗಿಡಗಳು ಬಳಕೆಯಲ್ಲಿವೆ. ತುಳಸಿ ಮಾತ್ರವಲ್ಲ. ತುಳಸಿ ಮಾತ್ರ ಅಂತ ಪ್ರಾಧಾನ್ಯತೆ ಬಂದದ್ದು ಇತ್ತೀಚಿಗೆ. ಸುಮಾರು ೭೦೦-೮೦೦ ವರ್ಷಗಳ ಈಚೆಗೆ. ಅಲ್ಲದೆ ಅತೀ ಎತ್ತರವಾಗಿ ಬೆಳೆಯುವ ಗಿಡ ಅದಲ್ಲ. ಹಾಗಾಗಿ ಎಲ್ಲಿ ನೆಟ್ಟರೂ ಸುಲಭದಲ್ಲಿ ಪೋಷಿಸಲು ಆಗುತ್ತದೆ ಎನ್ನುವ ಕಾರಣದಿಂದಾಗಿಯೂ ಅದು ಬಳಕೆಗೆ ಬಂದಿತು. ಇನ್ನೂ ಕೆಲವು ಕಡೆಗೆಲ್ಲ ನೀವು ಹೋದರೆ ತುಳಸಿ ಕಟ್ಟೆಯ ಹಾಗೇ ಇರುವ ಕಟ್ಟೆಯಲ್ಲಿ ಜಾಜಿ ಗಿಡ ನೆಟ್ಟಿರುತ್ತಾರೆ. ಕಳಸ ಕಡೆ ಹೋದರೆ ಇದು ಕಾಣಸಿಗುತ್ತದೆ. ಹಾಗೇ ಕೋಲಾರ ಕಡೆ ಹೋದರೆ ಅಲ್ಲಿ ಬಿಲ್ವ ಪತ್ರೆ ಗಿಡ ಇರುತ್ತದೆ. ಅದಕ್ಕೆ ಈಗಿನ ಧರ್ಮದ ಮತೀಯ ಚಿಂತನೆ ಮಾಡಬೇಡಿ. ಅವರು ಲಿಂಗಾಯತರು ಹಾಗಾಗಿ ಪತ್ರೆಯ ಗಿಡ ನೆಡುತ್ತಾರೆ ಎಂದು ಅರ್ಥವಲ್ಲ. ಅಲ್ಲಿನ ಸಂಪ್ರದಾಯವೇ ಹಾಗಿತ್ತು, ಹಾಗಾಗಿ ಅವರು ಅದನ್ನೇ ನೆಡುತ್ತಿದ್ದರು. ಈ ಎಲ್ಲಾ ಗಿಡಗಳೂ ಅತಿ ವಿಶಿಷ್ಟ ಔಷಧೀಯ ಗುಣ ಹೊಂದಿರುವಂತಹವು. ಅದರಲ್ಲಿ ಸುಲಭವಾಗಿ ಬೆಳೆಸಲು ಸಾಧ್ಯವಿರುವಂತಹದ್ದು ತುಳಸಿ. ತುಳಸಿ ಗಿಡ ನೆಡುವುದು ಖಂಡಿತವಾಗಿಯೂ ಒಳ್ಳೆಯದು. ಅದಕ್ಕೆ ಆಯ ಎನ್ನುವುದು ಮನೆಯ ಮುಂಭಾಗ. ಅಲ್ಲಿರುವುದು ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಮನೆಯ ಮುಂಭಾಗ ಎಂದರೆ ಗಮನಿಸಬೇಕು, ಮನೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಕಟ್ಟಿರಬೇಕು. ಆಗ ಮಾತ್ರ ಅದರ ಗಾಳಿ ಮನೆಯನ್ನು ಪ್ರವೇಶಿಸುತ್ತದೆ. ಯಾವುದೊ ದಿಕ್ಕಿಗೆ ಮನೆಯನ್ನು ಕಟ್ಟಿದಾಗ ಅದರ ಉಪಯೋಗ ನಿಮಗೆ ಸಿಗುವುದಿಲ್ಲ. ಆದರೂ ಕೂಡ ನೀವು ಒಂದು ತುಳಸಿ ಗಿಡವನ್ನು ನೆಡಿ. ನಿಮ್ಮಲ್ಲಿ ನೆಟ್ಟ ತುಳಸಿಯ ಗಾಳಿಯ ಉಪಯೋಗ ನಿಮ್ಮ ಪಕ್ಕದ ಮನೆಯವರಿಗೆ ಸಿಕ್ಕಿದರೆ ಈ ಕಡೆಯ ಮನೆಯವರು ನೆಟ್ಟ ತುಳಸಿ ಗಿಡದ ಗಾಳಿ ನಿಮ್ಮ ಮನೆಗೆ ಬಂದೇ ಬರುತ್ತದೆ. ಪರಸ್ಪರ ಸಹಕಾರ. ಹೊಂದಾಣಿಕೆ ಮಾಡಿಕೊಳ್ಳುವುದು. ಹಾಗಾಗಿ ಎಲ್ಲರೂ ತುಳಸಿ ಗಿಡ ನೆಟ್ಟರೆ ಒಳ್ಳೆಯದು. ತುಳಸಿ ಗಿಡಗಳ ಸಂಖ್ಯೆ ಹೆಚ್ಚುತ್ತಾ ಬಂದಾಗಲೆಲ್ಲ ವಾತಾವರಣದ ಹಲವಾರು ಸಮಸ್ಯೆಗಳನ್ನು ಬಗೆಹರಿಸಬಹುದು. ಅದರಲ್ಲೂ ವಿಶಿಷ್ಟವಾಗಿ ನಿಮ್ಮ ನಂದೀಕೂರಿನ ಕೊಡುಗೆಯು ತುಂಬಾ ಜನರಿಗೆ ಬಹಳ ಅನರ್ಥಕಾರೀ ರೋಗಗಳಿಗೆ ಕಾರಣವಾಗುತ್ತಿದೆ. ಸಾಧ್ಯವಾದರೆ ತುಳಸಿ ಮತ್ತು ಬಿಲ್ವಪತ್ರೆಯ ಗಿಡಗಳನ್ನು ಹೆಚ್ಚು ಬೆಳೆಸಿದರೆ ಅದು ಒಂದಷ್ಟು ಉಪಶಮನ ಆಗಬಹುದು. ನಂದೀಕೂರಿನ ಸಮಸ್ಯೆಯನ್ನಂತೂ ನಿಮ್ಮ ಕೈಯಲ್ಲಿ ಓಡಿಸಲಿಕ್ಕೆ ಆಗುವುದಿಲ್ಲ. ನೀವು ಬೇಕಾದಷ್ಟು ಹೋರಾಟ ಮಾಡಿದ್ದೀರಿ, ಏನೂ ಆಗಿಲ್ಲ. ಆದರೆ ನೀವು ನಿಮ್ಮ ನಿಮ್ಮ ರಕ್ಷಣೆಯನ್ನು ಮಾಡಿಕೊಳ್ಳುವುದು ಹೇಗೆ ಎಂದರೆ ಮನೆಯ ಹತ್ತಿರ ಒಂದಷ್ಟು ತುಳಸೀ ಗಿಡ, ಅವಕಾಶವಿದ್ದಲ್ಲಿ ಬಿಲ್ವಪತ್ರೆ ಗಿಡಗಳನ್ನು ನೆಟ್ಟರೆ ಅವು ಆಕಾಶದಲ್ಲಿ ಹಾರಿ ಬರುವ ಬೂದಿಯ ವಿಕಿರಣವನ್ನು ಕಡಿಮೆ ಮಾಡಿ ಅದನ್ನು ಉಪಶಮನ ಮಾಡುತ್ತವೆ. ನೀವು ಗಮನಿಸಿರಬಹುದು, ಪತ್ರೆಯ ತುಂಬಾ ಬೂದಿಯ ಸಂಗ್ರಹವಾಗಿರುತ್ತದೆ. ಯಾವುದೇ ಬಿಲ್ವಪತ್ರೆಯನ್ನು ನೋಡಿ, ಅದರ ಮೇಲೆ ಬೂದಿಯಂತಹ ವಸ್ತು ಸಂಗ್ರಹವಾಗಿರುತ್ತದೆ. ಅದು ಬರಿಯ ಧೂಳಲ್ಲ. ವಿಷಕಾರಿ ವಸ್ತುಗಳನ್ನು ಅದು ಆಕರ್ಷಿಸಿ ಹಿಡಿದಿಡುವಂತಹುದು. ಅದಕ್ಕಾಗಿ ಪತ್ರೆಯನ್ನು ತೊಳೆದೇ ಬಳಸಬೇಕು ಎನ್ನುವುದು. ತುಳಸಿಯಲ್ಲೂ ಇರುತ್ತದೆ, ಅದನ್ನೂ ತೊಳೆದೇ ಬಳಸುವ ಪದ್ಧತಿ ಇರುವುದು. ವಾತಾವರಣದ ವಿಕಿರಣವನ್ನು ಸುಲಭವಾಗಿ ಎಳೆಯುವ ಶಕ್ತಿ ಅದಕ್ಕೆ ಇದೆ. ಅದಕ್ಕಾಗಿ ತುಳಸಿ ಮತ್ತು ಬಿಲ್ವಪತ್ರೆಯನ್ನು ಈ ಪ್ರದೇಶದ ಎಲ್ಲೆಡೆ ಆದಷ್ಟು ಹೆಚ್ಚಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ನನ್ನ ಮತಿಯಲ್ಲಿ ಸಲಹೆ ಕೊಡುತ್ತೇನೆ.

ಪ್ರಶ್ನೆ: ವಸತಿಸಮುಚ್ಚಯ, ಫ್ಲ್ಯಾಟ್, ಗಳಲ್ಲಿ ಸಾಮೂಹಿಕ ತುಳಸೀಕಟ್ಟೆಯನ್ನು ಮಾಡಬಹುದೇ? ಸ್ವಾಮೀಜಿ: ಸಾಮೂಹಿಕವಾಗಿ ಮಾಡುವುದಕ್ಕಿಂತ ವಸತಿ ಸಮುಚ್ಚಯದ ಪ್ರತೀ ಮನೆಯಲ್ಲೂ ಪ್ರವೇಶದ್ವಾರವನ್ನು ಬಿಟ್ಟು ಒಂದಿಷ್ಟು ವರಾಂಡ ಎನ್ನುವ ಬಿಸಿಲು ಬೀಳುವ ಪ್ರದೇಶ ಇರುತ್ತದೆ. ಪ್ರವೇಶ ದ್ವಾರದಲ್ಲಿ ಬಿಸಿಲು ಬೀಳುವುದಿಲ್ಲ, ಅಲ್ಲಿ ತುಳಸಿ ಗಿಡ ಸಾಧ್ಯವಿಲ್ಲವಾದರೆ ಗಾಳಿ ಬರತಕ್ಕಂತಹ ಭಾಗವನ್ನು ಎಲ್ಲಾ ಮನೆಗೂ ಕೊಟ್ಟಿರುತ್ತರೆ. ಆ ರೀತಿಯ ವಸ್ತು ಸಂಯೋಜನೆಯನ್ನು ಅವರು ಮಾಡಿರುತ್ತಾರೆ. ಆ ಪ್ರದೇಶದಲ್ಲಿ ಬಿಸಿಲೂ ಕೂಡ ಬರುತ್ತದೆ. ಅಲ್ಲಿ ತುಳಸಿ ಗಿಡವನ್ನು ನೆಟ್ಟು ಬೆಳೆಸಿದರೆ ಮನೆಗೆ ತುಂಬಾ ಒಳ್ಳೆಯದು. ಅಲ್ಲದೆ ಅಲ್ಲಿ ಎತ್ತರ ಎತ್ತರಕ್ಕೆ ತುಳಸಿ ಗಿಡ ಬೆಳೆಯುವುದರಿಂದ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ತುಳಸಿ ಗಿಡಗಳನ್ನು ನೆಡಿ. ಇದರಿಂದ ವಾತಾವರಣವನ್ನು ಹೆಚ್ಚಾಗಿ ನಿಯಂತ್ರಿಸಲು ದೊಡ್ಡ ಅಸ್ತ್ರವಾಗಿಯೂ ಕೂಡ ಇದು ಪ್ರಯೋಗವಾಗಬಹುದು. ಎಲ್ಲ ಮನೆಗಳಲ್ಲೂ ಇದನ್ನು ಮಾಡಿ. ಸಾಮೂಹಿಕವಾಗಿ ಒಂದನ್ನು ನೆಟ್ಟು ಮುಗಿಸುವುದು ಬೇಡ.

ಪ್ರಶ್ನೆ: ಸ್ವಾಮೀಜಿ, ಈ ಪ್ರಶ್ನೆ ಪ್ರದಕ್ಷಿಣೆ ಬರುವುದು ಮತ್ತು ತುಳಸಿಕಟ್ಟೆಯ ಬಗ್ಗೆ. ಮಗು ನಡೆಯಲಿಕ್ಕೆ ಕಲಿಯುವಾಗ ಅದನ್ನು ತುಳಸಿ ಕಟ್ಟೆಯ ಹತ್ತಿರ ಬಿಟ್ಟರೆ ಮನೆಯವರು ಪ್ರದಕ್ಷಿಣೆಯಾಗಿ ಸುತ್ತುತ್ತಿದ್ದರೂ ಅದು ಅಪ್ರದಕ್ಷಿಣೆಯಾಗಿಯೇ ಸುತ್ತುತ್ತದೆ. ಪ್ರಯತ್ನಪೂರ್ವಕವಾಗಿ ಅದನ್ನು ಸರಿ ಮಾಡಬೇಕಾಗುತ್ತದೆ. ಏಕೆ? ಸ್ವಾಮೀಜಿ: ಸ್ವಭಾವ ಸಹಜವಾಗಿ ಮಕ್ಕಳಿಗೆ ಎಡಭಾಗವೇ ಪ್ರಧಾನ. ಹಾಗಾಗಿ ಅಪ್ರದಕ್ಷಿಣವಾಗಿ ತಿರುಗುತ್ತವೆ. ನಿಧಾನವಾಗಿ ಸಂಪ್ರದಾಯ, ಶಿಷ್ಟತೆಗಳನ್ನು ಅರ್ಥಮಾಡಿಕೊಳ್ಳುತ್ತಾ ಅವು ಪ್ರದಕ್ಷಿಣವನ್ನು ಬಳಸುತ್ತವೆ. ಸಹಜವಾಗಿ ಎಡ ಭಾಗವೇ ಪ್ರಧಾನ. ಹಿಂದೆಯೇ ಅದರ ಬಗ್ಗೆ ಹೇಳಿದ್ದೇನೆ. ಅದು ಸಹಜ. ತುಳಸಿಗಿಡಕ್ಕೆ ಅಪ್ರದಕ್ಷಿಣೆ ಸುತ್ತಿದ ತಕ್ಷಣ ದೋಷ ಆಯಿತು ಎಂದು ಅರ್ಥವಲ್ಲ. ಸಹಜ ಸ್ವಭಾವ ಜನ್ಯ ಗುಣವದು. ಎಡಭಾಗವನ್ನು ಬಳಸುವುದು ದೊಡ್ಡ ದೋಷವೇನಲ್ಲ. ಬಲಭಾಗವನ್ನೇ ಬಳಸುವುದು ಏಕೆಂದರೆ ಎಡ ಭಾಗಕ್ಕೆ ಅತೀವ ಶಕ್ತಿ ಇದೆ. ಅದನ್ನು ಬಳಸುತ್ತಾ ಹೋದಾಗ ಅತಿಮಾನುಷ ಶಕ್ತಿಯಾಗಬಹುದು. ಮನುಷ್ಯನು ಮನುಷ್ಯನ ಶಕ್ತಿಯಷ್ಟೇ ಸಾಧಿಸಿಕೊಂಡರೆ ಖಂಡಿತ ದೇವರಾಗುತ್ತಾನೆ. ಮನುಷ್ಯ ಯಾವಾಗ ಮನುಷ್ಯನ ಶಕ್ತಿಗಿಂತ ಹೆಚ್ಚಿನದನ್ನು ಸಾಧಿಸುತ್ತಾನೆ, ಅವನು ಕೆಟ್ಟವನಾಗುವುದು. ನಮ್ಮ ಸೂತ್ರಕಾರರ ಉದ್ದೇಶ ಮನುಷ್ಯನು ಮನುಷ್ಯನಾಗಿಯೇ ಬದುಕಬೇಕು, ಸಾತ್ವಿಕನಾಗಿರಬೇಕು, ಅವನು ದೇವರಾಗಬೇಕು ಎಂದಿರುತ್ತದೆ. ದೇವನಾಗಬೇಕಾದರೆ ಕೆಟ್ಟವನಾಗಿರಬಾರದು. ಅದಕ್ಕಾಗಿ ಎಡಭಾಗದ ಬಳಕೆಯನ್ನು ಕಡಿಮೆಮಾಡಿ ಬಲಭಾಗದ ಬಳಕೆಗೆ ಸೂತ್ರಕಾರರು ಪ್ರಾಧಾನ್ಯತೆ ಕೊಟ್ಟರು. ಆಗ ಸಜ್ಜನನಾಗಿ ಬದುಕಲು ಸಧ್ಯ ಎಂದರ್ಥ.

ಪ್ರಶ್ನೆ: ಪತಿವೃತೆ ಎಂದರೆ ಹೇಗಿರಬೇಕು? ಅವಳ ಜೀವನ ಕ್ರಮ ಹೇಗಿರಬೇಕು? ಅವಳ ಮನಸ್ಸಿನ ಸ್ಥಿತಿ ಹೇಗಿರಬೇಕು? ಸ್ವಾಮೀಜಿ: ಇದನ್ನು ವಿವರಿಸಲು ೨ ಗಂಟೆಗಳು ಬೇಕು. ಏಕೆಂದರೆ ಈಗಿನ ಕಾಲಮಾನ ಸ್ಥಿತಿಯನ್ನು ಉದಾಹರಿಸುತ್ತಾ ಅದನ್ನು ಹೇಳಬೇಕಾಗುತ್ತದೆ. ಗೃಹಸ್ಥ ಧರ್ಮವನ್ನು ಪಾಲಿಸುವುದಕ್ಕೆ ಗಂಡನಿಗೆ ಅನುವರ್ತಿಯಾಗಿ ಇರತಕ್ಕಂತಹ ವಿಧಿ ವಿಧಾನಗಳನ್ನು ಹೇಳುವುದಕ್ಕೆ ತುಂಬಾ ಇದೆ. ಅದು ಪತಿವೃತಾ ಧರ್ಮ. ಅದು ಬಿಟ್ಟು ನಂತರ ವೃತ್ತಿಧರ್ಮದಲ್ಲಿ ಹೊರಟಾಗ ಕೆಲವೊಂದಿಷ್ಟು ಬಾಹ್ಯ ಪ್ರಪಂಚದ ಚಲನೆ, ಬಾಹ್ಯ ಪ್ರಪಂಚದ ಸಂಬಂಧ ಇವೆಲ್ಲ ಹುಟ್ಟುತ್ತಾ ಬಂದು ಕೆಲವೊಂದಿಷ್ಟು ವಿಕೃತಿಯಾದಾಗ ಬೇರೆ ಬೇರೆ ಆಚರಣೆಗಳನ್ನು ಹೇಳಿಕೊಂಡು ಬರುತ್ತಾರೆ. ಆ ನಿರ್ಬಂಧಗಳ ಒಂದು ಪಟ್ಟಿಯೇ ಸುಮಾರು ಮುನ್ನೂರರಷ್ಟಿದೆ. ಇವೆಲ್ಲ ಇಲ್ಲಿ ತಾಳ ತಪ್ಪಿದ್ದರಿಂದ ಆದದ್ದು. ಮೂಲದಲ್ಲಿ ತಾಳ ತಪ್ಪದೇ ಇದ್ದರೆ ಆ ನಿರ್ಬಂಧದ ಅಗತ್ಯ ಇಲ್ಲ. ಮೂಲದಲ್ಲಿ ತಾಳ ತಪ್ಪಿದ್ದರಿಂದ ನಿರ್ಬಂಧಗಳನ್ನು ಹೇರುತ್ತಾ ಬಂದರು. ನಿರ್ಬಂಧಗಳನ್ನು ಸಡಿಲಗೊಳಿಸುವುದು, ಬಿಗಿಗೊಳಿಸುವುದು, ಆಯಾಯ ಕಾಲಧರ್ಮವನ್ನು ಆಧರಿಸಿ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಗಂಡ ಸತ್ತ ತಕ್ಷಣ ಹೆಂಡತಿ ಬದುಕಿರಲು ಅವಕಾಶವೇ ಇರಲಿಲ್ಲ. ಗಂಡನ ಜೊತೆ ಚಿತೆ ಏರಿಬಿಡಬೇಕಿತ್ತು. ಏಕೆಂದರೆ ಅದು ಆ ಕಾಲಕ್ಕಿದ್ದ ಸಮಸ್ಯೆ. ವಿದೇಶೀಯರ ಆಕ್ರಮಣ ನಡೆಯುತ್ತಿತ್ತು. ಆಶ್ರಯ ಇಲ್ಲದಂತಹ ಒಂದು ಹೆಣ್ಣು ಗೌರವಯುತವಾಗಿ ಬದುಕಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇತ್ತು. ಹಾಗಾಗಿ ಗಂಡನ ಜೊತೆ ಚಿತೆ ಏರುವಂತಹ ಪದ್ಧತಿ ಬಂದಿತು. ಇಂತಹ ಕಾಲ ದೇಶವನ್ನಾಧರಿಸಿದ ಎಷ್ಟೋ ವಿಕೃತ ಆಚರಣೆಗಳು ಬಂದದ್ದು ಇವೇ ಕಾರಣಗಳಿಗಾಗಿ. ನೀವು ಇನ್ನೊಂದು ದೊಡ್ಡ ಸಭೆ ಮಾಡಿ ಕಡಿಮೆ ಎಂದರೆ ೬ ರಿಂದ ೮ ಗಂಟೆಗಳಷ್ಟು ನನಗೆ ಸಮಯ ನೀಡಿ. ಸಂಪೂರ್ಣವಾಗಿ ವಿವರಿಸುತ್ತೇನೆ. ತುಂಬಾ ಸರಳ ಈ ಪತಿವೃತಾ ಧರ್ಮ. ಆದರೆ ಈ ಸಮಸ್ಯೆಯನ್ನು ಹೇಳದೆ ಅದನ್ನು ಹೇಳಿದರೆ ಏನೂ ಪ್ರಯೋಜನವಿಲ್ಲ. ಇವನ್ನೆಲ್ಲ ತೋರಿಸಿಕೊಟ್ಟು ಇವೆಲ್ಲ ಎಷ್ಟು ಬಾಲಿಶ, ಇದೆಷ್ಟು ಸತ್ಯ ಎಂದು ತೋರಿಸಿಕೊಡಬೇಕು. ಈಗ ಎಷ್ಟರ ಮಟ್ಟಿಗೆ ಆಗಿದೆ ಎಂದರೆ ಒಂದು ತರಹ ವಿಕೃತವಾಗಿ ಪತಿವೃತಾ ಧರ್ಮವನ್ನು ಹೇಳಲಾಗುತ್ತಿದೆ. ಒಂದು ಹೆಣ್ಣು ಗೌರವಯುತವಾಗಿ ಬದುಕುತ್ತಿದೆ ಎಂದರೆ ಈಗ ವ್ಯಾಖ್ಯಾನ ಮಾಡುತ್ತಿರುವ ಧರ್ಮದಲ್ಲಿ ಅದಕ್ಕೆ ಅವಕಾಶವಿಲ್ಲ. ಆ ರೀತಿ ಬದುಕುವುದನ್ನು ಕೆಟ್ಟದ್ದಾಗಿ ಚಿಂತನೆ ಮಾಡುವ ವಿಧಿ ಇದೆ. ಅವನ್ನೆಲ್ಲ ತೋರಿಸಿ ಕೊಡದೆ ಸುಮ್ಮನೆ ಪತಿವೃತಾ ಧರ್ಮ ಹೀಗೆ ಎಂದರೆ ಅದು ಯಾರಿಗೂ ಅರ್ಥವಾಗುವುದಿಲ್ಲ. ನನಗೆ ಒಂದು ವೇದಿಕೆ ಒದಗಿಸಿ ಕೊಟ್ಟು, ಆದಷ್ಟು ಜನ ನೀವೆಲ್ಲ ಸೇರಿ, ೬ ರಿಂದ ೮ ಗಂಟೆ ಸಮಯ ನನಗೆ ನೀಡಿದರೆ ಪತಿವೃತಾ ಧರ್ಮ ಎಂದರೆ ಏನು? ಅದರ ಮುಖೇನ ಗ್ರಹಸ್ಥನ ಉನ್ನತಿ ಹೇಗೆ ಸಾಧ್ಯ? ಎನ್ನುವುದನ್ನು ನಿಮಗೆ ವಿವರಿಸಿ ಹೇಳಿಕೊಡುತ್ತೇನೆ. "ಆಶ್ರಮ ಧರ್ಮ ದೀಪಿಕೆ"ಯಲ್ಲಿ ಸ್ಥೂಲವಾಗಿ ಒಂದಿಷ್ಟು ಬರೆದಿದ್ದೇನೆ. ಅದನ್ನು ಪೂರ್ಣವಾಗಿ ವಿವರಿಸಬೇಕೆಂದು ನನಗೂ ಅಸೆ ಇದೆ. ಒಂದಿಷ್ಟು ಅವಕಾಶ ಮಾಡಿಕೊಡಿ. ವಿವರಿಸೋಣ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ಪ್ರಶ್ನೋತ್ತರಗಳು - 4


ಪ್ರಶ್ನೆ: ಒಬ್ಬ ವ್ಯಕ್ತಿಗೆ ಅವನಿಗೆ ಇಟ್ಟಿರುವ ಹೆಸರಿನಿಂದ ಅವನ ವ್ಯಕ್ತಿತ್ವ ಬದಲಾಗುತ್ತದೆಯೇ? ಉದಾಹರಣೆಗೆ ಸಂಪತ್ ಎನ್ನುವ ವ್ಯಕ್ತಿಯನ್ನು ಹಾಗೆ ಕರೆಯುತ್ತಾ ಇದ್ದರೆ ಅವನಲ್ಲಿ ಅಂತಹ ಅಸೆ ಬರಬಹುದಾ? ವಿನಯ ಎನ್ನುವವನು ವಿನಯವಂತನೂ, ನಿತ್ಯಾನಂದರು ಯಾವಾಗಲೂ ನಿತ್ಯಾನಂದರಾಗಿಯೇ ಇರುತ್ತಾರಾ? ಸ್ವಾಮೀಜಿ: ಹಿಂದೆ ನಾಮಕರಣ ಮಾಡುವಾಗಲೇ ಆ ಮಗುವಿನ ಭವಿತವ್ಯವನ್ನು ಚಿಂತಿಸಿ ಅನ್ವರ್ಥಕವಾದ ನಾಮಕರಣ ಮಾಡುತ್ತಿದ್ದರು. ಕೌರವನಿಗೆ ನಾಮಕರಣ ಮಾಡಿದ್ದು ದೃತರಾಷ್ಟ್ರ. ಅದು ನಾಮಕರಣದ ವಿಧಿ. ಅದರಲ್ಲಿ ಯಾವುದೇ ಪಕ್ಷಪಾತ ಮಾಡುವಂತಿರಲಿಲ್ಲ. ಹಾಗಾಗಿ ದುರ್ಯೋಧನ, ದುಶ್ಯಾಸನ, ದುರ್ಜಯ, ಹೀಗೆ ನಾಮಕರಣ ಮಾಡಿದನು. ಅವರೆಲ್ಲ ಕೆಟ್ಟವರೇ ಎಂದು ಅವನಿಗೆ ಗೊತ್ತಿತ್ತು. ಹಾಗೆಯೇ ನಾಮಕರಣ ಮಾಡಬೇಕು. ಅದು ಹಿಂದಿನ ಕ್ರಮ. ಆದರೆ ಈಗ ಹಾಗೆ ಮಾಡುತ್ತಾ ಇಲ್ಲ. ಆದರೆ ಅನ್ವರ್ಥಕವನ್ನು ಗುರುತಿಸಿ ನಾಮಕರಣ ಮಾಡುವುದರಿಂದ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ. ಅವನ ಒಳ್ಳೆಯದಾದ ದಾರಿಯಲ್ಲಿ ಅವನು ಹೋಗುತ್ತಾನೆ, ಸಮರ್ಥನಾಗುತ್ತಾನೆ, ಅವನಿಗೆ ಆರ್ಥಿಕ ಸಮೃದ್ಧತೆಯೂ, ಮನಸ್ಸಿನ ಶಾಂತಿಯೂ, ಎಲ್ಲವೂ ಸಿಗುತ್ತದೆ. ಹೆಸರು ಆಕರ್ಷಕವಾಗಿದೆ ಎಂದು ಇಡುವುದರಿಂದ ಫಲಿತ ನೀಡುವುದಿಲ್ಲ. ಸ್ವಭಾವಕ್ಕನುಗುಣವಾಗಿ ಅನ್ವರ್ಥಕವನ್ನು ಗುರುತಿಸಿ ಹೆಸರಿಡುವುದರಿಂದ ಆ ಮಗು ಒಳ್ಳೆಯರೀತಿಯಲ್ಲಿ ಸ್ವಭಾವ ಸಹಜವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಅದೇ ಮಗುವಿಗೆ ಸ್ವಭಾವಕ್ಕೆ ವಿಕೃತವಾದ ಅಥವಾ ವಿರುದ್ಧವಾದ ಹೆಸರನ್ನು ಸಂಯೋಜನೆ ಮಾಡಿದರೆ ಮಗುವಿಗೆ ತೊಂದರೆ ಆಗುವ ಸಾಧ್ಯತೆಯೂ ಇರುತ್ತದೆ. ಆ ಕಾರಣಕ್ಕೆ ಹೆಸರು ಶುದ್ಧವಾಗಿರಬೇಕು ಎಂದು ಹೇಳುವುದು. ಅನ್ವರ್ಥಕವನ್ನು ಕಂಡು ಹಿಡಿದು ಮುಂದೆ ಯಾವತ್ತೋ ಹೆಸರು ಬದಲಾಯಿಸಿದರೆ ಏನೂ ಪ್ರಯೋಜನವಾಗುವುದಿಲ್ಲ. ಇಡುವಾಗಲೇ ಮಗುವಿಗೆ ಅನ್ವರ್ಥಕ ನಾಮವನ್ನು ಇಡಬೇಕು ಎಂದು ಹೇಳುತ್ತದೆ. ಅದನ್ನು ಅನ್ವೇಷಿಸುವ ವಿಧಾನಗಳಿವೆ. ಆ ಸಂಬಂಧವಾದ ಪುಸ್ತಕವನ್ನು ಹಿಂದೆಯೇ ಬರೆದಿದ್ದೇನೆ. ಓದಿ ನೋಡಿ ಗೊತ್ತಾಗುತ್ತದೆ. ಆ ರೀತಿ ಅನ್ವರ್ಥ ನಾಮವನ್ನು ಇಡುವ ಪ್ರಯತ್ನ ಮಾಡಿ. ಈಗಾಗಲೇ ಕರ್ಮ ಸಮುಚ್ಚಯ ಪ್ರಕಟಣೆಗೆ ಹೋಗುತ್ತಿದೆ. ಅದರಲ್ಲೂ ಕೂಡ ನಕ್ಷತ್ರ ನಾಮ ಹೇಗೆ ಬರುತ್ತದೆ, ಗುಪ್ತ ನಾಮ, ಮಾಸ ನಾಮಗಳು ಹೇಗೆ ಬರುತ್ತವೆ ಎಂಬ ಎಲ್ಲ ವಿಷಯಗಳು ನಾಮಕರಣ ಪ್ರಕ್ರಿಯೆಯಲ್ಲಿ ಬರುತ್ತವೆ. ಅದನ್ನು ನೋಡಿಕೊಂಡು ಸಮಾಜದಲ್ಲಿ ಒಳ್ಳೆ ಒಳ್ಳೆಯ ಹೆಸರುಗಳನ್ನು ಬಳಕೆಗೆ ತನ್ನಿ. ತುಂಬಾ ಇಷ್ಟಕೊಡತಕ್ಕಂತಹ, ಬಹಳ ವಿಶಿಷ್ಟವಾದ ಅರ್ಥ ಇರುವಂತಹ ಹೆಸರುಗಳ ಪಟ್ಟಿಯೇ ಅದರಲ್ಲಿ ಸಿಗುತ್ತವೆ. ಅಂತಹ ಹೆಸರುಗಳನ್ನಿಟ್ಟಾಗ ಸೂಕ್ತವಾಗಿ ಆ ಮಗು ಗುರಿಯತ್ತ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ. ಆ ರೀತಿಯಲ್ಲಿ ನಿಮ್ಮ ಪ್ರಯತ್ನ ಇರಲಿ.

ಪ್ರಶ್ನೆ: ಗುರುಗಳೇ, ಇಂದ್ರಜಿತು, ಜಯದೃತ ಎಂದೆಲ್ಲ ನಾಮಕರಣ ಮಾಡಿರುತ್ತಾರೆ. ಈ ರೀತಿಯ ಹೆಸರುಗಳು ಎಷ್ಟು ಸೂಕ್ತ? ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ? ಸ್ವಾಮೀಜಿ: ಜಯದೃತನೂ ಒಬ್ಬ ಮಹಾಭಾರತದ ಪಾತ್ರಧಾರಿಯೇ. ಕೌರವನ ತಂಗಿ ದುಶ್ಶಲೆಯನ್ನು ಮದುವೆ ಆಗಿದ್ದನು. ಅವರ ವಯಸ್ಸಿನ ಅಂತರವನ್ನು ತೆಗೆದುಕೊಂಡರೆ ಆತ ದುಶ್ಶಲೆಯ ಸಾವಿರ ಪಟ್ಟು ವಯಸ್ಸಿನವನು. ಅವನ ತಂದೆಯ ಹೆಸರು ವೃದ್ಧಕ್ಷತ್ರ. ಆತ ಮಹಾನ್ ಶಿವಭಕ್ತ. ಸದಾ ಶಿವನ ತಪಸ್ಸು. ಅದನ್ನು ಬಿಟ್ಟರೆ ಬೇರೆಯ ಮಾತೇ ಇಲ್ಲ. ಈಶ್ವರನ ಬೇರೆ ಬೇರೆ ಹೆಸರನ್ನು, ನಾಮವನ್ನು ಉಚ್ಚಾರಣೆ ಮಾಡುವ ಮೂಲಕ ರಾಜ್ಯದ ಆಳ್ವಿಕೆ ಮಾಡುತ್ತಿದ್ದನು. ಮಂತ್ರಿಗೆ ಆಜ್ಞೆಯನ್ನು ನೀಡಬೇಕಿದ್ದರೆ ಶಿವನ ಹೆಸರೊಂದನ್ನು ಉಚ್ಚರಿಸುವುದು. ಇಂತಹ ಕೆಲಸ ಆಗಬೇಕಿದ್ದರೆ ಅದನ್ನು ಈಶ್ವರನ ಹೆಸರಿನ ಮುಖೇನ ಹೇಳುತ್ತಿದ್ದ. ಆತ ಅಷ್ಟೊಂದು ಜ್ಞಾನಿಯಾಗಿದ್ದನು. ಆದರೆ ಆತನಿಗೆ ಸಂತಾನ ಇರಲಿಲ್ಲ. ಅವನು ತನ್ನ ೭೨,೦೦೦ ವರ್ಷದ ನಂತರ ಶಿವನಲ್ಲಿ ಬೇಡಿಕೊಳ್ಳುತ್ತಾನೆ. ಅಲ್ಲಿಯವರೆಗೂ ತಾನು ಯಾರನ್ನೂ ಬೇಡುವುದಿಲ್ಲ ಎನ್ನುವ ದೃಢ ಸಂಕಲ್ಪ ಆತನಲ್ಲಿತ್ತು. ಸಂತಾನ ಇಲ್ಲ ಎಂದಾದಾಗ ಬೇರೆಯವರ ಸಲಹೆಯಂತೆ ಅವನು ಶಿವನಲ್ಲಿ ಬೇಡಿಕೊಳ್ಳುತ್ತ್ತಾನೆ. ಹೀಗೆ ಬೇಡಿಕೊಳ್ಳಲು ಕಾರಾಣ ವೃದ್ಧಕ್ಷತ್ರ ಕೊನೆಗಾಣಬೇಕಿರುವುದು. ಇದಲ್ಲದೆ ಬೇರೆ ದಾರಿ ಇರಲಿಲ್ಲ. ಆತ ಸ್ವಾಭಾವಿಕವಾಗಿ ಪ್ರಕೃತಿಯಲ್ಲಿ ಇದ್ದರೂ ಪ್ರಕೃತಿಯಲ್ಲಿ ಇರಲಿಲ್ಲ. ಋಣಕ್ಕೆ ಸಿಗಲಿಲ್ಲ. ಅವನಿಗೆ ಋಣವನ್ನು ಒದಗಿಸಿಕೊಡಬೇಕು. ಇಲ್ಲದಿದ್ದರೆ ಅವನ ಬದುಕನ್ನು ಮುಕ್ತಾಯ ಮಾಡಲಿಕ್ಕೆ ಸಾಧ್ಯವಿರಲಿಲ್ಲ. ಅದಕ್ಕಾಗಿ ಇತರರಿಂದ ಪ್ರೇರೇಪಿಸಲ್ಪಟ್ಟು ಶಿವನಲ್ಲಿ ಬ್ರೆಡಿಕೊಳ್ಳುತ್ತಾನೆ. ಆಗ ಜಯದೃತನ ಸೃಷ್ಟಿಯಾಗುತ್ತದೆ. ಆಗಲೇ ಶಿವನಲ್ಲಿ ಕೇಳುತ್ತಾನೆ, ಈತ ಜಯದೃತನಾಗಬೇಕು, ಎಲ್ಲವನ್ನೂ ಜಯಿಸಬೇಕು ಎಂಬುದಾಗಿ. ಶಿವನು ತಥಾಸ್ತು ಎನ್ನುತ್ತಾನೆ. ಇದು ದ್ವಾಪರಾಯುಗದ ಮಧ್ಯ ಕಾಲ. ಕೃಷ್ಣ ಇನ್ನೂ ಹುಟ್ಟಿರಲಿಲ್ಲ. ವ್ಯಾಸರೂ ಹುಟ್ಟಿರುವುದಿಲ್ಲ. ಜಯದೃತ ಮೊದಲೇ ಹುಟ್ಟಿರುತ್ತಾನೆ. ಆತ ಮಹಾಕಾಯ. ಮಹಾಭಾರತದ ಕಾಲ ಬಂದಾಗ ಜನರ ಕಾಯ ಸಣ್ಣದಾಗುತ್ತ ಬಂತು. ಜಯದೃತನ ಕಾಲದಲ್ಲಿ ಜನರು ಮಹಾಕಾಯರಾಗಿಯೇ ಇರುತ್ತಿದ್ದರು. ಶಿವನ ವರದಂತೆ ಜಯದೃತ ಅಜೇಯನಾಗಿಯೇ ಇದ್ದನು. ಅವನ ಮಹಾಕಾಯಕ್ಕೆ ಹೊಡೆದ ಬಾಣಗಳು ಅವನಿಗೆ ಸೂಜಿ ಚುಚ್ಚಿದಂತೆ ಭಾಸವಾಗುತ್ತಿದ್ದವು. ಆ ರೀತಿಯಲ್ಲಿ ಆತ ಬೆಳೆದು ಬಂದ. ನಂತರ ವೃದ್ಧಕ್ಷತ್ರನು ತನ್ನ ಮಗನಿಗೋಸ್ಕರ ಪುನಃ ತಪಸ್ಸು ಮಾಡುತ್ತಾನೆ. ನನ್ನ ಮಗನಿಗೆ ಸಾವೇ ಇಲ್ಲದಂತೆ ವಾರ ಕೇಳುತ್ತಾನೆ. ಅದಕ್ಕೆ ಶಿವ, ನೀನು ಮತ್ತು ನಿನ್ನ ಮಗ ಮಹಾನ್ ದೈವ ಭಕ್ತರು. ನೀನು ಕೇಳಿದ ವರ ನೀಡಲು ಆಕ್ಷೇಪ ಇಲ್ಲ. ಆದರೆ ನನಗೆ ದ್ರೋಹ ಮಾಡಿದರೆ ಏನು ಮಾಡಲಿ ಎಂದು ಕೇಳುತ್ತಾನೆ. ನಿನಗೆ ದ್ರೋಹ ಮಾಡಿದರೆ ತಲೆ ಕತ್ತರಿಸಿಬಿಡು ಆದರೆ ಬೇರೆ ಯಾರಿಗೂ ಅವನನ್ನು ಕೊಲ್ಲಲು ಆಗಬಾರದು ಎಂದು ವೃದ್ಧಕ್ಷತ್ರ ಹೇಳುತ್ತಾನೆ. ತಲೆ ಕತ್ತರಿಸಿದರೆ ಮುಂಡ ಉಳಿಯುತ್ತದಲ್ಲ ಎಂದು ಕೇಳಿದಾಗ ಅವನ ತಲೆ ಭೂಪಾತ ಮಾಡುವವನು ನಾಶವಾಗಿ ಹೋಗಬೇಕು ಎಂದು ವೃದ್ಧಕ್ಷತ್ರ ಹೇಳುತ್ತಾನೆ. ಈ ರೀತಿ ವೃದ್ಧಕ್ಷತ್ರ ಆ ವಯೋಮಾನಕ್ಕೆ ತಕ್ಕವಾಗಿ ಈಶ್ವರನ ಅನುಗ್ರಹ ಪಡೆಯುತ್ತಾನೆ. ನಂತರ ಎಷ್ಟೋ ವರ್ಷದ ನಂತರ ಕೌರವರು, ಪಾಂಡವರು ಎಲ್ಲ ಹುಟ್ಟಿ ಇವನೊಬ್ಬ ಮಹಾ ಬಲಿಷ್ಠ ಎನ್ನುವ ಕಾರಣಕ್ಕೆ ಕೌರವನ ಒಂದು ರಾಜನೀತಿಯಂತೆ ತನ್ನ ತಂಗಿಯನ್ನು ಕೊಟ್ಟು ಜಯದೃತನನ್ನು ಒಲಿಸಿಕೊಳ್ಳುತ್ತಾನೆ. ಆದರೆ ಅದು ಮಾತ್ರ ಸಮಾನ ಸಂಬಂಧವಲ್ಲ. ಆದರೆ ತಂಗಿಯನ್ನು ಕೊಟ್ಟು ವೃದ್ಧಕ್ಷತ್ರನ ಜೊತೆ ಕೌರವನು ತನ್ನ ಬಾಂಧವ್ಯ ಬೆಳೆಸಿಕೊಳ್ಳುತ್ತಾನೆ. ಅತೀ ಬಲಾಢ್ಯ, ಸಾವೇ ಇಲ್ಲದವ, ಶಿವನೇ ಬಂದು ಕೊಲ್ಲಬೇಕಾದವನು, ಅಂತಹವನ ಸಖ್ಯವನ್ನು ಕೌರವ ಪಡೆಯುತ್ತಾನೆ. ಜಯದೃತ ಎನ್ನುವುದು ಅನ್ವರ್ಥಕವೇ, ಅವನಿಗೆ ಸೋಲೇ ಇಲ್ಲ. ಸಾವು ಎನ್ನುವುದು ಮಾತ್ರ ಸೋಲು ಎನ್ನುವುದು ವೃದ್ಧಕ್ಷತ್ರನ ಕಲ್ಪನೆ. ಇವನು ಸಾಯುವುದೇ ಇಲ್ಲ ಹಾಗಾಗಿ ನಿರಂತರ ಜಯದೃತ. ಆದರೆ ಬೇರೆಲ್ಲ ವಿಚಾರದಲ್ಲಿ ಆತ ಸೈನ್ಧವ. ಮಹಾಭಾರತ ಕಾಲದಲ್ಲಿ ಜಯದೃತ ಎನ್ನುವುದಕ್ಕಿಂತ ಸೈನ್ಧವ ಎನ್ನುವುದೇ ಹೆಚ್ಚು ಬಳಕೆಗೆ ಬರುತ್ತದೆ. ಸೈನ್ಧವ ಎಂದರೆ ಪ್ರಾಣ ಇದೆ ಸತ್ತವನು ಎಂದರ್ಥ. ನೀವು ವಿಧವಾ ಎಂದು ಕರೆಯುತ್ತೀರಿ, ಕಳೆದುಕೊಂಡವಳು ಎಂದರ್ಥ. ಹಾಗೆಯೇ ಜಯದೃತ ಪ್ರಾಣವಿದ್ದು ಸತ್ತಂತೆ ಬದುಕಿದ್ದ. ಮಹಾಭಾರತದ ಸುಮಾರು ೫೪ ವರ್ಷ ಕಾಲ ಈ ಕೌರವ ಪಾಂಡವರ ಜನನ ಆದ ನಂತರ ಸಂಬಂಧ ಬೆಳೆಸಿಕೊಂಡು ಸತ್ತಂತೆ ಬದುಕಿದವ. ಮುಂದೆ ಆತನಿಗೆ ಯಾವುದೇ ಹೆಸರಿಲ್ಲ. ಸೈನ್ಧವನ ಪರಾಕ್ರಮ ಅಥವಾ ಸೈನ್ಧವನ ದಾರ್ಷ್ಟ್ಯ ಯಾವುದೂ ಇಲ್ಲ. ಒಟ್ಟಾರೆ ಕೌರವರ ಜೊತೆ ಹತ್ತರೊಟ್ಟಿಗೆ ಹನ್ನೊಂದು ಎಂಬಂತೆ ಜೀವನ ಮಾಡಿದ. ಕೊನೆಗೆ ಪಾಶುಪತಾಸ್ತ್ರ ಅವನ ತಲೆ ಕತ್ತರಿಸಿತು, ಅದು ಶಿವ. ಕತ್ತರಿಸಿದ ತಲೆ ಭೂಮಿಗೆ ಬಿದ್ದರೆ ಪಾರ್ವತಿಗೆ ವೈಧವ್ಯ ಬರುವುದೆಂದು ಪಾರ್ವತಿ ಕೊಟ್ಟ ಅಂಜನಾಸ್ತ್ರವು ವೃದ್ಧಕ್ಷತ್ರನ ಕೈಯಲ್ಲಿ ಅದನ್ನು ಇಡುತ್ತದೆ. ಅವನು ಗಲಿಬಿಲಿಗೊಂಡು ಇದೇನೆಂದು ಕೆಳಗೆ ಬೀಳಿಸುತ್ತಾನೆ. ಆಗ ವೃದ್ಧಕ್ಷತ್ರ-ಜಯದೃತರಿಬ್ಬರೂ ಒಟ್ಟಿಗೇ ಮರಣವನ್ನಪ್ಪುತ್ತಾರೆ. ವೃದ್ಧಕ್ಷತ್ರನ ಅಷ್ಟು ವರ್ಷದ ಬದುಕಿಗೆ ಮುಕ್ತಾಯ ಹಾಡುವುದಕ್ಕಾಗಿ ಜಯದೃತ ಹುಟ್ಟಿದ್ದು. ಜಯದೃತ ಸೋತೇ ಇಲ್ಲ, ಅಂದರೆ ಯುದ್ಧ ಮಾಡಿಯೇ ಇಲ್ಲ, ಸತ್ತಂತೆ ಬದುಕಿದವನು. ಒಂದು ಬಾರಿ ದ್ರೌಪದಿಯನ್ನು ಎಳೆದುಕೊಂಡು ಬರುತ್ತೇನೆ ಎಂದು ಹೇಳಿ ಹೋಗಿ ಭೀಮಾರ್ಜುನರಿಂದ ಚೆನ್ನಾಗಿ ಪೆಟ್ಟು ತಿನ್ನುತ್ತಾನೆ. ಏಕೆಂದರೆ ಅವನಿಗೆ ಯುದ್ಧ ಮಾಡಲು ಬರುವುದೇ ಇಲ್ಲ. ಚಕ್ರವ್ಯೂಹದ ಸಂದರ್ಭದಲ್ಲಿ ಯುದ್ಧಮಾಡಿದ್ದಲ್ಲ ಕೇವಲ ಬಾಗಿಲಿಗೆ ಅಡ್ಡಲಾಗಿ ನಿಂತದ್ದು ಮಾತ್ರ. ದೈತ್ಯಾಕಾರದ ಅವನಿಗೆ ಬಾಣ ಚುಚ್ಚುವುದಿಲ್ಲ, ಅವನನ್ನು ತಳ್ಳಲೂ ಸಾಧ್ಯವಿಲ್ಲ. ಹಾಗೆ ಅಡ್ಡ ನಿಂತ. ಅಷ್ಟು ಬಿಟ್ಟರೆ ಬೇರೇನೂ ಮಾಡಲಿಲ್ಲ. ಹಾಗೇ ಸತ್ತಂತೆ ಬದುಕಿದವನಾಗಿ ಕೆಲವು ವರ್ಷ ಇದ್ದನು. ಕಡೆಗೆ ಪಾಶುಪತದಿಂದ ಹತನಾದ. ಜಯದೃತವು ಅನ್ವರ್ಥಕವೇ ಆದರೂ ಸತ್ತಂತೆ ಬದುಕುವವ ಎಂದು ಮಕ್ಕಳಿಗೆ ಹೆಸರಿಡಬೇಕೆಂಬ ಆಸೆ ಇದ್ದರೆ ಅದೇ ಹೆಸರು ಇಡಬಹುದು. ಇಲ್ಲದಿದ್ದರೆ ನಿಮ್ಮ ಮಕ್ಕಳು ಚೇತನರು, ಮುಂದೆ ಭಾರತದ ಉತ್ತಮ ಪ್ರಜೆಗಳಾಗಬೇಕೆಂಬುವ ಅಸೆ ಇರುವವರಿಗೆ ಇಂತಹ ಹೆಸರುಗಳ ಅಗತ್ಯ ಇಲ್ಲ. ಇನ್ನು ಎರಡನೆಯದಾಗಿ ಇಂದ್ರಜಿತು. ನಮ್ಮ ಸಂಪ್ರದಾಯದಲ್ಲಿ ಇಂತಹ ಹೆಸರಿಡುವ ಪದ್ಧತಿ ಇಲ್ಲ. ಏಕೆಂದರೆ ಕೆಲವೊಂದು ಅಕ್ಷರಗಳನ್ನು ಕೂಡ ನಿಷೇಧಿಸಿದೆ. ಮತ್ತು ಇಟ್ಟಾಗ ಅದರಿಂದ ಆಗುವ ಪರಿಣಾಮಗಳಿಗೆ ಅವನು ಬಾಧ್ಯನಾಗುತ್ತಾನೆ. ಇಕಾರದಿಂದ ಆರಂಭ ಇಡುವಂತೆ ಇಲ್ಲ. ಇಕಾರಾಂತ್ಯ ಇದೆ. ಆದ್ದರಿಂದ ಇಂದ್ರಜಿತು ನಿಷೇಧ. ಈಕಾರ ಬೇಕಾದರೆ ಇಡಬಹುದು. ಇಟ್ಟಾಗ ಅದು ಸಹಜ ಅಲ್ಲ, ಅಸಹಜ. ಅದು ಯಾವುದೂ ಸ್ಥಿರವಲ್ಲ, ಅಸ್ಥಿರ. ನಿರಂತರವಾಗಿ ಅದು ಸದಾ ಚಂಚಲವಾಗಿ ಅಸ್ಥಿರವಾಗಿಯೇ ಇರುತ್ತದೆ. ಹಾಗಾಗಿ ಭೂಲೋಕದ ಮಾನವ ಜೀವಿಗಳಿಗೆ ಹೆಸರಿಡುವಾಗ ಇಕಾರ ಆರಂಭದ ಹೆಸರಿಡುವಂತಿಲ್ಲ ಎನ್ನುವುದೇ ಕರ್ಮ ಸಮುಚ್ಚಯದ ನಿರ್ದೇಶನ. ಗಂಡು ಮಕ್ಕಳಿಗೆ ಎರಡು ಅಕ್ಷರದ ಹೆಸರಿಡುವಂತಿಲ್ಲ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳ ಹೆಸರಿಡಬೇಕು. ಹೆಣ್ಣು ಮಕ್ಕಳಿಗೆ ಎರಡಕ್ಷರದ ಹೆಸರು ಬಲು ವಿಶಿಷ್ಟ. ಸೀತಾ, ರಮಾ, ಉಮಾ ಹೀಗೆ. ಅವರು ಶ್ರೇಷ್ಠರಾಗುತ್ತಾರೆ ಅಂತ ಹೇಳುತ್ತದೆ. ಅವರಿಗೆ ಮೂರಕ್ಷರ ಇಡಬಾರದು ಎಂದೇನಿಲ್ಲ ಆದರೆ ಎರಡಕ್ಷರ ಶ್ರೇಷ್ಠ. ಗಂಡು ಮಕ್ಕಳಿಗೆ ಮೂರಕ್ಷರ ಶ್ರೇಷ್ಠ. ಇವೆಲ್ಲ ಕರ್ಮ ಸಮುಚ್ಚಯದಲ್ಲಿ ಬರುವಂತಹ ಕೆಲವು ಸಿದ್ಧಾಂತಗಳು. ಇದನ್ನು ಪಾಲಿಸಿದವರಲ್ಲಿ ಯಶಸ್ಸನ್ನು ಪಡೆದ ಉದಾಹರಣೆಗಳಿವೆ. ಪಾಲಿಸದಿದ್ದವರು ಬೇಕಾದಷ್ಟು ಅನಾಹುತ, ಸಮಸ್ಯೆಗಳನ್ನು ಅನುಭವಿಸಿದ್ದೂ ಇದೆ. ಹಾಗಾಗಿ ಹೆಸರನ್ನು ಆಯ್ಕೆ ಮಾಡುವಾಗ ಸಾಧ್ಯವಾದಷ್ಟು ಸಂಪ್ರದಾಯಕ್ಕೆ ಹಿತವಾಗತಕ್ಕ, ಸಂಪ್ರದಾಯದಲ್ಲಿ ಬಾಳಿ ಬದುಕಿ ಎತ್ತರಕ್ಕೆ ಏರಿದ ಶ್ರೇಷ್ಠ ಪುರುಷರ, ಅನುಕರಣೆಗೆ ಯೋಗ್ಯರಾದವರ ಹೆಸರನ್ನು ಬಳಸುವುದು ಒಳ್ಳೆಯದು.

ಪ್ರಶ್ನೆ: ಗುರುಗಳೇ, ಇಂದ್ರ ಅಂತ ಇದೆ, ಇಂದಿರಾ ಎಂದೆಲ್ಲ ಹೆಸರಿಡುತ್ತಾರಲ್ಲ. ಈ ಬಗ್ಗೆ ಹೇಳಿ. ಸ್ವಾಮೀಜಿ: ಇಂದಿರಾ ಎನ್ನುವ ಹೆಸರು ಚೆನ್ನಾಗಿದೆಯೇ? ಅವರಿಂದ ಏನು ಆಯಿತು ಹೇಳಿ? ನಿಮಗೆ ಗೊತ್ತೇ ಇದೆಯಲ್ಲ! ಇನ್ನು ಇಂದ್ರ, ಚೆನ್ನಾಗಿದೆಯೇ? ಅವನನ್ನು ಮನುಷ್ಯ ಎಂದು ಹೇಳಲೂ ಸಾಧ್ಯವಿಲ್ಲ. ದೇವಲೋಕದ ಪಟ್ಟ ಒಂದಿರಬಹುದು. ಮೈಯೆಲ್ಲಾ ಕಣ್ಣು. ತುರಿಸಿದರೆ ತುರಿಸಿಕೊಳ್ಳಲೂ ಆಗುವುದಿಲ್ಲ. ಗಾಯ ಆಗುತ್ತದೆ, ಕಣ್ಣಿನಲ್ಲಿ ರಕ್ತ ಬರುತ್ತದೆ. ಅದೂ ಒಂದು ಬದುಕೇ? ಅವನ ಅಧಿಕಾರ ಯಾವತ್ತಾದರೂ ಶಾಶ್ವತ ಆಗಿದೆಯೇ? ಇಂದ್ರ ಪಟ್ಟ ನಿರಂತರ ಚರ. ಯಾರಾದರೂ ಬಂದು ಓಡಿಸುತ್ತಲೇ ಇರುತ್ತಾರೆ. ಹೇಗಾದರೂ ಮಾಡಿ ಪುನಃ ಪಟ್ಟ ಸಿಕ್ಕರೆ ಇನ್ಯಾರಾದರೂ ಬಂದು ಓಡಿಸುತ್ತಾರೆ. ಅಸ್ಥಿರ, ಚರ, ಚಂಚಲ, ಸಮಸ್ಯಾ ಎನ್ನುವುದು ಇಂದ್ರ. ಹಾಗಿದ್ದ ಮೇಲೆ ಇಂದ್ರ ಎನ್ನುವ ಹೆಸರು ಬೇಕೇ?

ಪ್ರಶ್ನೆ: ಸಂಕಲ್ಪಕ್ಕೆ ಆಚಮನ, ಪ್ರಾಣಾಯಾಮ ಮಾಡುವ ಕ್ರಮ ಇದೆ. ಈ ಸಂದರ್ಭದಲ್ಲಿ ಸೇವಾದಾರರಿಗೆ ಪ್ರಾಣಾಯಾಮದ ಸರಿಯಾದ ಕಲ್ಪನೆ ಇರುವುದಿಲ್ಲ. ಮೂಗು ಹಿಡಿದುಕೊಂಡು ಓಂ ಓಂ ಓಂ ಎಂದು ಹೇಳಿ ಎಂದು ಹೇಳುತ್ತೇವೆ. ಪ್ರಾಣಾಯಾಮದ ಸರಿಯಾದ ಕ್ರಮ ತಿಳಿಸಿ. ಸ್ವಾಮೀಜಿ: ಮೂರು ಬಾರಿ ಬಲ ಮೂಗಿನಿಂದ ಉಸಿರನ್ನು ಎಳೆದುಕೊಂಡು ಎಡ ಮೂಗಿನಿಂದ ಉಸಿರನ್ನು ಬಿಡುತ್ತಾ ಸತ್ ಚಿಂತನೆ ಮಾಡುವುದು. ನಾವು ಯಾವ ಪ್ರದೇಶದಲ್ಲಿ ಇದ್ದೇವೆ, ಭುವಃ, ಸುವಹ, ಮಹಹ, ಜನಃ, ತಪಹ, ಇತ್ಯಾದಿ ವಿಶಿಷ್ಟವಾದ ಎತ್ತರ ಎತ್ತರ ಸಾಧನೆ ಮಾಡಿದ ಲೋಕದ ಕೆಳಗೆ ನಾವಿನ್ನೂ ಮರ್ತ್ಯರಾಗಿದ್ದೇವೆ. ಆ ಎತ್ತರಕ್ಕೆ ನಾವು ಏರಬೇಕಾದರೆ ಈ ಪ್ರಾಣಾಯಾಮ, ಉಸಿರು ತೆಗೆದುಕೊಳ್ಳುವುದು ಬಿಡುವುದರ ಸಮತೋಲನವಿದೆ ಪ್ರಕೃತಿಯಲ್ಲಿ ಅದಕ್ಕೆ ನಾವು ಬದ್ಧರು. ಈಗ ಈ ಕಾರ್ಯ ಮಾಡುವುದರಲ್ಲೂ ನಮ್ಮ ಗುರಿ ಅಷ್ಟಿದೆ. ದುರಾಗ್ರಹ, ವಿಕೃತವಾದ ಆಕಾಂಕ್ಷೆಗಳಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಪ್ರಾಣಾಯಾಮ. ಸಂಕಲ್ಪ ಪೂರ್ವದಲ್ಲಿ ಇಡೀ ಲೋಕದ ಎಲ್ಲರ ಕ್ಷೇಮವನ್ನು ಬಯಸುವುವ ದೃಷ್ಟಿಯಲ್ಲಿ ನನ್ನ ಸಂಕಲ್ಪ ಇರಬೇಕು ಎಂದು ಮೊದಲು ಪ್ರಾಣಾಯಾಮ ಮಾಡಿಸುವುದು. ಉಸಿರು ತೆಗೆದುಕೊಂಡು ಹೊರಗೆ ಬಿಡುವಷ್ಟೇ ಪೂರ್ಣವಾದ ಪರಿಪೂರ್ಣತೆಯನ್ನು ನಾನು ಹೊಂದಬೇಕು ಎನ್ನುವುದು. ಅದಕ್ಕೆ ಯೋಚನೆ ಮಾಡುವುದು ಎತ್ತರದ ಲೋಕಗಳನ್ನು. ಅವರೆಲ್ಲ ಯಾಕೆ ಮೇಲೇರಿದರೆಂದರೆ ಈ ಚಿಂತನೆಯಿಂದ. ಅವರೂ ಕೆಲಸ ಮಾಡಿದವರೇ. ಕರ್ಮ ಮಾಡದಿದ್ದರೆ ಜ್ಞಾನ ಸಿದ್ಧಿಯಿಲ್ಲ. ಆದರೆ ಕರ್ಮದ ಹಿನ್ನಲೆ ಹೇಗಿದೆ ಎಂದರೆ ಪ್ರಾಮಾಣಿಕವಾದ ಬೇಡಿಕೆ ಇದೆ ಎಂದರ್ಥ. ಪ್ರಾಮಾಣಿಕವಾದ ಸಹಜ ಬೇಡಿಕೆಯಿಂದ ಕರ್ತವ್ಯ ನಿರ್ವಹಣೆಗಾಗಿ ಈ ಕರ್ತವ್ಯವನ್ನು ಮಾಡುತ್ತಿದ್ದೇನೆ ಅನ್ನುವ ಕಲ್ಪನೆ ಬರಲಿ ಎನ್ನುವ ಉದ್ದೇಶದಿಂದ ಮೂಗನ್ನು ಹಿಡಿದುಕೊಂಡು ಬಲಮೂಗಿನಿಂದ ಉಸಿರನ್ನು ಎಳೆದುಕೊಂಡು ಎಡಮೂಗಿನಿಂದ ಗಾಳಿಯನ್ನು ಬಿಡುತ್ತೀರಿ. ನಂತರ ದೇಶ ಕಾಲಗಳ ಸಂಕೀರ್ತನೆ. ಈಗ ಯಾವ ಕಾಲ. ಅಗಾಧವಾದ ಹಿಂದಿನ ಕಾಲವನ್ನು ಹೇಳಿಕೊಂಡು ಹೋಗುತ್ತದೆ. ನಾವು ಆ ಲೆಕ್ಕದಲ್ಲಿ ಏನೂ ಅಲ್ಲದ ಕ್ಷಣಿಕ ಕಾಲದಲ್ಲಿ ಬದುಕುತ್ತಿರುವವರು. ಎಷ್ಟು ಸಣ್ಣವರು ಎಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ ಕಲ್ಪನೆಯೂ ಅಷ್ಟು ಸಣ್ಣದಾಗಿರಬೇಕು. ದೊಡ್ಡ ಬೇಡಿಕೆ ಇರಲೇಬಾರದು. ಪ್ರಪಂಚದ ವಿಶಾಲತೆಯನ್ನು ಹೇಳುತ್ತದೆ, ಆ ಅಗಾಧತೆಯಲ್ಲಿ ನಾನು ಕುಳಿತ ಜಾಗ ಎಷ್ಟು ಸಣ್ಣದು, ನಮ್ಮ ಅಧಿಕಾರ ವ್ಯಾಪ್ತಿ ಎಷ್ಟಿರಬಹುದು ಎಂಬೆಲ್ಲ ಕಲ್ಪನೆ ಇರಬೇಕು ಎಂಬ ಕಾರಣಕ್ಕಾಗಿ ದೇಶ ಕಾಲಗಳ ಸಂಕೀರ್ತನೆ ಬಂದದ್ದು. ನಂತರ ನಾನು ಏನು ಕಾರ್ಯ ಮಾಡುತ್ತಾ ಇದ್ದೇನೆ, ಅದು ಯಾವ ಉದ್ದೇಶಕ್ಕಾಗಿ, ಆ ಉದ್ದೇಶವು ಸಾರ್ಥಕ ಎಂದು ನಿನಗೆನಿಸಿದರೆ ಅದನ್ನು ನೆರವೇರಿಸು, ಇಲ್ಲದಿದ್ದರೆ ಅದರ ಫಲಾಫಲಗಳೆಲ್ಲ ನಿನಗೆ ಅರ್ಪಣೆ. ಬ್ರಹ್ಮಾರ್ಪಣವಾಗಲಿ ಎನ್ನುವ ಉದ್ದೇಶದಿಂದ ಪ್ರಾಣಾಯಾಮ ಎಂದು ಇರುವುದು. ಯಾವುದೇ ಸಂಕಲ್ಪ ಮಾಡಲಿ ಕೊನೆಗೆ ಬ್ರಹ್ಮಾರ್ಪಣ ಮಾಡುವುದಷ್ಟೇ, ನಾನು ಕೇಳಿದ ವಿಚಾರ ಖಂಡಿತವಾಗಿಯೂ ಇಲ್ಲಿಗೆ ಹಿತಾದಾಯಕವಾ್ದರೆ ಮಾತ್ರ ನನಗೆ ಒದಗಿಸು. ಇಲ್ಲದಿದ್ದರೆ ಎಲ್ಲ ನೀನೇ ಇಟ್ಟುಕೊಂಡುಬಿಡು ಎಂದು ವಾಪಸು ಕೊಡುವುದೇ ಬ್ರಹ್ಮಾರ್ಪಣ. ಅಲ್ಲಿಯವರೆಗೆ ಕರ್ಮಾಂಗದ ಹಿನ್ನಲೆಯಲ್ಲಿ ಸದುದ್ದೇಶ ಇರುತ್ತದೆ. ಹೀಗೆ ಮಾಡಿದರೆ ಮಾತ್ರ ಭುವ ಲೋಕವನ್ನೋ, ಸುವ ಲೋಕವನ್ನೂ, ಸತ್ಯಲೋಕವನ್ನೋ ಏರಲಿಕ್ಕೆ ಸಾಧ್ಯವಾಗುತ್ತದೆ.

ಪ್ರಶ್ನೋತ್ತರ - 3


ಪ್ರಶ್ನೆ: ಬಾಳೆ ಎಲೆಯನ್ನು ಹರಿಯಬಾರದು ಎನ್ನುತ್ತಾರೆ ಏಕೆ? ಸ್ವಾಮೀಜಿ: ಬಾಳೆ ಎಲೆಯು ಒಂದು ಒಳ್ಳೆಯ ಪರಿಕರ. ಈಗ ಊಟಕ್ಕೆ ಬಳಸುವುದಕ್ಕೆ ಮಾತ್ರ ಚಾಲ್ತಿಯಲ್ಲಿದೆ. ಹಿಂದೆ ಅಲ್ಯೂಮಿನಿಯುಮ್, ಸ್ಟೀಲ್ ನಿಂದ ಮಾಡಿದ ಪರಿಕರಗಳು ಇರಲಿಲ್ಲ. ಹಿತ್ತಾಳೆ, ತಾಮ್ರಗಳಿದ್ದರೂ ಬೇಕಾದಷ್ಟು ತಟ್ಟೆ, ದೊನ್ನೆ,ಲೋಟ ಮಾಡಿಕೊಳ್ಳಲು ಅವಕಾಶ ಇರಲಿಲ್ಲ. ಆದರೆ ಬಾಳೆ ಎಲೆಯಿಂದ ಮಾತ್ರ ಇವೆಲ್ಲವನ್ನೂ ಮಾಡಿಕೊಳ್ಳಬಹುದಾಗಿತ್ತು. ಹಾಗಾಗಿ ಹರಿದು ಹಾಳು ಮಾಡುವುದಲ್ಲ, ಸಾಧ್ಯವಿದ್ದರೆ ಬಾಳೆ ಎಲೆಯನ್ನು ಶಾಖಕ್ಕೆ ಒಳಪಡಿಸಿ್ದರೆ ಬಾಡುತ್ತದೆ. ಮೃದುವಾಗುತ್ತದೆ. ದೊನ್ನೆ ಕಟ್ಟಿ ಇಟ್ಟರೆ ಚಹಾ-ಕಾಫಿ ಕುಡಿಯಲು ಬರುತ್ತದೆ. ಹರಿದರೆ ಹಾಳಾಗಿ ಹೋಗುತ್ತದೆ. ಮಿತವಾದ ಬಳಕೆ, ಹಿತ ಬಳಕೆಯ ದೃಷ್ಟಿಯಿಂದ ಬಾಳೆ ಎಲೆ ಹರಿಯಬಾರದು ಎಂದು ಬಂದಿತು. ಬೇರೆ ಚಾಲ್ತಿಯಲ್ಲಿ ಹೇಳುವ ದರಿದ್ರ, ಅನಿಷ್ಟ ಎಂದು ಹೇಳುವುದಲ್ಲ. ಯಾವುದನ್ನೇ ಆಗಲಿ ಹಿತ ಮಿತವಾಗಿ ಬಳಸಬೇಕು, ಅದು ಸದ್ವಿನಿಯೋಗ ಆಗಬೇಕು ಎನ್ನುವ ಉದ್ದೇಶದಿಂದ ಬಾಳೆ ಎಲೆ ಹರಿಯಬಾರದು.

ಪ್ರಶ್ನೆ: ಬಾಳೆ ಎಲೆಯಲ್ಲಿ ಊಟ ಮಾಡುವುದರ ವಿಶೇಷತೆ ಏನು? ಸ್ವಾಮೀಜಿ: ಬಾಳೆ ಎಲೆ ಒಂದು ವಿಶಿಷ್ಟವಾದ ಸಹಜ ಸ್ವಭಾವದ, ಪ್ರಾಕೃತಿಕ ರಾಸಾಯನಿಕ ವಸ್ತುವನ್ನು ಹೊಂದಿದೆ. ನಮ್ಮ ದೇಹದ ಚರ್ಮ ರೋಗವನ್ನು (ಸುಮಾರು ೬೦% ಚರ್ಮ ರೋಗಗಳು) ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಿವಾರಿಸಲು ಸಾಧ್ಯವಿದೆ. ತೀರಾ ಗಂಭೀರವಾದ ಚರ್ಮ ರೋಗಗಳೂ ಕೂಡ ಬಾಳೆ ಎಲೆಯನ್ನು ಕೆಲವೊಂದು ಹಂತದವರೆಗೆ ಬಿಸಿಮಾಡಿದಾಗ, ಅದರ ಮೇಲೆ ಉರುಳುವುದರಿಂದ ಕೂಡ ಗುಣ ಆಗುತ್ತದೆ. ನಿಮ್ಮಲ್ಲಿ ಮಡೆ ಸ್ನಾನ ಎಲ್ಲ ಬಂದದ್ದು ಇದೇ ಕಾರಣಕ್ಕಾಗಿ. ಬಿಸಿ ಅನ್ನ ಹಾಕಿದಾಗ ಬಾಳೆ ಎಲೆ ಒಂದು ಸ್ವಲ್ಪ ಬೇಯುವುದನ್ನು ನೀವು ನೋಡಿರಬಹುದು. ಆ ಕಾಲದಲ್ಲಿ ಚರ್ಮರೋಗಗಳನ್ನು ಗುಣಪಡಿಸುವ ರಾಸಾಯನಿಕಗಳು ಬಾಳೆ ಎಲೆಯಿಂದ ಬಿಡುಗಡೆಯಾಗುತ್ತವೆ. ಆಗ ಅದರ ಮೇಲೆ ಉರುಳುವುದರಿಂದ ಅದು ಮೈಯ್ಯ ಮೇಲೆ ಲೇಪಿಸಲ್ಪಡುತ್ತವೆ. ಹಾಗಾಗಿ ಅದು ಔಷಧಿಯಂತೆ ಕೆಲಸ ಮಾಡುತ್ತದೆ. ಅದಕ್ಕಾಗಿ ಮಡೆ ಸ್ನಾನ ಬಳಕೆಗೆ ಬಂತು. ಹಾಗೇ ಊಟ ಮಾಡುವುದರಿಂದ ಈ ರಾಸಾಯನಿಕಗಳು ನಮ್ಮ ಹೊಟ್ಟೆ ಸೇರುತ್ತದೆ. ಅವು ಚರ್ಮಕ್ಕೆ ಬರುವ ಹಲವಾರು ರೋಗಗಳನ್ನು ಪರಿಹಾರ ಮಾಡಿ ಬಿಡುತ್ತವೆ. ಅದಕ್ಕಾಗಿ ಬಾಳೆ ಎಲೆ ಊಟಕ್ಕೆ ಬಹಳ ಮಹತ್ವ ನೀಡಿದರು. ಪೂರ್ವ ಹಾಗೂ ಪಶ್ಚಿಮ ಕರಾವಳಿ ಎರಡೂ ಕಡೆ ಬಾಳೆ ಎಲೆ ಊಟದ ಕ್ರಮ ಇದೆ. ಅತೀ ಹೆಚ್ಚು ತಮಿಳುನಾಡಿನಲ್ಲಿ ಇದೆ. ಇಲ್ಲಿಯಾದರೂ ತಟ್ಟೆಯಲ್ಲಿ ಊಟದ ಪದ್ಧತಿ ಇದೆ. ವಿಶೇಷ ಅತಿಥಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕುತ್ತಾರೆ. ಆದರೆ ತಮಿಳುನಾಡಿನಲ್ಲಿ ಯಾರೇ ಬಂದರೂ ಬಾಳೆ ಎಲೆಯಲ್ಲೇ ಊಟ. ಏಕೆಂದರೆ ಅದು ಎರಡು ಸಮುದ್ರಗಳು ಕೂಡುವ ಪ್ರದೇಶ. ಕರಾವಳಿ ಜಾಸ್ತಿ. ಅಲ್ಲಿ ಚರ್ಮ ರೋಗ ಭಾಧೆಗಳೂ ಹೆಚ್ಚು. ಚರ್ಮ ಸುಡುವುದೂ ಹೆಚ್ಚು. ಅದಕ್ಕೇ ಅಲ್ಲಿನ ಜನ ಕಪ್ಪಗಿರುತ್ತಾರೆ. ಸುಡುವಿಕೆಯಿಂದ ರೋಗಗಳ ಆಕ್ರಮಣ ಹೆಚ್ಚಾಗುವುದು ಸಾಮಾನ್ಯ. ಅದಕ್ಕಾಗಿ ಬಾಳೆ ಎಲೆ ಉಪಸಂಹಾರ, ಒಂದು ಪರಿಹಾರ. ಅದಕ್ಕಾಗಿ ಬಾಳೆ ಎಲೆ ಊಟವನ್ನು ವಿಶೇಷವಾಗಿ ಹೇಳಿದರು. ಆ ಕಡೆ ಬಂಗಾಳದ ವರೆಗೂ ಬಾಳೆ ಎಲೆ ಇದ್ದರೆ, ಈ ಕಡೆ ಗುಜರಾತಿನ ವರೆಗೂ ಬಾಳೆ ಎಲೆ ಊಟ ಇದೆ. ಆದ್ದರಿಂದ ಇಲ್ಲಿಯ ವಾತಾವರಣದ ಪರಿಣಾಮವನ್ನು ಯಾವುದೇ ಚಿಕಿತ್ಸೆ ಇಲ್ಲದೆ ಪರಿಹರಿಸಬಹುದಾಗಿದೆ.

ಪ್ರಶ್ನೆ: ಉತ್ತರ ಭಾರತದ ಕಡೆ ಹೋದರೆ ಯಾವುದೇ ಧಾರ್ಮಿಕ ಕಾರ್ಯ ಮಾಡುವಾಗಲೂ, ದೇವಸ್ಥಾನಕ್ಕೆ ಹೋಗುವಾಗಲೂ ಅಂಗಿ ಧರಿಸಬಹುದು. ದಕ್ಷಿಣ ಭಾರತದಲ್ಲಿ ಈ ಕ್ರಮ ಇಲ್ಲ. ಏಕೆ? ಸ್ವಾಮೀಜಿ: ಇವೆಲ್ಲ ಪ್ರಾದೇಶಿಕ ವಾತಾವರಣ ಕಾರಣವಾದ ನಿಯಮಗಳು. ಉತ್ತರ ಭಾರತಕ್ಕೆ ನೀವು ತಿರುಗಾಡಲು, ಪ್ರವಾಸಕ್ಕೆ ಹೋಗುವಾಗ ಪ್ರವಾಸಿ ಏಜೇಂಟ್ ಗಳ ಸಲಹೆ ಪಡೆದೇ ಹೋಗಿರುತ್ತೀರಿ. ಅವರು ಪ್ರಶಸ್ತವಾದ, ಅನುಕೂಲಕರವಾದ ವಾತಾವರಣ ಇದ್ದಾಗ ಮಾತ್ರ ಹೋಗಲು ಸಲಹೆ ನೀಡುತ್ತಾರೆ. ಹಾಗಾಗಿ ನೀವು ಹೋಗುವಾಗ ಆ ಪ್ರದೇಶಗಳು ಹಿತಕರವಾಗಿಯೇ ಇರುತ್ತವೆ. ನಿಮಗೆ ವಾತಾವರಣದ ವೈಪರೀತ್ಯಗಳ ಬಗ್ಗೆ ಅರಿವು ಉಂಟಾಗುವುದಿಲ್ಲ. ಉತ್ತರ ಭಾರತದಲ್ಲಿ ತೀರಾ ಶೀತ, ಕೆಲವೊಮ್ಮೆ ಮನುಷ್ಯ ಮರಗಟ್ಟಿ ಹೋಗುವ ಸಂದರ್ಭಗಳೂ ಬರುತ್ತವೆ. ಹಾಗಾಗಿ ಆಚ್ಚಾದನೆ ಬಹಳ ಅಗತ್ಯ. ಯಾವುದೇ ಒಂದು ಪೂಜೆ ಮಾಡಬೇಕಾದರೆ ಮೊದಲಿಗೆ ಬೇಕಾದ್ದು ಮನಸ್ಸಿಗೆ ಹಿತ, ದೇಹಕ್ಕೆ ಹಿತ. ಅದಿಲ್ಲದೆ ಪೂಜೆ ಮಾಡುವುದು ಸಾಧ್ಯವಿಲ್ಲ. ಉದಾಹರಣೆಗೆ ಮಂಗಳಾರತಿ ಎತ್ತುವಾಗ ಮೈ ತುರಿಕೆ ಉಂಟಾದರೆ ಗಂಟೆಯನ್ನು ಬಿಟ್ಟು ಮೈ ತುರಿಸಿಕೊಳ್ಳುತ್ತೇವೆ. ಏಕೆಂದರೆ ಅಲ್ಲಿ ಮೈಗೆ ಹಿತವಾಗಲಿಲ್ಲ. ಮೈಗೆ, ಮನಸ್ಸಿಗೆ ಹಿತವಾಗುವಾಗ ಮಾತ್ರ ಶ್ರದ್ಧೆ ಮೂಡಲಿಕ್ಕೆ ಸಾಧ್ಯ. ಹಾಗಾಗಿ ಉತ್ತರ ಭಾರತದಲ್ಲಿ ಆಚ್ಚಾದನೆ ಇದ್ದರೆ ಚಳಿಯ ಭಾಧೆಯ ಸಮಸ್ಯೆಯಾಗುವುದಿಲ್ಲ. ಹಾಗಾಗಿ ಅವನಿಗೆ ಮೈಗೆ ಹಿತವಾಗುತ್ತದೆ. ಹಾಗೆಯೆ ಮನಸ್ಸಿಗೂ ಹಿತವಾಗಿರುತ್ತದೆ. ಹಾಗಾಗಿ ಬಟ್ಟೆ ಇದ್ದರೆ ಆಕ್ಷೇಪ ಇಲ್ಲ. ಅದೇ ಇಲ್ಲಿ ಸೆಖೆ ಇರುವಾಗ ಮೇಲಿನ ಬಟ್ಟೆ ಕಳಚಿ ಪೂಜೆ ಮಾಡಿದರೆ ದೇಹಕ್ಕೆ ಹಿತವೆನ್ನಿಸುತ್ತದೆ. ಹಾಗಾಗಿ ಇಲ್ಲಿನ ವಾತಾವರಣದಿಂದಾಗಿ ಆಚ್ಚಾದನೆಯಿಂದ ಮೈ ಬೆವರುತ್ತದೆ. ಆ ಬೆವರು ದುರ್ಗಂಧಯುಕ್ತವಾಗಿರಬಹುದು. ಇತರರಿಗೂ ಹಿಂಸೆಯಾಗುತ್ತದೆ. ಅವನಿಗೂ ಹಿಂಸೆಯಾಗುತ್ತದೆ. ಹಾಗಾಗಿ ಒಂದು ಸಾರಿ ಚೆನ್ನಾಗಿ ಸ್ನಾನ ಮಾಡಿಕೊಂಡು ಪೂಜೆಗೆ ಹೊರಡುತ್ತಾರೆ. ಇಲ್ಲಿ ಸ್ನಾನವು ಮುಖ್ಯ, ಆದರೆ ಉತ್ತರ ಭಾರತದಲ್ಲಿ ಹಲವು ಪೂಜೆಗಳಲ್ಲಿ ಸ್ನಾನವೇ ಮಾಡುವುದಿಲ್ಲ. ಬಂದ ಕೂಡಲೇ ಪೂಜೆ ಮಾಡಿಸುತ್ತಾರೆ. ಸ್ನಾನ ಮಾಡಿದ್ದೀಯಾ ಎಂದು ಕೇಳ್ಳುವುದೇ ಇಲ್ಲ. ಆದರೆ ಇಲ್ಲಿ ಮೈಗೆ ಹಿತವಾಗಲಿ ಎಂದು ಮೊದಲು ಸ್ನಾನ ಮಾಡಿಕೊಂಡು ಬಾ ಎನ್ನುತ್ತಾರೆ. ಮನಸ್ಸಿಗೆ ಪ್ರಫುಲ್ಲತೆ, ಆಹ್ಲಾದತೆ ಬರುತ್ತದೆ. ಆಗ ಪೂಜೆಯಲ್ಲಿ ಶ್ರದ್ಧೆ ಬರುತ್ತದೆ ಎಂದರ್ಥ. ಈ ಬಟ್ಟೆಗಳ ವಿಷಯ ತಂತ್ರದ ನಿರ್ಬಂಧವಲ್ಲ.

ಪ್ರಶ್ನೆ: ಕೋಪ ತಾಪಗಳ ನಿಯಂತ್ರಣ ಹೇಗೆ ಸಾಧ್ಯ? ಸ್ವಾಮೀಜಿ: ಏನೇನೋ ಮಾಡುತ್ತೇನೆ ಎಂದು ಬಹಳ ಎತ್ತರಕ್ಕೆ ಏರಿದ ಸಾಧು-ಸಂತರಿಗೇ ಆಗಲಿಲ್ಲ. ಅವರೇ ಅದನ್ನು ಬಹಳ ಕಷ್ಟ ಎಂದು ಹೇಳಿಬಿಟ್ಟಿದ್ದಾರೆ. ಕೋಪವೆಂಬುದ ತಿಳಿ ಪಾಪದ ನೆಲೆಗಟ್ಟು ಎಂದರು. ಅಷ್ಟು ಬಿಟ್ಟರೆ ಅದಕ್ಕೆ ಪರಿಹಾರ ಏನು ಎಂದು ಹೇಳಲೇ ಇಲ್ಲ. ಕೋಪ ಕಡಿಮೆ ಮಾಡಿಕೊಳ್ಳಬಹುದು ಆದರೆ ಹೇಗೆ ಎಂದು ಹೇಳಲೇ ಇಲ್ಲ. ಯಾವಾಗ ಅಸಹನೆಗೆ ಕಾರಣವಾಗುವ ಪರಿಸರ ಇರುತ್ತದೆ, ಅದು ಸಹಜವಾಗಿ ಕೋಪವನ್ನು ಉತ್ತೇಜಿಸುತ್ತದೆ. ನಮ್ಮ ಪೂರ್ವಿಕರು ಅದಕ್ಕೆ ಬೇಕಾದಷ್ಟು ಸಂಶೋಧನೆಗಳನ್ನು ಮಾಡಿ ಕೆಲವು ಸಾತ್ವಿಕ ಆಹಾರಗಳನ್ನು ತಿಳಿಸಿದರು. ಅಲ್ಲಿಯೂ ಕೂಡ, ಅವು ನರಗಳನ್ನು ಪ್ರಚೋದಿಸುವುದಿಲ್ಲ. ಆದ ಕಾರಣದಿಂದ ಕೋಪ ಬರುವುದಿಲ್ಲ ಎಂದರು. ಹಾಗಾಗಿ ಸಾತ್ವಿಕ ಆಹಾರಗಳಿಗೆ ಬಲು ಪ್ರಾಮುಖ್ಯತೆಯನ್ನು ಕೊಟ್ಟರು. ಸಾತ್ವಿಕ ಕಾಲಗಳನ್ನು ಹೇಳಿದರು. ಬೆಳಿಗ್ಗೆ ಬೇಗ ಪೂಜೆಗಳನ್ನು ಮಾಡುವಂತಹದ್ದು ಅಥವಾ ಸೂರ್ಯ ಮುಳುಗಿದ ಪ್ರಥಮ ಮುಹೂರ್ತ ಕಾಲದಲ್ಲಿ, ಅಂದರೆ ಗೋಧೂಳಿಯಲ್ಲಿ ಪೂಜೆ ಮಾಡುವಂತಹದ್ದು. ಆಗಲೂ ಕೂಡ ಸಾತ್ವಿಕತೆ ಇರುತ್ತದೆ ಎನ್ನುವ ಅರ್ಥದಲ್ಲಿ. ಯಾವುದೇ ಪೂಜಾ ಕೈಂಕರ್ಯಗಳನ್ನು ಮಾಡುವಾಗ ಸಿಟ್ಟು ಖಂಡಿತ ಬರಬಾರದು. ಆದರೆ ಸ್ವಭಾವ ಸಹಜವಾಗಿ ಸಿಟ್ಟು ಬಂದುಬಿಡುತ್ತದೆ. ಇದಕ್ಕೆ ಕಾರಣ ಮನಸ್ಸಿಗೆ ಅಗತಕ್ಕ ಕಿರಿಕಿರಿ. ಅದನ್ನು ಸರಿಪಡಿಸಲು ಬೇಕಾದ ವ್ಯವಸ್ಥೆಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು. ನಮ್ಮಲ್ಲಿ ಕರ್ಮ ಸಮುಚ್ಚಯದಲ್ಲಿ ಪೂರ್ವ ಸಿದ್ಧತೆಯ ಬಗ್ಗೆ ಬಹಳ ವಿಸ್ತಾರವಾಗಿ ಹೇಳುತ್ತದೆ. ಏಕೆಂದರೆ ಎಲ್ಲ ಸಿದ್ಧವಾಗಿದ್ದರೆ ಅಲ್ಲಿ ಅಲಾಪದ ಚಿಂತನೆ ಬರುವುದಿಲ್ಲ. ಹಾಗಾಗಿ ಸಿಟ್ಟು ಬರುವುದಿಲ್ಲ ಎಂದು. ಎಷ್ಟು ಹೂ ಬೇಕು, ಎಷ್ಟು ಗಂಧ ಬೇಕು ಇತ್ಯಾದಿ ಎಲ್ಲವನ್ನೂ ಪೂರ್ವದಲ್ಲೇ ಸಿದ್ಧಮಾಡಿಟ್ಟುಕೊಂಡು ಪೂಜೆಗೆ ಕೂರಬೇಕು ಎಂದು ಹೇಳುತ್ತದೆ. ಈ ಹಿನ್ನಲೆಯಲ್ಲಿ ಒಂದು ವಸ್ತು ಇಲ್ಲ ಎಂದಾಗ ಸಹಜವಾಗಿ ಖೇದವಾಗುತ್ತದೆ, ಅದನ್ನು ತಂದು ಕೊಡಬೇಕಾದವನು ತಂದು ಕೊಡಲಿಲ್ಲ ಎನ್ನುವ ಭಾವ ಹುಟ್ಟುತ್ತದೆ. ಅದರಿಂದಾಗಿ ಸಿಟ್ಟು ಬರಲು ಸಾಧ್ಯವಾಗುತ್ತದೆ. ಒಟ್ಟಾರೆ ಇವೆಲ್ಲ ಸಾಧ್ಯವಾದಷ್ಟು ಪೂರ್ವ ಸಿದ್ಧತೆಯಿಂದ, ಸಾಧನೆಯಿಂದ ಸಿಟ್ಟನ್ನು ಉಪಶಮನ ಮಾಡಿಕೊಳ್ಳಬೇಕು ಎನ್ನುವುದು ಇದರ ಅರ್ಥ. ಅಷ್ಟು ಬಿಟ್ಟರೆ ಸಿಟ್ಟನ್ನು ಗೆಲ್ಲುವುದಕ್ಕೆ ಮದ್ದು ಇಲ್ಲ. ಯಾವುದೇ ಔಷಧದಿಂದ ಸಿಟ್ಟನ್ನು ಗೆಲ್ಲಲಿಕ್ಕೆ ಸಾಧ್ಯವಿಲ್ಲ ಅಥವಾ ಒಂದು ಸರಳವಾದ ಸೂತ್ರ ಎಂಬುವುದಿಲ್ಲ. ಶ್ರಮದಿಂದ ಷಡ್ ವೈರಿಗಳನ್ನು ಜಯಿಸಿಕೊಳ್ಳಬೇಕು. ದೇವರನ್ನು ಕಾಣಬೇಕು ಎಂದು ಹೇಳುತ್ತದೆ. ಷಡ್ ವೈರಿಗಳನ್ನು ಜಯಿಸಿದರೆ ದೇವರನ್ನು ಸುಲಭವಾಗಿ ಕಾಣಬಹುದು. ಆದರೆ ಷಡ್ ವೈರಿಗಳನ್ನು ಜಯಿಸುವುದು ಮಾತ್ರ ಬಲು ಕಷ್ಟ.

ಪ್ರಶ್ನೆ: ಏಕಾಗ್ರತೆಯನ್ನು ಹೊಂದಲು ಏನಾದರೂ ಉಪಾಯ ಇದೆಯೇ? ಸ್ವಾಮೀಜಿ: ಏಕಾಗ್ರತೆಯನ್ನು ಸಾಧನೆ ಮಾಡುವಂತಹ ಬೇರೆ ಬೇರೆ ವಿಧಾನಗಳನ್ನು, ಧ್ಯಾನ ಇತ್ಯಾದಿ ಪ್ರಕ್ರಿಯೆಗಳನ್ನೆಲ್ಲ ಏಕಾಗ್ರತೆ ಸಾಧಿಸುವ ವಿಧಾನದಲ್ಲಿ ಹೇಳಿಕೊಂಡು ಹೋಗುತ್ತದೆ. ಹಾಗೆಯೆ ಮನನವು ಕೂಡ ಏಕಾಗ್ರತೆಯನ್ನು ಕೊಡುತ್ತದೆ ಎಂದು ಹೇಳುತ್ತದೆ. ನಾನು ಕಂಡಂತೆ ಮನನವು ಬಹಳ ಸುಲಭವಾಗಿ ಏಕಾಗ್ರತೆಯನ್ನು ತಂದು ಕೊಡುತ್ತದೆ. ನೀವೊಂದು ಭಜನೆಯನ್ನು ಮೊದಲು ಓದಿ ಬಾಯಿಪಾಠ ಮಾಡಿಕೊಳ್ಳಿ. ಅದನ್ನು ಅಕ್ಷರ ಅಕ್ಷರವಾಗಿ ಬಿಡಿಸಿ ಹೇಳಿಕೊಳ್ಳುವಷ್ಟು ಬಾಯಿಪಾಠ ಮಾಡಿಕೊಳ್ಳಬೇಕು. ನಂತರ ಅದನ್ನು ಬಾಯಿಯಲ್ಲಿ ಹೇಳಬಾರದು. ಮನಸ್ಸಿನಲ್ಲಿ ಆ ಭಜನೆಯನ್ನು ಕಲ್ಪಿಸಿಕೊಳ್ಳುತ್ತಾ ಹೋಗಬೇಕು. ಆಗ ಏಕಾಗ್ರತೆ ಸಿಗುತ್ತದೆ. ಏಕೆಂದರೆ ಮನಸ್ಸಿಗೆ ಬೇರೆ ಕಡೆ ಹೋಗಲಿಕ್ಕೆ ಆಗುವುದಿಲ್ಲ. ಆಲೋಚನೆ ಮಾಡಿ ನೋಡಿ. ತುಂಬಾ ಸರಳವಾಗಿ ಮನನದಿಂದ ಸಾಧ್ಯ ಎನ್ನುವುದನ್ನು ಹಲವು ಕಡೆ ಪ್ರಯೋಗ ಮಾಡಿ ಕೂಡ ನೋಡಿದ್ದೇನೆ. ಯಾವುದೇ ಒಂದು ವಿಚಾರವನ್ನು ನೀವು ಸ್ಪಷ್ಟವಾಗಿ ಹೇಳುವಷ್ಟು ಕಳಿತಿಕೊಳ್ಳಬೇಕು. ನಂತರ ಅದನ್ನು ಬಾಯಿಯಲ್ಲಿ ಉಚ್ಚರಿಸದೆ ಮನಸ್ಸಿನಲ್ಲೇ ಹೇಳುವ ಅಭ್ಯಾಸವನ್ನು ಮಾಡಿದರೆ ಆಗ ಮಾತ್ರ ಮನಸ್ಸನ್ನು ಕೇಂದ್ರೀಕರಿಸಲು ಆಗುತ್ತದೆ. ಇಡೀ ಬಾಹ್ಯ ಪ್ರಪಂಚದ ಎಲ್ಲ ಶಬ್ದ ವಿಕಾರಗಳನ್ನೂ ಮೆಟ್ಟಿ ನಿಲ್ಲಲು ಸಾಧ್ಯವಾಗುತ್ತದೆ. ಬೇರೆ ಯಾವುದರಿಂದ ಸಾಧ್ಯವಾಗದ್ದೂ ಇದರಿಂದ ಸಾಧ್ಯವಿದೆ. ಪ್ರಯತ್ನಿಸಿ ನೋಡಿ.

ಪ್ರಶ್ನೆ: ಪ್ರತಿದಿನ ದೇವರ ಧ್ಯಾನ ಮಾಡುವುದು ಉತ್ತಮವೇ? ಅಥವಾ ಕ್ಷೇತ್ರಗಳಿಗೆ ಹೋಗುವುದು ಉತ್ತಮವೇ? ಸ್ವಾಮೀಜಿ: ನಾವು ನೆಲೆಸಿದ ಊರು ಕ್ಷೇತ್ರ ಎಂದು ಅರ್ಥವಲ್ಲ. ಅದು ಕ್ಷೇತ್ರವೇ ಆಗಿದ್ದರೂ ಆ ಊರಿನಲ್ಲಿರುವ ದೇವಸ್ಥಾನಕ್ಕೆ ಹೋಗುವುದು ನಮ್ಮ ಕರ್ತವ್ಯ. ಅದು ಕ್ಷೇತ್ರ ಯಾತ್ರೆ ಆಗುವುದಿಲ್ಲ. ಹಾಗೆಯೆ ನೀವು ನಿಮ್ಮ ಮನೆಯಲ್ಲಿ ಮಾಡುವ ಪೂಜೆಯು ಕೂಡ ನಿಮ್ಮ ಕರ್ತವ್ಯ. ಅದು ಫಲದಾಯಕವಲ್ಲ. ಅಷ್ಟು ಮಾತ್ರವಲ್ಲ. ಹಿಂದೆಲ್ಲ ಗೋಮಾಳಗಳಿದ್ದವು. ಅಲ್ಲಿಗೆ ಹೋಗುವುದು ಕೂಡ ಕರ್ತವ್ಯವಾಗಿತ್ತು. ಹಿಂದೆ ಅಗ್ರಹಾರಗಳಿದ್ದವು. ಉಪಾಸನೆಗಳನ್ನು ನಿರಂತರವಾಗಿ ಮಾಡುವ ಬ್ರಾಹ್ಮಣರಿದ್ದರು. ಬ್ರಹ್ಮ ವೃತ್ತಿಯನ್ನೇ ಅನುಸರಣೆ ಮಾಡುವ, ಉಪಾಸನೆಗಳನ್ನು ಮಾಡುವ ಜನರನ್ನು ಪ್ರತ್ಯೇಕವಾಗಿ ಇಡುತ್ತಿದ್ದರು. ಅದನ್ನು ಅಗ್ರಹಾರ ಎನ್ನುತ್ತಿದ್ದರು. ಅಲ್ಲಿಗೂ ಹೋಗಬೇಕಿತ್ತು. ಅದು ಸಾರ್ವಜನಿಕರ ಕರ್ತವ್ಯವಾಗಿತ್ತು. ಅಲ್ಲೆಲ್ಲ ಒಂದೊಂದು ರೀತಿಯ ಕರ್ತವ್ಯಗಳನ್ನು ಹೇಳಿದ್ದಾರೆ. ಅಗ್ರಹಾರಕ್ಕೆ ಹೋದರೆ ಅಲ್ಲಿನ ಉಪಾಸನೆಗೆ ಬೇಕಾದ ವಸ್ತುಗಳ ಅಗತ್ಯ ಇದೆಯೇ, ಏನಾದರೂ ಸಾಮಗ್ರಿಗಳು ಬೇಕೇ ಎಂದು ಕೇಳಿ ಪೂರೈಸುವುದು ಸಮಾಜದ ಜವಾಬ್ದಾರಿಯಾಗಿತ್ತು. ಹಾಗೆಯೆ ಮನೆ ದೇವರ ಪೂಜೆ ಮಾಡುವುದು ಮನೆಯಲ್ಲಿ ಎಲ್ಲರಿಗೆ ರಕ್ಷಣೆ ಕೊಡುವ ಯಜಮಾನನಿಗೆ ರಕ್ಷಣೆ ಬೇಡುವುದಕ್ಕಾಗಿ. ಆತ ದೇವರನ್ನೇ ಕೇಳಬೇಕು, ಆತನಿಗೆ ಆಪತ್ತು ಬಂದಾಗ ಕೇಳಲಿಕ್ಕೆ ಯಾರೂ ಇಲ್ಲ. ಹೆಂಡತಿ, ಮಕ್ಕಳು, ಆಶ್ರಿತರೆಲ್ಲರೂ ಸಮಸ್ಯೆ ಬಂದಾಗ ಯಜಮಾನನನ್ನು ಕೇಳಬಹುದು. ಆದರೆ ಯಜಮಾನನಿಗೆ ಸಮಸ್ಯೆ ಬಂದಾಗ ಅವನು ದೇವರನ್ನೇ ಕೇಳಬೇಕಾಗುತ್ತದೆ. ಹಾಗಾಗಿ ದೇವರ ಪೂಜೆ ತನ್ನ ವಯಕ್ತಿಕ ಅಗತ್ಯಕ್ಕಾಗಿ ಬೇಕು. ಹಾಗೆಯೇ ಗ್ರಾಮ ದೇವರ ಪೂಜೆ. ಇಡೀ ಗ್ರಾಮದಲ್ಲಿ ಅಗತಕ್ಕ ಯಾವುದೇ ಉತ್ಪಾತವೂ ಗ್ರಾಮದ ಸದಸ್ಯನಾಗಿ ಆತನಿಗೂ ತಟ್ಟಬಹುದು. ನೆರೆ, ಜ್ವಾಲಾಮುಖಿ ಇತ್ಯಾದಿಗಳು ಅವನಿಗೂ ಭಾಧಕವಾಗಬಹುದು. ಅದನ್ನು ತಡೆಯಲಿಕ್ಕೆ ಇರುವಂತಹವು ಗ್ರಾಮ ದೇವಸ್ಥಾನಗಳು. ಹಾಗಾಗಿ ಪ್ರತಿಯೊಬ್ಬ ಸಾರ್ವಜನಿಕನೂ ನಿತ್ಯವೂ ಹೋಗಿ ಆ ರೀತಿ ಉತ್ಪಾತಗಳು ಆಗದಂತೆ ಬೇಡಿಕೊಳ್ಳುವುದೇ ಯಾವುದೇ ದೇವಸ್ಥಾನದ ನಿರ್ಮಾಣದ ಉದ್ದೇಶವಾಗಿದೆ. ಅಲ್ಲಿ ವಯಕ್ತಿಕ ಲಾಭದ ಉದ್ದೇಶ ಇಲ್ಲ. ಅಲ್ಲಿ ಎಲ್ಲರ ಕ್ಷೇಮವನ್ನು ಬಯಸಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಎಲ್ಲರೂ ಎನ್ನುವಾಗ ನಾನೂ ಇರುತ್ತೇನೆ ಎಂದು ಅರ್ಥ. ಲೋಕಾ ಸಮಸ್ತಾ ಸುಖಿನೋ ಭವಂತು ಎಂದಾಗ ನನ್ನನ್ನು ಬಿಟ್ಟು ಎಂದು ಹೇಳಿರುವುದಿಲ್ಲ. ನಾನೂ ಲೋಕದಲ್ಲಿ ಇರುವುದರಿಂದ ನನಗೂ ಕ್ಷೇಮ ಆಗುತ್ತದೆ ಎಂದು ಅರ್ಥ. ಹಾಗೆಯೇ ಸಮೃದ್ಧಿಯ ಸಂಕೇತವಾದ ಗೋಮಾಳ. ಅಲ್ಲಿಗೂ ಕೂಡ ದಿವಸವೂ ಭೇಟಿ ಕೊಡಬೇಕು ಎಂದು ಹೇಳಲಾಗಿದೆ. ಎಷ್ಟೇ ಮುಂದುವರಿದ ಜ್ಞಾನ, ತಿಳುವಳಿಕೆ ಇದ್ದರೂ ಪ್ರಕೃತಿಯಲ್ಲಾಗುವ ಕೆಲವು ಏರು ಪೇರುಗಳು, ಆಹಾರ ಇತ್ಯಾದಿ ಸಹಜವಾಗಿ ಸಿದ್ಧಿಯಾಗಬೇಕಾದ ವಸ್ತುಗಳ ಕೊರತೆ ಉಂಟಾಗುವುದು, ಮೊದಲು ಕಂಡು ಬರುವುದು ಗೋಮಾಳದಲ್ಲಿ. ಯಾರು ಗೋವನ್ನು ದಿನವೂ ನೋಡುತ್ತಾನೋ ಅವನಿಗೆ ಇನ್ನು ಆರು ವರ್ಷಗಳ ನಂತರ ಬರಬಹುದಾದ ಬರದ ಸೂಚನೆ ಮೊದಲೇ ಗೊತ್ತಾಗಿರುತ್ತದೆ. ತಿನ್ನಲಿಕ್ಕೆ ಅನ್ನ ಸಿಗಲಿಕ್ಕೆ ಇಲ್ಲ ಎಂದು ಮೊದಲೇ ಗೊತ್ತಾಗುತ್ತದೆ. ಅಷ್ಟು ಮಟ್ಟಿಗೆ ಗೋಮಾಳ ಪ್ರದೇಶ ಜ್ಞಾನವನ್ನು ಕೊಡುತ್ತದೆ. ಅದಕ್ಕೆ ಗ್ರಾಮಸ್ಥರು ಪ್ರತಿನಿತ್ಯ ಗೋಮಾಳಕ್ಕೆ ಭೇಟಿ ಕೊಡಬೇಕೆಂದಿತ್ತು. ಮುಂದೆ ಈ ಪದ್ಧತಿ ಬೇರೆ ಬೇರೆ ಆಚರಣೆಗಳಲ್ಲಿ ಕಂಡು ಬಂತು. ಕೊನೆಗೆ ಬೆಳಗೆದ್ದು ಶೌಚಕ್ಕೆ ಗೋಮಾಳಕ್ಕೆ ಹೋಗುವುದು ಎಂದಾಯಿತು. ಹಿಂದೆ ತಾಮ್ರದ ಪಾತ್ರೆಯನ್ನು ಹಿಡಿದುಕೊಂಡು ದೂರ ಗೋಮಾಳ ಪ್ರದೇಶಕ್ಕೆ ಶೌಚಕ್ಕಾಗಿ ಹೋಗುತ್ತಿದ್ದರು. ಈ ದೃಷ್ಟಿಯಿಂದಲಾದರೂ ಜನ ಒಮ್ಮೆ ಗೋಮಾಳಕ್ಕೆ ಹೋಗಿ ಬರಲಿ ಎಂಬುದು ಕಾರಣವಾಗಿತ್ತು. ಈಗ ಶೌಚಾಲಯ ಮನೆಯಲ್ಲೇ ಇದೆ. ಆದ್ದರಿಂದ ಗೋಮಾಳಕ್ಕೆ ಹೋಗುವ ಪದ್ಧತಿ ಇಲ್ಲ. ಇಂತಹ ಜ್ಞಾನಾರ್ಜನೆಯನ್ನು ಬಿಟ್ಟದ್ದು ನಾವು ಮಾಡಿಕೊಂಡ ನಷ್ಟವೇ ಆಗಿದೆ. ಈಗಿನ ಕಾಲದಲ್ಲಿ ಗೋಮಾಳ ವ್ಯವಸ್ಥೆ ಇಲ್ಲ. ಎಲ್ಲಾ ದೊಡ್ಡ ಬಿಲ್ದರ್ ಗಳ ಪಾಲಾಗಿದೆ. ಸಾಧ್ಯವಾದರೆ ನಿಮ್ಮ ಸುತ್ತ ಮುತ್ತ ಯಾರಾದರೂ ದನ ಸಾಕುವವರಿದ್ದಾರೆ ದಿನವೂ ಒಂದು ಸಾರಿ ದನದ ಮುಖ ನೋಡಿ ಬಂದರೆ ಖಂಡಿತವಾಗಿಯೂ ಯಾವುದಾದರೊಂದು ಸಂದರ್ಭದಲ್ಲಿ ಅದು ರಕ್ಷಣೆ ಕೊಟ್ಟು ಬಿಡುತ್ತದೆ. ಆಪತ್ತಿನಿಂದ ಕಾಯುತ್ತದೆ. ಆದ್ದರಿಂದ ನಾಲ್ಕೂ ಸತ್ಸಂಪ್ರದಾಯಗಳನ್ನು ಪಾಲಿಸಬೇಕು. ಜೊತೆಗೆ ಮನೆಗೆ ಬಂದ ಮೇಲೆ ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ ಅವರ ಅಗತ್ಯತೆಗಳನ್ನು ವಿಚಾರಿಸಿ, ಅವರಿಗೆ ನಮಸ್ಕರಿಸಿ ತನ್ನ ಕಾರ್ಯದಲ್ಲಿ ತೊಡಗಬೇಕು. ಇದೂ ಕೂಡ ಸದಾಚಾರಗಳಲ್ಲಿ ಸೇರುತ್ತವೆ. ಇದನ್ನು ಸೇರಿಸಿ ಪಂಚಾಚಾರಗಳು ಎನ್ನುತ್ತಾರೆ. ಪಂಚಾಚಾರಗಳಿಗೆ ತುಂಬಾ ಮಹತ್ವವನ್ನು ನೀಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಅದನ್ನು ಬಿಡಬೇಡಿ. ಸಾಧ್ಯವಾದಷ್ಟು ಪಾಲಿಸಿ.

ಪ್ರಶ್ನೆ: ಹೆಣ್ಣುಮಕ್ಕಳು ಶನಿವಾರ ಮತ್ತು ಸೋಮವಾರ ತಲೆಗೆ ಸ್ನಾನ ಮಾಡಬಾರದು ಹಾಗೇ ವರದ ಕೆಲವು ದಿನ ತಲೆಗೆ ಎಣ್ಣೆ ಹಾಕಬಾರದು ಎಂದು ಹೇಳುತ್ತಾರಲ್ಲ, ಏಕೆ? ಸ್ವಾಮೀಜಿ: ನಿತ್ಯವೂ ತಲೆಗೆ ಸ್ನಾನ ಹೆಣ್ಣಿಗೆ ಮಾತ್ರವಲ್ಲ ಯಾರಿಗೂ ಸೂಕ್ತವಲ್ಲ. ಕೆಲವರಿಗೆ ನಿತ್ಯ ತಲೆ ಸ್ನಾನ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅವರು ಪ್ರಮಾಣ ಬದ್ಧವಾದ ಶಿಖೆಯನ್ನು ಬಿಟ್ಟುಕೊಂಡಿರಬೇಕು ಅಥವಾ ಆ ತಲೆಸ್ನಾನದಿಂದ ಉಂಟಾಗಬಹುದಾದ ದುಷ್ಪರಿಣಾಮಗಳನ್ನು ತಡೆಯಬಹುದಾದ ಕೆಲವೊಂದಿಷ್ಟು ಜಪ ಅಥವಾ ಚಿಕಿತ್ಸಾ ಪ್ರಕ್ರಿಯೆಗಳನ್ನು ತಿಳಿದುಕೊಂಡು ಬಳಸಬೇಕು. ಇಲ್ಲದಿದ್ದರೆ ನಿತ್ಯ ತಲೆ ಸ್ನಾನ ಯಾರಿಗೂ ಒಳ್ಳೆಯದಲ್ಲ. ವಾರದಲ್ಲಿ ಮೂರು ಬಾರಿ ತಲೆ ಸ್ನಾನ ಮಾಡಿದರೆ ಸಾಕು. ಹೆಚ್ಚಿಗೆ ಮಾಡಬಾರದು. ಅಲ್ಲದೆ ಅತಿಯಾದ ಬಿಸಿ ನೀರಿನಿಂದಲೂ ತಲೆ ಸ್ನಾನ ಮಾಡಬಾರದು. ಮೈಗೆ ಬೇಕಾದರೆ ಸ್ವಲ್ಪ ಬಿಸಿ ನೀರಿನಿಂದ ಸ್ನಾನ ಮಾಡಬಹುದು. ಆದರೆ ತಲೆಗೆ ಮಾತ್ರ ಬೇಕಿದ್ದರೆ ವಾತಾವರಣದ ಉಷ್ಣತೆಗಿಂತ ಸ್ವಲ್ಪ ಬಿಸಿಯಾಗಿರುವ ನೀರನ್ನು ಬಳಸಬಹುದು. ಅದಕ್ಕಿಂತ ಹೆಚ್ಚಿನ ಬಿಸಿನೀರಿನ ಬಳಕೆ ಸಲ್ಲದು. ಈಗ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಮಾರ್ಜಕಗಳನ್ನು ತಲೆಗೆ ಬಳಸಬೇಡಿ. ಉಜ್ಜಿದರೆ ಲೋಳೆ ಬರುವಂತಹ ಸಾಕಷ್ಟು ಸಸ್ಯಗಳು ನಿಮ್ಮ ಸುತ್ತಮುತ್ತಲು ಬೆಳೆಯುತ್ತವೆ. ಅವನ್ನು ತೆಗೆದುಕೊಂಡು ಲೋಳೆ ಮಾಡಿ ತಲೆಗೆ ಹಾಕಿ ಸ್ವಲ್ಪ ಹೊತ್ತು ಕೈಯ್ಯಲ್ಲಿ ಉಜ್ಜಿ್ದರೆ ನಿಮ್ಮ ತಲೆ ಸಂಪೂರ್ಣವಾಗಿ ಶುದ್ಧವಾಗುತ್ತದೆ. ವಿದ್ಯುತ್ ಕಾಂತೀಯ ತರಂಗಗಳು ಹುಟ್ಟುವುದೇ ಇಲ್ಲ. ಬ್ರೈನ್ ಹೆಮರೇಜ್ ಎನ್ನುವ ಕಾಯಿಲೆಯೇ ಇರುವುದಿಲ್ಲ. ಈಗ ಮೆದುಳಿನಲ್ಲಿ ರಕ್ತಸ್ರಾವವಾಗುವ ಖಾಯಿಲೆ ಎಲ್ಲೆಡೆ ಹರಡುತ್ತಿದೆ. ಅದಕ್ಕೆ ರಕ್ಷಣೆ ತೆಗೆದುಕೊಳ್ಳಬೇಕಿದ್ದರೆ ಶಾಂಪೂ ಇತ್ಯಾದಿಗಳ ಬಳಕೆ ಬಿಡಿ. ಒಳ್ಳೆಯ ಸೀಗೆ ಪುಡಿ ಬಳಸುತ್ತೇನೆ ಎಂದೂ ಹೋಗಬೇಡಿ. ಸೀಗೆ ಪುಡಿಯೂ ಬೇಡ. ಏಕೆಂದರೆ ಈಗಿನ ಕಾಲದಲ್ಲಿ ತಲೆಗೆ ಮಾರ್ಜಕದ ಅಗತ್ಯ ಇಲ್ಲ. ಹೆಚ್ಚೆಂದರೆ ಲೋಳೆ. ದಾಸವಾಳದ ಸೊಪ್ಪನ್ನು ಪುಡಿ ಮಾಡಿ ಹಿಚುಕಿದರೆ ಲೋಳೆಯಾಗುತ್ತದೆ. ಅದನ್ನು ನೀರಿಗೆ ಹಾಕಿ ಅರ್ಧ ಗಂಟೆ ಬಿಟ್ಟು ತಲೆಯನ್ನು ತೊಳೆಯಬೇಕು. ಹೀಗೆ ಕೆಲವು ಬಾರಿ ಮಾಡಿದರೆ ತಲೆ ಹೊಟ್ಟು ಎನ್ನುವುದು ಅವನಿಗೆ ಜೀವಮಾನದಲ್ಲಿ ಬರುವುದಿಲ್ಲ. ತಲೆ ಹೊಟ್ಟು ಬರುವುದೇ ಮಾರ್ಜಕದ (ಶಾಂಪೂ) ಕಾರಣದಿಂದ. ಅದು ಚರ್ಮವನ್ನು ಸುಡುತ್ತದೆ. ಸುಡುವುದರಿಂದ ಹೊಟ್ಟಾಗಿ ಎದ್ದು ಬರುತ್ತದೆ. ಈ ತಲೆ ಹೊಟ್ಟಿನ ಖಾಯಿಲೆಗೆ ಶಾಂಪೂ ಬಳಸುವುದರಿಂದ ಅದು ಹೆಚ್ಚಾಗುತ್ತದೆಯೇ ವಿನಃ ಕಮ್ಮಿ ಆಗುವುದಿಲ್ಲ. ಈ ಸ್ನಾನವನ್ನೇ ಪರಮಾವಧಿ ಎಂದರೆ ಮೂರು ಸಲ ಸ್ನಾನ ಮಾಡಿ. ಅದಕ್ಕಿಂತ ಹೆಚ್ಚು ಬೇಡ. ಈಗಿನ ಕಾಲದಲ್ಲಿ ನಾವು ಮೆದುಳಿಗೆ ಹೆಚ್ಚಿನ ಕೆಲಸ ಕೊಡುತ್ತಾ ಇಲ್ಲ. ಬಹಳ ಕಡಿಮೆ ಕೆಲಸ ಕೊಡುತ್ತಾ ಇದ್ದೇವೆ. ಹಿಂದೆಲ್ಲ ಮೆದುಳಿಗೆ ತುಂಬಾ ಕೆಲಸ ಇತ್ತು. ಹಾಗಾಗಿ ತಲೆಯ ಭಾಗ ಒಂದಿಷ್ಟು ಶ್ರಮಭರಿತ ದುಡಿಮೆಯಿಂದ ಸಹಜವಾಗಿ ಶಕ್ತವಾಗಿರುತ್ತಿತ್ತು. ಈಗ ಮೆದುಳು ತೀರಾ ನಿಶ್ಯಕ್ತವಾಗುತ್ತಿದೆ. ಮೆದುಳಿನ ಎಲ್ಲಾ ನರಗಳೂ ಕ್ಷೀಣವಾಗುತ್ತಿವೆ. ನೀವು ಅತೀ ತಂಪಾದ ನೀರನ್ನು ತಲೆಗೆ ಹೊಯ್ದರೂ ಕೂಡ ಅಲ್ಲಿಯೇ ರಕ್ತಸ್ರಾವವಾಗಿ ಬಿಡಬಹುದು. ಅದೇ ಬಿಸಿಯಾಗಿದ್ದರೂ ಕೂಡ ಆಗಬಹುದು. ಅಲ್ಲದೆ ಎತ್ತರದಿಂದ ಬಿದ್ದರೂ ಕೂಡ ಅದೇ ಏಟಾಗಿ ರಕ್ತಸ್ರಾವವಾಗಿ ಬಿಡಬಹುದು. ಹೀಗೆ ಮೆದುಳಿನ ಒಳಗೆ ಉಂಟಾದ ರಕ್ತಸ್ರಾವವವು ಖಾಯಿಲೆಯಾಗಿ ಪರಿವರ್ತನೆ ಆಗಬಹುದು. ಆದ್ದರಿಂದ ವಾರಕ್ಕೆ ಮೂರು ಬಾರಿ ಸ್ನಾನ, ಲೋಳೆಯ ಬಳಕೆ ಮಾಡಿದರೆ ತಲೆ ಹೊಟ್ಟು ಬರುವುದಿಲ್ಲ, ಮೆದುಳಿನ ರಕ್ತಸ್ರಾವವಾಗುವುದಿಲ್ಲ, ತಲೆ ಕೂದಲು ಚೆನ್ನಾಗಿ ಬರುತ್ತದೆ. ಕೊಬ್ಬರಿ ಎಣ್ಣೆಯನ್ನೇ ತಲೆಗೆ ಹಾಕಿ. ಎಣ್ಣೆ ತೊಳೆದು ಹೋಗಬೇಕು ಎಂಬ ಕಲ್ಪನೆ ಬೇಡ. ಲೋಳೆಯು ಎಣ್ಣೆಯ ಜಿಡ್ಡಿನ ಅಂಶವನ್ನು ತೆಗೆಯುತ್ತದೆ. ಕೂದಲು ರೇಷ್ಮೆಯಷ್ಟು ಚೆನ್ನಾಗಿ ಇರುತ್ತದೆ. ಇವೆಲ್ಲದರಿಂದ ನಿಮ್ಮೆಲ್ಲರ ಆರೋಗ್ಯವನ್ನು ಕಾಪಾಡಿಕೊಂಡು ಬರಲಿಕ್ಕೆ ಸಾಧ್ಯ. ಇನ್ನು ಪುರುಷರ ಸ್ನಾನ. ಕೆಲವರಿಗೆ ಕೆಲವೊಂದಿಷ್ಟು ನಿರ್ಬಂಧಗಳಿರುತ್ತವೆ. ದೇವಸ್ಥಾನದ ಅರ್ಚಕ. ಅವನು ಅನಿವಾರ್ಯವಾಗಿ ಮೂರು ಹೊತ್ತೂ ತಲೆ ಸ್ನಾನ ಮಾಡಬೇಕು. ಅದು ಆಗಮೋಕ್ತ ಬದ್ಧತೆಯಲ್ಲಿದ್ದಾನೆ. ಕೆಲವರಿಗೆ ಕಡಿಮೆ ತಲೆಗೂದಲು ಹುಟ್ಟುವ ಲಕ್ಷಣಗಳಿದ್ದರೆ ಅವರಿಗೆ ಮೂರು ಹೊತ್ತೂ ತಲೆಸ್ನಾನ ಅಷ್ಟು ಬಾಧಕವಾಗುವುದಿಲ್ಲ. ತೀರಾ ನಿಬಿಡವಾಗಿ ಕೂದಲು ಹುಟ್ಟುವ ತಲೆಯಾದರೆ ಅವರು ಹಾಗೆಯೇ ಸ್ನಾನ ಮಾಡಲೇಬಾರದು. ನೆತ್ತಿಗೆ ಒಂದು ಚೂರು ಎಣ್ಣೆ ಹಚ್ಚಿ ನಂತರ ತಲೆಗೆ ನೀರು ಹೊಯ್ದುಕೊಳ್ಳಬೇಕು. ಆಗ ಎಣ್ಣೆ ಕೆಳಕ್ಕೆ ಇಳಿಯುತ್ತದೆ, ನೀರು ಹೊರಕ್ಕೆ ಇಳಿದು ಹೋಗುತ್ತದೆ. ಆಗ ಸಮಸ್ಯೆ ಆಗುವುದಿಲ್ಲ. ಇಲ್ಲದಿದ್ದರೆ ಸ್ವಲ್ಪ ದಿನಗಳಲ್ಲಿ ಅವನ ಬುದ್ಧಿ ಮತ್ತೆ ಕೆಡುತ್ತಾ ಬರುತ್ತದೆ. ತೀರಾ ಬುದ್ಧಿ ಕೆಟ್ಟವರಿಗೂ ಕೂಡ ಆಯುರ್ವೇದದಲ್ಲಿ ಜಲಚಿಕಿತ್ಸೆಯೇ ಇದೆ. ನೀರು ಮನಸ್ಸನ್ನು ಪರಿವರ್ತಿಸುತ್ತೆ ಅಥವಾ ಮನಸ್ಸಿನ ಮೇಲೆ ಪರಿಣಾಮ ಉಂಟುಮಾಡುತ್ತದೆ ಎನ್ನುವುದೇ ಇದಕ್ಕೆ ಕಾರಣ. ಇನ್ನು ಕಂಠದವರೆಗೆ ಸ್ನಾನ. ದಿನಕ್ಕೆ ೨೫ ಬಾರಿ ಮಾಡಿದರೂ ಏನೂ ದೋಷವಿಲ್ಲ. ವಾತಾವರಣ ಬದಲಾಗುವ ಕಾಲದಲ್ಲಿ (ಉದಾ: ಚಳಿಗಾಲದಿಂದ ಬೇಸಿಗೆ ಕಾಲ) ಅತಿ ಹೆಚ್ಚು ಕಂಠ ಸ್ನಾನ ಸಲ್ಲದು. ಆಗ ಕಟಿ ಸ್ನಾನ ಎನ್ನುತ್ತಾರೆ. ನಾಭಿಯವರೆಗೆ ಮಾತ್ರ ನೀರು ಹಾಕಿಕೊಂಡು ಸ್ನಾನ. ವಾತಾವರಣ ಬದಲಾಗುವ ಕಾಲದಲ್ಲಿ ನಮ್ಮ ದೇಹವು ಅದಕ್ಕೆ ಹೊಂದಿಕೊಳ್ಳಲು ಬೇಕಾದ ಕೆಲವು ಪ್ರಕ್ರಿಯೆಗಳನ್ನು ಮಾಡುತ್ತದೆ. ನೀವು ಅದರ ಜ್ಞಾನವನ್ನು ನಿರಂತರ (ದಿನಕ್ಕೆ ಮೂರ್ನಾಲ್ಕು ಬಾರಿ) ಮೈಮೇಲೆ ನೀರು ಹಾಕಿಕೊಂಡಾಗ ಅದು ವಾತಾವರಣವನ್ನು ಗ್ರಹಿಸುವ ಶಕ್ತಿ ಕಡಿಮೆ ಆಗುತ್ತದೆ. ಹಾಗಾಗಿ ಋತುಮಾನಗಳು ಬದಲಾಗುವ ಸಮಯದಲ್ಲಿ ಕಟಿ ಸ್ನಾನ ಮಾಡಬೇಕು. ಮನೆಯಲ್ಲಿ ಗೀಸರ್ ಹಾಕಿದೆ, ಎಷ್ಟು ಬೇಕಾದರೂ ಬಿಸಿನೀರು ಬರುತ್ತದೆ ಎಂದು ದಿನಕ್ಕೆ ಎರಡು ಮೂರು ಬಾರಿ ಸ್ನಾನ ಮಾಡಲೇಬೇಡಿ. ಕೆಲವೊಂದಿಷ್ಟು ಪ್ರಕ್ರಿಯೆಗಳಲ್ಲಿ ಕರ್ತವ್ಯಗಳಿರುತ್ತವೆ. ಕರ್ತವ್ಯ ಬದ್ಧತೆಗೆ ಆಧರಿಸಿದ್ದರೆ ಮಾತ್ರ ಹಲವು ಸ್ನಾನಗಳು. ಇಲ್ಲದಿದ್ದರೆ ದಿನಕ್ಕೆ ಒಂದೇ ಸ್ನಾನ ಸಾಕು. ಹೆಂಗಸರು ಕಂಠ ಸ್ನಾನ ಮಾಡಬೇಕು. ಮುಖಕ್ಕೆ ನೀರು ಹಾಕಿ ತೊಳೆದುಕೊಳ್ಳಬೇಕು. ಕಿವಿಯ ಹಾಲೆಗಳನ್ನು ಉಜ್ಜಿಕೊಳ್ಳಬೇಕು. ಯಾವುದೇ ಪೂಜೆಗೂ ಅವರು ಅನರ್ಹರಲ್ಲ. ಕರ್ಮ ಸಮುಚ್ಚಯಗಳಲ್ಲಿ ಸ್ತ್ರೀಯರಿಗೆ ವಿಶಿಷ್ಟ ಸ್ಥಾನಗಳನ್ನು ನೀಡಲಾಗಿದೆ. ಶ್ರಾದ್ಧದ ಸಮಯದಲ್ಲಿ ಪೂರ್ಣಾಧಿಕಾರಿಣಿ ಗೃಹಿಣಿ. ಅವಳು ತಲೆಗೆ ಸ್ನಾನ ಮಾಡಬೇಕು. ಕರ್ಮಾಂಗ ನಿರ್ದೇಶಾನುಸಾರ ಇಂತಹ ಸಂದರ್ಭಗಳಲ್ಲಿ ತಲೆಸ್ನಾನ ಮಾಡಲೇಬೇಕು. ಅರ್ಚಕನಿಗೆ ಹೇಗೆ ಬರುತ್ತದೋ ಹಾಗೇ ಗೃಹಿಣಿಗೂ ಇಂತಹ ನಿರ್ಬಂಧಗಳು ಬರುತ್ತವೆ. ಮಾಸಿಕ ಋತು ಸಂಬಂಧ ತಿಂಗಳಿನ ನಾಲ್ಕು ದಿನಗಳೂ ಅವಳು ತಲೆಸ್ನಾನ ಮಾಡಬೇಕು. ಅದು ಅನಿವಾರ್ಯ. ಅಗಲೆಲ್ಲ ತಲೆಗೆ ಎಣ್ಣೆ ಹಾಕಿಕೊಂಡು ಸ್ನಾನ ಮಾಡಬೇಕು ಎಂದು ನಿಯಮ ಇದೆ. ತಲೆಗೆ ಎಣ್ಣೆ ಹಾಕದೆ ಸ್ನಾನ ಮಾಡಲೇ ಬಾರದು.

ಪ್ರಶ್ನೆ: ಕುಂಬಳಕಾಯಿ ಮತ್ತು ಬಾಳೆಕಾಯಿ ಪದಾರ್ಥವನ್ನು ಮಂಗಳವಾರ ಮತ್ತು ಶುಕ್ರವಾರ ಮಾಡಬಾರದು ಎನ್ನುತ್ತಾರೆ. ಹಾಗೆಯೇ ಹೆಂಗಸರು ಕುಂಬಳಕಾಯಿಯನ್ನು ತುಂಡು ಮಾಡಬಾರದು ಎನ್ನುತ್ತಾರೆ. ಏಕೆ? ಸ್ವಾಮೀಜಿ: ಅದೆಲ್ಲ ಸ್ವಭಾವವನ್ನು ಚಿಂತಿಸಿ ಪರಿವರ್ತನೆಯನ್ನು ಮಾಡುವ ದೃಷ್ಟಿಯಿಂದ ಹೇಳಿದ್ದು ಬಿಟ್ಟರೆ, ನೀವು ಕುಂಬಳಕಾಯಿಯನ್ನು ವರ್ಷದ ಎಲ್ಲಾ ದಿನ ತಿನ್ನಿ, ಯಾವುದೇ ಅನಾರೋಗ್ಯ ಉಂಟಾಗುವುದಿಲ್ಲ. ತರಕಾರಿಗಳಲ್ಲೇ ಅತೀ ಶ್ರೇಷ್ಠವಾದಂತಹ ತರಕಾರಿಯೆಂದರೆ ಕುಂಬಳಕಾಯಿ. ಅದನ್ನು ಕತ್ತರಿಸುವ ವಿಧಾನ ಎಂದಾಗ ಅದರ ಆಕಾರ, ಕತ್ತರಿಸಲು ಬಳಸಬೇಕಾದ ಬಲ ಪ್ರಯೋಗವು ಒಂದು ರೀತಿಯಯಲ್ಲಿ ಮನುಷ್ಯನನ್ನು ಕೊಚ್ಚಿದ ಹಾಗೇ ಆಗುತ್ತದೆ. ಆ ಭಾವ ಹೆಣ್ಣಿನಲ್ಲಿ ಹುಟ್ಟಬಾರದು. ಹೆಣ್ಣಿನಲ್ಲಿ ಯಾವತ್ತೂ ಸಾತ್ವಿಕ ಪ್ರವೃತ್ತಿ ಇರಬೇಕು ಎಂದು ಗಂಡ ತೆಗೆದುಕೊಳ್ಳುತ್ತಾನೆ. ತಾಯಿಯ ಗುಣ ಸದಾ ಇರಲಿ ಎನ್ನುವ ದೃಷ್ಟಿಯಿಂದ.

ಪ್ರಶ್ನೆ: ಅಪ್ಪ ಜೀವಂತ ಇದ್ದರೆ ಕುಂಬಳಕಾಯಿಯನ್ನು ಹಾಗೇ ಕತ್ತರಿಸಬಾರದು ಎನ್ನುತ್ತಾರೆ. ನಿಜವೇ? ಸ್ವಾಮೀಜಿ: ಇಲ್ಲ ಇಲ್ಲ. ಕರಾವಳಿ ಪ್ರದೇಶದವರು ಬಹಳ ಬುದ್ಧಿವಂತರು. ಮೈಸೂರು ಪ್ರದೇಶದಲ್ಲಿ ಗೌಡರು ಯಾರೂ ಕುಂಬಳಕಾಯಿ ತಿನ್ನುವುದೇ ಇಲ್ಲ. ಅವರಿಗೆ ಅದು ನಿಷೇಧ. ಅದನ್ನು ಇಲ್ಲಿಯವರೇ ಹೇಳಿದ್ದು. ಉತ್ತಮ ಪೌಷ್ಟಿಕ, ರುಚಿಕರವಾದ ತರಕಾರಿಯನ್ನು ನಮಗೆ ತಂದು ಕೊಡಲಿ ಎಂದು ಹಾಗೆ ಹೇಳಿದ್ದಾರೆ. ಬ್ರಾಹ್ಮಣರ ಮನೆಯಲ್ಲಿ ಇದರಿಂದ ಮೃಷ್ಟಾನ್ನ ಭೋಜನ! ಮಾಂಸಾಹಾರ ತಿನ್ನುವ ಅವರು ಇದನ್ನಾದರೂ ನಮಗೆ ತಂದು ಕೊಡಲಿ ಎನ್ನುವ ಭಾವ!

ಪ್ರಶ್ನೆ: ಸ್ನಾನ ಮಾಡುವಾಗ ತಲೆಗೆ ಮತ್ತು ಮೈಗೆ ಕಡಲೆ ಹಿಟ್ಟು ಹಾಕಬಹುದೇ? ಸ್ವಾಮೀಜಿ: ಕಡ್ಲೆ ಹಿಟ್ಟು, ಹೆಸರು ಹಿಟ್ಟು ಮತ್ತು ಉದ್ದಿನ ಹಿಟ್ಟು ಇವು ಮೂರು ಕೂಡ ಮಾರ್ಜಕವಾಗಿ ಬಳಕೆಗೆ ಬರುತ್ತವೆ. ಉದ್ದಿನ ಹಿಟ್ಟು ಈ ಕರಾವಳಿ ಪ್ರದೇಶಕ್ಕೆ ತುಂಬಾ ಒಳ್ಳೆಯದು. ಅದನ್ನು ಮಾಡಿಕೊಳ್ಳುವ ವಿಧಾನ ಏನೆಂದರೆ ಉದ್ದಿನ ಬೆಳೆಯನ್ನು ಮೊದಲು ಹುರಿದುಕೊಳ್ಳಬೇಕು. ಹೆಸರು ಹಿಟ್ಟು ಮತ್ತು ಕಡ್ಲೆ ಹಿಟ್ಟು ಈ ಪ್ರದೇಶಕ್ಕೆ ವಿಶೇಷವಲ್ಲ. ಆದರೂ ಅದನ್ನು ಬಳಸಬಹುದು. ಆದರೆ ಮಾರ್ಜಕದ ಅಗತ್ಯ ನಿಮಗೆ ಬರುವುದೇ ಇಲ್ಲ. ಅದು ನಿಮ್ಮ ಕಲ್ಪನೆ ಅಷ್ಟೇ. ನಾಲ್ಕು ದಿನ ಅಭ್ಯಾಸ ಮಾಡಿ ನೋಡಿ, ಆಗ ಈ ಸೋಪು ಇವು ಯಾವುದರ ಅಗತ್ಯವೂ ನಿಮಗೆ ಕಾಣುವುದಿಲ್ಲ. ಅದರ ಉಪಯೋಗ ಇಲ್ಲದೇನೆ ನೀವು ಆರಾಮವಾಗಿ ಇರಬಹುದು. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ಪ್ರಶ್ನೋತ್ತರ - 2


ಪ್ರಶ್ನೆ: ಸಾಯಂ ಸಂಧ್ಯಾರ್ಘ್ಯವನ್ನು ಪೂರ್ವಾಭಿಮುಖವಾಗಿ ಕೊಡಬೇಕೋ ಅಥವಾ ಪಶ್ಚಿಮಾಭಿಮುಖವಾಗಿ ಕೊಡಬೇಕೋ? ಸ್ವಾಮೀಜಿ: ಯಾವುದೇ ಉಪಾಸನೆಗೆ ಅತಿ ಶ್ರೇಷ್ಠವಾದ ದಿಕ್ಕು ಎಂದರೆ ಪೂರ್ವ. ಅದಿಲ್ಲದಿದ್ದರೆ ಎರಡನೆಯದ್ದು ಉತ್ತರ ದಿಕ್ಕು. ಇಲ್ಲಿ ಅಗಾಧದತೆಯನ್ನು ಕೂಡ ಗೌರವಿಸಬೇಕಾಗುತ್ತದೆ. ಅಗಾಧವಾದ ಜಲರಾಶಿ ಇರುವುದು ಪಶ್ಚಿಮದಲ್ಲಿ. ಆದ್ದರಿಂದ ಇಲ್ಲಿ ಪಶ್ಚಿಮದಲ್ಲಿ ಕುಳಿತು ಮಾಡಿದರೂ ನಿಷೇಧವಲ್ಲ. ಆದರೆ ನಾವು ಘಾಟಿ ಹತ್ತಿ ಪಶ್ಚಿಮದಲ್ಲಿ ಕುಳಿತು ಮಾಡುವುದಕ್ಕೆ ಅವಕಾಶವಿಲ್ಲ. ಅಲ್ಲಿ ಉತ್ತರ ಅಥವಾ ಪೂರ್ವ ಮಾತ್ರ. ಇಲ್ಲಿ ಇರುವ ಸಮುದ್ರದ ಅಗಾಧತೆ, ಮಾನವನ ಅಳತೆಗೂ ಮೀರಿದ ಅಗಾಧತೆ. ದೇವರು ಎಂದರೂ ಅದೇ. ಹಾಗಾಗಿ ದೇವರಿಗೆ ಸಮ್ಮುಖವಾಗುವುದು ಎಂದರ್ಥ. ದೇವರಿಗೆ ಸಮ್ಮುಖವಾದಾಗ ದಿಕ್ಕಿನ ಪ್ರಶ್ನೆ ಬರುವುದಿಲ್ಲ.

ಪ್ರಶ್ನೆ: ತಲೆಗೆ ಯಾವ ಎಣ್ಣೆ ಹಾಕುವುದು ಒಳ್ಳೆಯದು? ತಲೆಗೆ ಎಣ್ಣೆ ಹಾಕುವುದರಿಂದ ಏನಾದರೂ ಲಾಭ ಇದೆಯೇ? ಸ್ವಾಮೀಜಿ: ಎಲ್ಲರೂ ತಲೆಗೆ ಎಣ್ಣೆ ಹಾಕಬೇಕು. ಈ ಪ್ರದೇಶದಲ್ಲಿ ಉತ್ತಮವಾದದ್ದು ಕೊಬ್ಬರಿ ಎಣ್ಣೆ. ತಿನ್ನುವುದಕ್ಕಾಗಲೀ, ತಲೆಗೆ ಹಾಕುವುದಕ್ಕಾಗಲೀ ಇದೇ ಶ್ರೇಷ್ಠ. ಸಹಜವಾಗಿ ಅದು ಕಣ್ಣಿನ ದೃಷ್ಟಿ ಶಕ್ತಿಯನ್ನು, ಕಿವಿಯ ಶ್ರವಣ ಶಕ್ತಿಯನ್ನು, ನಾಲಗೆಯ ರುಚಿ ಶಕ್ತಿಯನ್ನು, ಇವು ಮೂರನ್ನೂ ಕಾಯ್ದುಕೊಂಡು ಬರುತ್ತದೆ. ಅಷ್ಟೇ ಅಲ್ಲದೆ ತಲೆ ಕೂದಲನ್ನೂ ಚೆನ್ನಾಗಿ ಇಟ್ಟುಕೊಂಡು ಬರುತ್ತದೆ. ಕೃತಕ ಪದಾರ್ಥಗಳನ್ನು ಹಾಕದೇ ಇರುವ ಕೊಬ್ಬರಿ ಎಣ್ಣೆಯನ್ನೇ ಬಳಸಬೇಕು. ಆಹಾರವಾಗಿ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಇಡೀ ದೇಹವನ್ನು ರಕ್ಷಣೆ ಮಾಡುತ್ತದೆ. ರಕ್ತದ ಕೊರತೆ ಇರುವುದಿಲ್ಲ. ಹಾಗೆ ಸಂಧಿವಾತ ಇತ್ಯಾದಿ ಕಾಯಿಲೆಗಳೂ ಬರುವುದಿಲ್ಲ. ಆದರೆ ಈಗಿನ ವೈದ್ಯರು ಕೊಬ್ಬರಿ ಎಣ್ಣೆ ತಿಂದರೆ ಕೊಲೆಸ್ಟಿರೋಲ್ ಬರುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇತ್ತೀಚಿಗೆ ಅಮೆರಿಕಾ ದೇಶ ಒಂದು ಹೇಳಿಕೆ ನೀಡಿತು. ಕೊಲೆಸ್ಟಿರೋಲ್ ಎಂದು ಹೇಳುವ ಕಲ್ಪನೆಯೇ ಸುಳ್ಳು. ಅದು ನಮ್ಮ ಸಂಶೋಧನೆಯಲ್ಲಿ ಕಂಡುಬಂದ ಸುಳ್ಳು ಎಂದು ಅಧಿಕೃತವಾಗಿ ಅಮೆರಿಕಾ ದೇಶ ಹೇಳಿಕೆ ನೀಡಿತು. ಆದರೆ ಸುಮಾರು ೫೦ ವರ್ಷಗಳಿಂದ ಪ್ರಚಾರ ಮಾಡಿ ಅದರಿಂದ ಜನರಿಗೆ ಮಡಿದ ನಷ್ಟದ ಬಗ್ಗೆ ಮಾತ್ರ ಅಮೆರಿಕಾ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಎಷ್ಟು ನಷ್ಟವಾಗಿರಬಹುದು ಎಂದು ನೀವೇ ಲೆಕ್ಕ ಹಾಕಿ. ಕೊಲೆಸ್ಟಿರೋಲ್ ಎಂದು ಹೇಳುವ ಸುಳ್ಳು ಕಲ್ಪನೆಯನ್ನು ಇಟ್ಟುಕೊಂಡು ಮಾಡಿದ ಮೋಸ, ಅದರಿಂದ ಜನರಿಗೆ ಆದ ನಷ್ಟದ ಬಗ್ಗೆ ಅಮೆರಿಕಾ ಏನೂ ಹೇಳುವುದಿಲ್ಲ. ಆದರೆ ಇತ್ತೀಚಿಗೆ ಅದಕ್ಕೆ ತಿಪ್ಪೆ ಸಾರಿಸಿತು. ತಮ್ಮಿಂದ ಆದ ತಪ್ಪಿಗೆ ಕ್ಷಮೆ ಕೇಳುತ್ತೇವೆ ಎನ್ನುವ ಮಟ್ಟಿಗೆ ಹೇಳಿಕೆಯನ್ನಷ್ಟೇ ಕೊಟ್ಟಿತು. ಆದರೆ ಈ ಪ್ರದೇಶದ ಅತೀ ಉತ್ತಮವಾದ ತೈಲ ಎಂದರೆ ಕೊಬ್ಬರಿ ಎಣ್ಣೆ. ಅದನ್ನು ಆಹಾರ ರೂಪದಲ್ಲಿ ಚೆನ್ನಾಗಿ ಬಳಸಬಹುದು. ಏನೂ ಸಮಸ್ಯೆ ಇಲ್ಲ. ನಂತರ ಎಳ್ಳೆಣ್ಣೆ, ಕಡಲೆ ಕಾಯಿ ಎಣ್ಣೆ, ಇವೆಲ್ಲವನ್ನೂ ಇಲ್ಲಿ ಬೆಳೆಯಲಿಕ್ಕೂ ಸಾಧ್ಯ, ಬಳಸಲಿಕ್ಕೂ ಆಗುತ್ತದೆ. ಆದರೆ ಆಹಾರವಾಗಿ ಬಳಸಲು ಅವು ಯಾವುವೂ ಕೊಬ್ಬರಿ ಎಣ್ಣೆಯ ಸ್ಥಾನಕ್ಕೆ ಬರುವುದಿಲ್ಲ. ತುಪ್ಪಕ್ಕಿಂತಲೂ ಒಂದು ರೀತಿಯಲ್ಲಿ ಶ್ರೇಷ್ಠ ಈ ಕೊಬ್ಬರಿ ಎಣ್ಣೆ. ತುಪ್ಪ ಉತ್ತಮವಾದ ಆಹಾರವಾಗಿರುವುದು ಸತ್ಯವೇ. ಅದು ಏನನ್ನು ದೇಹಕ್ಕೆ ಪೂರೈಸಬಹುದೋ ಅದಕ್ಕಿಂತ ೧೦% ಹೆಚ್ಛೇ ಕೊಬ್ಬರಿ ಎಣ್ಣೆ ಕೊಡಬಲ್ಲದು. ಅದಕ್ಕಾಗಿಯೇ ಕರಾವಳಿ ಪ್ರದೇಶದಲ್ಲಿ ಊಟಕ್ಕೆ ಬಡಿಸುವಾಗ ಪಲ್ಯ ಬಡಿಸಿ ಅದಕ್ಕೆ ಕೊಬ್ಬರಿ ಎಣ್ಣೆ ಹಾಕುವ ಕ್ರಮ ಇದೆ. ತುಪ್ಪವನ್ನಲ್ಲ. ಪಲ್ಯದೊಂದಿಗೆ ಕೊಬ್ಬರಿ ಎಣ್ಣೆ ಹಾಕಿ ಊಟ ಮಾಡುವುದು ಬಹಳ ಆರೋಗ್ಯದಾಯಕ. ಈಗಿನವರಿಗೆ ಊಟ ಮಾಡುವುದು ಹೇಗೆ ಎಂದೇ ತಿಳಿದಿಲ್ಲ. ಸಾಧ್ಯವಾದರೆ ಇಂತಹ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿ. ತನ್ಮೂಲಕ ಅರೋಗ್ಯ ವೃದ್ಧಿಸಿಕೊಳ್ಳಿ. ಅಷ್ಟೇ ಅಲ್ಲ, ಈ ಪ್ರದೇಶದಲ್ಲಿ ಸಾರು ಮಾಡುವಾಗ ತೊಗರಿ ಬೆಳೆಯನ್ನು ಬಳಸುತ್ತಿರಲಿಲ್ಲ. ಇಲ್ಲಿ ಬೆಳೆಯುವ ಬೇಳೆ ಕಾಳುಗಳನ್ನೇ ಬಳಸುತ್ತಿದ್ದರು. ಬಹಳ ವಿಶೇಷ ಸಂದರ್ಭವಾದರೆ, ಮದುವೆ ಇತ್ಯಾದಿ ಇದ್ದರೆ ಮಾತ್ರ ತೊಗರಿ ಬೆಳೆಯನ್ನು ಬಳಸುತ್ತಿದ್ದರು. ಹಾಗಂತ ಇದರರ್ಥ ಸಾರು ಮಾಡಲು ಇಲ್ಲಿಯವರಿಗೆ ಬರುತ್ತಿರಲಿಲ್ಲ ಎಂದಲ್ಲ. ಬಹಳ ರುಚಿಕರವಾದ ಸಾರನ್ನು ಮಾಡುತ್ತಿದ್ದರು. ಒರಿಸ್ಸಾ ಪ್ರದೇಶದ ಸಾರನ್ನು ಬಿಟ್ಟರೆ ನಿಮ್ಮ ದಕ್ಷಿಣ ಕನ್ನಡ ಸಾರೆ ನನಗೆ ತುಂಬಾ ಇಷ್ಟ. ಅವಡೆ, ಅಲಸಂದೆ ಇತ್ಯಾದಿಗಳನ್ನು ಬಳಸಿ ಮಾಡುವ ಸಾರು ಬಲು ರುಚಿಕರ. ಇದರಿಂದ ಹೋಳಿಗೆ, ಹಪ್ಪಳ ಇತ್ಯಾದಿಗಳನ್ನೂ ಕೂಡ ಮಾಡುತ್ತಿದ್ದರು. ಎಲ್ಲಾ ರೀತಿಯಲ್ಲೂ ಬಳಕೆ ಇತ್ತು. ಅದು ತುಂಬಾ ಚೆನ್ನಾಗಿರುವುದು ಮಾತ್ರವಲ್ಲದೆ ಸ್ವರೂಪದಲ್ಲಿ ಮಂದ್ರವಾಗಿ ಜೀರ್ಣವಾಗುವ ಶಕ್ತಿಯನ್ನು ಕೂಡ ಕೊಡುತ್ತಿತ್ತು. ಇವೆಲ್ಲ ಒಳ್ಳೆಯ ಅರೋಗ್ಯ ಪದ್ದತಿಗಳು. ಇವೆಲ್ಲ ಬಿಟ್ಟು ಹೋಗಿವೆ. ಈಗಿನ ಎಷ್ಟೋ ಜನರಿಗೆ ಈ ಪ್ರದೇಶದಲ್ಲಿದ್ದ ಕಪ್ಪೆಸ್ರು (ಕಪ್ಪು ಹೆಸರು) ಎನ್ನವ ಧಾನ್ಯದ ಬಗ್ಗೆ ಗೊತ್ತೇ ಇಲ್ಲ. ಕುಂದಾಪುರದ ಕಡೆ ಈಗಲೂ ಇದ್ದರೂ ಇರಬಹುದು. ಅದು ದೇಹಕ್ಕೆ ಬಹಳ ತಂಪು. ಹೆಸರು ಕಾಳಿಗಿಂತಲೂ ದೇಹಕ್ಕೆ ಹೆಚ್ಚು ತಂಪು ಮತ್ತು ಅಷ್ಟೇ ಸ್ನಿಗ್ಧ. ಹೆಸರು ಕಾಳನ್ನು ಹೆಚ್ಚು ತಿಂದರೆ ಅನಾರೋಗ್ಯ. ಅದು ಅಗ್ನಿ ಮಾಂದ್ಯ ಹುಟ್ಟಿಸುತ್ತದೆ. ಆದರೆ ಕರಿ ಹೆಸರನ್ನು ತಿನ್ನಿ, ನಿಮಗೆ ಏನೂ ಬಾಧಕವಾಗುವುದಿಲ್ಲ. ಅಷ್ಟೊಂದು ಸ್ನಿಗ್ಧ ಶಕ್ತಿಯನ್ನು ಹೊಂದಿದ ಔಷಧ ಅದರಲ್ಲಿದೆ. ಅಂತಹ ಆಹಾರ ಪದ್ದತಿಯನ್ನೆಲ್ಲ ಬಿಟ್ಟುಕೊಳ್ಳುತ್ತಾ ಬಂದಿದ್ದೇವೆ. ಸಾಧ್ಯವಾದರೆ ಆದಷ್ಟು ನಮ್ಮ ಪುರಾತನ ಆಹಾರ ಪದ್ದತಿಯನ್ನು ಬಳಸಿಕೊಂಡರೆ ನಾವು ಮುಂದೆ ಹೋಗಬಹುದು. ಈಗ ಹಿಂದಕ್ಕೆ ಹೋಗುತ್ತಾ ಇದ್ದೇವೆ. ಇನ್ನು ೫೦ ವರ್ಷಗಳಾದ ಮೇಲೆ ಬದುಕಿದ್ದರೂ ಕೂಡ ಯಾರಿಗೂ ಏನೂ ಮಾಡಲಿಕ್ಕೆ ಆಗುವುದಿಲ್ಲ. ಆ ಕಡೆ ಒಂದು ಚೀಲ, ಈ ಕಡೆ ಒಂದು ಚೀಲ ಚುಚ್ಚಿರುತ್ತಾರೆ. ಮಲ ಮೂತ್ರ ಹೋಗುವುದಿಲ್ಲ. ಅದನ್ನು ಹೊತ್ತುಕೊಂಡು ತಿರುಗಬೇಕು. ಅಂತಹ ಪರಿಸ್ಥಿತಿ ಮುಂದೆ ಬರಬಹುದು. ಇದಕ್ಕೆಲ್ಲ ಪರಿಹಾರ ನಮ್ಮ ಮೂಲ ಆಹಾರ ಪದ್ದತಿಗೆ ಹೋಗುವಂತಹದ್ದು. ಆಗ ಮಾತ್ರ ನಿಮ್ಮೆಲ್ಲ ಸಮಸ್ಯೆ ಪರಿಹಾರವಾಗುತ್ತದೆ.

ಪ್ರಶ್ನೆ: ತೆಂಗಿನೆಣ್ಣೆಯನ್ನು ತಲೆಗೆ ಹಾಕಬೇಕು ಎಂದು ಹೇಳಿದಿರಿ. ಕೆಲೆವೆಡೆ ಅದನ್ನು ಬ್ರಾಹ್ಮೀ, ಮದರಂಗಿ ಸೊಪ್ಪು ಎಲ್ಲಾ ಹಾಕಿ ಬಿಸಿ ಮಾಡುತ್ತಾರೆ. ಇದು ಸರಿಯೇ? ಸ್ವಾಮೀಜಿ: ಹಿಂದೆ ಇಲ್ಲೆಲ್ಲಾ ತೆಂಗಿನೆಣ್ಣೆ ಗಟ್ಟಿ ಆಗಬಾರದಂತೆ ಕಾಪಾಡುವ ವಿಧಾನ ಗೊತ್ತಿತ್ತು. ಇಂದು ನಿಮಗೆ ಗೊತ್ತಿಲ್ಲ. ಇಲ್ಲಿನ ಉಷ್ಣಾಂಶ ಸಾಮಾನ್ಯವಾಗಿ ೨೩ ಡಿಗ್ರಿಗಿಂತ ಹೆಚ್ಚಾಗಿರುವ ಕಾರಣ ತೆಂಗಿನೆಣ್ಣೆ ಗಟ್ಟಿಯಾಗುವುದಿಲ್ಲ. ಆದರೆ ಈಗ ಬೆಳೆಯುವ ತೆಂಗಿನ ಕಾಯಿಗಳಲ್ಲಿ ಒಂದಿಷ್ಟು ರಾಸಾಯನಿಕ ಅಂಶಗಳು ಹೆಚ್ಚಾಗಿರುತ್ತವೆ. ಬೆಳೆಯಲು ಹಾಕುವ ರಾಸಾಯನಿಕಗಳೇ ಇದಕ್ಕೆ ಕಾರಣ. ಹಾಗಾಗಿ ಗಟ್ಟಿ ಆಗುತ್ತವೆ. ಆದರೆ ಹಿಂದೆ ಏನು ಮಾಡುತ್ತಿದ್ದರೆಂದರೆ ಬಿಸಿ ಮಾಡುತ್ತಿದ್ದರು. ಬಿಸಿ ಮಾಡುವುದು ಎಂದರೆ ಒಲೆಯಲ್ಲಿ ಕಾಯಿಸುವುದಲ್ಲ. ಅಗಲವಾದ ತಟ್ಟೆಗೆ ತೆಂಗಿನೆಣ್ಣೆಯನ್ನು ಹಾಕಿ ವೀಳ್ಯದೆಲೆ, ಒಂದು ಚೂರು ಉಪ್ಪು (ಸೈನ್ಧವ ಲವಣ) ಹಾಗೂ ಮೈತಾಳ ಎನ್ನುವ ಎಲೆಯನ್ನು ಸೇರಿಸಿ, ಎಲೆ ಒಣಗುವ ವರೆಗೆ ಬಿಸಿಲಿನಲ್ಲಿ ಇಡುತ್ತಿದ್ದರು. ಅಷ್ಟು ಎಣ್ಣೆ ಬಿಸಿಯಾಗುತ್ತಿತ್ತು. ಬಿಸಿಯಾದ ಮೇಲೆ ಆ ಎಣ್ಣೆಯನ್ನು ಸೋಸಿ ಇಟ್ಟುಬಿಟ್ಟರೆ ಕೆಳಗೆ ಸ್ವಲ್ಪ ರಜದ ಹಾಗೆ ಪುಡಿ ಸಿಗುತ್ತದೆ. ಅದೇ ಅದರ ಗಟ್ಟಿಯಾಗತಕ್ಕಂತಹ ಗುಣ. ಅದು ಹೋದ ಮೇಲೆ ತೆಂಗಿನೆಣ್ಣೆ ಗಟ್ಟಿಯಾಗುವುದಿಲ್ಲ. ಇದು ಬಿಸಿ ಮಾಡುವುದು ಎಂದರ್ಥ. ಒಲೆಯಲ್ಲಿ ಕಾಯಿಸುವುದಲ್ಲ. ತೆಂಗಿನೆಣ್ಣೆ ಗಟ್ಟಿಯಾಗದಂತೆ ಕಾಪಾಡುವ ಉಪಾಯವೇ ಎಣ್ಣೆ ಬಿಸಿ ಮಾಡುವುದು.

ಪ್ರಶ್ನೆ: ಬೆಲ್ಲದಲ್ಲಿ ಇರುವೆ ಅಥವಾ ನೊಣಗಳಿರುವುದು ಸಾಮಾನ್ಯ. ಅವುಗಳಲ್ಲಿ ಪ್ರತಿಯೊಂದನ್ನೂ ಹುಡುಕಿ ಹುಡುಕಿ ತೆಗೆದು ಹಾಕುವುದು ಸಾಧ್ಯವಿಲ್ಲ. ಪದಾರ್ಥಗಳಿಗೆ ಬೆಲ್ಲ ಹಾಕುವಾಗ ಇವು ಬೆಲ್ಲದೊಟ್ಟಿಗೆ ಹೋಗಿಬಿಡುತ್ತದೆ. ಹಾಗೆ ಮಾಡಿದ ಪಾಯಸವನ್ನು ದೇವರಿಗೆ ನೈವೇದ್ಯ ಮಾಡಬಹುದೇ ಅಥವಾ ಭಕಾರ್ಥಿಗಳಿಗೆ ಬಡಿಸಬಹುದೇ? ಹಾಗೆಯೆ ಕೆಲವು ಧಾನ್ಯಗಳಲ್ಲಿ ಕ್ರಿಮಿ ಕೀಟಗಳು ಬರಬಹುದು. ಅದರಿಂದ ದೋಷವಿದೆಯೇ? ಸ್ವಾಮೀಜಿ: ಶಾರ್ನ್ಗಾಧರ ಒಂದಿಷ್ಟು ಮಾತುಗಳನ್ನು ಹೇಳಿದ್ದಾನೆ. ಅವು ಗುಜರಾತಿ ಭಾಷೆಯಲ್ಲಿವೆ. ಕನ್ನಡದಲ್ಲಿಯೂ ಕೆಲವೊಂದಿಷ್ಟು ಮಾತುಗಳು ಚಾಲ್ತಿಯಲ್ಲಿವೆ. ಹಣ್ಣಿನ ಹುಳ ಕಣ್ಣಿಗೆ ಒಳ್ಳೆಯದು. ಅದರಥವೇನು? ಹಣ್ಣಿನ ಹುಳವನ್ನು ತೆಗೆದು ಕಣ್ಣಿಗೆ ಹಚ್ಚಬೇಕೆಂದೇ? ಅಲ್ಲ. ಹಣ್ಣಿನಲ್ಲಿ ಹುಳವಿದೆ ಎನ್ನುವ ನಿಮ್ಮ ಕಲ್ಪನೆಯೇ ತಪ್ಪು. ಹಣ್ಣಿನಲ್ಲಿರುವುದು ಹುಳ ಅಲ್ಲ ಎಂದು ಅದರ ಅರ್ಥ. ನಾವು ಯಾವುದು ಸ್ವಭಾವತಃ ಸಹಜ ಚಲನೆ ಇದೆ ಅದನ್ನು ಹುಳ ಎಂದು ತಿಳಿದುಕೊಂಡಿದ್ದೇವೆ. ನಮಗೆ ಹುಳದ ಕಲ್ಪನೆ ಇಲ್ಲ. ಹುಳದ ಸ್ಪಷ್ಟತೆ ಇದ್ದರೆ ಇದಾಗುವುದಿಲ್ಲ. ಹಣ್ಣು ಯಾವಾಗ ಜೀವಶಕ್ತಿಯನ್ನು ಹೊಂದುತ್ತದೆಯೋ ಅವಾಗ ಅದು ನಿಮಗೆ ಹುಳದಂತೆ ಭಾಸವಾಗುತ್ತದೆ. ಶಾರ್ನ್ಗಾಧರ ಇದನ್ನು ಬಹಳ ಸ್ಪಷ್ಟಪಡಿಸಿದ್ದಾನೆ. ಅದು ಜೀವ ಶಕ್ತಿ. ಅದು ತಿನ್ನುವುದಕ್ಕೆ ಅರ್ಹ ಎಂದರ್ಥ. ಆಯುರ್ವೇದ ಶಾಸ್ತ್ರದಲ್ಲೂ ಎಲ್ಲೂ ಹೇಳಿಲ್ಲ. ಕೆಲವೊಂದು ಕಷಾಯ ಮಾಡಿ ಇಟ್ಟರೆ ಭೂಮಿಯಲ್ಲಿ ಇಷ್ಟು ದಿನ ಇರಬೇಕು ಎಂದಿದೆ. ಅದು ಕಷಾಯ ಎಂದು ಗೊತ್ತಾಗುವುದು ಹೇಗೆಂದರೆ ಅದರಲ್ಲಿ ಹುಳ ಆದಾಗ ಮಾತ್ರ. ಆಯುರ್ವೇದ ಹೇಳುವುದು ಅದನ್ನೇ. ಜೀವ ಶಕ್ತಿ ಉತ್ಪಾದನೆ ಆದರೆ ಮಾತ್ರ ಅದು ಕಷಾಯ. ಅಲ್ಲದಿದ್ದರೆ ಅದು ಕಷಾಯವಲ್ಲ. ಅಷ್ಟು ಸ್ಪಷ್ಟತೆ ಆಯುರ್ವೇದದಲ್ಲಿ ಇದೆ. ಇತ್ತೀಚಿಗೆ ಈ ಹುಳ ಎಂಬಂತಹ ಪ್ರವೃತ್ತಿಗಳು ಹೆಚ್ಚುತ್ತಾ ಹೋದದ್ದು. ಮುಂಚೆ ಇರಲಿಲ್ಲ. ಮನೆಯಲ್ಲಿ ಉಪ್ಪಿನಕಾಯಿ ಮಾಡಿಟ್ಟಿರುತ್ತೀರಿ, ಒಲೆಯ ಮೇಲೆ ಅಟ್ಟ ಇರುತ್ತದೆ, ಅಟ್ಟದ ಮೇಲೆ ಉಪ್ಪಿನ ಕಾಯಿ ಭರಣಿ ಇರುತ್ತದೆ. ಕತ್ತಲೆಯ ಜಾಗ. ಅಲ್ಲಿ ಹುಳ ಆಗಿರುತ್ತದೆ. ನಿಮಗೆ ಗೊತ್ತಿರುವುದಿಲ್ಲ. ನೀವು ತಿನ್ನುತ್ತೀರಿ. ನಿಮಗೆ ಏನೂ ಆಗಿರುವುದಿಲ್ಲ. ಮರುದಿನ ಹುಳ ಆಗಿದೆ ಎಂದು ಗೊತ್ತಾದಮೇಲೆ ಪುನಃ ತಿಂದರೆ, ನಿಮಗೆ ಏನೂ ಆಗುವುದಿಲ್ಲ ಅಲ್ಲವೇ? ನೀವು ನಿಮ್ಮ ಕಲ್ಪನೆಯಿಂದ ವಾಂತಿ ಮಾಡುತ್ತೀರಿ ಅಷ್ಟೇ, ಎಲ್ಲರ ಮನೆಯ ಉಪ್ಪಿನ ಕಾಯಿಯಲ್ಲಿಯೂ ೬ ತಿಂಗಳ ಬಳಿಕ ಹುಳ ಆಗಿಯೇ ಆಗುತ್ತದೆ. ಆದರೆ ಅದು ಹುಳ ಅಲ್ಲ. ಅಷ್ಟು ತೀಕ್ಷವಾಗಿ ಕ್ಷಾರಗಳನ್ನು ಸಂಯೋಜನೆ ಮಾಡಿದ್ದರೂ ಅಲ್ಲಿ ಜೀವ ಶಕ್ತಿ ಉತ್ಪನ್ನವಾಗಿದೆ ಎಂದರ್ಥ. ಸತ್ತ ಆಹಾರವನ್ನು ಖಂಡಿತವಾಗಿಯೂ ತಿನ್ನಬಾರದು. ಯಾವುದು ಕೊಳೆಯುತ್ತದೆ, ಸಾಯುತ್ತದೆ ಅದನ್ನು ತಿನ್ನಬಾರದು. ಸತ್ತಾಗ ಬರುವ ಹುಳ ಬೇರೆ. ಅನ್ನ ಮಾಡಿಟ್ಟು ಎರಡು ದಿನ ಬಿಟ್ಟರೆ ಅದರಲ್ಲಿ ಹುಳ ಬರುತ್ತದೆ. ಅದನ್ನು ತಿನ್ನಬಾರದು. ಅದು ಸತ್ತ ಆಹಾರದಲ್ಲಿ ಹುಟ್ಟಿದ ಹುಳ. ಅದು ಆಹಾರವನ್ನು ಬಳಸಿ ಉತ್ಪನ್ನವಾದ ಕ್ರಿಮಿ. ಅದು ವಿಷ. ಅದನ್ನು ತಿನ್ನಬಾರದು. ಅದು ಸ್ವಭಾವ ಸಹಜವಾಗಿ ಜೀವಂತವಿದ್ದಾಗ ಅದು ಜೀವ ಶಕ್ತಿ ಅಂದರ್ಥ ಅದು ನಿಷೇಧವಲ್ಲ. ಹಾಲಿನಲ್ಲಿ ಹುಳ ಇಲ್ಲವೇ? ನೀವು ಹಾಲಿಗೆ ಹೆಪ್ಪು ಹಾಕಿದಾಗ ಹೇಗೆ ಮೊಸರಾಗುತ್ತದೆ? ಅದು ಬ್ಯಾಕ್ಟೀರಿಯಾಗಳ ಸಂಯೋಜನೆ. ಅದು ನಿಮಗೆ ಕಾಣಿಸುವುದಿಲ್ಲ. ಹಾಗಾಗಿ ನಿಮಗೆ ಹಾಲು ಶುದ್ಧ. ಹಾಲನ್ನು ಎರಡು ದಿನ ಹಾಗೇ ಇಡೀ. ಹುಳಗಳು ನಿಜವಾಗಿ ಕಾಣಿಸತೊಡಗುತ್ತವೆ. ಮೊದಲು ಗೊತ್ತಾಗುವುದಿಲ್ಲ ಅಷ್ಟೇ. ಯಾವುದು ಜೀವ ಶಕ್ತಿ, ಯಾವುದು ವಿಷ ಎಂದು ಗುರುತಿಸುವುದನ್ನು ಬೆಳೆಸಿಕೊಳ್ಳಬೇಕು. ವಿಷವಾದ್ದನ್ನು ಬಳಸಬಾರದು. ಕೊಳೆತ ಕಾರಣದಿಂದ ಅಗತಕ್ಕಂತಹ ಕ್ರಿಮಿಯು ನಿಷೇಧ. ಸ್ವಾಭಾವಿಕ ಪರಿವರ್ತನೆ ಕಾರಣದಿಂದ ಅಗತಕ್ಕಂತಹ ಕ್ರಿಮಿಯಿಂದ ತೊಂದರೆ ಇಲ್ಲ. ಬಳಸಬಹುದು. ಬೆಲ್ಲದ ವಿಚಾರ ಬಂದಾಗ ನೊಣ ಕುಳಿತುಕೊಳ್ಳುತ್ತದೆ ಎಂದು ಹೇಳಿದಿರಲ್ಲ. ಬೆಲ್ಲ ತಯಾರು ಮಾಡುವ ಕಾರ್ಖಾನೆಯಲ್ಲೇ ಅದನ್ನು ಪ್ರತ್ಯೇಕಿಸಿ, ಶುದ್ಧ ಮಾಡಿ ಕಳಿಸುವುದು ಅವನ ಕೆಲಸ. ಆದರೆ ನೀವೇ ಪ್ರಸಾದ ಮಾಡುವಾಗ, ನೈವೇದ್ಯ ಮಾಡುವಾಗ ನೊಣ ಹೆಕ್ಕಿ ಹಾಕಿದರೆ ಒಳ್ಳೆಯದು. ಹಾಗೇ ಇರುವುದಲ್ಲ ಎಂದು ಸುರಿದು ಪಾಯಸ ಮಾಡುವುದು ಒಳ್ಳೆಯದಲ್ಲ. ಯಾಕೆಂದರೆ ಅದು ಕ್ರಿಮಿ. ಹುಳ ಅಲ್ಲ. ಅದು ಅಲ್ಲಿ ಹುಟ್ಟಿದ್ದಲ್ಲ. ಬೇರೆಕಡೆಯಲ್ಲಿ ಹುಟ್ಟಿ ತನ್ನ ಆಹಾರಕ್ಕಾಗಿ ಬೆಲ್ಲವನ್ನು ಆಶ್ರಯಿಸಿದ್ದು. ಆದರೆ ಹಣ್ಣಿನಲ್ಲಿರುವ ಹುಳ ಅಲ್ಲೇ ಹುಟ್ಟಿದ್ದು. ಈ ವ್ಯತ್ಯಾಸವನ್ನು ನೀವು ಅರಿಯಬೇಕು. ಹಾಗೆಯೆ ಬೇರೆ ಯಾವುದೊ ಇರುವೆ, ಅದು ಬೇರೆ ಕಡೆಯಲ್ಲಿ ಹುಟ್ಟಿ ತನ್ನ ಆಹಾರಕ್ಕಾಗಿ ಅಲ್ಲಿಗೆ ಬಂದಿದೆ. ಹಾಗಾಗಿ ಅದು ಕೂಡ ಕ್ರಿಮಿ. ಆದ್ದರಿಂದ ಯಾವುದು ಜೀವ ಅದು ನಿಷೇಧವಲ್ಲ, ಯಾವುದು ಕ್ರಿಮಿ ಅದು ನಿಷೇಧ. ಅದನ್ನು ತೆಗೆಯಬೇಕು. ಆದ್ದರಿಂದ ಬೆಲ್ಲವನ್ನು ಶುದ್ಧ ಮಾಡಿ ಹಾಕಿ. ಅಕ್ಕಿಯಲ್ಲೂ ಕೂಡ ೬ ತಿಂಗಳ ಬಳಿಕ ಸಹಜವಾಗಿ ಹುಳವಾಗುತ್ತದೆ. ಅದನ್ನು ತೊಳೆಯುವುದರ ಮುಖೇನ ಶುದ್ಧ ಮಾಡಬೇಕು. ಅಕ್ಕಿಯನ್ನು ಒಂದು ಸಾರಿ, ಎರಡು ಸಾರಿ ಅಥವಾ ಮೂರು ಸಾರಿ ತೊಳೆಯಬೇಕೆಂದು ಹೇಳಿದೆ. ಶ್ರಾದ್ಧಕ್ಕೆ ಹವಿಸ್ಸು ಮಾಡುವುದಿದ್ದರೆ ಒಂದೇ ಸಾರಿ ತೊಳೆಯಬೇಕು. ಅಲ್ಲಿ ಹುಳ ಇದೆಯೋ ಇಲ್ಲವೋ ಎಂದು ನೋಡುವ ಅಗತ್ಯ ಇಲ್ಲ. ಒಂದು ಸಾರಿ ತೊಳೆದಾಗ ಯಾವುದು ನೀರಿನ ಮೂಲಕ ಹೋಗಬಲ್ಲದೋ ಅದು ಹುಳ. ಹುಳ ಮತ್ತೂ ಉಳಿದಿದ್ದರೆ ಅದನ್ನು ತೊಳೆಯಬೇಕೆಂದಿಲ್ಲ. ನಿಮಗೋಸ್ಕರ ಅಡುಗೆ ಮಾಡುವಾಗ ಎರಡು ಸಲ ತೊಳೆಯಬೇಕು. ಎರಡು ಸಲ ತೊಳೆದಾಗ ಹೋದ ಹುಳ ಹೋಯಿತು. ಅದು ಹುಳ. ಉಳಿದದ್ದನ್ನು ಹೆಕ್ಕುವ ಅಗತ್ಯ ನಿಮಗೆ ಖಂಡಿತ ಇಲ್ಲ. ಅದು ಮೈಲಿಗೆ ಅಲ್ಲ. ಅದೇ ದೇವರ ನೈವೇದ್ಯಕ್ಕೆ, ವಿಶೇಷ ಅತಿಥಿಗಳ ನೈವೇದ್ಯಕ್ಕೆ, ಶ್ರಾದ್ಧ ಭೋಜನಕ್ಕೆ ಊಟ ತಯಾರಿಸುವಾಗ ಮೂರು ಸಲ ತೊಳೆಯಬೇಕು. ಈ ರೀತಿಯ ೧,೨,೩ ಬಾರಿಯ ತೊಳೆಯುವಿಕೆಗೂ ಸ್ಪಷ್ಟವಾದ ಕಾರಣವಿದೆ. ಶ್ರಾದ್ಧದಲ್ಲಿ ಪಿತೃಗಳನ್ನು, ಪಿತೃ ಸ್ವರೂಪದಲ್ಲಿ ಬ್ರಾಹ್ಮಣರನ್ನು ಕೂರಿಸಿ ಅವರ ಮೇಲೆ ಪಿತೃಗಳನ್ನು ಆಹ್ವಾನ ಮಾಡಿರುತ್ತೀರಿ. ಅವರು ನಿಮ್ಮ ಹಿರಿಯರು. ಈ ಋಣ ಕರ್ಮಭೂಮಿಯಿಂದ ನಿವೃತ್ತಿ ಪಡೆದು ಹೋದವರು. ಅವರಿಗೆ ಈ ಹುಳ ಎನ್ನುವುದು ಪ್ರವೃತ್ತಿ ಧರ್ಮ. ಆ ಪ್ರವೃತ್ತಿ ಧರ್ಮದ ಋಣವನ್ನು ಆರೋಪಿಸಬಾರದು ಎಂದು ೩ ಸಲ ತೊಳೆದು ಶುದ್ಧ ಮಾಡಬೇಕು ಎಂದರು. ಹಾಗಾಗಿ ಶ್ರಾದ್ಧ ಭೋಜನಕ್ಕೆ, ದೇವರ ನೈವೇದ್ಯಕ್ಕೆ ಮಾಡುವ ಅಕ್ಕಿಯಲ್ಲಿ ಹುಳ ಇಲ್ಲದಂತೆ ಹೆಕ್ಕಬೇಕು. ಯಾಕೆಂದರೆ ಈ ಋಣ ಅವರಿಗೆ ಆರೋಪಿಸಬಾರದು ಎಂದು. ಸಹಜ ಸ್ವಾಭಾವಿಕವಾಗಿ ಮನುಷ್ಯ ಭೂಮಿಯಲ್ಲಿ ಬದುಕುತ್ತಾನೆಂದರೆ ಅವನಿಗೆ ಋಣ ಇದೆಯೆಂದು ಅರ್ಥ. ಬದುಕಿದ್ದಷ್ಟು ದಿನ ಋಣ ಇದ್ದೇ ಇರುತ್ತದೆ. ಸತ್ತರೆ ಮಾತ್ರ ಋಣ ಇಲ್ಲ ಎಂದರ್ಥ. ಹಾಗಾಗಿ ೨ ಸಲ ತೊಳೆದರೆ ಸಾಕು, ಋಣ ಉಳಿದರೆ ಅಡ್ಡಿ ಇಲ್ಲ. ಅದೇ ಪಿಂಡಕ್ಕೆ ಹವಿಸ್ಸನ್ನು ಮಾಡುವ ಅಕ್ಕಿಯನ್ನು ಒಂದೇ ಸಲ ತೊಳೆದರೆ ಸಾಕು. ಏಕೆಂದರೆ ನೀವು ಕೊಡುವುದು ನಿಮ್ಮ ಋಣ -ಕರ್ಮಗಳನ್ನು. ಋಣ -ಕರ್ಮಗಳ ರೂಪದ ಪಿಂಡವನ್ನು ಅಲ್ಲಿ ಸ್ಥಾಪಿಸುತ್ತೀರಿ. ಈ ಋಣ -ಕರ್ಮಗಳ ಶ್ರಮದಿಂದಲೇ ಜ್ಞಾನ ಬರುವುದು. ಕರ್ಮವಿಲ್ಲದೆ ಜ್ಞಾನವಿಲ್ಲ. ಕರ್ಮದ ಮಂಥನದಿಂದಲೇ ಜ್ಞಾನ ಉದ್ಭವವಾಗುವುದು. ಆ ಜ್ಞಾನವನ್ನು ಪಡೆಯುವುದಕ್ಕಾಗಿ ಋಣ -ಕರ್ಮಗಳ ಸಹಿತವಾದ ಪಿಂಡವನ್ನು ಇಡುತ್ತೀರಿ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ಬಿಲ್ವ ಪತ್ರೆಯ ವಿಶೇಷತೆ


ಈ ಕಡೆ ಬಿಲ್ವಪತ್ರೆಯ ಹೂಗಳು ಸಿಗುವುದಿಲ್ಲ. ಅವುಗಳಲ್ಲಿಯೂ ಕೆಲವೊಂದಿಷ್ಟು ಪೂಜಾರ್ಹವಾದ ಗುಣಗಳಿವೆ. ತಂತ್ರ ಶಾಸ್ತ್ರದ ಪ್ರಕಾರ ಪೂಜೆಯಲ್ಲಿ ಬಿಲ್ವದ ಬೇರುಗಳನ್ನು ಹೇಳಿದೆ, ತೊಗಟೆಯನ್ನು ಹೇಳಿದೆ, ಪತ್ರೆಯನ್ನು ಹೇಳಿದೆ, ಪುಷ್ಪವನ್ನು ಹೇಳಿದೆ, ಹಾಗೆಯೆ ಫಲವನ್ನು ಹೇಳಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಇವುಗಳ ಬಳಕೆಯನ್ನು ಹೇಳಲಾಗಿದೆ. ಬಿಲ್ವದ ಗಂಧವನ್ನೂ ಹೇಳಿದ್ದಾರೆ. ಆಂಧ್ರ-ಒಡಿಶಾ ಕಡೆಗಳಲ್ಲಿ ಬಿಲ್ವ ಮರದ ಕೊರಡನ್ನು ತೇದಿ ಗಂಧ ತೆಗೆಯುತ್ತಾರೆ. ಅಲ್ಲಿ ಶ್ರೀಗಂಧದ ಕೊರಡನ್ನು ಬಳಸುವುದೇ ಇಲ್ಲ. ಬಿಲ್ವದ ಕೊರಡು ತುಂಬಾ ಉತ್ತಮವಾದ ಗಂಧವನ್ನು ನೀಡುತ್ತದೆ. ಬಿಲ್ವದ ಬೇರಿಗೆ ಅದರ ೧೦ ಪಟ್ಟು ಗಂಧವನ್ನು ನೀಡುವ ಶಕ್ತಿ ಇದೆ. ಆದರೆ ಬೇರಿನಿಂದ ಬರುವ ಗಂಧವನ್ನು ಹೆಚ್ಚಾಗಿ ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ದೇವಾಲಯಗಲ್ಲಿಯೂ ಇದನ್ನು ಬಳಸುವುದಿಲ್ಲ. ಏಕೆಂದರೆ ಬೇರನ್ನು ತೆಗೆದಾಗ ಮರವು ಸಾಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿಕೃತವಾಗಿ ಬೇರನ್ನು ತೆಗೆಯುವಂತಿಲ್ಲ. ಎಲ್ಲಿ ಬಿಲ್ವ ಮರದ ಬೇರನ್ನು ಕತ್ತರಿಸುತ್ತೀರೋ ಅಲ್ಲಿ ಇನ್ನೊಂದು ಮರ ಹುಟ್ಟುತ್ತದೆ. ಅದೇ ಬೇರು ಮೇಲೆ ಬಂದು ಗಿಡವಾಗುತ್ತದೆ. ಹೀಗೆ ಬೇರನ್ನು ಕತ್ತರಿಸುತ್ತಾ ಹೋದಾಗ ಮರ ಸಾಯುತ್ತದೆ. ಬಿಲ್ವದ ಮರ ಎಲ್ಲೆಂದರಲ್ಲಿ ಬೆಳೆಯುವುದಿಲ್ಲ. ಅದನ್ನು ಬೆಳೆಸುವುದು ಬಲು ಕಷ್ಟಕರ. ಹಾಗಾಗಿ ಬೇರನ್ನು ಸಾರ್ವತ್ರಿಕವಾಗಿ ದೇವಾಲಯಗಳಲ್ಲಿ ಗಂಧವಾಗಿ ಬಳಸುವುದಿಲ್ಲ. ಆದರೆ ಬಿಲ್ವದ ಕೊರಡನ್ನು ಶ್ರೀಗಂಧ, ಚಂದನದಂತೆ ಗಂಧವಾಗಿ ಬಳಸುವ ಕ್ರಮ ಇದೆ. ಅದು ಔಷಧಿಯಾಗಿಯೂ ಆಗುತ್ತದೆ. ಹಾಗೆಯೆ ಪತ್ರೆಯ ಭಾಗವನ್ನು ತೆಗೆದುಕೊಂಡರೆ, ಮೊದಲು ಅದನ್ನು ನೀರಿನಿಂದ ತೊಳೆದು ಕಸ, ಕಷ್ಮಲಗಳನ್ನು ಬೇರ್ಪಡಿಸಬೇಕು. ಆಮೇಲೆ ನೀರಿನಲ್ಲಿ ೧೦ ನಿಮಿಷ ಹಾಕಿಟ್ಟರೆ ಒಂದಷ್ಟು ಔಷಧೀಯ ಅಂಶಗಳನ್ನು ನೀರಿಗೆ ಬಿಡುತ್ತದೆ. ಇದು ಅತ್ಯುತ್ತಮವಾದ ಪಾನೀಯ ಜಲ. ಕುಡಿಯಲು ಅತೀ ಶ್ರೇಷ್ಠವಾದುದು. ಮಳೆ ಬಾರದೇ ಇದ್ದಾಗ, ಮಳೆ ತುಂಬಾ ಹಿಂದೆ ಹೋದಾಗ ಬೇರೆ ಎಲ್ಲ ಕುಡಿಯುವ ನೀರೂ ಹಾಳಾಗುತ್ತದೆ. ಬಾವಿಯಲ್ಲಿ ನೀರಿದ್ದರೂ ಕೂಡ ಆಳಕ್ಕೆ ಹೋಗಿ ಕುಡಿಯಲು ಅನರ್ಹವಾಗಿರುತ್ತದೆ. ಇದಕ್ಕೆ ಸುಲಭ ಉಪಾಯ ಬಿಲ್ವಪತ್ರೆ. ನೀರನ್ನು ಎರಡು ಕೊಡ ಎಳೆದಿಟ್ಟು ಬಿಲ್ವಪತ್ರೆಯನ್ನು ಹಾಕಿದರೆ ಸಾಕು ನೀರು ಪರಿಶುದ್ಧವಾಗಿ ಬಿಡುತ್ತದೆ. ಹಾಳಾದ ನೀರಿಂದ ಬರುವ ಗಂಟಲು ಕೆರೆತ, ಕಫ ಇತ್ಯಾದಿಗಳಿಗೆ ಇದು ಪರಿಹಾರ ನೀಡುತ್ತದೆ. ಬಿಲ್ವಪತ್ರೆಗೆ ಅಷ್ಟು ಶಕ್ತಿ ಇದೆ. ಅದಕ್ಕಾಗಿಯೇ ಹೇಳಿದ್ದು, ಪೂಜೆಯಲ್ಲಿ ಇವತ್ತು ಏರಿಸಿದ ಬಿಲ್ವಪತ್ರೆಯನ್ನು ತೊಳೆದರೆ ನಾಳೆ ಕೂಡ ಏರಿಸಬಹುದು ಎಂದು. ಅದರರ್ಥ ನೀರಿಗೆ ಹಾಕಿದ ತಕ್ಷಣ ನೀರು ಶುದ್ಧವಾಯಿತು. ಹೀಗೆ ಎಷ್ಟು ಬಾರಿ ಕೂಡ ಬಿಲ್ವ ಪತ್ರೆಯ ಮೂಲಕ ನೀರನ್ನು ಶುದ್ಧಗೊಳಿಸಬಹುದು. ಬಿಲ್ವಪತ್ರೆ ತನ್ನ ಗುಣ ಕಳೆದುಕೊಳ್ಳುವುದಿಲ್ಲ. ಹೀಗೆ ೨೧ ದಿನಗಳ ಕಾಲ ನೀರಿನ ಸಂಪರ್ಕದಿಂದ ನೀರನ್ನು ಶುದ್ಧಗೊಳಿಸಿ ತನ್ನ ಗುಣ ಕಾಯ್ದುಕೊಳ್ಳುವ ಶಕ್ತಿ ಬಿಲ್ವಪತ್ರೆಗಿದೆ. ಆದರೆ ಒಂದು ಬಿಲ್ವ ಫಲ ೧೦೦ ವರ್ಷಗಳ ಕಾಲ ತನ್ನ ಶಕ್ತಿಯನ್ನು ಉಳಿಸಿಕೊಳ್ಳಬಲ್ಲದು. ಔಷಧವಾಗಿ ಬಿಲ್ವಾದಿ ತೈಲ ಇತ್ಯಾದಿಗಳನ್ನು ಕೇಳಿರಬಹುದು. ಇವುಗಳಲ್ಲೆಲ್ಲ ೧೦೦ ವರ್ಷಗಳ ಕಾಲ ತನ್ನ ಔಷಧೀಯ ಗುಣಗಳನ್ನು ಬಿಲ್ವವು ಉಳಿಸಿಕೊಳ್ಳುತ್ತದೆ. ಹಾಗಾಗಿ ಇದು ಅತಿ ವಿಶಿಷ್ಟವಾದ ಮರ, ಭಾರತದಾದ್ಯಂತ ಮಾತ್ರ ಕಾಣಸಿಗುತ್ತದೆ (ಅಂದರೆ ಬಲೂಚಿಸ್ತಾನದಿಂದ - ಬರ್ಮಾದ ವರೆಗೆ, ದಕ್ಷಿಣದ ಶ್ರೀಲಂಕಾದ ವರೆಗೆ). ವಿದೇಶದಲ್ಲೆಲ್ಲೂ ಕಾಣಸಿಗುವುದಿಲ್ಲ. ಇದೇ ಲಕ್ಷಣ ಇರುವ ಭೂಮಿ ಇದ್ದರೂ ವಿದೇಶದಲ್ಲಿ ಇದು ಬೆಳೆಯುವುದಿಲ್ಲ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ಪ್ರಶ್ನೋತ್ತರ - ೧

ಪ್ರಶ್ನೆ: ಗುರುಗಳೇ, ಪೂಜೆಗೆ ಸುಗಂಧಭರಿತ ಪುಷ್ಪಗಳನ್ನೇ ಬಳಸಬೇಕೆ ಅಥವಾ ಸುಗಂಧವಿಲ್ಲದ ಸಾಮಾನ್ಯ ಪುಷ್ಪ ಬಳಸಬಹುದೇ? ಉತ್ತರ : ತಂತ್ರ ಶಾಸ್ತ್ರವು ಗಂಧವಿಲ್ಲದ್ದನ್ನು ಹೂವು ಎಂದೇ ಹೇಳಿಲ್ಲ. ವಿಶಿಷ್ಟವಾದ, ಗೃಹಣಯೋಗ್ಯವಾದ ಗಂಧವನ್ನು ಹೊಂದಿರಬೇಕೆಂದು ಹೇಳುತ್ತದೆ. ಮನಸ್ಸಿಗೆ ಆನಂದ ನೀಡತಕ್ಕ, ಮುದ ನೀಡತಕ್ಕ ಪರಿಮಳ ಹೊಂದಿರುವಂತಹವು ಮಾತ್ರ ಹೂವುಗಳು. ಉಳಿದವು ಹೂವಲ್ಲ. ಹೂವಿನಂತೆ ಇದ್ದದ್ದೆಲ್ಲ ಹೂವಾಗುವುದಿಲ್ಲ. ಅಥವಾ ಆಕರ್ಷಕ ಬಣ್ಣಗಳನ್ನು ಹೊಂದಿರುವ ಎಲೆಗಳು ಹೂವಾಗಲು ಸಾಧ್ಯವಿಲ್ಲ. ಹಾಗೆಯೇ ಬಣ್ಣವೂ ಹೂವಲ್ಲ ಅಥವಾ ಆಕಾರವೂ ಹೂವಲ್ಲ. ಹೂವು ಎನ್ನುವುದೇ ಗಂಧ ಕಾರಣದಿಂದ. ಹಾಗಾಗಿ ಉಳಿದವುಗಳನ್ನು ಪೂಜೆಗೆ ಇಡಬಾರದು, ಇಡಬಹುದು ಎನ್ನುವುದು ಕೆಲವೊಂದಿಷ್ಟು ಸಂದರ್ಭಗಳಲ್ಲಿ ಪ್ರಾಪ್ತ ಇತ್ಯಾದಿಗಳನ್ನು ಅವಲಂಬಿಸಿದೆ. ಯಾವ ಹೂವೂ ಸಿಕ್ಕಿಲ್ಲ, ವಿಗ್ರಹವನ್ನು ಹಾಗೆಯೇ ಅಭಿಷೇಕ ಮಾಡಿ ಬೋಳಾಗಿ ಇಡಲಿಕ್ಕೆ ಮನಸ್ಸಿಗೆ ಒಪ್ಪುವುದಿಲ್ಲ. ಏನೋ ಒಂದು ಆಚ್ಛಾದನೆ ಮಾಡಬೇಕು. ಹೂವು ಸಿಗದೇ ಇದ್ದರೆ ಕೊನೆಗೆ ಪತ್ರೆಯನ್ನಾದರೂ ಉಪಯೋಗಿಸಿ ದೇವರನ್ನು ಸ್ವಲ್ಪ ಭಾಗ ಆಚ್ಛಾದನೆ ಮಾಡಿಯೇ ಇತರ ಅಲಂಕಾರ ಪೂಜೆಗಳನ್ನು ಮಾಡಬೇಕು ಎಂದು ಹೇಳುತ್ತದೆ. ಗಂಧ ಇಲ್ಲದ ಹೂವುಗಳನ್ನೇ ಬಳಸಿ, ಇಲ್ಲವೇ ಪತ್ರೆಗಳನ್ನೇ ಬಳಸಿ ಆದರೆ ಹೂವು ಎನ್ನುವುದು ಮಾತ್ರ ಗಂಧ ಇದ್ದದ್ದಕ್ಕೆ ಮಾತ್ರ. ಅದು ಸ್ಪಷ್ಟ.

ಪ್ರಶ್ನೆ: ನೀವು ಹೂವುಗಳಲ್ಲಿರುವ ಸುಗಂಧಗಳ ಬಗ್ಗೆ ಹೇಳಿದ್ದೀರಿ. ಮಂದಾರ ಪುಷ್ಪಕ್ಕೆ ಯಾವ ಸುಗಂಧ ಇದೆ?

ಸ್ವಾಮೀಜಿ: ಅದಕ್ಕೆ ಸ್ನಿಗ್ಧ ಎಂದು ಹೇಳಲಾಗುತ್ತದೆ. ಸ್ನಿಗ್ಧ ಗಂಧಾ ಇತಿ ಮನ್ದಾರಃ. ಹೀಗೆ ಬೇರೆ ಬೇರೆ ಪುಷ್ಪಗಳಿಗೆ ಹೇಳಲಾಗಿದೆ. ಮಂದಾರವನ್ನು ಸ್ವಲ್ಪ ಕಾಲ ಆಗ್ರಾಣಿಸಿದರೆ ಅದು ನಿಮ್ಮ ಗಮನಕ್ಕೆ ಬರುತ್ತದೆ. ಅದೇ ದೀರ್ಘವಾಗಿ ಆಗ್ರಾಣಿಸಿದರೆ ಒಂದು ದಿನವಿಡೀ ಅದರ ಸುಗಂಧ ನಿಮ್ಮ ಮೈಯಲ್ಲಿ ಇರುತ್ತದೆ.

ಪ್ರಶ್ನೆ: ದೇವಸ್ಥಾನದ ಒಳಗಡೆ ಕೇವಲ ಒಳ್ಳೆಯದನ್ನೇ ಮಾತನಾಡಬೇಕು ಅಥವಾ ಅದನ್ನು ಬಿಟ್ಟು ಬೇರೆಯದನ್ನು ಮಾತನಾಡಲೇ ಬಾರದು, ಬೈಯ್ಯಬಾರದು ಎಂದೆಲ್ಲ ಇದೆ. ಅದನ್ನು ಬೋರ್ಡ್ ಹಾಕಿ ಪ್ರಕಟಿಸಬೇಕೇ?

ಸ್ವಾಮೀಜಿ: ಮಂತ್ರವೊಂದನ್ನು ಬಿಟ್ಟು ಬೇರೆ ಏನನ್ನೂ ಗರ್ಭಗುಡಿಯ ಒಳಗಡೆ ಮಾತನಾಡುವಂತಿಲ್ಲ. ಆರತಿ ಹಚ್ಚಿಕೊಡು, ಎಲ್ಲಿ ಹಾಳಾಗಿ ಹೋದೆ? ಎಂದೆಲ್ಲ ಬಯ್ಯುವಂತಿಲ್ಲ. ಅದಕ್ಕೆ ಅವಕಾಶವೇ ಇಲ್ಲ. ಮಂತ್ರವೊಂದನ್ನು ಬಿಟ್ಟು ಬೇರೆ ಏನನ್ನೂ ಮಾತನಾಡುವ ಅಗತ್ಯ ಇಲ್ಲ. ಅದಕ್ಕೋಸ್ಕರವೇ ಪ್ರಧಾನ ಅರ್ಚಕನಷ್ಟೇ ಸಮರ್ಥನಾದ ಸಹಚರಿ ಇರುತ್ತಾನೆ. ಅವನನ್ನು ಕೀಳುಶಾಂತಿ ಎಂದು ಕರೆಯಲಾಗುತ್ತದೆ. ಅವನು ಪ್ರಧಾನ ಅರ್ಚಕನಷ್ಟೇ ಸಾಮರ್ಥ್ಯ ಹೊಂದಿದ್ದು ಗರ್ಭಗುಡಿಯ ಒಳಗೆ ನಡೆಯುವ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಂಡು ಹೊರಗಿನಿಂದ ಸೌಲಭ್ಯಗಳನ್ನು ವಹಿಸಿಕೊಡಬೇಕು. ಒಳಗೆ ಎಲ್ಲ ಸೌಲಭ್ಯಗಳನ್ನು ಒಂದೇ ಸಾರಿ ತುಂಬಿಸಿಡಲು ಬರುವುದಿಲ್ಲ. ಸಾಮಾನ್ಯವಾಗಿ ಎಷ್ಟೋ ಆಗಮೋಕ್ತ ದೇವಸ್ಥಾನಗಳಲ್ಲಿ, ಜನರನ್ನು ಇಟ್ಟುಕೊಳ್ಳುವ ಸಾಮರ್ಥ್ಯ ಇದ್ದಲ್ಲಿ ಇಬ್ಬರು ಇದ್ದೇ ಇರುತ್ತಾರೆ. ಒಳಗಿದ್ದವನು ಕೊಡು ಎಂದು ಕೂಡ ಮಾತನಾಡುವಂತಿಲ್ಲ. ಮಂತ್ರ ಹೇಳುವುದು ಮಾತ್ರ, ಮತ್ತೆ ಮೌನ. ದೇವಸ್ಥಾನದ ಒಳಪ್ರಾಕಾರಗಳಲ್ಲಿಯೂ ಇದನ್ನು ಪಾಲಿಸಿದರೆ ತುಂಬಾ ಒಳ್ಳೆಯದು. ಇತರ ಶಬ್ದ ಮಾತನಾಡುವುದಕ್ಕಿಂತ, ತಾವು ಯಾವ ದೇವರ ದರ್ಶನಕ್ಕೆ ಬಂದಿದ್ದೇವೆಯೋ ಆ ದೇವರ ನಾಮಾವಳಿಯನ್ನು ಜಪಿಸುವುದು ಒಳ್ಳೆಯದು. ದೇವಸ್ಥಾನದ ಪ್ರಕಾರದ ಹೊರಗೆ ಬಂಡ ನಂತರ ಇತರ ಸಂಭಾಷಣೆ ಮಾಡಬಹುದು.

ಶಿವ ದೇವಸ್ಥಾನಗಳಲ್ಲಿ ಸಾಲಿಗ್ರಾಮ ಇಟ್ಟು ಪೂಜೆ

ಅವೆಲ್ಲಾ ಇತ್ತೀಚೆಗೆ ಹುಟ್ಟಿಕೊಂಡಂತಹ ಕೆಲವೊಂದಿಷ್ಟು ಸಮಸ್ಯೆಗಳು. ಅದು ಯಾವುದೂ ಆಗಮ ಶಾಸ್ತ್ರಕ್ಕೆ ಸಂಬಂಧಪಟ್ಟದ್ದಲ್ಲ. ಶಿವಲಿಂಗವನ್ನು ನೇರವಾಗಿ ಪೂಜೆ ಮಾಡಬಾರದು ಎಂದು ಎಲ್ಲೂ ಹೇಳಿಲ್ಲ. ಎಲ್ಲ ದೇವರ ಮೊದಲ ಸ್ವರೂಪವೂ ಅದೇ. ನಂತರ ಅದಕ್ಕೆ ಆಕಾರ ಕೊಟ್ಟಾಗ ಬೇರೆ ಬೇರೆ ನಾಮಕರಣ. ಅಷ್ಟು ಬಿಟ್ಟರೆ ಇರುವುದೆಲ್ಲಾ ಸ್ತಾರವಾಗಲೀ, ಭರ್ಗವಾಗಲೀ ಎಲ್ಲ ಸ್ವರೂಪ ನಿರಾಕಾರ. ಎಲ್ಲ ದೇವರೂ ನಿರಾಕಾರ ಸ್ವರೂಪವೇ. ನಂತರ ಅದಕ್ಕೆ ಆಕಾರ ಕೊಟ್ಟು ರೂಪ ಕೊಡುವಂತದ್ದು. ಅದಕ್ಕೆ ಮತ್ತೊಂದು ಆ ರೀತಿಯ ನಿರಾಕಾರ ಸ್ವರೂಪದ ಸಾಲಿಗ್ರಾಮವನ್ನು ಇಡಬೇಕಾದ ಅಗತ್ಯ ಇಲ್ಲ. ಅಲ್ಲಿ ಸಾಲಿಗ್ರಾಮವನ್ನು ಇಡುವುದೇ ನಿರಾಕಾರ ಸ್ವರೂಪ ಎನ್ನುವ ದೃಷ್ಟಿಯಿಂದ. ನಿರಾಕಾರ ಶಿವಲಿಂಗ ಇರುವಾಗ ಮತ್ತೊಂದು ನಿರಾಕಾರ ಏಕೆ ಅಲ್ಲಿ ಇಡಬೇಕು? ಆಗಮದಲ್ಲಿ ಅದಕ್ಕೆ ವಿಶೇಷವಾದ ಮಹತ್ವವನ್ನು ಕೊಟ್ಟಿಲ್ಲ. ಏಕೆಂದರೆ ಆಗಮ ಶಾಸ್ತ್ರ ಬರೆಯುವ ಕಾಲದಲ್ಲಿ ಇವೆಲ್ಲ ಸಮಸ್ಯೆ ಇರಲಿಲ್ಲ. ನಂತರ ಹುಟ್ಟಿಕೊಂಡ ಸಮಸ್ಯೆಗಳಿಗೆ ಯಾರ್ಯಾರೋ ತಾತ್ಕಾಲಿಕ ಪರಿಹಾರದ ವಿಧಿಯನ್ನು ಹೇಳಿದಾಗಲೂ ಕೂಡ ಹೇಳುವುದೇನೆಂದರೆ ಶಿವಲಿಂಗವೇ ನಿರಾಕಾರಾವಾದ್ದರಿಂದ ಸಾಲಿಗ್ರಾಮ ಪ್ರಸ್ತುತ ಅಲ್ಲ. ಎರಡು ನಿರಾಕಾರಗಳನ್ನು ಇಟ್ಟ ಹಾಗೆ ಆಗುತ್ತದೆ ಅಷ್ಟೇ. ಅದರಿಂದ ಏನೂ ಆಗುವುದೂ ಇಲ್ಲ, ಅಗತ್ಯವೂ ಇಲ್ಲ. ಎರಡೂ ಒಂದೇ ಆಗಿದೆ. ಇವು ಇತ್ತೀಚೆಗೆ ಹುಟ್ಟಿಕೊಂಡ ಕೆಲವು ಅವರವರದ್ದಾದ ಹೆಚ್ಚುಗಾರಿಕೆ ತೋರಿಸುವ ಪ್ರಯತ್ನಗಳಾಗಿವೆ. ಅಷ್ಟು ಬಿಟ್ಟರೆ ಸತ್ಯ ಅಲ್ಲ. ಇತ್ತೀಚೆಗೆ ವಿದೇಶವನ್ನು ಸುತ್ತಿಕೊಂಡು ಬಂದವರೊಬ್ಬರು ಕೇಳುತ್ತಿದ್ದರು. ವಿದೇಶದಲ್ಲಿ ಒಂದು ಕ್ಷೇತ್ರ ಇದೆ. ಅದು ಈಶ್ವರನ ಆರಾಧನಾ ಸ್ಥಳ ಎಂದು ಒಂದಿಷ್ಟು ಜನ ಹೇಳುತ್ತಾರೆ. ಹಾಗೇ ಒಂದಷ್ಟು ಜನ ಅದು ಮೊಹಮ್ಮದೀಯರ ದೈವಿಕ ನಂಬಿಕೆಯ ಕ್ಷೇತ್ರ ಎಂದು ಹೇಳುತ್ತಾರೆ. ಅಲ್ಲಿ ಅಪ್ರದಕ್ಷಿಣೆಯಾಗಿ ಸುತ್ತುತ್ತಾರೆ. ಇದು ಸರಿಯೇ ಎಂದು ಕೇಳಿದರು. ಅದು ಹೇಗೆಯೇ ಇರಲಿ. ಒಂದು ನಿರ್ಮಾಣ, ಒಂದು ಕಟ್ಟಡವಂತೂ ಅಲ್ಲಿದೆ. ಒಳಗೆ ಏನಿದೆ ಎನ್ನುವುದು ಮುಖ್ಯವಲ್ಲ. ಯಾವುದೇ ಒಂದು ನಿರ್ಮಾಣ ಕಟ್ಟಡವೇ ಇದ್ದರೂ ಅಲ್ಲಿ ಅಪ್ರದಕ್ಷಿಣೆಯಾಗಿ ಸುತ್ತುತ್ತಾ ಇದ್ದರೆ ಆ ಒಂದು ನಂಬಿಕೆಯನ್ನು ಬೆಳೆಸಿಕೊಂಡು ಬಂದಿರುವ ಮನುಷ್ಯನ ಮನಸ್ಸೆಲ್ಲವೂ ಕ್ರೂರವಾಗುತ್ತಾ ಹೋಗುತ್ತದೆ. ಅದೇ ಪ್ರದಕ್ಷಿಣೆ ತಿರುಗಿದರೆ ಶಾಂತವಾಗುತ್ತಾ, ಸುಪ್ತವಾಗುತ್ತಾ ಹೋಗುತ್ತದೆ. ಕ್ರೂರವಾಗುತ್ತಾ ಹೋಗುತ್ತದೆ ಎನ್ನುವುದಕ್ಕೆ ನಿಮಗೆ ಆಧಾರಗಳು ಬೇಕಿಲ್ಲ ಎಂದು ನನ್ನ ಭಾವನೆ. ಹಾಗೆಯೇ ಕ್ರೂರವಾಗುತ್ತಾ ಹೋಗಲಿ, ಅದಕ್ಕೊಂದು ಪರಿಹಾರ ಆಗ ಸಿಗುತ್ತದೆ. ರಾವಣ ಮುಂತಾದ ಎಷ್ಟೆಲ್ಲ ರಾಕ್ಷಸರು ಕ್ರೂರಿಗಳಾದರು, ಕಂಸನೂ ಕ್ರೂರಿಯಾಗಿ ಹುಟ್ಟಿ ಎಷ್ಟೆಲ್ಲ ಕಷ್ಟಗಳನ್ನು ನೀಡಿದ. ಏನಾದರೂ ಆಯಿತೇ? ಕಡೆಗೆ ಎಲ್ಲವೂ ಸರಿಯಾಯಿತಲ್ಲವೇ? ಅಲ್ಲಿಯವರೆಗೆ ಕಾಯೋಣ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ಪ್ರದಕ್ಷಿಣೆಯಾಗಿ ಸುತ್ತು - ಅರ್ಧ ಸುತ್ತು

ಔಷಧಿಗೆ ಈಶ್ವರನೇ ಅಧಿಪತಿ. ಹಿಂದೆ ಕೆಲವು ಭಾಗಗಳಲ್ಲಿ ಚಿಕಿತ್ಸಾಲಯವಾಗಿ ಶಿವಾಲಯಗಳನ್ನು ಕಟ್ಟುತ್ತಿದ್ದರು. ಅಲ್ಲಿ ಪಶುಪತಿ ದೇವರು. ಪಶುಪತಿಯ ರೂಪದಲ್ಲಿ ಶಿವನ ಆರಾಧನೆಯಾಗುತಿತ್ತು. ಅಲ್ಲಿ ಲಿಂಗ ಮತ್ತು ಒಳಪ್ರಾಕಾರದಷ್ಟು ಭಾಗದ ಕೆಳಗೆ ದೊಡ್ಡ ಒಂದು ಚಾವಡಿ ಇರುತಿತ್ತು. ಗರ್ಭಗುಡಿಯ ನಾಳ ಒಂದು ಮಾತ್ರ ಮೇಲೆ ಹೋಗುವುದು ಬಿಟ್ಟರೆ ಉಳಿದೆಲ್ಲ ಭಾಗ ಚಾವಡಿಯಂತೆ ಇರುತಿತ್ತು. ಅಲ್ಲಿ ಕೆಲವೊಂದಿಷ್ಟು ರೋಗಗಳಿಗೆ ಸರಳವಾದ ಚಿಕಿತ್ಸೆ ಕೊಡುವುದು ಸಾಧ್ಯವಿತ್ತು. ಅಂತಹ ವ್ಯವಸ್ಥೆ ಮಾಡಿದ್ದರು. ಅದರ ಬಿರಡೆ ಇದ್ದದ್ದು ನೀವು ಈಗ ಅರ್ಧ ಸುತ್ತು ಬಂದು ಚಂಡೇಶ್ವರನಿಗೆ ಸುತ್ತು ಹಾಕಿ ಹೋಗುತ್ತೀರಲ್ಲ ಆ ಪ್ರದೇಶದಲ್ಲಿ. ಅದನ್ನು ತಿರುಗಿಸಿದರೆ ಕೆಳಗೆ ಹೋಗಲು ಮೆಟ್ಟಿಲು ಸಿಗುತ್ತದೆ. ಅಲ್ಲಿಂದ ರೋಗಿಗಳನ್ನು ಕೆಳಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಕುಳ್ಳಿರಿಸಿ ಮೇಲೆ ಆಗತಕ್ಕಂತಹ ರುದ್ರ ಪಾರಾಯಣ ಇತ್ಯಾದಿಗಳನ್ನು ಸಂಯೋಜಿಸಿ ಚಿಕಿತ್ಸೆ ಕೊಡುತ್ತಿದ್ದರು. ಯಾವುದೇ ವೆಚ್ಚ ಇರುತ್ತಿರಲಿಲ್ಲ. ಮನೋರೋಗಗಳಿಗಂತೂ ಅದು ಉತ್ತಮವಾದ ಚಿಕಿತ್ಸೆಯಾಗಿತ್ತು. ಅದು ಪಶುಪತಿ ಕಲ್ಪದಲ್ಲಿ ಪ್ರತಿಷ್ಟೆಯಾದ ದೇವಸ್ಥಾನಗಳಲ್ಲಿ ಮಾತ್ರ. ನಂತರ ಅದರ ನ್ಯಾಸ ರೂಪವಾಗಿ ಇಡುವ ಕ್ರಮ ಬಂತು. ಎಲ್ಲ ಶಿವಾಲಯಗಳಲ್ಲೂ ತಂತ್ರೋಕ್ತವಾಗಿ ಬಲಿ ಕಲ್ಲುಗಳನ್ನು ಪ್ರತಿಷ್ಟಾಪನೆ ಮಾಡುವಾಗ ಚಂಡೇಶ್ವರ ಎಂದು ಅಲ್ಲಿ ಇಡುವ ಕ್ರಮ ಬಂತು. ಆ ಪಶುಪತಿ ದೇವಾಲಯವಾದರೆ ಆ ಕಲ್ಲಿನ ಮೇಲೆ ಓಡಾಡಲು ಬರುವುದಿಲ್ಲ. ಅಲ್ಲಿನ ಬಾಗಿಲಿನ ಕಲ್ಲಿನ ಬಿರಡೆ ತಿರುಗಿಸಿದರೆ ಮೇಲಕ್ಕೆ ಹೋಗುತ್ತದೆ ಮತ್ತು ಬಿರಡೆ ತಿರುಗಿಸಿದರೆ ಕೆಳಕ್ಕೆ ಹೋಗುತ್ತದೆ. ಅದರ ಮೇಲೆ ಓಡಾಡಿದಾಗ ಅಕಸ್ಮಾತ್ ಕೆಳಕ್ಕೆ ಬೀಳುವ ಸಂಭವ ಇರುತ್ತದೆ. ಅದಕ್ಕೆ ಅದರ ಮೇಲೆ ಓಡಾಡಬಾರದು ಎಂದು ಅಲ್ಲಿಯ ವರೆಗೆ ಬಂದು ವಾಪಾಸು ಹೋಗುವ ಕ್ರಮ ಪಶುಪತಿ ದೇವಸ್ಥಾನದಲ್ಲಿ ಮಾತ್ರ ಇದ್ದದ್ದು. ಈ ನ್ಯಾಸ ಇದ್ದಲ್ಲೆಲ್ಲ ಓಡಾಡಬಾರದು ಎಂದೇನಿಲ್ಲ. ಆದರೆ ಅಲ್ಲಿ ಇದೆಯಲ್ಲ ಎಂದು ಇಲ್ಲೂ ಅನುಸರಿಸುವ ಕ್ರಮ ಬಂದಿತು. ಅದು ಖಂಡಿತ ಪೂರ್ಣ ಅಲ್ಲ. ಪೂರ್ಣ ಪ್ರದಕ್ಷಿಣೆ ಬರಬೇಕು. ಅಲ್ಲಿ ಯಾವುದೋ ಆಡಳಿತ ಮಂಡಳಿ ಇದೆ, ಅದು ನಿರ್ದೇಶನ ಮಾಡಿದೆ ಎಂದರೆ ಅಲ್ಲಿ ಅದು ಅನಿವಾರ್ಯ, ನೀವು ವಾಪಾಸು ತಿರುಗಿ ಬನ್ನಿ. ಜಗಳ ಮಾಡಬೇಡಿ ಅಥವಾ ಹೋಗಲೇಬೇಡಿ. ಆದರೆ ನೀವು ನಿಮ್ಮ ದೇವಸ್ಥಾನದಲ್ಲಿ ಪೂರ್ಣ ಪ್ರದಕ್ಷಿಣೆ ಬನ್ನಿ. ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

ಕೇರಳದವರು ಬಂದು ಅಶುದ್ಧಿಯ ಬಗ್ಗೆ ಹೇಳಲು ಅವರಿಗೆ ಸಿಗುವ ಆಧಾರಗಳೇನು?

ಆಧಾರವೇ ಇಲ್ಲ. ಯಾವುದೋ ಪ್ರದೇಶದ ಜ್ಯೋತಿಷಿ ಬಂದು ನಿಮ್ಮಲ್ಲಿ ಅಶೌಚದವರು ಒಳಗೆ ಹೋಗಿದ್ದಾರೆ, ಅಶುದ್ಧಿಯಾಗಿದೆ ಎಂದೆಲ್ಲ ಹೇಳಿದರೆ ಅದು ಖಂಡಿತ ಅವರ ಕಲ್ಪನೆ. ಸತ್ಯ ಅಲ್ಲ. ಹೇಗೆ ಹೇಳುತ್ತಾರೆ ಎಂದರೆ ಅವರಿಗೆವಾಕ್ ಸ್ವಾತಂತ್ರ್ಯ ಇದೆ. ನೀವು ಕೇಳಿದ್ದಕ್ಕೆ ಪರಿಹಾರ ಕೊಡಲು ಅವರು ಬದ್ಧರೂ ಅಲ್ಲ. ಹೇಳಿ ಹೋಗುವುದು ಮಾತ್ರ. ನಂತರ ಪರಿಹಾರ ಆಗಲಿಲ್ಲ ಎಂದರೂ ಅದಕ್ಕೂ ಅವರು ಜವಾಬ್ದಾರರಲ್ಲ. ಹಾಗಾಗಿ ಅವರಿಗೆ ಹೇಳುವ ಅಧಿಕಾರ ಇದೆ! ನೀವು ಕರೆಸಿರುತ್ತೀರಿ, ಅದ್ಧೂರಿಯಾದ ದಕ್ಷಿಣೆ ಕೊಡುತ್ತೀರಿ. ಅದಕ್ಕವರು ಏನಾದರೂ ಹೇಳಲೇ ಬೇಕು. ನಿಮಗೆ ಭಾಧಕಗಳೂ, ಸಮಸ್ಯೆಗಳೂ ಹೇಳದಿದ್ದರೆ ನಿಮಗೆ ದಕ್ಷಿಣೆ ಕೊಡಲು ಮನಸ್ಸು ಬರುತ್ತದೆಯೇ? ಅದಕ್ಕೆ ಒಂದಿಷ್ಟು ದೋಷಗಳನ್ನು ಹೇಳಿ ದಕ್ಷಿಣೆ ತೆಗೆದುಕೊಂಡು ಹೋಗುವುದು ಪದ್ಧತಿಯಾಗಿದೆ. ಅದು ಈ ಪ್ರದೇಶಕ್ಕೆ ಖಂಡಿತ ಸೂಕ್ತವೂ ಅಲ್ಲ. ಇದನ್ನು ನಾನು ಮಾತ್ರ ಹೇಳಿದ್ದಲ್ಲ. ನಿಮ್ಮ ಗುರುರಾಜ ಭಟ್ಟರು (ಇಲ್ಲಿನ ಇತಿಹಾಸ ಸಂಶೋಧಕರು) ಹೇಳಿದ್ದಾರೆ. ಪ್ರಶ್ನೆ ಮಾರ್ಗ ಗ್ರಂಥವನ್ನು ಕನ್ನಡದಲ್ಲಿ ಪ್ರಕಟಿಸಿದ ಕಬ್ಯಾಡಿ ಜೋಯಿಸರು ಹೇಳಿದ್ದಾರೆ. ಅಷ್ಟಮಂಗಲ ಪ್ರಶ್ನೆ ಎಂದು ಅಲ್ಲಿನವರು ಬಂದು ಮೋಸ ಮಾಡುತ್ತಿದ್ದಾರೆ, ಅವರನ್ನು ನಂಬಬೇಡಿ ಎಂದು ಬರೆದಿದ್ದಾರೆ. ಹಣವನ್ನು ತೆಗೆದುಕೊಂಡು ಹೋಗಲಿಕ್ಕೆ 8-10 ದಿವಸ ಅನಾವಶ್ಯಕವಾಗಿ ಕಾಲವನ್ನು ಕಳೆಯುತ್ತಾರೆ. ಆ ರೀತಿ ವಿಮರ್ಶೆ ಮಾಡಲು ಅವಕಾಶ ಇಲ್ಲ. ಆಗಮ ಶಾಸ್ತ್ರ ಹೇಳಿದಂತೆ ಹೋಗಬೇಕೆ ವಿನಹ ಪ್ರಶ್ನೆಯಿಂದ ಹೋಗುವುದಲ್ಲ. ಹೀಗೆಂದು ಸ್ಪಷ್ಟವಾಗಿ ಅವರ ಪುಸ್ತಕದಲ್ಲಿ ಬರೆದಿದ್ದಾರೆ. ಹೀಗೆ ಈ ಕಡೆಯ ಬಹಳ ಜನ ಚಿಂತಕರು ವಿರೋಧಿಸಿದ್ದರೂ ಏನೋ ಹೊಟ್ಟೆ ಹೊರೆದುಕೊಳ್ಳಲು ದಾರಿಯಾಗುತ್ತದೆ ಎಂದು ನಾವು ಇಟ್ಟುಕೊಂಡಿದ್ದೇವೆ! ---ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

September 6, 2019

ಸೋಣೆ ಆರತಿಯ ವಿಶೇಷ

ಸಿಂಹ ಮಾಸದಲ್ಲಿ ದೇವರಿಗೆ ವಿಶೇಷವಾಗಿ ಸಲ್ಲಿಸಲ್ಪಡುವ ಸೇವೆಯೇ ಸೋಣೆ ಆರತಿ. ಸಿಂಹ ಮಾಸದಲ್ಲಿ ಸೂರ್ಯನು ಅತ್ಯಂತ ಪ್ರಖರವಾಗಿ ಬೆಳಗುತ್ತಿರುತ್ತಾನೆ. ಆದ್ದರಿಂದ ರಾತ್ರಿಯ ಸೂರ್ಯನಾದ ದೀಪದ ಬೆಳಕಿನಲ್ಲಿ ಅಥರ್ವ ವೇದದ ವಿಶೇಷವಾದ ೧೦ ಮಂತ್ರಗಳನ್ನು ಹೇಳುತ್ತಾ, ೫ ಮರದ ಹಲಗೆಯಿಂದ ಮಾಡಿದ ಆರತಿಯಲ್ಲಿ ಆರತಿ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ದೇವರಿಗೆ ಆರತಿ ಬೆಳಗುವುದನ್ನು ಬಿಟ್ಟು ಆರತಿಯನ್ನು ನೇರವಾಗಿ ಹಿಡಿದು ಸೇವಾಕರ್ತರನ್ನು ದೇವರಿಗೆ ತೋರಿಸಲಾಗುತ್ತದೆ. ತನ್ಮೂಲಕ ಸೇವಾಕರ್ತನ ತೇಜಸ್ಸು, ವರ್ಚಸ್ಸುಗಳು ಹೆಚ್ಚಲಿ ಎಂಬ ಉದ್ದೇಶ ಇರುತ್ತದೆ. ಆರತಿಗೆ ತ್ಯಾಗಮಯಿ ಸನ್ಯಾಸಿಯೊಬ್ಬ ಬಳಸಿದ ವಸ್ತ್ರವನ್ನು ಬತ್ತಿಯಾಗಿ ಬಳಸಲಾಗುತ್ತದೆ. ಧೂಪದ ಎಣ್ಣೆ (ಗಣಪತಿ ಕಾಯಿಗಳನ್ನು ಆರಿಸಿ, ಚೆನ್ನಾಗಿ ಕುದಿಸಿ ಎಣ್ಣೆ ಬಿಡುವ ವರೆಗೆ ಬಿಸಿ ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ಇಂಧನ ಬೇಕಾಗಿರುವುದರಿಂದ ಇದರ ಮೌಲ್ಯ ತುಪ್ಪಕ್ಕಿಂತಲೂ ಹೆಚ್ಚು) ಯನ್ನು ಆರತಿಗೆ ಬಳಸಲಾಗುತ್ತದೆ. ಆರತಿಯ ಬಳಿಕ ಅರ್ಧ ಸುಟ್ಟು ಹೋದ ಬತ್ತಿಗಳನ್ನು ಆರಿಸಿ ಮರುದಿನ ಹೋಮ ಮಾಡಲಾಗುತ್ತದೆ. ಅಲ್ಲಿಗೆ ಸೋಣೆ ಆರತಿಯ ಸೇವೆ ಸಂಪೂರ್ಣವಾದಂತೆ. ಇದು ಕೇಳಿ ತಿಳಿದ ವಿಚಾರ. ಚಿಕ್ಕ - ಪುಟ್ಟ ದೋಷವಿದ್ದರೆ ಕ್ಷಮೆ ಇರಲಿ.

October 15, 2018

ಅಮೆ-ಸೂತಕದ ಸಂದರ್ಭದಲ್ಲಿ ಕೆಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧ ಇದೆ. ಇದು ಸರಿಯೆ?


ಮೈಲಿಗೆ ಅಂತ ಬಂದಾಗ ಒಂದೊಂದಾಗಿ ನಿರ್ಬಂಧಗಳು ಹೊಸ ಹೊಸ ರೀತಿಯಲ್ಲಿ ಹುಟ್ಟಿಕೊಂಡವು. ನಾವು ಒಂದು ಸ್ಪಷ್ಟತೆಯನ್ನು ಮಾಡಿಕೊಳ್ಳಬೇಕು. ವ್ಯಾವಹಾರಿಕ ಜೀವನವು ಒಂದು ಭಾಗ. ಸಾಮಾಜಿಕ ಜೀವನವು ಇನ್ನೊಂದು ಭಾಗ. ಸಾಮಾಜಿಕ ಜೀವನದಲ್ಲಿ ಒಂದು ದೇವಾಲಯ ಎಂದರೆ ಅದಕ್ಕೆ ಅದರದ್ದೇ ಆದ ನಿರ್ಬಂಧಗಳೇನಾದರೂ ಇದ್ದರೆ ಆ ನಿರ್ಬಂಧವನ್ನು ನಮ್ಮ ದೋಷದಿಂದ ಹಾಳಾಗದಂತೆ ರಕ್ಷಿಸಬೇಕಾದ್ದು ನಮ್ಮ ಕರ್ತವ್ಯ. ಏಕೆಂದರೆ ಅದು ಸಮಾಜದ್ದು, ನಮ್ಮದ್ದಲ್ಲ. ನಮಗೂ ಅಲ್ಲಿ ಭಾಗವಿದೆ, ಅಷ್ಟು ಬಿಟ್ಟರೆ ನಮ್ಮಿಂದಾಗಿ ದೇವಸ್ಥಾನ ಅಶುದ್ಧಿಯಾಗಬಾರದು ಎನ್ನುವುದು ನಿಯಮ. ಈ ಪ್ರದೇಶದಲ್ಲಿ ದೇವಸ್ಥಾನದ ಗರ್ಭಗುಡಿಗೆ ಅರ್ಚಕನಿಗೆ ಮಾತ್ರ ಪ್ರವೇಶ ಎಂದು ಚಾಲ್ತಿಯಲ್ಲಿದೆ. ಎಲ್ಲರೂ ಗರ್ಭಗುಡಿಗೆ ಹೋಗುವ ಹಾಗಿಲ್ಲ. ಅಲ್ಲಿನ ಶೌಚ, ಶುದ್ಧತೆ ಕಾಪಾಡಿಕೊಳ್ಳಲಿಕ್ಕೆ ಇದು ಬಲು ಮುಖ್ಯ. ಏಕೆಂದರೆ ಇಲ್ಲಿ ಅತಿ ಹೆಚ್ಚು ಸೆಖೆ ಇರುತ್ತದೆ. ಎಲ್ಲರೂ ಒಳಗೆ ನುಗ್ಗಿದರೆ ಅಲ್ಲಿ ಮನುಷ್ಯರು ಇರಲಿಕ್ಕೆ ಖಂಡಿತ ಸಾಧ್ಯ ಇಲ್ಲ. ಒಂದು ಹನಿ ಬೆವರು ಕೂಡಾ ಗರ್ಭಗುಡಿಯಲ್ಲಿ ಬಿದ್ದರೂ ಶುದ್ಧಿ ಮಾಡಿಕೊಳ್ಳಬೇಕು ಎಂದು ಆಗಮ ಶಾಸ್ತ್ರ ಹೇಳುತ್ತದೆ. ಇದೆಲ್ಲ ಸಮಸ್ಯೆಗಳಿರುವುದರಿಂದ ಈ ನಿಯಮ ಮಾಡಲಾಗಿದೆ. ಅಶುದ್ಧಿ ಆಗಬಾರದು ಎನ್ನುವ ಕಾರಣದಿಂದ ಈ ರೀತಿಯ ಹಲವಾರು ಆಚರಣೆಗಳಿವೆ. ನೀವು ಅಶುದ್ಧಿ ಎಂದು ಇದರ ಅರ್ಥ ಅಲ್ಲ. ಅಶುದ್ಧಿ ಆಗಬಾರದು ಎನ್ನುವುದು ಆಗಮದ ನಿಯಮ. ಒಳಗಿನ ನಡೆ ಅಥವಾ ಶುಕನಾಸಿ ಹೀಗೆ ಬೇರೆ ಬೇರೆ ಪ್ರದೇಶಗಳನ್ನು ಹೇಳುತ್ತದೆ. ಆಯಾಯ ಪ್ರದೇಶಗಳಲ್ಲಿ ಎಷ್ಟೆಷ್ಟು ಶುದ್ಧಿ ಇರಬೇಕು ಎನ್ನುವುದು ಕೂಡ ಹೇಳುತ್ತದೆ. ಆ ಶುದ್ಧಿಯನ್ನು ಹೇಳುವಾಗ ಶುದ್ಧತೆಯ ಪ್ರಧಾನತೆಯನ್ನು ಕೊಟ್ಟು ಹೇಳುತ್ತದೆ ಬಿಟ್ಟರೆ ಒಬ್ಬ ಸೂತಕನು ಬಂದರೆ ಅಶುದ್ಧಿಯಾಗುತ್ತದೆ ಎಂದೇನೂ ಹೇಳಿಲ್ಲ. ಆದರೆ ಸಮಾಜದಲ್ಲಿ ಸೂತಕನು ಅಶುದ್ಧಿ ಎಂದಿರುವ ಕಾರಣ ನೀನು ಬರಬೇಡ ಎನ್ನುವ ವಾಕ್ಯ ಬಂದಿರುತ್ತದೆ. ಆದರೆ ಆಗಮದಲ್ಲಿ ಎಷ್ಟೆಷ್ಟು ಶುದ್ಧತೆಯಿಂದ ಪ್ರಕಾರವನ್ನು ಉಳಿಸಿಕೊಳ್ಳಬೇಕೆಂದು ಮಾತ್ರ ಹೇಳಿದೆ. ಯಾವುದೇ ವ್ಯಕ್ತಿಯನ್ನಾಗಲೀ, ಯಾರ ಮನೆಯಲ್ಲಿ ಸಾವಾಗಿದೆಯೋ ಅವನು ಬಂದಾಗ ಅಶುದ್ಧಿಯಾಗುತ್ತದೆ ಎಂದಾಗಲೀ ಹೇಳಿಲ್ಲ. ನಿಮ್ಮ ಮನೆಯಲ್ಲಿ ಸಾವಾದಾಗ ಅಶುದ್ಧಿ ಎಂದು ಸಮಾಜವು ನಿಮ್ಮನ್ನು ನಿರ್ಭಂಧಿಸಿದ ಮೇಲೆ ನೀವು ಇಲ್ಲಿ ಬಂದಾಗ ಅಶುದ್ಧಿ ಆಗುವುದಿಲ್ಲವೇ, ಅದಕ್ಕೆ ಬರಬೇಡ ಎಂದರು. ಇದು ಬಂದದ್ದು ಹೀಗೆ, ಆಗಮದಲ್ಲಿ ಇದನ್ನು ಹೇಳಿಲ್ಲ. ನಂತರ ಸಾಮಾಜಿಕ ವ್ಯವಸ್ಥೆಯಲ್ಲಿ ಬಂದಾಗ ನೀನು ಅಶುದ್ಧಿಯಲ್ಲ ಇವತ್ತು ದೇವಸ್ಥಾನಕ್ಕೆ ಬರಬೇಡ ಎಂದು ಹೇಳಿದ್ದಕ್ಕೆ ಆಗಮವು ಜವಾಬ್ದಾರವಲ್ಲ.

ಆಗಮ ಮಾತ್ರ ಸ್ಪಷ್ಟ ಪಡಿಸುತ್ತದೆ. ದೇವಾಲಯಕ್ಕೆ ಬರುವ ಭಕ್ತನ ಮನಸ್ಸು ಶುದ್ಧವಾಗಿರಬೇಕು. ಅವನು ಸದಾಚಾರವನ್ನು ರೂಢಿಸಿಕೊಂಡಿರಬೇಕು. ಸದಾಚಾರಗಳೆಂದರೆ ಬೆಳಿಗ್ಗೆ ಬೇಗನೆ ಏಳುವುದು, ಎದ್ದ ತಕ್ಷಣ ಸ್ನಾನ ಇತ್ಯಾದಿ ಸಹಜ ಶೌಚಾದಿಗಳನ್ನು ಮಾಡಿಕೊಳ್ಳುವುದು. ಸಾಧ್ಯವಾದಷ್ಟು ದೇವಭಕ್ತನಾಗಿರಬೇಕು. ಅವನದ್ದೇ ಆದ ದೇವಪೂಜೆ ಇತ್ಯಾದಿಗಳನ್ನು ಮಾಡಿಕೊಳ್ಳಬೇಕು. ನಂತರ ಅವನು ದೇವಾಲಯಕ್ಕೆ ಬಂದರೆ ಯಾವುದೇ ಪ್ರವೇಶ ನಿರ್ಬಂಧ ಇಲ್ಲ. ಸದಾಚಾರಗಳನ್ನು ಹೊಂದಿದವನಾಗಿರಬೇಕು, ಇದನ್ನು ಗೌರವಿಸುವವನಾಗಿರಬೇಕು. ಅವನಿಗೆ ದೇವಾಲಯದ ಪ್ರವೇಶವಿದೆ ಎಂದು ಆಗಮ ಹೇಳಿದೆ. ಸಾಮಾನ್ಯ ಎಲ್ಲ ಶಾಸ್ತ್ರಗಳಲ್ಲೂ ಕೂಡ ಈ ಹಿನ್ನಲೆಯಲ್ಲಿ ಕೆಲವೊಂದಿಷ್ಟು ನಿರ್ಬಂಧಗಳನ್ನು ಹೇಳುತ್ತದೆ. ಉದಾಹರಣೆಗೆ ಜ್ಯೋತಿಷ್ಯದ ಆರಂಭ ಶ್ಲೋಕವೇ ಹೀಗೆ ಹೇಳುತ್ತದೆ. ಜ್ಯೋತಿಷ್ಯವನ್ನು ಗೌರವಿಸುವವನಾಗಿರಬೇಕು, ಇಲ್ಲದಿದ್ದರೆ ಅವನಿಗೆ ಪ್ರಶ್ನೆ ಹೇಳಲೇ ಬೇಡ ಎಂದು ಹೇಳುತ್ತದೆ. ಕುಹಕನೋ, ಚಿಂತಕನೋ, ಈ ರೀತಿಯಲ್ಲಿ ಬಂದು ಪ್ರಶ್ನೆಯನ್ನು ಕೇಳಿದರೆ ಹೇಳಲೇಬೇಡ ಎಂದು ಶ್ಲೋಕವು ಸ್ಪಷ್ಟಪಡಿಸಿದೆ. ಜ್ಯೋತಿಷ್ಯದ ಮೇಲೆ ನಂಬಿಕೆ ಇದ್ದರೆ ಮಾತ್ರ ಅವನಿಗೆ ಜ್ಯೋತಿಷ್ಯ ಹೇಳು ಎನ್ನಲಾಗಿದೆ. ಪರೀಕ್ಷೆ ಮಾಡಲು ಬರುವವರಿಗೆ ಅವಕಾಶವೇ ಇಲ್ಲ. ಹಾಗೆಯೇ ಯಾವ ಶಾಸ್ತ್ರದಲ್ಲಾದರೂ ತನ್ನ ಒಂದು ಬದ್ಧತೆ, ಅದರ ರಕ್ಷಣೆಯ ದೃಷ್ಟಿಯಿಂದ ಮೊದಲೇ ನಿರ್ಬಂಧ ಮಾಡಿಕೊಂಡಿರುತ್ತದೆ. ಹಾಗೆಯೇ ಇಲ್ಲೂ ಆಗಮ ಹೇಳಿದ್ದಷ್ಟೇ, ಇಂತಿಷ್ಟು ಪ್ರಾಕಾರಗಳಲ್ಲಿ ಈ ರೀತಿಯ ನಿಯಮಗಳಿವೆ, ನಿಯಮಗಳಿಗೆ ಅಶುದ್ಧಿಯಗದಂತೆ ಕಾದುಕೊಂಡು ಬರಬೇಕಾದ್ದು ಆಗಮದ ನಿಯಮ. ಆದರೆ ಅದನ್ನು ನಿರ್ವಹಿಸುವಾಗ, ಅಶುದ್ಧಿಯೆಂದರೆ ಏನೆಂದು ಕಲ್ಪನೆ ಸ್ಪಷ್ಟವಾಗದೆ ಇದ್ದಾಗ, ನಿಮ್ಮನ್ನು ಅಶುದ್ಧಿಯೆಂದು ಸಮಾಜ ತಿರಸ್ಕರಿಸಿರುವಾಗ, ನೀನು ಅಶುದ್ಧಿಯಾದ್ದರಿಂದ ಒಳಗೆ ಬರಬೇಡ, 10 ದಿವಸ ಕಳೆದು ಬಾ ಎಂದು ಆದೇಶ ಕೊಡಲಾಗುತ್ತದೆ. ಇದರಲ್ಲಿ ಆಡಳಿತ ಮಂಡಳಿಯ ತಪ್ಪೂ ಇಲ್ಲ ಅಥವಾ ಆಗಮದ ತಪ್ಪೂ ಅಲ್ಲ. ಇದು ಸಮಾಜ ಮಾಡಿರುವ ವ್ಯವಸ್ಥೆ. ಸಮಾಜವನ್ನೇ ನೀವು ಸರಿಪಡಿಸಿ. ಆಗ ಈ ಸಮಸ್ಯೆ ಇರುವುದಿಲ್ಲ. ಇಂತಹ ಪರಿವರ್ತನೆಗಳಿಗೆ ಕ್ರಾಂತಿ ಆಗಲೇ ಬೇಕು.

ಈಗ ಪರಿಸ್ಥಿತಿ ಹೇಗಿದೆ ಎಂದರೆ ಅಕಸ್ಮಾತ್ ಅಶೌಚದಲ್ಲಿ ಯಾರಾದರೂ ದೇವಾಲಯಕ್ಕೆ ಹೋದರೆ ದೇವಾಲಯ ಅಶುದ್ಧಿಯಾಗಿದೆ ಎಂದು ಕೇರಳದಿಂದ ಅಷ್ಟಮಂಗಲ ಪ್ರಶ್ನೆ ಹೇಳಲು ಬರುವವರು ಹೇಳಬೇಕು! ಇಲ್ಲದಿದ್ದರೆ ಗೊತ್ತೇ ಆಗುವುದಿಲ್ಲ. ಆದರೆ ಜನರಿಗೆ ಭಯ ಹುಟ್ಟುವುದಿದೆ. ನಾನು ಅಶುದ್ಧಿಯಾಗಿ ದೇವಸ್ಥಾನಕ್ಕೆ ಹೋಗಿಬಿಟ್ಟರೆ ನನಗೆ ಸಾವಾಗಿಬಿಡುತ್ತದೆ ಎನ್ನುವಷ್ಟು ಜೀವಭಯ ಹುಟ್ಟಿಬಿಟ್ಟಿದೆ, ಅದನ್ನು ಹೋಗಲಾಡಿಸಬೇಕಿದ್ದರೆ ಒಂದಿಷ್ಟು ಕ್ರಾಂತಿ ಆಗಲೇ ಬೇಕು. ಏನೂ ಆಗುವುದಿಲ್ಲ ಎಂದು ಜನರಿಗೆ ತೋರಿಸಬೇಕು. ಕ್ರಾಂತಿ ಮಾಡಿದರೆ ತಪ್ಪಲ್ಲ. ಆದರೆ ಆ ಕ್ರಾಂತಿ ಮಾಡುವ ಉದ್ದೇಶದಿಂದ ಯಾವುದೇ ವಿಪ್ಲವ, ವಿವಾದಕ್ಕೆ ಹೋಗುವ ಕ್ರಾಂತಿ ಮಾಡಬೇಡಿ. ಪರಸ್ಪರ ಸಹಕಾರದಿಂದ ಕ್ರಾಂತಿ ಮಾಡಿ, ಕ್ರಾಂತಿಯೂ ಒಳ್ಳೆಯದೇ. ಪರಿವರ್ತನೆ ಮಾಡಿ ತೋರಿಸಿ. ಖಂಡಿತ ದೋಷ ಇಲ್ಲ. ಆಗಮ ನಿಷೇಧಿಸಿಲ್ಲ.

-ವೇದ ಕೃಷಿಕ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದರು, ವೇದ ವಿಜ್ಞಾನ ಮಂದಿರ, ಚಿಕ್ಕಮಗಳೂರು

April 20, 2018

ದೇವಾಲಯದಿಂದ ರಾಷ್ಟ್ರದುದ್ಧಾರ


ದೇವಾಲಯಗಳ ನಿರ್ಮಾಣವೇ ಸ್ವಸ್ಥ ಸಮಾಜದ ಸಾಕಾರಕ್ಕೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಒಂದು ದೇವಾಲಯದಿಂದ ಒಂದು ರಾಷ್ಟ್ರದ ಉದ್ಧಾರವೂ ಕೂಡ ಸಾಧ್ಯವೆಂದು ನನಗೆ ಇತ್ತೀಚೆಗಷ್ಟೇ ತಿಳಿದ ವಿಚಾರ. ಇತ್ತೀಚೆಗಷ್ಟೇ ಬ್ರಹ್ಮ ಕಲಶದಿಂದ ಅಭಿಷಿಕ್ತನಾದ ಜ್ಞಾನ ಶಕ್ತಿ ಸುಬ್ರಹ್ಮಣ್ಯನ ದೇವಾಲಯದ ಬಗ್ಗೆ, ನನಗೆ ತಿಳಿದಿರುವ ಅಲ್ಪ ಜ್ಞಾನದಿಂದ ತಿಳಿದಷ್ಟು ಬರೆಯುತ್ತಿದ್ದೇನೆ. ತಪ್ಪಿಯಿದ್ದರೆ ತಿದ್ದಿ ಹೇಳಿರೆಂದು ಪ್ರಾರ್ಥನೆ.


ಪಾವಂಜೆಯು ಇರುವುದು ದಕ್ಷಿಣ ಕರಾವಳಿಯ ಮೂಲೆಯಲ್ಲಿ. ಇಲ್ಲಿ ಸ್ಥಾಪಿತ ಪುಟ್ಟ ದೇಗುಲವೊಂದು ಸಂಪೂರ್ಣ ಭಾರತ ವರ್ಷದಲ್ಲಿ ಪರಿಣಾಮ ಬೀರುತ್ತದೆ ಎನ್ನುವುದು ನಂಬಲು ಸ್ವಲ್ಪ ಕಷ್ಟ. ಆದರೆ ತಂತ್ರಕ್ಕೆ ಅಸಾಧ್ಯವೆಂಬುವುದೇ ಇಲ್ಲ. ವಿಶ್ವ ಜಿಗೀಷದ್ ಯಾಗದ ಸಂದರ್ಭಲ್ಲಿ, ಯಾಗದ ಎರಡನೆಯ ದಿನವೇ ಇಲ್ಲಿಂದ ಹೊರಟ ಕಿರಣ, ಶಬ್ದ ತರಂಗಗಳು ಯುರೋಪ್, ಆಫ್ರಿಕಾ ಖಂಡಗಳನ್ನು ತಲುಪಿ ಪರಿಣಾಮಗಳನ್ನು ಬೀರಿದ್ದನ್ನು ಕೇಳಿದ ನನಗೆ ಪಾವಂಜೆಯ ತಂತ್ರೋಕ್ತ ಪೂಜೆಗಳಾದ ರಂಗ ಪೂಜೆ, ಕಾರ್ತಿಕ ದೀಪೋತ್ಸವ, ಸೋಣೆ ಆರತಿ ಹಾಗೂ ಅಗೇಲು ಸೇವೆಗಳ ಪರಿಣಾಮ ನಮ್ಮ ದೇಶದ ಮೇಲೆ ಆಗುತ್ತಿದೆ ಅನ್ನುವುದನ್ನು ದೊಡ್ಡ ವಿಷಯ ಅನ್ನಿಸದೆ ಇರದು! ಅವು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಹೇಗೆ ಪರಿಣಾಯಾಮ ಬೀರುತ್ತಿವೆ ಎನ್ನುವುದನ್ನು ನನಗೆ ತೋಚಿದಷ್ಟು ವಿಶದವಾಗಿ ಹೇಳಲು ಬಯಸುತ್ತೇನೆ. ಆಧುನಿಕ ತಂತ್ರಜ್ಞಾನದಲ್ಲಿ ನಾನು ಪಡೆದ ಪಿಎಚ್. ಡಿ ಯು ಈ ವಿಷಯದ ಅಧ್ಯಯನದಲ್ಲಿ ಯಾವುದೇ ಸಹಾಯ ಮಾಡಿರುವುದಿಲ್ಲ. ಅಲ್ಲದೆ ಆಧುನಿಕ ತಂತ್ರಜ್ಞಾನದ ಹಾಗೂ ವಿಜ್ಞಾನದ ಯಾವುದೇ ಸಲಕರಣೆಗಳು ಈ ತರಂಗಗಳ ಸಾಮರ್ಥ್ಯವನ್ನು ಪರಿಶೀಲಿಸಲು ಅಸಮರ್ಥವಾಗಿವೆ ಎಂಬುದು ಕಟುವಾದರೂ ಸತ್ಯ. ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಎನ್ನವ ಭ್ರಮೆಯಲ್ಲಿ ಇಲ್ಲದ, ಕಣ್ಣಿನ ದೃಷ್ಟಿಯ ಸಾಮರ್ಥ್ಯದ ಮಿತಿಯನ್ನು ಅರಿತಿರುವ ಯಾರೂ ಕೂಡ ಈ ಸತ್ಯವನ್ನು ತಮಗಿರುವ ಕುತೂಹಲದ ಮೂಲಕ ಅರಿಯಬಹುದು.

ಮೇಲೆ ತಿಳಿಸಿದ ಹಲವಾರು ತಂತ್ರೋಕ್ತ ಪೂಜೆಗಳು ದೇವರ ಕಲಾಭಿವೃದ್ಧಿಗಾಗಿ ಮಾಡುವಂತಹ ಸೇವೆಗಳು. ಬ್ರಹ್ಮಕಲಶವೂ ಕೂಡ. ದೇವರ ಕಲಾಭಿವೃದ್ಧಿಯು ಒಂದು ರೀತಿ ದೇವರಲ್ಲಿ ಶಕ್ತಿಯನ್ನು ತುಂಬುವಂತಹುದು. ಇಲ್ಲಿನ ಸಂದರ್ಭದಲ್ಲಿ ಜ್ಞಾನ ಶಕ್ತಿಯ ಸಂಗ್ರಹಣೆ. ಬುದ್ಧಿಯ ಅಧಿದೇವತೆ ಸರಸ್ವತಿ, ಜ್ಞಾನಕ್ಕೆ ಅಧಿದೇವತೆ ಸುಬ್ರಹ್ಮಣ್ಯ. ಬುದ್ಧಿ ಎಲ್ಲರಿಗೂ ಇರುತ್ತದೆ (ಮನುಷ್ಯನಲ್ಲಿ ಇರಬೇಕಾದದ್ದು) ಆದರೆ ಜ್ಞಾನವನ್ನು ಶ್ರಮಪಟ್ಟು ಗಳಿಸಬೇಕು. ಪಾವಂಜೆಯ ಸುಬ್ರಹ್ಮಣ್ಯ ಜ್ಞಾನಶಕ್ತಿಯನ್ನು ನೀಡುವಂತಹವನು. ನೀಡುತ್ತಾ ನೀಡುತ್ತಾ ಖಾಲಿಯಾಗುವುದಿಲ್ಲವೇ? ಅದಕ್ಕೆ "ಕಲಾಭಿವೃದ್ಧಿ". ಹಿಂದೆ ನವರಾತ್ರಿಯ ಪ್ರಶ್ನೋತ್ತರ ಸಂದರ್ಭದಲ್ಲಿ ಗುರುಗಳು ಹೇಳಿದ ಮಾತು ನೆನಪಿಗೆ ಬರುತ್ತದೆ. "ದೇವಸ್ಥಾನಕ್ಕೆ ಯಾರೂ, ಅದು ಕೊಡು, ಇದು ಕೊಡು ಎಂದು ಬೇಡಲಿಕ್ಕೆ ಹೋಗಬಾರದು. ಹಾಗೆ ಬೇಡಿದರೆ ದೇವರ ಶಕ್ತಿ ಕಡಿಮೆಯಾಗುತ್ತದೆ. ದೇವರನ್ನು ಯಾಕೆ ಬೇಡುತ್ತೀರಿ, ನಿಮ್ಮ ಪ್ರಾಪ್ತಿ ಎಷ್ಟು ಉಂಟೋ ಅಷ್ಟು ಸಿಕ್ಕಿಯೇ ಸಿಗುತ್ತದೆ." ಎಂದಿದ್ದರು. ನನಗೆ ಸಿಕ್ಖ್ ಪಂಥದವರು ಗುರುದ್ವಾರದಲ್ಲಿ ನಡೆಸುವ ಸೇವೆಯ ನೆನಪಾಗುತ್ತದೆ. ಅಲ್ಲಿ ಸೇವೆ ಎನ್ನುವುದರ ಅರ್ಥ ಗುರುದ್ವಾರವನ್ನು ಗುಡಿಸಿ ಸ್ವಚ್ಛ ಮಾಡುವುದು, ಹೂವುಗಳಿಂದ ಸಿಂಗರಿಸುವುದು, ಅನ್ನಪ್ರಸಾದ ಇತ್ಯಾದಿ ಬಡಿಸುವುದು, ಚಪ್ಪಲಿ ಕಾಯುವುದು, ಇತ್ಯಾದಿ. ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು, ಆಗರ್ಭ ಶ್ರೀಮಂತರು ಈ ರೀತಿಯ ಸೇವೆ ಮಾಡುವುದನ್ನು ನೋಡಿದ್ದೇನೆ. ಆದರೆ ನಮ್ಮ ಊರಿನ ದೇವಸ್ಥಾನ ಒಂದರಲ್ಲಿ ೨ ರೂಪಾಯಿ ಕೊಟ್ಟು ಕರ್ಪೂರದ ಆರತಿ "ಸೇವೆ" ನಡೆಸಿ, ತಮ್ಮ ಸಕಲ ಪರಿವಾರದ ಶ್ರೇಯೋಭಿವೃದ್ಧಿಯನ್ನು ದೇವರಲ್ಲಿ ಬೇಡುವುದು ವಿಪರ್ಯಾಸ ಅಲ್ಲವೇ?


ಜ್ಞಾನ ಶಕ್ತಿಯನ್ನು ನೀಡುವ ಸುಬ್ರಹ್ಮಣ್ಯ, ಜನರಲ್ಲಿ ರಾಷ್ಟ್ರೀಯತೆಯ ಜ್ಞಾನವನ್ನು ಪಸರಿಸುತ್ತಿರುವ ವಿಚಾರ ನಿಮ್ಮ ಕಣ್ಣ ಮುಂದೆಯೇ ಇದೆ. ಸಾಮಾಜಿಕ ಜಾಲ ತಾಣಗಳನ್ನೇ ಗಮನಿಸಿ. ಎಲ್ಲೆಲ್ಲೂ ರಾಷ್ಟ್ರೀಯತೆಯನ್ನು ಪಸರಿಸುವ ಪೋಸ್ಟ್ ಗಳೇ ತುಂಬಿ ಹೋಗಿವೆ. ಎಲ್ಲೆಲ್ಲೂ ಸ್ವಾಮಿ ವಿವೇಕಾನಂದರ, ರಾಮಕೃಷ್ಣ ಪರಮಹಂಸರ, ದೇಶದ ಸ್ವಾತಂತ್ರ್ಯ ಹೋರಾಟಗಾರರ ಉಕ್ತಿಗಳು, ಕಥೆಗಳು ಒಮ್ಮೆಲೇ ಹರಿದಾಡಲಾರಂಭಿಸಿವೆ. ಇವೆಲ್ಲ ರಾಷ್ಟ್ರೀಯತೆಯ ಪುನರುತ್ಥಾನಕ್ಕೆ ಕೆಲವು ಉದಾಹರಣೆಗಳು. ದೇಶದ ಶೇ. ೮೦ ರಿಂದ ೯೦ ಭಾಗವನ್ನು ರಾಷ್ಟ್ರವನ್ನು ಪ್ರೀತಿಸುವವರ ದಂಡೇ ರಾಜ್ಯಗಳನ್ನು ಆಳುತ್ತಿವೆ. ರಾಷ್ಟ್ರದ ಬಗ್ಗೆ ಗೌರವ ತಾಳುವುದು, ರಾಷ್ಟ್ರ ಪ್ರೇಮ, ಉತ್ತಮ ನಾಗರೀಕರಾಗಿ ಬಾಳುವುದು, ಸಮಾಜಮುಖೀ ಚಿಂತನೆ ನಡೆಸುವುದು ಎಲ್ಲವೂ ಸೇರಿದಂತೆ ಭಾರತದಲ್ಲಿ ಉತ್ತಮ ವಾತಾವರಣದ ಅಲೆಯನ್ನು ಕಾಣಬಹುದು.

ಇತ್ತೀಚಿಗೆ ನನ್ನನ್ನು ಒಬ್ಬರು ಕೇಳಿದರು. ಪಾವಂಜೆಯ ಸುಬ್ಬಪ್ಪ ವಯಕ್ತಿಕ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದಿಲ್ಲವೇ ಎಂದು? ಯಾಕೆ ಈಡೇರಿಸವುದಿಲ್ಲ ಸ್ವಾಮಿ. ಖಂಡಿತ ಈಡೇರಿಸುತ್ತಾನೆ. ಆದರೆ ಅದು ಕೂಡ ಸಮಾಜದ, ರಾಷ್ಟ್ರದ ಚಿಂತನೆಯ ಉದ್ದೇಶವನ್ನೇ ಹೊಂದಿರುತ್ತದೆ. ನಿಮಗೆ ಬರುವ ಸಂಪತ್ತು ಸಮಾಜ ಸೇವೆಗೆ ವಿನಿಯೋಗವಾಗುತ್ತದೆ. ನೀವು ಬಯಸುವ ಉತ್ತಮ ವೈವಾಹಿಕ ಜೀವನ, ಸೌಹಾರ್ದಯುತ ಸಮಾಜಕ್ಕೆ ಕಾರಣವಾಗುತ್ತದೆ. ನೀವು ಬಯಸುವ ಸಂತಾನ ದೇಶಪ್ರೇಮಿ ಆಗುತ್ತದೆ. ದೇಶಕ್ಕೆ ಒಬ್ಬ ಉತ್ತಮ ನಾಗರೀಕ ದೊರೆಯುತ್ತಾನೆ, ನಿಮ್ಮ ವಿದ್ಯೆ ದೇಶಸೇವೆಗೆ ಬಳಸಲ್ಪಡುತ್ತದೆ. ನಿಮಗೆ ಸಿಗುವ ಉತ್ತಮ ಉದ್ಯೋಗ ಭಷ್ಟಾಚಾರ ರಹಿತ ವ್ಯವಸ್ಥೆಗೆ ಕಾರಣವಾಗುತ್ತದೆ. ನೀವು ಉದ್ಧಾರ ಆದರೆ ಸಮಾಜ ಉದ್ದಾರ ಆದ ಹಾಗೆ. ಸಮಾಜ ಉದ್ದಾರ ಆದರೆ ದೇಶ ಉದ್ಧಾರ ಆದ ಹಾಗೆ ಅಲ್ಲವೇ?

ಆಗಮೋಕ್ತವಾಗಿ ಸ್ಥಾಪಿಸಲ್ಪಟ್ಟ ಈ ದೇವಾಲಯ ಹಲವು ಕೌತುಕಗಳ ಆಗರ. ಶ್ರೀ ಅಣ್ಣಪ್ಪಸ್ವಾಮಿಯವರ ಸಾನ್ನಿಧ್ಯ ಇದಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡಿದೆ. ಇಂತಹ ಸೇವೆಯನ್ನು ಮಾಡಿದರೆ ಇಂತಹ ಫಲಗಳನ್ನು ಪಡೆಯಬಹುದು ಎಂದು ಫಲಕದಲ್ಲಿ ಬರೆದು ತೂಗು ಹಾಕಿರುವ ಪ್ರಥಮ ದೇವಾಲಯವಿದು. ಪಂಚಾಮೃತ ಅಭಿಷೇಕವೆಂದರೆ ನಿಜವಾಗಿಯೂ ಪಂಚಾಮೃತ ಅಭಿಷೇಕ ನಡೆಸುವ, ರುದ್ರಾಭಿಷೇಕವೆಂದರೆ ರುದ್ರ ಪಾರಾಯಣ ಮಾಡಿಯೇ ಅಭಿಷೇಕ ನಡೆಸುವ, ತೈಲಾಭಿಷೇಕ ಎಂದರೆ ಶುದ್ಧವಾದ ತೆಂಗಿನ ಎಣ್ಣೆಯಿಂದಲೇ ಅಭಿಷೇಕ ಮಾಡಿ ಪ್ರಸಾದ ನೀಡುವ ವಿಶಿಷ್ಟ ದೇವಾಲಯವಿದು. ಬೆರಳೆಣಿಕೆಯ ಯುವಕರ ದಂಡು ಮಾಡುವ ಕಾರ್ಯಗಳು ನಿಜಕ್ಕೂ ನಮ್ಮನ್ನು ಆಶ್ಚರ್ಯಚಕಿತಗೊಳಿಸದೆ ಇರದು. ನೂರಾರು ಜನರು ಬೇಕಾದ ಕೆಲಸಗಳಿಗೆ ಏನೇನೂ ಕಡಿಮೆ ಇಲ್ಲದಂತೆ ಪೂರೈಸುವ ಇವರ ಚಾಕಚಕ್ಯತೆ ಒಮ್ಮೆ ನೋಡಿಯೇ ತಿಳಿಯಬೇಕು. ದಿನ ನಿತ್ಯ ಅಗ್ನಿ ಉಪಾಸನೆಯ ಮೂಲಕ ಜ್ಞಾನ ವೃದ್ಧಿಯಾಗುತ್ತದೆ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯ.

ಶ್ರೀ ಅಣ್ಣಪ್ಪಸ್ವಾಮಿಯವರು ಪ್ರತಿಪಾದಿಸಿದ ಭಾಗವತ ಸಂಪ್ರದಾಯವಾದಿಗಳಾದ ಸ್ಥಾನಿಕರು ಪೂಜಿಸಿಕೊಂಡು ಬರುವ ವಿಶಿಷ್ಟ ಕ್ಷೇತ್ರವಿದು. ಭಾಗವತ ಎಂದರೇನೆ "ಎಲ್ಲರನ್ನೂ ಸಮಾನವಾಗಿ ಕಾಣುವ ವಿಶಾಲ ಮನೋಭಾವ ಉಳ್ಳವರು" ಎಂದರ್ಥ (ಈ ಬಗ್ಗೆ “ಶ್ರೀ ಅಣ್ಣಪ್ಪಸ್ವಾಮಿ" ಸ್ವಾನಿಕರ ಮೂಲ ಪುರುಷ - ಸಂಶೋಧನಾ ಪ್ರಬಂಧ" ಎನ್ನುವ ಲೇಖನದಲ್ಲಿ ಈ ಹಿಂದೆ ವಿವರವಾಗಿ ಬರೆದಿರುತ್ತೇನೆ). ಎಲ್ಲರಲ್ಲೂ ಭಗವಂತನನ್ನು ಕಾಣುವವರು. ಭಾಗವತರಿಂದ ಮಾತ್ರ ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗಲು ಸಾಧ್ಯ. ಶಾಂತಿ-ಸಾಮರಸ್ಯದ ಬದುಕು ನೆನಸಾಗಲು ಸಾಧ್ಯ. ಆದ್ದರಿಂದ ಭಾಗವತರಿಂದಲೇ ಸ್ವಾಮಿಯ ಮಂತ್ರ-ತಂತ್ರಾದಿಯಾಗಿ ಪೂಜೆ-ಪುನಸ್ಕಾರಗಳು ಸಾಂಗವಾಗಿ ನಡೆದುಕೊಂಡು ಬರುತ್ತಿವೆ ಎಂದು ನನ್ನ ಅನ್ನಿಸಿಕೆ.

ಒಟ್ಟಿನಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇಗುಲವು ಸದೃಢ ರಾಷ್ಟ್ರವನ್ನು ಕಟ್ಟುವಲ್ಲಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಕಾರಣೀಭೂತವಾಗಿದೆ. ಪ್ರತ್ಯಕ್ಷ ವ್ಯವಹಾರವನ್ನು ಈ ಲೇಖನದ ಮೂಲಕ ವಿವರವಾಗಿ ಹೇಳಿದ್ದೇನೆ. ಪರೋಕ್ಷ ವ್ಯವಹಾರವನ್ನು ವಿವರಿಸಲು ನಾನು ಸಮರ್ಥನಲ್ಲ. ಅಷ್ಟು ವಿದ್ಯೆಯನ್ನು ಇನ್ನೂ ಸಾಧಿಸದಿರುವುದೇ ಇದಕ್ಕೆ ಕಾರಣ. ಇನ್ನೊಮ್ಮೆ ಯಾವುದಾದರೂ ದೇವಳಕ್ಕೆ ಹೋದಾಗ ತಮ್ಮಿಂದ ಆದಷ್ಟು ಸೇವೆ (ತಾನು, ಮನ, ಧನ ದಿಂದ) ಮಾಡಿ. ಏನನ್ನೂ ಬೇಡಲು ಹೋಗಬೇಡಿ. ಇದೂ ಒಂದು ರೀತಿಯ ಸಮಾಜ ಸೇವೆಯೇ. ನಿಮಗೆ ಸಮಾಜದ ಕೆಳ ವರ್ಗಗಳ ಸೇವೆ ಮಾಡಲು ಮನಸ್ಸಿದ್ದು ಕಾರ್ಯ ಬಾಹುಳ್ಯದಿಂದ ಸಾಧ್ಯವಾಗದೆ ಇದ್ದರೆ, ಬಹು ಸುಲಭವಾದ ಅನ್ನ ದಾನ ಸೇವೆ ಮಾಡಿಸಿ. ಅನ್ನದ ಮೂಲಕ ದೇಹವನ್ನು ಸೇರುವ ಸ್ವಾಮಿಯ ಪ್ರಸಾದವು ಅವರ ಜ್ಞಾನವನ್ನು ಪ್ರಚೋದಿಸಿ ಉತ್ತಮ ನಾಗರೀಕರನ್ನಾಗಿ ಮಾಡುತ್ತದೆ. ಇದರಿಂದ ಉತ್ತಮ ಸಮಾಜ ತನ್ಮೂಲಕ ಉತ್ತಮ ದೇಶ ಕಟ್ಟಬಹುದು. ಈಗ ತಿಳಿಯಿತೇ, ಯಾಗಗಳ ಮುಖಾಂತರ ಲಕ್ಷಾಂತರ ಜನರ ಅನ್ನದಾನ, ತನ್ಮೂಲಕ ಬೌದ್ಧಿಕ ಪರಿಷ್ಕರಣೆ ಹೇಗೆ ಸಾಧಿಸಬಹುದು ಎಂದು. ನಮ್ಮ ಸುಬ್ಬಪ್ಪನಿಗೆ ಯಾವುದೇ ಸೇವೆ ಸಲ್ಲಿಸಿ, ನೀವು ಸಮಾಜಸೇವೆಯ ಸುಖ ಅನುಭವಿಸಬಹುದು.

ಓಂ ಶರವಣಭವಾಯ ನಮಃ

April 7, 2018

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು 3&4


ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೩

ಶ್ಯುನಶ್ಯೇಫ

ಶ್ವೇತಾಘಮರ್ಷಣ ಋಷಿಯು ಕ್ರೌನ್ಚಾರಾಣ್ಯ ಪ್ರದೇಶದಲ್ಲಿ೫ ಮಕ್ಕಳೊಂದಿಗೆ ವಾಸವಾಗಿದ್ದರು. ಅವರ ೪ನೇ ಮಗನೇ ಶ್ಯುನಶ್ಯೇಫ. ಆ ಪ್ರದೇಶವು ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು ಸಹಜವಾಗಿ ಆಹಾರದ ಕೊರತೆ ಇತ್ತು, ಶ್ಯುನಶ್ಯೇಫರು ಹದಿನಾರನೇ ವಯಸ್ಸಿಗೆ ಸಕಲ ವೇದಪಾರಂಗತರಾಗಿ, ಮಹಾಜ್ಞಾನಿಯಾಗಿ ಈ ಲೋಕದ ಅನ್ನಾದಿ ಋಣಗ್ರಾಹ್ಯವನ್ನು ಬಿಟ್ಟು ಅನ್ನಾದಿಗಳಲ್ಲಿ ದೊರೆಯುವ "ವಾಜ" ವೆಂಬ ಸಾರಗ್ರಹಿಸುವ ಶಕ್ತಿಯನ್ನು ಹೊಂದಿದ್ದರು. ಇದನ್ನರಿತ ದೇವತೆಗಳು ತಮ್ಮ ಅಮರತ್ವಕ್ಕೆ ಕುಂದಾದೀತೆಂದು ಚಿಂತಿಸಿ ಒಂದು ನಾಟಕ ರೂಪಿಸುತ್ತಾರೆ. ರಾಜಾ ಹರಿಶ್ಚಂದ್ರನೆಂಬ ರಾಜನಿಗೆ ಜಲೋದರ ಎಂಬ ರೋಗ ಬರುತ್ತದೆ. ಪುರೋಹಿತನಾದ ಯತಿಯು ದೇವತೆಗಳ ಆದೇಶದಂತೆ ವರುಣ ಯಾಗವನ್ನೂ, ಬಲಿಪಶುವಾಗಿ ೧೬ ವರ್ಷದ ವೇದ ವೇದಾಂಗ ಪರಿಣತ ಬ್ರಾಹ್ಮಣ ವಟುವನ್ನು ಯೂಪ ಪಶು ಮಾಡಿದಲ್ಲಿ ರೋಗ ಪರಿಹಾರವಾಗುತ್ತದೆ ಎಂದನು. ರಾಜನ ಆದೇಶದಂತೆ ಮಂತ್ರಿಯು ಹುಡುಕುತ್ತಾ ಕ್ರೌನ್ಚಾರಾಣ್ಯಕ್ಕೆ ಬಂದಾಗ ಶ್ವೇತಾಘಮರ್ಷಣನು ಮಂತ್ರಿಗೆ "ಅರಸನಿಗೆ ನಾವೆಲ್ಲ ಮಕ್ಕಳಂತೆ. ಅವನ ಅನಿವಾರ್ಯತೆಗೆ ಬೇಕಿದ್ದಲ್ಲಿ ನನ್ನ ಮಗನನ್ನೇ ಕೊಡುತ್ತೇನೆ. ವೇದ ಪಾರಂಗತನಾದ ಅವನಿಗೂ ಇದೊಂದು ಪರೀಕ್ಷೆ" ಎಂದನು. ಮಗನನ್ನು ಕರೆದು ಯೂಪವನ್ನು ಜಯಿಸಿ ರಾಜನನ್ನು ಗುಣಮುಖನಾಗಿ ಮಾಡು ಎಂದನು. ಯಾಗ ವಿಧಿಯಂತೆ ಯೂಪ ಪಶುವಿಗೆ ವರಣೆಯಿತ್ತು, ಅಭ್ಯಾವರ್ತಿನೀ ಹೋಮಪೂರ್ವಕ ಯೂಪರೋಪ ಮಾಡಿ ಬಂಧಿಸಲಾಯಿತು. ವರುಣನು ಯೂಪವನ್ನು ಆಕ್ರಮಿಸಿದ. ಆದರೆ ಶ್ಯುನಶ್ಯೇಫನು ಅಘಮರ್ಷಣ ಜಪ ಮಾಡುತ್ತಾ ವರುಣನನ್ನೇ ಜಯಿಸಿದ. ಆಗ ವರುಣನು ರಾಜನ ಖಾಯಿಲೆಯೆಯನ್ನು ಹಿಂಪಡೆದು ಶ್ಯುನಶ್ಯೇಫನನ್ನು ಹರಸಿದನು. ಶ್ಯುನಶ್ಯೇಫರು ಅನ್ನದಲ್ಲಿರುವ ವಾಜವನ್ನು ಬೇರ್ಪಡಿಸುವ ವಿಧ್ಯೆಯನ್ನು ಸಾಧಿಸಿದ ಕಾರಣ ದೇವತೆಗಳಿಗಿಂತ ಹೆಚ್ಚಿನವರಾದರು. ಇಂದ್ರನ ಸಖ್ಯವನ್ನು ಹೊಂದಿ ಅಮರನಾದನು. ಮಂತ್ರ ದೃಷ್ಟಾರನಾದನು. ಹಾಗಾಗಿ ಈ ಮಂತ್ರದ ಗಾನಕ್ಕೆ ಅಂತಹ ವಿಶಿಷ್ಟ ಶಕ್ತಿ ಇದೆ.

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೪

ನೃಮೇಧ

ಪ್ರಸಕ್ತ ಕಾಲದಲ್ಲಿ ಯಾಗ-ಯಜ್ಞಗಳಲ್ಲಿ ಕೆಲ ಅಜ್ಞಾನಿಗಳು ಪ್ರಾಣಿ ಬಲಿಯನ್ನು ಹೊಂದಿಸಿ, ಇದೊಂದು ವೇದೋಕ್ತ ಪ್ರಕ್ರಿಯೆ ಎಂಬಂತೆ ಬಿಂಬಿಸಿ ವೇದ ನಿಂದನೆ ಮಾಡುತ್ತಿದ್ದಾರೆ. ಆದರೆ ಅಲ್ಲಿ ಅವರ ಅಜ್ಞಾನದ ಪರಮಾವಧಿ ಕಂಡು ಬರುತ್ತದೆಯೇ ವಿನಃ ಸತ್ಯವಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ಶಬ್ದ ಮೂಲವನ್ನು. ಉದಾಹರಣೆಗೆ "ನೃಮೇಧ", "ನೃಸಿಂಹ" ಇದು ಮೂಲ ಶಬ್ದ. ಇಲ್ಲಿ ನರಮೇಧವಾಗಲೀ, ನರಸಿಂಹವಾಗಲೀ ಇಲ್ಲ. ಋ ಕಾರ ಬಳಕೆಯಾಗಿದೆ, ರ ಕಾರವಲ್ಲ. ನೃಸಿಂಹ ಭೀಕರವೂ ಅಲ್ಲ, ನೃಮೇಧ ನರಮೇಧವೂ ಅಲ್ಲ. ಮೇಧ ಶಬ್ದವು ಯಜ್ಞ ಯಾಗಾದಿಗಳ ಪರ್ಯಾಯ ಶಬ್ದ, ಒಂದು ಪೂರ್ಣ ತ್ಯಾಗರೂಪದ ಅಧ್ಯಯನಶೀಲಯುಕ್ತವಾದ ತಪಸ್ಸು ಎಂದರ್ಥ. ಯಜ್ಞ ಯಾಗಾದಿಗಳಂತೆ ಇಲ್ಲಿ ಅಗ್ನಿ ಸಂಚಯನ ಇರುವುದಿಲ್ಲ. ಆದರೆ ತಪಸ್ಸು, ತ್ಯಾಗ, ಜಪ, ಜೀವನವೂ ಕೂಡಾ ಯಜ್ಞ ಸಮಾನವಾದ್ದರಿಂದ ಈ ಶಬ್ದ ಬಳಕೆಯಲ್ಲಿ ಬಂದಿದೆ. ಇಲ್ಲಿ ನೃಮೇಧ ಎಂದರೆ ನರಮೇಧ ಮಾಡಿದವನು ಎಂದರ್ಥವಲ್ಲ. ಆತ ಆಂಗೀರಸ ಪರಂಪರೆಯಲ್ಲಿ ಹುಟ್ಟಿದ ಮಹಾತಪಸ್ವಿ. ಅವನ ಇನ್ನೊಂದು ಹೆಸರು ಪುರುಹನ್ಮ. ಹಾಗಾಗಿ ಕೆಲವು ಕಡೆ "ನೃಮೇಧ ಪುರುಹನ್ಮಾಂಗೀರಸಃ" ಎಂದೇ ಸಂಬೋಧಿಸಲ್ಪಡುತ್ತದೆ. ಹಾಗೆಂದು ಪುರುವನ್ನು ಕೊಂದವನೆಂದು ಅರ್ಥವಲ್ಲ. ಇವೆರಡಕ್ಕೂ ಭಿನ್ನವಾದ ವಿಶೇಷ ಇತಿಹಾಸವಿದೆ. ಅದನ್ನು ತಿಳಿಯಲು ಈ ಕಥೆ ಓದಿ.

ಒಂದಾನೊಂದು ಕಾಲದಲ್ಲಿ ಹೈಹಯ ವಂಶದ ಅರಸುಗಳು ಚಕ್ರವರ್ತಿಗಳಾಗಿ ಸಪತದ್ವೀಪಗಳನ್ನು ಆಳುತ್ತಿದ್ದರು. ಅವರು ದುಷ್ಟರೂ, ಅಧರ್ಮಿಗಳೂ, ಪ್ರಜಾಪೀಡಕರೂ ಆಗಿದ್ದರು. ಹಾಗೇ ಈ ಕಾಲದಲ್ಲಿ ಬ್ರಾಹ್ಮಣರೂ ಎರಡು ಪಂಗಡಗಳಾಗಿ (ಭಾರ್ಗವರು + ಆಂಗೀರಸರು) ಮಂತ್ರಾಸ್ತ್ರಗಳ ಮುಖೇನ ಹೋರಾಡುತ್ತಿದ್ದರು. ಆಗ ಆಂಗೀರಸ ಪರಂಪರೆಯಲ್ಲಿ ಹುಟ್ಟಿದ ನೃಮೇಧ (ಮೂಲ ಹೆಸರು 'ಬಂಧು') ನು ತಾಯಿಯ ಅಪ್ಪಣೆ ಪಡೆದು ದೀರ್ಘ ಕಾಲ ಅಧ್ಯಯನ, ತಪಸ್ಸು ನಡೆಸಿ, ಪೂರ್ಣಜ್ಞಾನ ಪಡೆದು ತನ್ನೂರಿಗೆ ಬರುವಾಗ ತನ್ನ ಊರು ನಾಶವಾಗಿರುವುದನ್ನು ನೋಡುತ್ತಾನೆ. ಈ ಸಮಾಜ ವ್ಯವಸ್ಥೆಯನ್ನು ಸರಿಪಡಿಸಲು ಅವನು ಸಪ್ತರ್ಷಿಗಳ ಕುರಿತು ಪ್ರಾರ್ಥಿಸಿದಾಗ ಅವರು " ನೃಮೇಧ ಎಂಬ ಯಾಗ ಮುಖೇನ ಕ್ಷತ್ರಿಯಲ್ಲಿರತಕ್ಕ ಆನೃಶಂಸ ಗುಣವನ್ನು ತಿದ್ದಿ ನೃಶಂಸರನ್ನಾಗಿ ಮಾಡು" ಎಂದರು. ಹೀಗೆ ಯಾಗ ಮಾಡುತ್ತಿರಲು ಭಾರ್ಗವರು "ಪುರು" ಎಂಬುವನ ನೇತೃತ್ವದಲ್ಲಿ ಅಡ್ಡಿ ಮಾಡಲು ಆತನನ್ನು, ಮತ್ತವರ ಕಡೆಯವರನ್ನು ಶೀಲಾ ಪ್ರತಿಮೆ ಮಾಡಿ ಯಾಗ ಮುಗಿಸುತ್ತಾನೆ. ಬಳಿಕ ಹೈಹಯರು ಕ್ಷಾತ್ರ ಧರ್ಮದಂತೆ ಪ್ರಜಾರಂಜಕರಾಗಿ ಬದುಕುತ್ತೇವೆ ಎಂದು ವಾಗ್ದಾನ ಮಾಡಿ ತೆರಳುತ್ತಾರೆ. ಆದರೆ 'ಪುರು' ವಿನ ಪ್ರತಿಮೆ ಮಾತ್ರ ಹಾಗೇ ಉಳಿಯುತ್ತದೆ. ಅದನ್ನು ಮುಕ್ತಗಳಿಸಲು ಹೋದಾಗ "ಹೇ ವಿಪ್ರಬಂಧೋ! ಪುರುಹನ್ ಮಾ" ಎಂದು ಅಶರೀರ ವಾಣಿ ಕೇಳಿಸುತ್ತದೆ. ಅವನ ಆಯುಸ್ಸು ತೀರಿ ವರ್ಷವಾಗಿದೆ. ಈಗ ಮನುಷ್ಯರೂಪ ಕೊಟ್ಟರೆ ಸಾಯುತ್ತಾನೆ. ಆಗ ಸಪ್ತರ್ಷಿಗಳನ್ನು ಪ್ರಾರ್ಥಿಸಿದಾಗೆ "ಈ ಪುರುವು ಪ್ರತಿಮಾರೂಪದಲ್ಲಿ ದಕ್ಷಿಣಕ್ಕೆ ಮುಖಮಾಡಿರುವುದರಿಂದ ದಕ್ಷಿಣಾಮೂರ್ತಿ ಎನಿಸಿಕೊಳ್ಳುತ್ತಾನೆ. ತ್ರಿಮೂರ್ತಿಗಳು ಏಕೀಭವಿಸಿ ದತ್ತಾತ್ರೇಯನಾಗಿ ಹುಟ್ಟುವಾಗ ಋಣಕಾರಣ ದೇಹಿಯಾಗಿ ಇವನಿರುತ್ತಾನೆ. ಮುಂದಿನ ಕ್ಷತ್ರಿಯ ನಿಗ್ರಹಕ್ಕೆ ಇವನ ಪಾತ್ರ ಈಗಲೇ ಆರಂಭವಾಗಿದೆ. ನೀನು ಮುಂದೆ "ನೃಮೇಧ", "ಪುರುಹನ್ಮಾ" ನೆಂದೂ ಖ್ಯಾತನಾಗುತ್ತೀಯ ಎಂದರು.

"ನೃಮೇಧ" ಕ್ಕೂ, ನರಮೇಧಕ್ಕೂ, "ಪುರುಹನ್ಮಾ", ಪುರುವಿನ ಹತ್ಯೆಗೂ ಅರ್ಥಯಿಸುವುದು ಬಾಲಿಶ ಅಲ್ಲವೇ? ಬಂಧುಗಳೇ, ಮೊದಲು ವೇದಾಧ್ಯನ ನಡೆಸಿ, ಬಳಿಕ ವ್ಯಾಖ್ಯಾನ ಮಾಡಿ.

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು 1&2


ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೧

ಯತಿ ಮತ್ತು ಯಯಾತಿ

ಇವರಿಬ್ಬರು ಸಹೋದರರು. ಅಣ್ಣ ಯತಿಯು ವಿದ್ವಾಂಸನೂ, ಶೂರನೂ, ತ್ಯಾಗಿಯೂ ಆಗಿದ್ದು ವಿನಯಶೀಲನಾಗಿದ್ದನು. ತಮ್ಮ ಯಯಾತಿ ಶೂರ, ಧೀರನಾಗಿದ್ದರೂ ಮಹತ್ವಾಕಾಂಕ್ಷಿಯಾಗಿದ್ದನು. ಅವನು ಚಿಕ್ಕವನಾದರೂ ತಾನೇ ಅಧಿಕಾರಕ್ಕೆ ಬರಬೇಕೆಂದಾಗ ಅಣ್ಣನಾದ ಯತಿಯು ಸಂತೋಷದಿಂದ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟು ದೇಶವನ್ನೇ ಬಿಟ್ಟು ತೆರಳಿದನು. ಯತಿಯು ಅಲ್ಪತೃಪ್ತನಾಗಿ ಯೋಗಿಯಾಗಿ, ಭೋಗಜೀವನವನ್ನು ಬಿಟ್ಟು ಸದಾ ಶಿವಧ್ಯಾನಯಲ್ಲೇ ಇರುತ್ತಾ, ಸಾರೂಪ್ಯ ಮುಕ್ತಿಯನ್ನು ಪಡೆದ. ಶಿವನ ಒಂದು ರೂಪಕ್ಕೆ ಯತಿ ಎಂಬ ಹೆಸರಿದೆ.

ಆದರೆ ಯಯಾತಿಯು ರಾಜ್ಯವಾಳುತ್ತಾ ಭೋಗಪ್ರಿಯನಾಗಿ, ಬೇಕುಗಳ ಹಿಂದೆ ಓಡಿ ಓಡಿ ದಣಿದು, ಹಲವು ಮದುವೆಯಾಗಿ, ನಾನಾ ಮಕ್ಕಳನ್ನು ಪಡೆದು ಇನ್ನೂ ಸಾಕಾಗದೆ, ತನ್ನ ಮಗನ ಯೌವನವನ್ನೇ ಪಡೆದರೂ ತೃಪ್ತನಾಗದೇ, ನಾನಾ ಕಷ್ಟ ಕೋಟಲೆಗಳಿಗೆ ಸಿಲುಕಿ ತನ್ನ ಪ್ರಾಣ ಬಿಡುತ್ತಾನೆ. ಯತಿಯು ಶಾಶ್ವತನಾದ, ಯಯಾತಿಯು ಮೃತ್ಯುವಶನಾದ. ಇದು ಅತಿಲೋಭತನದ ಪರಿಣಾಮವಾಗಿದೆ. ಹಾಗೆಯೆ ನಿಯಮ ಬಾಹಿರ ಜೀವನ ಪಥವನ್ನು ಅನುಸರಿಸುವುದು ಅಪಕಾರಿ ಎಂಬುದಕ್ಕೆ ನಿದರ್ಶನವಾಗಿದೆ. ಆದ್ದರಿಂದ ಒಂದು ನಿಯಮ ಸೂತ್ರದ ಅಡಿಯಲ್ಲಿ ಜನಮಾನಸವಿರಬೇಕಾಗುತ್ತದೆ.

ಬ್ರಹರ್ಷಿ ಕೆ. ಎಸ್. ನಿತ್ಯಾನಂದರ ಸಾಮವೇದ ಭಾಷ್ಯ ಸಂಹಿತದಲ್ಲಿನ ಕಥೆಗಳು - ೨

ಅಣಿಮಾಂಡವ್ಯ

ಒಂದಾನೊಂದು ಕಾಲದಲ್ಲಿ ಮಾಂಡವ್ಯನೆಂಬ ಮಹಾನ್ ತಪಸ್ವಿಯೂ, ತ್ಯಾಗಿಯೂ, ಉದಾರಿಯೂ ಆದ ಋಷಿಯೊಬ್ಬನಿದ್ದನು. ಅವನ ಕೊರತೆಯೆಂದರೆ ಅವನ ಆಸನ ಭಾಗದಲ್ಲಿ ಒಂದು ಉಕ್ಕಿನ ಶೂಲ ಅಂಟಿಕೊಂಡಿದ್ದು, ಅವನು ಯಾವಾಗಲೂ ನಿಂತುಕೊಂಡೇ ಇರಬೇಕಾಗಿತ್ತು. ಒಂದು ದಿನ ಕೆಲವು ಋಷಿಗಳು ಅವನಲ್ಲಿಗೆ ಬಂದರು. ಅವನು ಅವರನ್ನು ನಿಂತುಕೊಂಡೇ ಸತ್ಕರಿಸಿದನು. ಆಗ ಋಷಿಗಳು "ಅಯ್ಯಾ ಮಾಂಡವ್ಯನೇ ನಿನ್ನ ಸ್ಥಿತಿ ನಮಗೆ ಅರ್ಥವಾಗಿದೆ. ನಿನಗೆ ಅದರಿಂದ ಬಿಡುಗಡೆ ಕೊಡುವ ಉದ್ದೇಶದಿಂದ ನಾವು ಬಂದಿದ್ದೇವೆ. ನೀನು ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿನಿಂದ ಈ ಶಿಕ್ಷೆ ಕೊಡಲ್ಪಟ್ಟಿದೆ. ಅದನ್ನು ನೀನು ನಮಗೆ ಹೇಳಿದರೆ ನಿನಗೆ ಅದರಿಂದ ಮುಕ್ತಿ ಕೊಡುತ್ತೇವೆ" ಎಂದರು.

ಆಗ ಮಾಂಡವ್ಯನು ತನ್ನ ಬಾಲ್ಯದ ಕಥೆ ಹೇಳಲಾರಂಭಿಸಿದ. "ನಾನು ಚಿಕ್ಕಂದಿನಿಂದಲೂ ಹಿಂಸಾತ್ಮಕ ಪ್ರವೃತ್ತಿಯವನಾಗಿದ್ದೆ. ಆಕಾಶದಲ್ಲಿ ಹಾರುವ ಹಕ್ಕಿಗಳನ್ನು ವಿಕೃತ ತರಂಗ ಸೃಷ್ಟಿಸಿ ಹಾರದಂತೆ ಮಾಡಿ, ಹಿಡಿದು, ಮುಳ್ಳು ಚುಚ್ಚಿ ಹಿಂಸೆ ಕೊಡುತ್ತಿದ್ದೆ. ಋಷಿ ಶ್ರೇಷ್ಠರು ಉಪದೇಶಿಸಿದ ಮಂತ್ರಗಳನ್ನೆಲ್ಲ ಬಾಲ್ಯ ಚೇಷ್ಟೆಗೆ ಬಳಸುತ್ತಿದ್ದೆ. ಇದನ್ನರಿತ ನನ್ನ ತಂದೆ "ನಿನಗೆ ಸಿದ್ಧಿಸಿದ ಮಂತ್ರಗಳೆಲ್ಲ ಸ್ಮರಣೆಯಿಂದ ಮಾಯವಾಗಲಿ" ಎಂದು ಶಪಿಸಿದರು. ತಂದೆಯ ಬಳಿ ಕ್ಷಮೆ ಕೇಳಿದಾಗ ಪ್ರಾಯಶ್ಚಿತ್ತಕ್ಕಾಗಿ ದೇಶಪರ್ಯಟನೆ ಮಾಡು ಎಂದರು. ಅಂದಿನಿಂದ ೮೦೦ ವರ್ಷ ದೇಶಪರ್ಯಟನೆ ಮಾಡಿದೆ. ಅಲ್ಲೆಲ್ಲ ಜನರು ಹಲವು ರೀತಿಯ ಹಿಂಸೆ ಕೊಟ್ಟರು. ಅದನ್ನೆಲ್ಲ ಸಹಿಸಿಕೊಂಡೆ. ಮುಂದೆ ಕೌಶಂಬಿ ನಗರಕ್ಕೆ ಬಂದಾಗ ಏನಕೇನ ಪ್ರಕಾರೇಣ ಕಳ್ಳತನದ ಆರೋಪ ಬಂತು. ರಾಜಭಟರು ಪ್ರಶ್ನೆ ಕೇಳಿದಾಗ ಮೌನಿಯಾಗಿದ್ದೆ. ರಾಜನಿಗೆ ಸಿಟ್ಟು ಬಂದು ಶೂಲಕ್ಕೆ ಏರಿಸಿದರು. ನೋವು ಅನುಭವಿಸಿದರೂ ಸಾಯಲಿಲ್ಲ. ಪ್ರಣವೋಪಾಸನೆ ಮಾಡುತ್ತ ಬದುಕಿದ್ದೆ. ೧೫ ನೇ ದಿನ ರಾಜನಿಗೆ ಯಮನು ಕನಸಿನಲ್ಲಿ ಬಂದು ಅವನು ಅಪರಾಧಿಯಲ್ಲ, ಅವನನ್ನು ನೀನು ಸಾಯಿಸಲಾರೆ, ಬಿಡಿಸು ಎಂದನು. ಆದರೆ ನಾನು ಶೂಲಕ್ಕೆ ಅಂಟಿಕೊಡದ್ದರಂದ ನನ್ನನ್ನು ಬಿಡಿಸಲು ಆಗಲಿಲ್ಲ. ಕೊನೆಗೆ ಶೂಲ ಸಮೇತ ನನ್ನನ್ನು ಇಳಿಸಿ ಶೂಲವನ್ನು ದೇಹದ ಅಂಚಿನವರೆಗೆ ಬಿಟ್ಟು ಕತ್ತರಿಸಿದರು. ಅದರ ಅಣಿ ಅಥವಾ ಮೊನೆ ದೇಹದಲ್ಲೇ ಇರುವುದರಿಂದ ಕುಳಿತುಕೊಳ್ಳಲಾರೆ, ಆ ನೋವಿನಲ್ಲೇ ಬದುಕುತ್ತಿದ್ದೇನೆ " ಎಂದನು. ಆಗ ಋಷಿಗಳು ಧರ್ಮ ವಿಧಿಸಿದ ಶಿಕ್ಷೆ ಇದು. ಇದರ ಅವಧಿ ಮುಗಿದಿದೆ ಎಂದು "ಸಮಗಾನ"ವನ್ನು ಹಾಡಿದಾಗ ಅಣಿಯು ಜಾರಿ ಕೆಳಗೆ ಬಿತ್ತು. ಹಾಗಾಗಿ ಒಂದು ಸಣ್ಣ ಕೀಟಕ್ಕೂ ಹಿಂಸೆ ಕೊಟ್ಟಲ್ಲಿ ಮುಂದೆ ಅದು ಕಾಡುತ್ತದೆ ಎಂದು ತಿಳಿಯಬಹುದು. ಅಲ್ಲದೆ ಸಾಮದ ಮಹತ್ವವನ್ನೂ ಅರಿಯಬಹುದು.

April 2, 2018

ಮೂರ್ಖರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಭಾಗ ೩ - ಫೇಸ್ಬುಕ್, ಗೂಗಲ್ ಗಳು ಉಚಿತವಲ್ಲ!


ಇತ್ತೀಚಿಗೆ ಎಲ್ಲರೂ ಫೇಸ್ಬುಕ್ ನಲ್ಲಿ ಗೆಳೆಯರನ್ನು ಮಾಡಿಕೊಳ್ಳುವುದು, ಗೂಗಲ್ ನಲ್ಲಿ ಹುಡುಕಾಡುವುದು ಹೆಚ್ಚಾಗಿದೆ. ಎಲ್ಲರೂ ಅದು ಉಚಿತವೆಂದೇ ತಿಳಿದಿದ್ದಾರೆ. ಆದರೆ ಅವು ಹೇಗೆ ಹಣ ಸಂಪಾದನೆ ಮಾಡುತ್ತವೆ ಎಂದು ಆಲೋಚಿಸಿದ್ದೀರಾ? ಒಮ್ಮೆ ಅಂತರ್ಜಾಲವೆಂಬ ಮಾಯಾಜಾಲದ ಒಳಗೆ ಹೊಕ್ಕು ನೋಡಿ. ಈ ಸೇವೆಗಳೆಲ್ಲ ನಿಜವಾಗಿಯೂ ಉಚಿತವಲ್ಲವೆಂಬ ಸತ್ಯದ ಅರಿವು ನಿಮಗಾಗಲಿದೆ. ನೀವು ನಿಮ್ಮ ಆಂತರಿಕ ಗುರುತು, ಸ್ವಂತ ವ್ಯಕ್ತಿತ್ವವನ್ನು ಅವರಿಗೆ ಪಾವತಿ ಮಾಡುತ್ತಿದ್ದೀರಿ! ನೀವು ಫೇಸ್ಬುಕ್ ಬಳಸುವಾಗ ಅವರು ನಿಮ್ಮ ಎಲ್ಲ ವ್ಯವಹಾರಗಳನ್ನು ದಾಖಲು ಮಾಡಿಕೊಳ್ಳುತ್ತಾರೆ. ನೀವು "ಲೈಕ್" ಮಾಡುವ ಪುಟಗಳು, ನೀವು ಸಂವಹನ ನಡೆಸುವ ವ್ಯಕ್ತಿಗಳು, ನೀವು ಸ್ಟೇಟಸ್ ನಲ್ಲಿ ಬಳಸಿರುವ ಶಬ್ಧಗಳು ಎಲ್ಲವೂ ಅವರ ಸಂಗ್ರಹದಲ್ಲಿ ದಾಖಲಾಗುತ್ತವೆ. ನಂತರ ಅವರು ಈ ಮಾಹಿತಿಯನ್ನು ವಿಶ್ಲೇಷಿಸಿ ನೀವು ಏನೆಂಬುವುದರ ಬಗ್ಗೆ ಒಂದು ವಿಸ್ತೃತ ದಾಖಲೆ ನಿರ್ಮಾಣ ಮಾಡುತ್ತಾರೆ. ಈ ಮೂಲಕ ಅವರು ನಿಮ್ಮ ಹವ್ಯಾಸವೇನು? ನಿಮ್ಮ ಆಯ್ಕೆಗಳೇನು? ನಿಮ್ಮ ಪ್ರಾಶಸ್ತ್ಯಗಳೇನು? ನಿಮ್ಮ ಅಪಾಯ ಸಹಿಷ್ಣುತೆ ಎಷ್ಟು? ಅಷ್ಟೇ ಅಲ್ಲ ನಿಮ್ಮ ಲೈಂಗಿಕ ದೃಷ್ಟಿಕೋನವೇನು ಎಂಬುದನ್ನೂ ಅರಿತಿರುತ್ತಾರೆ. ಇದನ್ನು ಅವರು ಜಾಹೀರಾತುದಾರರಿಗೆ ಬಹಳ ದೊಡ್ಡ ಮೊತ್ತಕ್ಕೆ ಮಾರುತ್ತಾರೆ. ಇತ್ತೀಚಿಗೆ ಚುನಾವಣಾ ಸಂಬಂಧಿಯಾಗಿ ಮತದಾರರನ್ನು ಪ್ರೇರೇಪಿಸಲು ಇಂತಹುದೇ ತಂತ್ರ ಬಳಸಿರುವುದು ನಿಮಗೆ ತಿಳಿದೇ ಇದೆ. ನೀವು ಮನದಲ್ಲೇ ಎಣಿಸಿದಂತಹ ಅಥವಾ ಮಿತ್ರರೊಂದಿಗೆ ಅನಿಸಿಕೆ ಹಂಚಿಕೊಂಡಂತಹ ವಸ್ತುವಿನ ಜಾಹೀರಾತು ಪದೇ ಪದೇ ಫೇಸ್ಬುಕ್ ನಲ್ಲಿ ಅಥವಾ ಗೂಗಲ್ ನಲ್ಲಿ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕಾಗಿ. ಫೇಸ್ಬುಕ್ ಇದಕ್ಕಿಂತಲೂ ಆಳದಲ್ಲಿ ಬೇರೂರಿದೆ. ನೀವೆಲ್ಲಾದರೂ ಇಂತಹ ಒಂದು ಜಾಹೀರಾತಿನ ಮೋಡಿಗೆ ಒಳಗಾದದ್ದು ಫೇಸ್ಬುಕ್ ಗೆ ಗೊತ್ತಾದರೆ, ಅಂತಹುದೇ ಮತ್ತು ಅಂತಹ ವಸ್ತುವಿಗೆ ಸಂಬಂಧಪಟ್ಟ ನೂರಾರು ಜಾಹೀರಾತುಗಳನ್ನು ನಿಮ್ಮ ಪುಟಕ್ಕೆ ಪಂಪ್ ಮಾಡುತ್ತದೆ. ಈ ಮೂಲಕ ಫೇಸ್ಬುಕ್ ತನ್ನಷ್ಟು ತೀವ್ರ ಪರಿಣಾಮಕಾರಿಯಾದ ಜಾಹೀರಾತುದಾರ ಇನ್ನೊಂದಿಲ್ಲ ಎಂದು ಸಾಬೀತುಪಡಿಸಿದೆ. ಅದು ತನ್ನ ಜಾಹೀರಾಹಿತಿಗೆ ಮನಸೋಲಬಲ್ಲ ವ್ಯಕ್ತಿಯನ್ನು ಬಹುಸುಲಭವಾಗಿ ಪತ್ತೆ ಹಚ್ಚಬಲ್ಲದು.

ಇಷ್ಟು ಆಘಾತಕಾರಿಯಾದ ಫೇಸ್ಬುಕ್ ನಿಂದ ನೀವೇನೋ ಸುಲಭವಾಗಿ ಹೊರಗೆ ಬರಬಹುದು, ಆದರೆ ಗೂಗಲ್ ನಿಂದ ಅಲ್ಲ. ನೀವು ಗೂಗಲ್ ನಲ್ಲೆ ಇರಲಿ ಅಥವಾ ಯಾವುದೇ ಇತರ ಅಂತರ್ಜಾಲ ತಾಣದಲ್ಲೇ ಇರಲಿ, ಗೂಗಲ್ ನಿಮ್ಮನ್ನು ಟ್ರ್ಯಾಕ್ ಮಾಡಬಲ್ಲದು. ಅದರ ಟ್ರಾಕಿಂಗ್ ತಂತ್ರಾಂಶ ಒಂದು ಕೋಟಿಗೂ ಅಧಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಇವು ವೈದ್ಯಕೀಯ ಜಾಲತಾಣಗಳನ್ನೂ ಒಳಗೊಂಡಿವೆ. ಆದ್ದರಿಂದ ಅರೋಗ್ಯ ಸಂಬಂಧೀ ಜಾಲತಾಣಗಳನ್ನು ನೀವು ಖಾಸಗಿ ಎಂದು ಭಾವಿಸಿ ನೋಡುತ್ತಿದ್ದರೆ ಗೂಗಲ್ ಅದನ್ನು ಟ್ರ್ಯಾಕ್ ಮಾಡಿ, ನಿಮ್ಮ ಅರೋಗ್ಯ ನ್ಯೂನತೆಗೆ ಪರಿಹಾರ ನೀಡುವ ಜಾಹೀರಾತುಗಳನ್ನು ಪ್ರದರ್ಶಿಸಲಾರಂಭಿಸುತ್ತದೆ. ಇದು ನಿಮ್ಮನ್ನು ಹಲವು ಬಾರಿ ಮುಜುಗರಕ್ಕೆ ಈಡುಮಾಡಬಹುದು. ಅಷ್ಟೇ ಅಲ್ಲ, ನೀವು ಪ್ರತಿಬಾರಿ ಗೂಗಲ್ ನ ಮಿಂಚಂಚೆ ಬರೆದಾಗ, ಯೂಟ್ಯೂಬ್ ನಲ್ಲಿ ವೀಡಿಯೊ ನೋಡಿದಾಗ, ಗೂಗಲ್ ಮ್ಯಾಪ್ ನೋಡಿದಾಗ, ಅದು ನಿಮ್ಮ ಬಗ್ಗೆ ಮಾಹಿತಿಗಳನ್ನು ಕಲೆಹಾಕುತ್ತದೆ. ನಮಗೆ ಇನ್ನೂ ಗೂಗಲ್ ಮತ್ತು ಫೇಸ್ಬುಕ್ ಕಲೆಹಾಕುತ್ತಿರುವ ಮಾಹಿತಿಗಳ ಪ್ರಮಾಣದ ಅರಿವಿಲ್ಲ. ಆದರೆ ಅವು ಈ ಮಾಹಿತಿಯನ್ನು ಬಳಸಿ ನೂರಾರು ಕೋಟಿ ಲಾಭ ಗಳಿಸುತ್ತಿರುವುದಂತೂ ಸತ್ಯ. ಇದು ಅವುಗಳ ನಿಜವಾದ ವ್ಯವಹಾರ ನೀತಿ. ಅವರು ನಮ್ಮ ಖಾಸಗಿ/ವಯಕ್ತಿಕ ವಿಷಯಗಳ ಮೂಲಕ ಹಣಗಳಿಸುತ್ತಿದ್ದಾರೆ. ನಾವು ಅವರ ಜಾಲತಾಣ ಬಳಸುವಾಗ ಅವರ ಗ್ರಾಹಕರಲ್ಲ, ನಾವು ಅವರ ಉತ್ಪನ್ನಗಳು.

MIT ಸೆಂಟರ್ ಫಾರ್ ಸಿವಿಕ್ ಮೀಡಿಯಾದ ನಿರ್ದೇಶಕರಾದ ಈಥೇನ್ ಝುಕರ್ಮ್ಯಾನ್ ಅವರ ಪ್ರಕಾರ, ಈ ಜಾಲತಾಣಗಳು ಉಚಿತವಾಗಿರುವುದೇ ದೊಡ್ಡ ಸಮಸ್ಯೆ. ಯಾವಾಗ ಅಂತರ್ಜಾಲದ ನಿರ್ಮಾಣವಾಯಿತೋ ಆಗ ನಾವು ಅದು ಉಚಿತವಾಗಿರಬೇಕೆಂದು ಬಯಸಿದೆವು. ಅದರ ಸೇವೆಗಳಿಗೆ ಹಣತೆರುವುದು ಸೂಕ್ತವಲ್ಲ ಎಂದೆಣಿಸಿದೆವು. ಈ ಕಾರಣವಾಗಿ ಜಾಲತಾಣಗಳು ಸಂಪನ್ಮೂಲಕ್ಕಾಗಿ ಜಾಹೀರಾತನ್ನು ಅವಲಂಬಿಸಬೇಕಾಯಿತು. ಈಗ ಅವು ನಮ್ಮ ಅಗತ್ಯತೆಗಳನ್ನು ಹಾಗೂ ನಮ್ಮ ನಡವಳಿಕೆಗಳನ್ನು ಅನುಸರಿಸಿ ಜಾಹೀರಾತುಗಳನ್ನು ತೂರಿ ಬಿಡುತ್ತಿವೆ. ಇದರ ಅರ್ಥ ನಾವು ಉಚಿತ ಅಂತರ್ಜಾಲ ಸೇವೆಗಳಿಗಾಗಿ ನಿರಂತರವಾಗಿ ಇತರರ ಕಣ್ಗಾವಲಿನಲ್ಲಿ ಇದ್ದೇವೆ ಎಂದು. ಇಂದು ಪ್ರಪಂಚದ ಪ್ರತಿ ಆರು ಜನರಲ್ಲಿ ಒಬ್ಬ ಫೇಸ್ಬುಕ್ ನಲ್ಲಿ ಇದ್ದಾನೆ. ಅವರು ಜಗತ್ತಿನಲ್ಲಿ ಎಲ್ಲರೂ ಬಳಸುವ ಅಂತರ್ಜಾಲ ಸಮಯದ ೨೦% ರಷ್ಟನ್ನು ಬಳಸುತ್ತಾರೆ. ಅಂದರೆ ಪ್ರತೀ ದಿನ ೧೬ ಕೋಟಿ ಜನರು ಯಾವುದಾದರೊಂದು ದೊಡ್ಡ ಜಾಲತಾಣದ ಕಣ್ಗಾವಲಿನಲ್ಲಿ ಬದುಕುತ್ತಿದ್ದಾರೆ ಎಂದರ್ಥ. ನಿಮಗೆ ಗೊತ್ತೇ, ಪ್ರತಿಯೊಬ್ಬ ಮನುಷ್ಯನ ಫೇಸ್ಬುಕ್ ನಲ್ಲಿ ಸಂಗ್ರಹಿತ ಮಾಹಿತಿಯ ಬೆಲೆ ಕೇವಲ ೮೦೦ ರೂಪಾಯಿಗಳಷ್ಟು! ನಿಮ್ಮ ಆಸಕ್ತಿಗಳು, ನಿಮ್ಮ ವ್ಯಕ್ತಿತ್ವ, ನಿಮ್ಮ ಸಂಬಂಧಗಳು, ನಿಮ್ಮ ಖಾಸಗಿತನ ನಿಜವಾಗಿಯೂ ಅಮೂಲ್ಯವಾದವು. ಅದಕ್ಕೆ ಕೇವಲ ೮೦೦ ರೂಪಾಯಿ ಬೆಲೆಕಟ್ಟಲಾಗುತ್ತದೆ. ಆದ್ದರಿಂದ ಅಂತರ್ಜಾಲದಿಂದ ಆದಷ್ಟು ದೂರವಿರುವುದೇ ಲೇಸು. ಸ್ವನಿಯಂತ್ರಣ ಅನಿವಾರ್ಯ!

ಇತ್ತೀಚಿನ ವಿದ್ಯಮಾನವೊಂದರಲ್ಲಿ, ಕಳ್ಳನೊಬ್ಬ ಓರ್ವರ ಫೇಸ್ಬುಕ್ ಸ್ಟೇಟಸ್ ಗಳನ್ನು ನೋಡಿ ಮನೆಗೆ ಕಣ್ಣ ಹಾಕಿದ್ದಾನೆ. ನಾವು ಇಂತಹದಿನ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಸ್ಟೇಟಸ್ ಹಾಕಿ, ಆಮೇಲೆ ಪ್ರವಾಸೀ ತಾಣದ ಸುಂದರ ಚಿತ್ರಗಳನ್ನು ಹಾಕಿದ್ದಾರೆ. ಕಳ್ಳನಿಗೆ ಮಾತ್ರವಲ್ಲ ಎಲ್ಲರಿಗೂ ಮನೆ ಖಾಲಿಯಾಗಿರುವುದು ಖಾತ್ರಿಯಾಗಿದೆ. ಬಳಿಕ ಕಳ್ಳ ಮನೆ ದೋಚಿದ್ದಾನೆ. ಹೇಗಿದೆ ನೋಡಿ ಫೇಸ್ಬುಕ್ ಮಹಿಮೆ.

May 24, 2017

ಬಾಳೆಕುದ್ರು ಮಠದ ಶ್ರೀ ಅಣ್ಣಪ್ಪಸ್ವಾಮಿ ನಿರ್ಮಿತ ನ್ಯಾಯದಾನ ಯಂತ್ರ

ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಳಿಯ ಶ್ರೀ ಬಾಳೆಕುದ್ರು ಸಂಸ್ಥಾನದ "ಶ್ರೀಮಠ"ದಲ್ಲಿರುವ ಕುತೂಹಲಕಾರಿ ನ್ಯಾಯದಾನಯಂತ್ರದ ಸಂಕ್ಷಿಪ್ತ ಪರಿಚಯ ನೀಡುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಶ್ರೀಮಠವು ಅತ್ಯಂತ ಸುಂದರವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ಅತ್ಯಂತ ವಿಸ್ಮಯಕಾರೀ ಸಂಗತಿಗಳು ಹೊರಬರುತ್ತಿವೆ. ಈ ಘಟನೆಗಳಿಗೆ ನಾವು ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ. ಅಂತಹ ಒಂದು ವಿಸ್ಮಯವೇ ಈ ನ್ಯಾಯದಾನ ಯಂತ್ರ. ಇದನ್ನು ಸ್ಥಾಪಿಸಿದವರು ನಮ್ಮೆಲ್ಲರ ಪ್ರೀತಿಯ ಅಜ್ಜ ಶ್ರೀ ಅಣ್ಣಪ್ಪಸ್ವಾಮಿಯವರು. ಬಾಳೆಕುದ್ರು ಮಠ ಹಾಗೂ ಶ್ರೀ ಅಣ್ಣಪ್ಪಸ್ವಾಮಿಯ ಸಂಬಂಧಗಳ ಬಗ್ಗೆ ಈಗಲೇ ಈ ಬ್ಲಾಗಿನಲ್ಲಿ ಬರೆಯಲಾಗಿದೆ. ಅದನ್ನು ಈ ವಿಳಾಸದಲ್ಲಿ ಓದಬಹುದು 


ಬಾಳೆಕುದ್ರು ಮಠದ ನ್ಯಾಯದಾನ ಯಂತ್ರದ ಚಿತ್ರವನ್ನು ಇಲ್ಲಿ ನೀಡಲಾಗಿದೆ. 



​​
 ಎದುರಿಗೆ ಕಾಣುತ್ತಿರುವ ದ್ವಾರವೇ ನಾನು ಪ್ರಸ್ತಾಪಿಸುತ್ತಿರುವ ನ್ಯಾಯದಾನ ಯಂತ್ರ. ಇದರ ಮೂಲಕ ಹಾದು ಬರುವ ಪ್ರತಿಯೊಬ್ಬ ವ್ಯಕ್ತಿಯೂ ಸತ್ಯವನ್ನು ನುಡಿಯಲೇ ಬೇಕು. ಅಂತಹ ತಂತ್ರವನ್ನು ಶ್ರೀ ಅಣ್ಣಪ್ಪಯ್ಯನವರು ಈ ದ್ವಾರದಲ್ಲಿ ಅಳವಡಿಸಿದ್ದಾರೆ. ಇದರ ಮೂಲಕ ಸುಮಾರು ೨೩೦೦ ವರ್ಷಗಳಿಂದಲೂ ಶ್ರೀಮಠದಲ್ಲಿ ನ್ಯಾಯದಾನವು ಸುವ್ಯವಸ್ಥಿತವಾಗಿ ​ನಡೆದುಕೊಂಡು ಬಂದಿವೆ. ಸಾವಿರಾರು ಕ್ಲಿಷ್ಟ ಸಮಸ್ಯೆಗಳು ಪರಿಹಾರವನ್ನು ಕಂಡುಕೊಂಡಿವೆ, ಮಾತ್ರವಲ್ಲ ಇನ್ನೂ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇಂದಿಗೂ ಈ ಪರಂಪರೆ ಉಳಿದು, ಬೆಳೆದು ಬಂದಿರುವುದು ಶ್ರೀಮಠದ ಹೆಗ್ಗಳಿಕೆ. 

ಸ್ವಸ್ತಿ ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನರಾದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಭಾಗವತ ಪರಂಪರೆಯ ಶ್ರೀ ಬಾಳೆಕುದ್ರು ಸಂಸ್ಥಾನದ ಸಂಸ್ಥಾಪಕ ಶ್ರೀ ಶ್ರೀ ಶ್ರೀ ವರದಾಶ್ರಮ ಸ್ವಾಮಿಗಳ ಪರಂಪರೆಯ ಪ್ರವರ್ತಕ ಶ್ರೀಶ್ರೀಶ್ರೀ ನೃಸಿಂಹಾಶ್ರಮ ಸ್ವಾಮಿಗಳು ಸತ್ಯ, ನ್ಯಾಯ, ಧರ್ಮದ ಪ್ರತಿರೂಪವಾಗಿ ನಮ್ಮನ್ನು ಸಲಹುತ್ತಿರುವುದು ಸರ್ವವಿದಿತ. ಇನ್ನು ಶ್ರೀ ಅಣ್ಣಪ್ಪಯ್ಯನವರು ದೇಶದಾದ್ಯಂತ ಸಂಚರಿಸಿ ನ್ಯಾಯದಾನ ಯಂತ್ರಗಳನ್ನು ಸ್ಥಾಪಿಸಿರುವುದು ನಿಮಗೆ ಗೊತ್ತೇ ಇದೆ. ಇದರ ಕುರುಹುಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವುದು ಧರ್ಮಸ್ಥಳ, ಹಿರಿಯಡ್ಕ ಮತ್ತು ಮಾರಣಕಟ್ಟೆಗಳಲ್ಲಿ ಮಾತ್ರ ಎಂದು ನಾನು ತಿಳಿದಿದ್ದೆ. ಈಗ ಶ್ರೀಮಠದ ನ್ಯಾಯದಾನಯಂತ್ರವು (ಬಾಗಿಲು) ಬೆಳಕಿಗೆ ಬಂದು ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಗೆ ಹೊಸ ಅವಕಾಶದ ಬಾಗಿಲನ್ನೇ ನಮಗಾಗಿ ತೆರೆದಿದೆ. ನಾವೆಲ್ಲರೂ ಕೋರ್ಟು ಕಛೇರಿ ಎಂದು ಹಣ, ಸಮಯ ಎರಡನ್ನೂ ವ್ಯರ್ಥ ಮಾಡುವ ಬದಲು ನಮ್ಮ ಹಿರಿಯರು ಕೊಟ್ಟಿರುವ ಇಂತಹ ಅಮೂಲ್ಯ ಯಂತ್ರಗಳ ಸಹಾಯದಿಂದ  ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳೋಣ. ಗುರುಗಳ ಸಾನ್ನಿಧ್ಯದಿಂದ ಪುನೀತರಾಗೋಣ. ವಂದೇ ಮಾತರಂ. 
  

May 10, 2017

ನೂತನ ರಥ ಸಮರ್ಪಣೆ ಮತ್ತು ರಥೋತ್ಸವದ ವರದಿ


ಸ್ವಸ್ತಿ ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳೀ ವಿರಾಜಮಾನರಾದ ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯವರ್ಯ ಭಾಗವತ ಪರಂಪರೆಯ ಶ್ರೀ ಬಾಳೆಕುದ್ರು ಸಂಸ್ಥಾನದ ಸಂಸ್ಥಾಪಕ ಶ್ರೀ ಶ್ರೀ ಶ್ರೀ  ವರದಾಶ್ರಮ ಸ್ವಾಮಿಗಳ ಪರಂಪರೆಯ ಪ್ರವರ್ತಕ ಶ್ರೀಶ್ರೀಶ್ರೀ ನೃಸಿಹಾಶ್ರಮ ಸ್ವಾಮಿಗಳ ಪರಮಾನುಗ್ರಹದಿಂದ  
ತಾ: ೯-೫-೨೦೧೭ರಂದು ಶ್ರೀಮಠ ಬಾಳೆಕುದ್ರುವಿನ ನರಸಿಹ ದೇವರಿಗೆ ಸುಮಾರು ೬೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಭವ್ಯವಾದ ರಥವನ್ನು ಸಮರ್ಪಿಸಲಾಯಿತು. ಬ್ರಹ್ಮರ್ಷಿ ಕೆ. ಎಸ್. ನಿತ್ಯಾನಂದ, ವೇದವಿಜ್ಞಾನ ಮಂದಿರ, ಚಿಕ್ಕಮಗಳೂರು ಇವರ ನಿರ್ದೇಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಬಳಿಕ ವೈಭವದ ರಥೋತ್ಸವವೂ ನೆರವೇರಿತು. ಮಧ್ಯಾಹ್ನ ಯಕ್ಷಗಾನ - ಪ್ರವಚನ, ಪ್ರಸಂಗ - "ಪ್ರಥಮ ಭಾಗವತ ಪ್ರಹ್ಲಾದ" ಕಾರ್ಯಕ್ರಮ ನಡೆಯಿತು. ಶ್ರೀಮತಿ ಭವ್ಯಶ್ರೀ ಹರೀಶ್ ಅವರ ಕಂಚಿನ ಕಂಠದಲ್ಲಿ ಗಾನವೂ, ಶ್ರೀ ಉಜಿರೆ ಅಶೋಕ್ ಭಟ್ಟರಿಂದ ಪ್ರವಚನ - ಜ್ಞಾನಾಮೃತ ಸಿಂಚನವೂ ಜರುಗಿತು. ಪ್ರಹ್ಲಾದನು ಹೇಗೆ ಭಾಗವತನೆನಿಸಿಕೊಂಡ, ಪ್ರಹ್ಲಾದ ರಾಜಾಭಿಷಕ್ತನಾದ ಬಳಿಕ ಹೇಗೆ ಭಾಗವತನಾಗಿ ಜಗತ್ತನ್ನೇ ಆಳಿದ. ಸಮಸ್ತ ಭೂಮಂಡಲಕ್ಕೆ ಹೇಗೆ ಪರೋಪಕಾರಿಯಾಗಿ ಬಾಳಿ ಶಾಶ್ವತವಾದ ಸ್ಥಾನವನ್ನು ಗಳಿಸಿದ ಎನ್ನುವುದನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಭಟ್ಟರು ಬಲು ಸುಂದರವಾಗಿ ವ್ಯಾಖ್ಯಾನಿಸಿದರು. ಎಲ್ಲರೂ ಪ್ರಹ್ಲಾದ ಎಂದರೆ ತಂದೆಯನ್ನು ಕೊಲ್ಲಿಸಿದವನು ಎಂದು ಜರೆಯುವುದು ತರವಲ್ಲ. ನರಸಿಂಹನು ಉಗ್ರರೂಪ ತೊರೆದು ಪ್ರಹ್ಲಾದನಲ್ಲಿ ವರವನ್ನು ಕೇಳೆಂದಾಗ ಆತ ತನಗೇನೂ ಕೇಳದೆ ತನ್ನ ತಂದೆಗೆ ಮುಕ್ತಿಯನ್ನು ಕರುಣಿಸು ಎಂದು ಕೋರುವುದರ ಮೂಲಕ ನಿಜವಾದ ಭಾಗವತ ಧರ್ಮವನ್ನು ಜಗತ್ತಿಗೆ ತೋರಿಸುತ್ತಾನೆ. ಪ್ರಹ್ಲಾದನು ಹರ ದ್ವೇಷಿಯಲ್ಲ, ಕೇವಲ ಹರಿಯನ್ನು ವಿರೋಧಿಸುವ ತಂದೆಗೆ ತಿಳಿಹೇಳಲು ಹರಿನಾಮವನ್ನು ಬಳಸಿದ. ಹರಿ-ಹರರಲ್ಲಿ ಭೇಧವಿಲ್ಲ, ಅದೇ ಭಾಗವತ ಎನ್ನುವ ವಿಚಾರವು ಅಶೋಕ್ ಭಟ್ಟರ ಪ್ರವಚನದ ಸಾರವಾಗಿತ್ತು.  

May 4, 2017

​ಚಕ್ರವರ್ತಿ ಸೂಲಿಬೆಲೆ ಬದಲಾಗಿದ್ದಾರೆ!



ಕೆಲವು ವರ್ಷಗಳ ಹಿಂದೊಮ್ಮೆ ಮಾತಿನ ಮಲ್ಲ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ಕೇಳಿದ್ದೆ. ಆರ್. ಎಸ್. ಎಸ್   ಪ್ರಚಾರಕರಂತೆ ಪ್ರಸಕ್ತ ಸಾಮಾಜಿಕ ವ್ಯವಸ್ಥೆಯ ಹುಳುಕುಗಳನ್ನು ವೈಭವೀಕರಿಸಿ ಹೇಳುತ್ತಾ ಚಪ್ಪಾಳೆಗಿಟ್ಟಿಸುತ್ತಿದ್ದ ಬಿಸಿರಕ್ತದ ಯುವಕನನ್ನು ಇಂದು ನೀವು ಕಾಣಲು ಸಾಧ್ಯವಿಲ್ಲ. ಇತ್ತೀಚಿಗೆ ಉಡುಪಿ ಜಿಲ್ಲೆಯ ಬಾಳೆಕುದ್ರುವಿನ ಶ್ರೀಮಠದ ಶಂಕರ ಜಯಂತಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನಕಾರನಾಗಿ ಕಾಣಿಸಿದ ವ್ಯಕ್ತಿ ಬೇರೆಯವನೇ ಏನೋ ಎಂದು ಹೇಳುವಷ್ಟು ಬದಲಾಗಿದ್ದಾರೆ ಚಕ್ರವರ್ತಿ. ಮಾತಿನ ತೀಕ್ಷತೆ, ಮೊನಚು, ಉದಾಹರಣೆಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುವ ಪರಿಯಲ್ಲಿ ಎಳ್ಳಷ್ಟೂ ವ್ಯತ್ಯಾಸವಾಗದೆ ಇದ್ದರೂ ಕೂಡ, ವಿಷಯ ಮಂಡನೆಯಲ್ಲಿ, ವೈಚಾರಿಕತೆಯಲ್ಲಿ ಪ್ರೌಢಿಮೆಯನ್ನು ತೋರಲಾರಂಭಿಸಿದ್ದಾರೆ. ತಾವು ನಂಬಿರುವ ತತ್ವ ಸಿದ್ಧಾಂತಗಳಿಗೆ ರಾಷ್ಟ್ರೀಯತೆಯ ಸೊಗಡನ್ನು ತುಂಬುತ್ತಿದ್ದಾರೆ. ಹಿಂದೆಲ್ಲ ಬರಿಯ ಮಾತಿನಿಂದಲೇ ಮಂಟಪವನ್ನು ಕಟ್ಟುತ್ತಿದ್ದವರು ಈಗ ಕೃತಿಯಲ್ಲೂ ಅದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಕ್ರವರ್ತಿ ಬದಲಾಗಿದ್ದಾರೆ. ಸಮಾಜಕ್ಕೆ ಇನ್ನೂ ಉತ್ತಮವಾದದ್ದನ್ನು ಕೂಡುವ ಸಂಕಲ್ಪದಿಂದ ಬದಲಾಗಿದ್ದಾರೆ ಎನ್ನಬಹುದೇನೋ. 

"ಮಿಥುನ್ ಚಕ್ರವರ್ತಿ" - ಹೀಗೆಂದಾಗ ಹಿಂದಿ ಚಲನಚಿತ್ರದ ನಟನೊಬ್ಬನ ನೆನಪಾಗಿರಬೇಕಲ್ಲ! ಅದೇ ನಾಮಧೇಯದ ಸೂಲಿಬೆಲೆ ಎಂಬ ಊರಿನ ಮಹತ್ವಾಕಾಂಕ್ಷೆಯ ಹುಡುಗನೊಬ್ಬ ದೇಶಭಕ್ತಿಯ ಭಾವಗಳನ್ನು ಮನದಲ್ಲಿ ತುಂಬಿಕೊಂಡು ಆರ್. ಎಸ್. ಎಸ್ ಸೇರುತ್ತಾನೆ. ಅಲ್ಲಿ ಸಂಘದ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುತ್ತಾನೆ. ಸಂಘದ ಕೆಲವೊಂದು ನೀತಿ ನಿಯಮಗಳು ಯುವಕ ಮಿಥುನ್ ಕ್ಷಿಪ್ರ ಬೆಳವಣಿಗೆಯ ಕನಸುಗಳಿಗೆ ಅಡ್ಡಗಾಲಾಗಿ ಪರಿಣಮಿಸುತ್ತವೆ. ಹೊತ್ತಿಗಾಗಲೇ ಇಂಜಿನಿಯರಿಂಗ್ ಪದವಿಯನ್ನು ಪೂರ್ತಿಗೊಳಿಸಿದ್ದ ಮಿಥುನ್, ತನ್ನ ಮಹತ್ವಾಕಾಂಕ್ಷೆಯನ್ನು ಪೋಷಿಸುವ, ಅದನ್ನು ಈಡೇರಿಸಲು ಸಹಕರಿಸುವ ಇತರ ಸಂಘಟನೆಯನ್ನು ಅರಸುತ್ತಿರುತ್ತಾನೆ. ಅದು ೯೦ ದಶಕದ ಕೊನೆಯ ಭಾಗ. ರಾಷ್ಟ್ರಬಂಧು ಶ್ರೀ ರಾಜೀವ ದೀಕ್ಷಿತರು "ಆಜಾದಿ ಬಚಾವೋ ಆಂದೋಲನ" ಮೂಲಕ ಮನೆಮಾತಾಗಿದ್ದ ಕಾಲವದು. ಗಾಂಧೀಜಿಯ ರಾಮರಾಜ್ಯದ ಕನಸನ್ನು ನೆನಸು ಮಾಡಲು, ಸ್ವದೇಶೀ ಚಳುವಳಿಯನ್ನು ದೇಶದ ಉದ್ದಗಲಕ್ಕೂ ಪಸರಿಸಲು, ತಮ್ಮ ಆಕರ್ಷಕ ಶೈಲಿಯ ಭಾಷಣದ ಮೂಲಕ ದೇಶದ ಹಳ್ಳಿ ಹಳ್ಳಿಗಳಿಗೂ ಸಂಚಾರ ಕೈಗೊಳ್ಳುತ್ತಿದ್ದರು. ಹಿಂದಿ ಭಾಷಣಕಾರರಾದ ಅವರಿಗೆ ಕರ್ನಾಟಕದ ಹಳ್ಳಿಗಳನ್ನು ತಲುಪಲು ಸಮರ್ಥ ಭಾಷಾಂತರಕಾರನ ಅವಶ್ಯಕತೆ ಇತ್ತು. ಅಷ್ಟೋತ್ತಿಗಾಗಲೇ ಮಿಥುನ್ "ವೀರ ಸಾವರ್ಕರ್" ಎಂಬ ಪುಸ್ತಕವನ್ನು ಬರೆದು ಪ್ರಕಟಿಸಿಯಾಗಿತ್ತು. ಆಜಾದಿ ಬಚಾವೋ ಆಂದೋಲನದಲ್ಲಿ ತನ್ನ ಆಕಾಂಕ್ಷೆಗಳ ಪೂರೈಕೆಗೆ ಇರುವ ಅವಕಾಶಗಳನ್ನು ಅರ್ಥಮಾಡಿಕೊಂಡ ಮಿಥುನ್, ರಾಜೀವ್ ದೀಕ್ಷಿತರಿಗೆ ಭಾಷಾಂತರಕಾರನಾಗಿ ಸೇರಿಕೊಳ್ಳುತ್ತಾನೆ. ಸುಮಾರು ವರ್ಷಗಳ ಕಾಲ ಆಜಾದಿ ಬಚಾವೋ ಆಂದೋಲನದ ಸಕ್ರಿಯ ಕಾರ್ಯಕರ್ತನಾಗಿ ದುಡಿದ ಮಿಥುನ್, ರಾಜೀವ್ ದಿಕ್ಷಿತರಿಂದ ಭಾಷಣದ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾನೆ. ಸಮಯದಲ್ಲಿ ಅವನ ಆಕಾಂಕ್ಷೆಗಳಿಗೆ ತಣ್ಣೀರು ಸುರಿಯುವ ಕಾರ್ಯ ಆಂದೋಲನದಲ್ಲಿ ನಡೆದು ಹೋಗುತ್ತದೆ. ಪ್ರಮುಖವಾಗಿ ರಾಜೀವ್ ದೀಕ್ಷಿತರ ಭಾಷಣದ ವೇದಿಕೆಯಲ್ಲಿ ಮಿಥುನ್ ಕೇವಲ ಭಾಷಾಂತರಕಾರನಾಗಿಯೇ ಉಳಿದುಹೋಗುತ್ತಾನೆ. ಸ್ವಂತ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ವೇದಿಕೆ ಸಹಾಯ ಮಾಡುವುದೇ ಇಲ್ಲ. ಹೀಗಾಗಿ ಕ್ರಮೇಣ ಆಂದೋಲನದಿಂದ ದೂರ ಸರಿಯುತ್ತಾ ಕೊನೆಗೆ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ "ಜಾಗೊ ಭಾರತ್" ಎನ್ನುವ ರಾಷ್ಟ್ರಪ್ರೇಮವನ್ನು ಸಾರುವ ವಿಶಿಷ್ಟವಾದ ಕಾರ್ಯಕ್ರಮ ಮಿಥುನ್ ಚಕ್ರವರ್ತಿ ಅಥವಾ ಚಕ್ರವರ್ತಿ ಸೂಲಿಬೆಲೆಯಿಂದ ಆರಂಭವಾಗುತ್ತದೆ. ಅಂದರೆ ಆರ್. ಎಸ್. ಎಸ್. ನಿಂದ ಹೊರಬಂದು "ಜಾಗೊ ಭಾರತ್" ಆರಂಭಿಸುವ ಕಾಲಘಟ್ಟದಲ್ಲಿ ಆಜಾದಿ ಬಚಾವೋ ಆಂದೋಲನವನ್ನು ಮಿಥುನ್ ಚಿಮ್ಮು ಹಲಗೆಯಾಗಿ ಮಾತ್ರ ಬಳಸಿಕೊಳ್ಳುತ್ತಾನೆ ಎಂದರೂ ತಪ್ಪಿಲ್ಲ. ಮಿಥುನ್ ಹೊರಬಂದ ನಂತರ ಕರ್ನಾಟಕದಲ್ಲಿ ಆಜಾದಿ ಬಚಾವೋ ಆಂದೋಲನವು ಮುಂದೆ "ಹಿಂದ್ ಸ್ವರಾಜ್ ಅಭಿಯಾನ" ಎನ್ನುವ ಹೆಸರಿನಿಂದ ಕುಂಟುತ್ತಾ ಸಾಗಿ, ರಾಜೀವ್ ದೀಕ್ಷಿತರು ಬಾಬಾ ರಾಮದೇವರೊಂದಿಗೆ ರಾಜಕೀಯ ಪಕ್ಷದ ಸಂಕಲ್ಪ ಕೈಗೊಂಡ ನಂತರ ಕಣ್ಮರೆಯಾಗುತ್ತದೆ. ಈಗಲೂ ಅಭಿಯಾನದ ಕೆಲವು ಕಾರ್ಯಕರ್ತರು ಮೈಸೂರಿನಲ್ಲಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ರಾಜೀವ್ ದೀಕ್ಷಿತರು ತಮ್ಮ ಪ್ರಿಯವಾದ ಉಪನ್ಯಾಸದ ಸಂದರ್ಭದಲ್ಲಿ ಹೃದಯಾಘಾತ ಅನುಭವಿಸುತ್ತಾರೆ. ಅವರ ಜೀವವನ್ನು ಉಳಿಸಬಹುದಾಗಿದ್ದ ಚುಚ್ಚುಮದ್ದನ್ನು ಕೇವಲ ವಿದೇಶಿ ಔಷಧ ಎನ್ನುವ ಕಾರಣಕ್ಕೆ ನಿರಾಕರಸಿ ಬಳಿಕ ಕೀರ್ತಿಶೇಷರಾಗುತ್ತಾರೆ. 

ಆಜಾದಿ ಬಚಾವೋ ಆಂದೋಲನದಿಂದ ಹೊರಬಂದ ಸಮಯದಲ್ಲಿ ಮಿಥುನ್ ಗೆ ಆರ್ಥಿಕ ಅಭದ್ರತೆ ಕಾಡುತ್ತದೆ. ಆಗ ಹುಟ್ಟಿದ್ದು "ಜಾಗೊ ಭಾರತ್". ಆಕಾಶವಾಣಿಯ ಕಲಾವಿದರನ್ನು ಕಟ್ಟಿಕೊಂಡು, ರಾಜೀವ್ ದೀಕ್ಷಿತರ ಜೀವನಾನುಭವಗಳನ್ನು ಬಳಸಿಕೊಂಡು, ದುಬಾರಿಯಾದ ಶುಲ್ಕವನ್ನು ನಿಗದಿಪಡಿಸಿ ಸಿದ್ಧಗೊಳಿಸಲ್ಪಟ್ಟ "ಜಾಗೊ ಭಾರತ್" ಕರ್ನಾಟಕದಾದ್ಯಂತ ಸಂಚಲನ ಮೂಡಿಸಿತು. ಇದು ಮಿಥುನ್ ಗೆ ಆರ್ಥಿಕ ದೃಢತೆಯನ್ನು ನೀಡಿದ್ದಲ್ಲದೆ "ಚಕ್ರವರ್ತಿ ಸೂಲಿಬೆಲೆ ಶ್ರೇಷ್ಠ ವಾಗ್ಮಿ" ಎಂಬ ಖ್ಯಾತಿಯನ್ನೂ ತಂದುಕೊಟ್ಟಿತು. ಮಹತ್ವಾಕಾಂಕ್ಷೆಯ ಮಿಥುನ್ ಗೆ ಇದೂ ಕೂಡ ತೃಪ್ತಿ ನೀಡದೆ ಇದ್ದಾಗ ಕಂಡದ್ದು ಶ್ರೀ ನರೇಂದ್ರ ಮೋದಿಯವರು. ೨೦೧೩ರಲ್ಲಿ "ನಮೋ ಬ್ರಿಗೇಡ್" ಆರಂಭವಾಯಿತು, ಭಾಜಪದ ಸಖ್ಯವೂ ಬೆಳೆಯಿತು. ಆರ್. ಎಸ್. ಎಸ್   ಪ್ರಚಾರಕನಂತೆ ಮಾತನಾಡುತ್ತಿದ್ದ ಮಿಥುನ್ ಭಾಜಪದ ಪ್ರಚಾರಕನಂತೆ ಮಾತನಾಡತೊಡಗಿದನು. ಮಾತೆತ್ತಿದರೆ ಹಿಂದೂ, ಹಿಂದುತ್ವದ ವಿಚಾರಗಳು. ರಾಷ್ಟ್ರಬಂಧು ರಾಜೀವ್ ದೀಕ್ಷಿತರ ಗಾಂಧೀವಾದದ ಮಾತುಗಳ ಬದಲಾಗಿ ಆರ್. ಎಸ್. ಎಸ್   ಸಂಕುಚಿತ ವಿಚಾರಧಾರೆಗಳು "ನಮೋ ಬ್ರಿಗೇಡ್" ಮೂಲಕ ಕೇಳಲಾರಂಭಿಸಿದವು. ಮುಂದೆ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ "ನಮೋ ಬ್ರಿಗೇಡ್" ಹೋಗಿ "ಯುವ ಬ್ರಿಗೇಡ್" ಸ್ಥಾಪನೆಯಾಯಿತು. ಕ್ರಮೇಣ ಮಿಥುನ್ ಭಾಷಣದಲ್ಲಿದ್ದ ಉಗ್ರ ಹಿಂದುತ್ವದ ವಿಚಾರಗಳು ಮೊನಚನ್ನು ಕಳೆದುಕೊಳ್ಳುತ್ತಾ ಬಂದವು. ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ತೆಗೆದುಕೊಂಡ ಕೆಲವು ಪ್ರಮುಖ ನಿರ್ಧಾರಗಳು ಹಾಗೂ ಅವರ ಆಡಳಿತ ವೈಖರಿಯೇ ಇದಕ್ಕೆ ಕಾರಣ ಎನ್ನಬಹುದು. ಮೋದಿಯವರು ಕೇವಲ "ಹಿಂದೂಗಳ ಪ್ರಧಾನಿ"ಯಾಗದೆ "ಭಾರತೀಯರ ಪ್ರಧಾನಿ" ಯಾದರು. "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎನ್ನುವುದೇ ಮಂತ್ರವಾಯಿತು. ಇದರಿಂದಾಗಿ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವವರೂ ಕೂಡ ರಾಷ್ಟ್ರೀಯವಾದಿಗಳಾಗುವ ಅನಿವಾರ್ಯತೆ ಉಂಟಾಯಿತು. ಇದೇ ಕಾರಣಕ್ಕೆ ನಾನು ಹೇಳಿದ್ದು "ಚಕ್ರವರ್ತಿ ಸೂಲಿಬೆಲೆ ಬದಲಾಗಿದ್ದಾರೆ!". 

ಗಾಂಧೀಜಿಯ ಮಾನವತಾವಾದ, ಸರ್ವರನ್ನೂ ಸಮನಾಗಿ ಕಾಣುವ ಭಾವ, ಇವುಗಳನ್ನು ರಾಜೀವ ದೀಕ್ಷಿತರು ಸಂಪೂರ್ಣ ಭಾರತದಲ್ಲಿ ಕಾಣಲು ಬಯಸಿದ್ದರು. ಈಗ ಅದೇ ವಿಚಾರಗಳನ್ನು ಸೂಲಿಬೆಲೆಯವರು ಪುನರುಚ್ಚರಿಸಲಾರಂಭಿಸದ್ದಾರೆ. ಬಾಳೆಕುದ್ರು ಶ್ರೀಮಠದ ಶಂಕರ ಜಯಂತಿ ಮಹೋತ್ಸವದ ಧಾರ್ಮಿಕ ಭಾಷಣದಲ್ಲಿ ಕೂಡ ನನಗೆ ಪ್ರಮುಖವಾಗಿ ಕೇಳಿಸಿದ್ದು ವಿಚಾರಗಳೇ. ಎಲ್ಲ ಭಾರತೀಯರೂ ಒಂದೇ. ನಾನು ಯಾರನ್ನೂ ಜಾತಿಯಿಂದ ಗುರುತಿಸಲು ಬಯಸುವುದಿಲ್ಲ. ಅವರವರ ಕಾರ್ಯದಿಂದಲೇ ಅವರವರ ವರ್ಣಗಳ ನಿರ್ಧಾರವಾಗುತ್ತದೆ. ನಾನು ಮಾಡುತ್ತಿರುವ ಸ್ವಚ್ಛ ಭಾರತ ಅಭಿಯಾನದ ಕೆಲಸಗಳಿಂದಾಗಿ ನಾನು ಶೂದ್ರ ವರ್ಣಕ್ಕೆ ಸೇರಿದವನು ಎಂದು ಬ್ರಾಹ್ಮಣನಾಗಿ ಹುಟ್ಟಿರುವ ಸೂಲಿಬೆಲೆ ಹೇಳುತ್ತಿರುವಾಗ ನಿಜಕ್ಕೊ ಅವರು ಬದಲಾಗಿದ್ದಾರೆ ಎಂದು ಅನ್ನಿಸಿತು. "ಯುವ ಬ್ರಿಗೇಡ್" ಉತ್ತಮವಾದ ಕೆಲಸಗಳ ಮೂಲಕ ಸೂಲಿಬೆಲೆಯವರು ತಾವು ಕೇವಲ ಮಾತುಗಾರ ಮಾತ್ರವಲ್ಲ, ಹೇಳಿದ್ದನ್ನು ಮಾಡಿ ತೋರಿಸುವ ತಾಕತ್ತು ಕೂಡ ಇದೆ ಎಂದು ಸಾಬೀತು ಮಾಡುತ್ತಿದ್ದಾರೆ. ಮಠದ ಕಲ್ಯಾಣಿಯನ್ನು ಉಚಿತವಾಗಿ ಸ್ವಚ್ಚಗೊಳಿಸುವ ಮೂಲಕ ಇತರರಿಗೆ ಮಾದರಿಯಾಗುತ್ತಿದ್ದಾರೆ. ಹೀಗೆ ಒಂದೇ ತತ್ವ ಸಿದ್ಧಾಂತಕ್ಕೆ ಜೋತು ಬೀಳದೆ "ಮೊದಲು ಮಾನವನಾಗು" ಎಂಬ ದಿಸೆಯಲ್ಲಿ ಅವರು ಮುನ್ನಡೆದರೆ ದೇಶಕ್ಕೊಬ್ಬ ಆದರ್ಶ ಪುರುಷ ಸಿಗುವುದರಲ್ಲಿ ಸಂಶಯವಿಲ್ಲ.  ವಂದೇ ಮಾತರಂ. 

(ಲೇಖಕರು ಮಣಿಪಾಲ ತಾಂತ್ರಿಕ ವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂಪರ್ಕ ವಿಭಾಗದಲ್ಲಿ ಪ್ರಾಧ್ಯಾಪಕರು. ಹಿಂದೆ ಆಜಾದಿ ಬಚಾವೋ ಆಂದೋಲನದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದವರು)